LIVE Parliament Session 2026 Live| ಮಹಿಳಾ ಮೀಸಲಾತಿ ವಿರೋಧಿಸಿದ್ರೆ ದೀರ್ಘಕಾಲ ಬೆಲೆ ತೆರಬೇಕಾಗುತ್ತದೆ- ಮೋದಿ ಎಚ್ಚರಿಕೆ
x
ಸಂಸತ್‌ ಅಧಿವೇಶನ(ಸಂಗ್ರಹ ಚಿತ್ರ)

Parliament Session 2026 Live| ಮಹಿಳಾ ಮೀಸಲಾತಿ ವಿರೋಧಿಸಿದ್ರೆ ದೀರ್ಘಕಾಲ ಬೆಲೆ ತೆರಬೇಕಾಗುತ್ತದೆ- ಮೋದಿ ಎಚ್ಚರಿಕೆ

ಸಂಸತ್ತಿನ ವಿಶೇಷ ಅಧಿವೇಶನ ಇಂದಿನಿಂದ ಆರಂಭ! ಮಧ್ಯಾಹ್ನ 3:30ಕ್ಕೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಮಾತನಾಡಲಿದ್ದಾರೆ.


Click the Play button to hear this message in audio format

ದೇಶದ ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇತಿಹಾಸದಲ್ಲೇ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಏಪ್ರಿಲ್ 16 ರಿಂದ 18 ರವರೆಗೆ ನಡೆಯಲಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ 'ನಾರಿ ಶಕ್ತಿ ವಂದನ್ ಅಧಿನಿಯಮ' ಅನುಷ್ಠಾನಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಲೋಕಸಭೆಯ ಒಟ್ಟು ಸದಸ್ಯ ಬಲವನ್ನು ಪ್ರಸ್ತುತ ಇರುವ 543 ರಿಂದ 850ಕ್ಕೆ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದ್ದು, ಒಟ್ಟು 850 ಸ್ಥಾನಗಳ ಪೈಕಿ 273 ಸ್ಥಾನಗಳು ಮಹಿಳೆಯರಿಗಾಗಿ ಮೀಸಲಿಡಲಾಗುವುದು. 2021ರ ಜನಗಣತಿಯ ವಿಳಂಬದ ಹಿನ್ನೆಲೆಯಲ್ಲಿ, 2011ರ ಹಳೆಯ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಸರ್ಕಾರ ನಿರ್ಧರಿಸಿದೆ.

Live Updates

  • ಮಸೂದೆಗಳ ಬಗ್ಗೆ ಸರ್ಕಾರದಿಂದ ಶುಕ್ರವಾರ ವಿವರವಾದ ಉತ್ತರ: ಅಮಿತ್‌ ಶಾ
    16 April 2026 6:45 PM IST

    ಮಸೂದೆಗಳ ಬಗ್ಗೆ ಸರ್ಕಾರದಿಂದ ಶುಕ್ರವಾರ ವಿವರವಾದ ಉತ್ತರ: ಅಮಿತ್‌ ಶಾ

    ಲೋಕಸಭೆಯಲ್ಲಿ ಹೆಚ್ಚು ಚರ್ಚೆಯಾದ ಕ್ಷೇತ್ರ ಪುನರ್‌ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಬಗ್ಗೆ ಶುಕ್ರವಾರ ವಿವರವಾದ ಉತ್ತರ ನೀಡುವುದಾಗಿ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

    ಸದನದ ಹೊರಗೆ ತಪ್ಪು ವ್ಯಾಖ್ಯಾನವನ್ನು ನೀಡದಿರಲು ಕೆಲವು ಅಂಶಗಳಿಗೆ ತಕ್ಷಣ ಉತ್ತರ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಮಾತನಾಡಿದ ಅವರು, ಸದನದ ಸದಸ್ಯರು ಎತ್ತಿದ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿದೆ. ಶುಕ್ರವಾರ ನಡೆಯುವ ಚರ್ಚೆಯ ನಂತರ ಈ ಕುರಿತು ದೇಶದಲ್ಲಿ ಯಾವುದೇ ಗೊಂದಲಗಳು ಇರುವುದಿಲ್ಲ ಎಂದರು.

  • 16 April 2026 6:34 PM IST

    "ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ": ಪ್ರಿಯಾಂಕಾ ಗಾಂಧಿ ಆರೋಪ

    ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕೆ ಮಾಡಿದರು. ಸರ್ಕಾರ ಇತ್ತೀಚಿನ ಕಾರ್ಯವಿಧಾನದ ಬದಲಾವಣೆಗಳ ಮೂಲಕ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಿರಂತರವಾಗಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು.

