ಗ್ಯಾರಂಟಿ ಯೋಜನೆಗಳಲ್ಲಿ ಗೋಲ್‌ಮಾಲ್ ಆರೋಪ: ಸರ್ಕಾರದ ವಿರುದ್ಧ ಆರ್. ಅಶೋಕ ಕಿಡಿ
x

ಗ್ಯಾರಂಟಿ ಯೋಜನೆಗಳಲ್ಲಿ ಗೋಲ್‌ಮಾಲ್ ಆರೋಪ: ಸರ್ಕಾರದ ವಿರುದ್ಧ ಆರ್. ಅಶೋಕ ಕಿಡಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಇಲ್ಲದಿರುವುದೇ ಗೊಂದಲಕ್ಕೆ ಕಾರಣ. ಕೂಡಲೇ ಈ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಆರ್‌.ಅಶೋಕ್ ಆಗ್ರಹಿಸಿದ್ದಾರೆ.


Click the Play button to hear this message in audio format

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅಂಕಿಅಂಶಗಳಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿದ್ದು, ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಗಂಭೀರ ಆರೋಪ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಇಲ್ಲದಿರುವುದೇ ಈ ಗೊಂದಲಕ್ಕೆ ಕಾರಣ ಎಂದು ಅವರು ಟೀಕಿಸಿದ್ದು, ಕೂಡಲೇ ಈ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮುಖ್ಯಮಂತ್ರಿಗಳು ನೀಡಿದ ಅಂಕಿ ಅಂಶಗಳು ಮತ್ತು ಈ ಹಿಂದಿನ ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣಗಳ ಮಾಹಿತಿಗಳಿಗೆ ತಾಳೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ, "ರಾಜ್ಯದ 3.5 ಕೋಟಿ ಮಹಿಳೆಯರು 796 ಕೋಟಿ ಉಚಿತ ಪ್ರಯಾಣ ಮಾಡಿದ್ದು, ಮೂರು ವರ್ಷಗಳಲ್ಲಿ 14,875 ಕೋಟಿ ರೂ. ವೆಚ್ಚವಾಗಿದೆ" ಎಂದು ಹೇಳಿದ್ದಾರೆ. ಆದರೆ, ಸರ್ಕಾರವೇ 2026ರ ಜೂನ್ 11ರಂದು ನೀಡಿದ ಮಾಹಿತಿಯಲ್ಲಿ, 753.7 ಕೋಟಿ ಪ್ರಯಾಣಗಳಾಗಿದ್ದು, 19,771 ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿತ್ತು. ಹಾಗೆಯೇ ಮೇ 25ರಂದು ನೀಡಿದ ಅಂಕಿಅಂಶಗಳಲ್ಲಿ 18,943 ಕೋಟಿ ರೂ. ವ್ಯಯಿಸಲಾಗಿದೆ ಎಂದಿತ್ತು. ಮುಖ್ಯಮಂತ್ರಿಗಳ ಭಾಷಣದಲ್ಲಿ ನಮೂದಾದ ವೆಚ್ಚಕ್ಕೂ, ಅಧಿಕೃತ ಪೋಸ್ಟ್‌ನಲ್ಲಿರುವ ಮೊತ್ತಕ್ಕೂ ಸುಮಾರು 5 ಸಾವಿರ ಕೋಟಿ ರೂ.ಗಳ ವ್ಯತ್ಯಾಸವಿದೆ. "ಹೆಚ್ಚಿದ್ದ ಖರ್ಚು ಈಗ ದಿಢೀರನೆ ಕಡಿಮೆಯಾಗಿದ್ದು ಹೇಗೆ?" ಎಂದು ಪ್ರಶ್ನಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಗೊಂದಲ

ಗೃಹಲಕ್ಷ್ಮಿ ಯೋಜನೆಯಲ್ಲಿ ಎರಡು ತಿಂಗಳಿನ 5 ಸಾವಿರ ಕೋಟಿ ರೂ. ಬಾಕಿ ವಿಚಾರದಲ್ಲಿ ಸರ್ಕಾರ ಮೌನ ವಹಿಸಿದೆ. ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ 1.28 ಕೋಟಿ ಫಲಾನುಭವಿಗಳಿಗೆ 76,908 ಕೋಟಿ ರೂ. ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಆದರೆ, ಮೇ 26ರಂದು ಸರ್ಕಾರವೇ ನೀಡಿದ ಮಾಹಿತಿಯಲ್ಲಿ 1.24 ಕೋಟಿ ಫಲಾನುಭವಿಗಳಿಗೆ 74,216 ಕೋಟಿ ರೂ. ನೀಡಲಾಗಿದೆ ಎಂದಿತ್ತು. ಇನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ನೀಡಿದ ಅಂಕಿಅಂಶದಲ್ಲಿ 74,650 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಲಾಗಿದೆ. ಕೇವಲ ಎರಡು ತಿಂಗಳಲ್ಲಿ ಫಲಾನುಭವಿಗಳ ಸಂಖ್ಯೆ 4 ಲಕ್ಷ ಹೆಚ್ಚಾಗಿದ್ದು ಹೇಗೆ ಮತ್ತು ವೆಚ್ಚದ ಲೆಕ್ಕಾಚಾರದಲ್ಲಿ ಏರಿಳಿತ ಯಾಕೆ? ಎಂದು ಕಿಡಿಕಾರಿದ್ದಾರೆ.

ಅಕ್ರಮದ ಸುಳಿವು ನೀಡಿದ ಪ್ರತಿಪಕ್ಷ ನಾಯಕ

"ಸರ್ಕಾರದ ಬಳಿ ಇರುವ ಯಾವುದೇ ಅಂಕಿಅಂಶಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಸರ್ಕಾರ ನೀಡುವ ಮಾಹಿತಿಯಲ್ಲೇ ಇಷ್ಟು ವ್ಯತ್ಯಾಸವಿದ್ದರೆ, ಯೋಜನೆಗಳ ಅನುಷ್ಠಾನದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಅರ್ಥ" ಎಂದು ಕಿಡಿಕಾರಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಣದ ಲೂಟಿ ನಡೆಯುತ್ತಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿರುವ ಅವರು, ಸದನದಲ್ಲಿ ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಶ್ವೇತಪತ್ರ ಹೊರಡಿಸಲು ಆಗ್ರಹ

ಗ್ಯಾರಂಟಿ ಯೋಜನೆಗಳ ಅನುಷ್ಠಾನವು ಒಂದು ಕಡೆ ರಾಜ್ಯದ ಆರ್ಥಿಕತೆಯ ಮೇಲೆ ಹೊರೆ ಹೊರಿಸುತ್ತಿದ್ದರೆ, ಮತ್ತೊಂದು ಕಡೆ ಈ ರೀತಿಯ ಗೊಂದಲಮಯ ಅಂಕಿಅಂಶಗಳು ಜನರಲ್ಲಿ ಭ್ರಮನಿರಸನ ಮೂಡಿಸುತ್ತಿವೆ. ಈ ಗೊಂದಲವನ್ನು ನಿವಾರಿಸಿ, ಜನರಿಗೆ ಸತ್ಯವನ್ನು ತಿಳಿಸಲು ಸರ್ಕಾರ ಶ್ವೇತಪತ್ರವನ್ನು ಹೊರಡಿಸಬೇಕು. ಈ ಶ್ವೇತಪತ್ರವು ಎಷ್ಟು ಜನರಿಗೆ ಹಣ ತಲುಪಿದೆ, ಎಷ್ಟು ಖರ್ಚಾಗಿದೆ ಮತ್ತು ಬಾಕಿ ಎಷ್ಟು ಇದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ಕಡೆ ಗ್ಯಾರಂಟಿಗಳೇ ತಮ್ಮ ಸರ್ಕಾರದ ಶಕ್ತಿ ಎಂದು ಪ್ರತಿಪಾದಿಸುವ ಕಾಂಗ್ರೆಸ್ ಸರ್ಕಾರಕ್ಕೆ, ಈಗ ತಮ್ಮದೇ ಇಲಾಖೆಗಳು ನೀಡಿರುವ ಮಾಹಿತಿಗಳ ವೈರುಧ್ಯವನ್ನು ಬಗೆಹರಿಸುವುದು ದೊಡ್ಡ ಸವಾಲಾಗಿದೆ. ಆರ್. ಅಶೋಕ ಅವರ ಈ ಸವಾಲಿಗೆ ಮುಖ್ಯಮಂತ್ರಿಗಳು ಅಥವಾ ಜಲಸಂಪನ್ಮೂಲ ಸಚಿವರು ಸದನದಲ್ಲಿ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದರ ಮೇಲೆ ರಾಜ್ಯ ರಾಜಕಾರಣದ ಮುಂದಿನ ಹಂತ ನಿರ್ಧಾರವಾಗಲಿದೆ.

Read More
Next Story