    "ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ನಿಯಮಗಳನ್ನು ಬದಲಾಯಿಸುವ ಮೂಲಕ, ಚುನಾವಣಾ ಆಯೋಗ ಮತ್ತು ಎಸ್‌ಐಆರ್‌ ಅನ್ನು ರಾಜಿ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ನಾಶಮಾಡುವ ಆರಂಭವನ್ನು ಈಗಾಗಲೇ ಮಾಡಲಾಗಿದೆ". ಈ ಹಿಂದಿನ ಕ್ರಮಗಳು ಈಗಾಗಲೇ ಸಾಂಸ್ಥಿಕ ಸಂಸ್ಥೆಗಳ ಸವೆತಕ್ಕೆ ವೇದಿಕೆಯನ್ನು ಸಿದ್ಧಪಡಿಸಿವೆ ಎಂದು ಆರೋಪಿಸಿದರು.

    "ಸಂಸತ್‌ನಲ್ಲಿ ಎರಡು ಮಸೂದೆಗಳನ್ನು ಮಂಡನೆ ಮಾಡಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಬಹಿರಂಗ ದಾಳಿ ಮಾಡಿದೆ" ಎಂದರು. ಪ್ರಜಾಪ್ರಭುತ್ವವನ್ನು ನಾಶಮಾಡಲು ಕೇಂದ್ರ ಗೃಹ ಸಚಿವರು ಸಂಪೂರ್ಣ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದಾರೆ. ಅವರು ಇಲ್ಲಿ ಕುಳಿತು ನಗುತ್ತಿದ್ದಾರೆ. ನಾನು ಹೇಳುತ್ತಿರುವುದನ್ನು ಅವರು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು.

  • ಮಹಿಳಾ ಮೀಸಲಾತಿ ಮಸೂದೆ ಕುರಿತು ಕೇಂದ್ರ ಸರ್ಕಾರದ ಉದ್ದೇಶವೇನು ?: ಪ್ರಿಯಾಂಕಾ ಗಾಂಧಿ
    16 April 2026 6:19 PM IST

    ಮಹಿಳಾ ಮೀಸಲಾತಿ ಮಸೂದೆ ಕುರಿತು ಕೇಂದ್ರ ಸರ್ಕಾರದ ಉದ್ದೇಶವೇನು ?: ಪ್ರಿಯಾಂಕಾ ಗಾಂಧಿ

    ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಕೇಂದ್ರವು ಮಹಿಳಾ ಮೀಸಲಾತಿ ಚರ್ಚೆಯನ್ನು ರೂಪಿಸಿದ್ದನ್ನು ಪ್ರಶ್ನಿಸಿದರು. ಪ್ರಸ್ತಾವಿತ ಮಸೂದೆಗಳಿಗೆ ಸಂಬಂಧಿಸಿದ ದೊಡ್ಡ ಕಾಳಜಿಗಳನ್ನು ಬದಿಗಿಟ್ಟು ಸರ್ಕಾರವು ಆಯ್ದ ವಿಷಯವನ್ನು ಮಾತ್ರ ಪ್ರಸ್ತುತಪಡಿಸುತ್ತಿದೆ ಎಂದು ವಾದಿಸಿದರು.

    "ಪ್ರಧಾನಿಯವರು ತಮ್ಮ ಭಾಷಣದಲ್ಲಿ, ಮಹಿಳಾ ಮೀಸಲಾತಿಯ ಹಿನ್ನೆಲೆ ಮತ್ತು ಅದು 30 ವರ್ಷಗಳ ಕಾಲ ಹೇಗೆ ವಿಳಂಬವಾಯಿತು ಎಂಬುದರ ಬಗ್ಗೆ ಪದೇ ಪದೇ ಮಾತನಾಡಿದರು. ನಾನು ಅವರಿಗೂ ಒಂದು ಹಿನ್ನೆಲೆ ನೀಡಲು ಬಯಸುತ್ತೇನೆ. 1930 ರಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳ ಕುರಿತು ಮೊದಲ ವರದಿಯನ್ನು ಸಿದ್ಧಪಡಿಸಿದವರು ಮೋತಿಲಾಲ್ ನೆಹರು" ಎಂದರು.

    ಹಿಂದಿನ ಚರ್ಚೆಗಳ ಸಮಯದಲ್ಲಿ ಬಿಜೆಪಿಯ ನಿಲುವನ್ನು ಗುರಿಯಾಗಿಸಿಕೊಂಡು ಸ್ಥಳೀಯ ಮಟ್ಟದಲ್ಲಿ ಕೋಟಾಗಳನ್ನು ಮುಂದಿಡುವಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಪಾತ್ರವನ್ನು ಅವರು ಸೂಚಿಸಿದರು. "ಆ ತಿದ್ದುಪಡಿಯನ್ನು ಹೇಗೆ ವಿರೋಧಿಸಲಾಯಿತು ಎಂಬುದರ ಕುರಿತು ಪ್ರಧಾನಿ ಮಾತನಾಡಿದರು ಆದರೆ, ಆಗ ಅದನ್ನು ಯಾರು ವಿರೋಧಿಸಿದರು ಎಂದು ಹೇಳಲಿಲ್ಲ. ಏಕೆಂದರೆ ಅದನ್ನು ವಿರೋಧಿಸಿದ್ದು ಬಿಜೆಪಿ" ಎಂದು ತಿಳಿಸಿದರು.

  • ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಮಂಡನೆ ರಾಜಕೀಯ ಉದ್ದೇಶ : ಸಂಸದ ಕೆ.ಸಿ. ವೇಣುಗೋಪಾಲ್‌
    16 April 2026 6:11 PM IST

    ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಮಂಡನೆ "ರಾಜಕೀಯ ಉದ್ದೇಶ" : ಸಂಸದ ಕೆ.ಸಿ. ವೇಣುಗೋಪಾಲ್‌

    ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಗುರುವಾರ ಪ್ರಸ್ತಾವಿತ ಕ್ಷೇತ್ರ ಪುನರ್‌ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಬಗ್ಗೆ ಕೇಂದ್ರದ ಮೇಲೆ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.

    "ಪ್ರಧಾನಿ ತಮ್ಮ ಸಂಪೂರ್ಣ ಭಾಷಣದಲ್ಲಿ, ಇಂದು ಮಂಡಿಸಲಾದ ಮಸೂದೆಗಳ ಭಾಗವಾಗಿರುವ ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆಯ ಬಗ್ಗೆ ಏನನ್ನೂ ಉಲ್ಲೇಖಿಸಲಿಲ್ಲ. ಅವರು 2023 ರಲ್ಲಿ ಈಗಾಗಲೇ ಸಂವಿಧಾನದ ಭಾಗವಾಗಿರುವ ಮಹಿಳಾ ಮೀಸಲಾತಿಯ ಬಗ್ಗೆ ಮಾತ್ರ ಮಾತನಾಡಿದರು. ಇದು ಪ್ರಧಾನಿಯವರ ಸಂಪೂರ್ಣ ನಾಟಕ. ಕಿರಣ್ ರಿಜಿಜು ಅವರ ನಾಟಕವನ್ನು ನಾವು ಅರ್ಥಮಾಡಿಕೊಳ್ಳಬಹುದು. ಆದರೆ, ಪ್ರಧಾನಿಯವರ ನಾಟಕವನ್ನು ಅರ್ಥಮಾಡಿಕೊಳ್ಳಲಾಗದು" ಎಂದು ವೇಣುಗೋಪಾಲ್ ಹೇಳಿದರು.

    ಮಹಿಳಾ ಮೀಸಲಾತಿಯ ವಿಳಂಬ ಜಾರಿಯ ಬಗ್ಗೆ ಮಾತನಾಡಿ, ಸಂಸತ್ತು ಮೂರು ವರ್ಷಗಳ ಹಿಂದೆ ಅದನ್ನು ಅಂಗೀಕರಿಸಿದೆ. ಆದರೆ ಅನುಷ್ಠಾನವನ್ನು 2026 ರ ನಂತರದ ಜನಗಣತಿಯೊಂದಿಗೆ ತಳುಕು ಹಾಕಿದೆ. "ಆ ನಿಬಂಧನೆ ಇಲ್ಲದಿದ್ದರೆ ನೀವು 2024 ರಲ್ಲಿಯೇ ಮೀಸಲಾತಿಯನ್ನು ಜಾರಿಗೆ ತರಬಹುದಿತ್ತು. 2024 ರಲ್ಲಿ ಅನುಷ್ಠಾನವಾಗಲು ನೀವು ಏಕೆ ಬಿಡಲಿಲ್ಲ?" ಎಂದು ಪ್ರಶ್ನಿಸಿದರು.

  • 16 April 2026 4:21 PM IST

    "ಹಕ್ಕು ನಿರಾಕರಿಸಿದವರಿಗೆ ಮಹಿಳೆಯರೇ ಶಿಕ್ಷೆ ನೀಡಿದ್ದಾರೆ": ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮಾರ್ಮಿಕ ನುಡಿ

    ಲೋಕಸಭೆಯಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇತಿಹಾಸದುದ್ದಕ್ಕೂ ಮಹಿಳೆಯರು ತಮಗೆ ಹಕ್ಕುಗಳನ್ನು ನಿರಾಕರಿಸಿದವರಿಗೆ ತಕ್ಕ ಪಾಠ ಕಲಿಸುತ್ತಾ ಬಂದಿದ್ದಾರೆ ಎಂದು ನೆನಪಿಸಿದರು. ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ಸಬಲೀಕರಣದ ಮಹತ್ವವನ್ನು ಒತ್ತಿ ಹೇಳಿದ ಅವರು, ಸ್ತ್ರೀಶಕ್ತಿಯನ್ನು ಕಡೆಗಣಿಸುವುದು ಯಾರಿಗೂ ಹಿತವಲ್ಲ ಎಂಬ ಸಂದೇಶ ನೀಡಿದರು. ಮಹಿಳೆಯರು ಇಂದು ಜಾಗೃತರಾಗಿದ್ದು, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

  • 16 April 2026 4:20 PM IST

    ಮಹಿಳಾ ಮೀಸಲಾತಿ ಮಸೂದೆಯ ಕ್ರೆಡಿಟ್ ನೀವೇ ಇಟ್ಟುಕೊಳ್ಳಿ: ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಆಫರ್

    ಮಹಿಳಾ ಮೀಸಲಾತಿ ಮಸೂದೆಯ ಕುರಿತು ರಾಜಕೀಯ ಒಮ್ಮತ ಮೂಡಿಸುವ ಪ್ರಯತ್ನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿರೋಧ ಪಕ್ಷಗಳಿಗೆ ವಿನೋದಭರಿತವಾಗಿಯೇ ಒಂದು ಆಫರ್ ನೀಡಿದರು. "ಈ ಮಸೂದೆಯ ಸಂಪೂರ್ಣ ಕ್ರೆಡಿಟ್ ಅನ್ನು ವಿರೋಧ ಪಕ್ಷಗಳೇ ತೆಗೆದುಕೊಳ್ಳಬಹುದು, ಬೇಕಿದ್ದರೆ ಸರ್ಕಾರದ ಜಾಹೀರಾತುಗಳಲ್ಲಿ ನಿಮ್ಮ ಫೋಟೋಗಳನ್ನೇ ಹಾಕಿಸಿಕೊಳ್ಳಿ" ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, ಮಸೂದೆಯ ಅನುಷ್ಠಾನಕ್ಕೆ ಎಲ್ಲರೂ ಒಗ್ಗಟ್ಟಾಗಿ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಈ ಮೂಲಕ ಮಸೂದೆಯ ಯಶಸ್ಸಿಗಾಗಿ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಂದಾಗುವಂತೆ ಅವರು ಕರೆ ನೀಡಿದರು.

  • 16 April 2026 4:19 PM IST

    ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲ್ಲ; ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅಭಯ

    ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸಂಪೂರ್ಣ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ಮತ್ತು ಯಾವುದೇ ತಾರತಮ್ಯವಿಲ್ಲದೆ ನಡೆಯಲಿದೆ ಎಂದು ಭರವಸೆ ನೀಡಿದರು. ಉತ್ತರ ಭಾರತ ಅಥವಾ ದಕ್ಷಿಣ ಭಾರತ ಎಂಬ ಭೇದಭಾವವಿಲ್ಲದೆ, ಎಲ್ಲಾ ಪ್ರಾಂತ್ಯಗಳಿಗೂ ನ್ಯಾಯಯುತ ಪ್ರಾತಿನಿಧ್ಯ ಸಿಗಲಿದೆ ಎಂದು ಸ್ಪಷ್ಟಪಡಿಸಿದ ಅವರು, ಪ್ರಾತಿನಿಧ್ಯದ ವಿಚಾರದಲ್ಲಿ ಯಾವುದೇ ರಾಜ್ಯಕ್ಕೂ ಅನ್ಯಾಯವಾಗದಂತೆ ಈ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಹೇಳುವ ಮೂಲಕ ದಕ್ಷಿಣದ ರಾಜ್ಯಗಳ ಆತಂಕವನ್ನು ದೂರ ಮಾಡಲು ಪ್ರಯತ್ನಿಸಿದರು.

  • 16 April 2026 3:35 PM IST

    ಮಹಿಳಾ ಮೀಸಲಾತಿ ವಿರೋಧಿಸುವವರು ದೀರ್ಘಕಾಲ ಬೆಲೆ ತೆರಬೇಕಾಗುತ್ತದೆ: ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಎಚ್ಚರಿಕೆ

    ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದು, ರಾಜಕೀಯ ಜೀವನದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು. "ಮಹಿಳೆಯರು ಈಗ ಕೇವಲ ಶೇ. 33ರಷ್ಟು ಮೀಸಲಾತಿಯ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲ, ತಳಮಟ್ಟದಿಂದಲೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಮಹಿಳೆಯರ ಈ ಶಕ್ತಿಯನ್ನು ಗುರುತಿಸದೆ, ಈಗ ಯಾರು ಈ ಮಸೂದೆಯನ್ನು ವಿರೋಧಿಸುತ್ತಾರೋ, ಅವರು ಮುಂದಿನ ದಿನಗಳಲ್ಲಿ ಅದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ" ಎಂದು ಪ್ರಧಾನಿ ಮೋದಿ ವಿರೋಧ ಪಕ್ಷಗಳಿಗೆ ನೇರ ಎಚ್ಚರಿಕೆ ನೀಡಿದರು.

  • 16 April 2026 3:25 PM IST

    ಎಲ್ಲರೂ ಒಟ್ಟಾಗಿ ಸಾಗೋಣ, ಇತಿಹಾಸ ನಮ್ಮನ್ನು ನೆನಪಿಸಿಕೊಳ್ಳಲಿದೆ": ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಕರೆ

    ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ಬೆಂಬಲಕ್ಕೆ ಮನವಿ ಮಾಡಿದರು. "ನಾನು ಒಂದು ಪಕ್ಷವನ್ನು ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳನ್ನು ಭೇಟಿ ಮಾಡಿದ್ದೇನೆ, ಯಾರೂ ಈ ಮಸೂದೆಯನ್ನು ವಿರೋಧಿಸಿಲ್ಲ. ಆದರೆ ನಂತರ ಇದಕ್ಕೆ ರಾಜಕೀಯ ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದೆ. ಅಂತಹವರಿಗೆ ನಾನು ಒಬ್ಬ ಸ್ನೇಹಿತನಾಗಿ ಸಲಹೆ ನೀಡಬಯಸುತ್ತೇನೆ; ನಾವು ಈ ವಿಚಾರದಲ್ಲಿ ಒಮ್ಮತದಿಂದ ಒಟ್ಟಾಗಿ ಸಾಗಿದರೆ, ದೇಶಕ್ಕೆ ಸಲ್ಲಿಸಿದ ಈ ಸೇವೆಯನ್ನು ಇತಿಹಾಸವು ಸದಾ ನೆನಪಿನಲ್ಲಿಡಲಿದೆ" ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

  • 16 April 2026 3:23 PM IST

    ಭಾರತ ಇತಿಹಾಸ ಬರೆಯುವ ಹೊಸ್ತಿಲಲ್ಲಿದೆ: ಪ್ರಧಾನಿ ನರೇಂದ್ರ ಮೋದಿ ಭಾಷಣ

    ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ಭಾರತವು ಇಂದು ಹೊಸ ಇತಿಹಾಸವನ್ನು ಬರೆಯುವ ಹೊಸ್ತಿಲಲ್ಲಿ ನಿಂತಿದೆ" ಎಂದು ಪ್ರತಿಪಾದಿಸಿದರು. ಸಂಸತ್ತಿನಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ಸಾಗರ ಮಂಥನಕ್ಕೆ ಹೋಲಿಸಿದ ಅವರು, "ಈ ಮಂಥನದಿಂದ ಹೊರಬರುವ ಅಮೃತವು ಮುಂಬರುವ ದಿನಗಳಲ್ಲಿ ದೇಶದ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ" ಎಂದು ಹೆಮ್ಮೆಯಿಂದ ತಿಳಿಸಿದರು.

Read More
Next Story