ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ತಂಡ ಕಳುಹಿಸುವಂತೆ ಪ್ರಧಾನಿಗೆ ಸಿಎಂ ಪತ್ರ
x

ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ತಂಡ ಕಳುಹಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ಕರ್ನಾಟಕವು ದೇಶದ ಅತಿ ದೊಡ್ಡ ತೊಗರಿ ಉತ್ಪಾದಕ ರಾಜ್ಯವಾಗಿರುವುದರಿಂದ, ಬರ ಪರಿಸ್ಥಿತಿಯು ರಾಷ್ಟ್ರಮಟ್ಟದಲ್ಲಿ ಬೇಳೆಕಾಳುಗಳ ಬೆಲೆ ಏರಿಕೆಗೂ ಕಾರಣವಾಗುವ ಸಾಧ್ಯತೆಯನ್ನು ಪತ್ರದಲ್ಲಿ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯವು ಪ್ರಸ್ತುತ ತೀವ್ರವಾದ ಮಳೆ ಕೊರತೆ ಮತ್ತು ಬರಗಾಲದ ಭೀತಿಯನ್ನು ಎದುರಿಸುತ್ತಿದೆ. ರಾಜ್ಯದ ಕೃಷಿ ವಲಯವು ಮುಂಗಾರು ಮಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ಈ ವರ್ಷದ ಮುಂಗಾರು ವಿಳಂಬ ಮತ್ತು ಮಳೆಯ ಅಲಭ್ಯತೆಯು ರಾಜ್ಯದ ರೈತರ ಪಾಲಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ, ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು, ವಾಸ್ತವಿಕ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಲು ಕೇಂದ್ರ ಸರ್ಕಾರದ ಪರಿಶೀಲನಾ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಡುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಬರಪೀಡಿತ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಸುಮಾರು ಶೇಕಡಾ 77ರಷ್ಟು ಭಾಗವು ಶುಷ್ಕ ಮತ್ತು ಅರೆ-ಶುಷ್ಕ ವಲಯಗಳಿಗೆ ಸೇರಿದೆ. ಕೃಷಿ ದೃಷ್ಟಿಯಿಂದ ಗಮನಿಸಿದರೆ, ರಾಜ್ಯದಲ್ಲಿ 84.79 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಭೂಮಿಯಿದ್ದು, ರಾಜಸ್ಥಾನದ ನಂತರ ದೇಶದಲ್ಲೇ ಎರಡನೇ ಅತಿ ದೊಡ್ಡ ಮಳೆಯಾಶ್ರಿತ ಕೃಷಿ ಪ್ರದೇಶವನ್ನು ಕರ್ನಾಟಕ ಹೊಂದಿದೆ. ಇಲ್ಲಿನ ಕೃಷಿ ಉತ್ಪಾದನೆಯು ನೈಋತ್ಯ ಮುಂಗಾರನ್ನು ಸಂಪೂರ್ಣವಾಗಿ ಅವಲಂಬಿಸಿದೆ. ರಾಜ್ಯದ ವಾರ್ಷಿಕ ಮಳೆಯಲ್ಲಿ ಶೇಕಡಾ 74ರಷ್ಟು ಪಾಲನ್ನು ಮುಂಗಾರು ನೀಡುತ್ತದೆ. ಹೀಗಾಗಿ, ಮುಂಗಾರಿನ ಸಣ್ಣ ವ್ಯತ್ಯಯವೂ ಸಹ ಇಲ್ಲಿನ ಗ್ರಾಮೀಣ ಆರ್ಥಿಕತೆ, ಕುಡಿಯುವ ನೀರು ಮತ್ತು ಕೃಷಿ ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಮಳೆ ಕೊರತೆಯ ಅಂಕಿ-ಅಂಶಗಳು

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಈ ವರ್ಷ 'ಎಲ್ ನಿನೋ' ಪ್ರಭಾವದಿಂದ ಮಳೆ ಕೊರತೆ ಉಂಟಾಗಲಿದೆ ಎಂಬ ಆತಂಕ ನಿಜವಾಗಿದೆ. ರಾಜ್ಯದಲ್ಲಿ ಸಾಮಾನ್ಯ ಮಳೆಯಾದ 292 ಮಿಲಿಮೀಟರ್‌ಗೆ ಬದಲಾಗಿ ಕೇವಲ 203 ಮಿಲಿಮೀಟರ್ ಮಳೆಯಾಗಿದೆ. ಇದು ಶೇಕಡಾ 30ರಷ್ಟು ಮಳೆ ಕೊರತೆಯನ್ನು ಸೂಚಿಸುತ್ತದೆ. ರಾಜ್ಯದ ಪರಿಸ್ಥಿತಿಯನ್ನು ಪತ್ರದಲ್ಲಿ ಉಲ್ಲೇಖಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮುಂಗಾರು ಜೂನ್ 5ರಂದು ರಾಜ್ಯಕ್ಕೆ ಪ್ರವೇಶಿಸಿದರೂ, ವಿರಾಮದ ಕಾರಣದಿಂದ ಜೂನ್ 22ರಂದು ಮಾತ್ರ ರಾಜ್ಯಾದ್ಯಂತ ಹರಡಿತು. ರಾಜ್ಯದ 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ಮತ್ತು 240 ತಾಲೂಕುಗಳ ಪೈಕಿ 141 ತಾಲೂಕುಗಳಲ್ಲಿ ಮಳೆಯ ಕೊರತೆ ಅಥವಾ ತೀವ್ರ ಕೊರತೆ ಕಂಡುಬಂದಿದೆ. ಮಲೆನಾಡು ಪ್ರದೇಶದಲ್ಲಿ ಅತ್ಯಂತ ಗರಿಷ್ಠ ಮಳೆ ಕೊರತೆ (ಶೇ. 34) ದಾಖಲಾಗಿದ್ದು, ಇದು ಕಾವೇರಿ, ತುಂಗಾ ಮತ್ತು ಭದ್ರಾ ನದಿಗಳ ಜಲಾನಯನ ಪ್ರದೇಶಗಳ ಮೇಲೂ ಕೆಟ್ಟ ಪರಿಣಾಮ ಬೀರಿದೆ.

ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ

ಜುಲೈ ಮೊದಲ ವಾರದ ಮಾಹಿತಿ ಪ್ರಕಾರ, ಮುಂಗಾರು ಹಂಗಾಮಿನ ಬಿತ್ತನೆಯು ಕೇವಲ 28.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಡೆದಿದೆ. ಇದು ಒಟ್ಟು ಗುರಿಯಾದ 84.10 ಲಕ್ಷ ಹೆಕ್ಟೇರ್‌ನ ಕೇವಲ 34 ಪ್ರತಿಶತದಷ್ಟಿದೆ. ಬಿತ್ತನೆ ಬೀಜಗಳಿಗೆ ಹಾಕಿದ ಬಂಡವಾಳ ಕೈಸೇರುತ್ತದೋ ಇಲ್ಲವೋ ಎಂಬ ಅನಿಶ್ಚಿತತೆಯಲ್ಲಿ ರೈತರು ಮುಂದಿನ ಕೃಷಿ ಕಾರ್ಯಗಳಿಗೆ ಹಿಂದೇಟು ಹಾಕುತ್ತಿದ್ದಾರೆ. ಕರ್ನಾಟಕವು ದೇಶದ ಅತಿ ದೊಡ್ಡ ತೊಗರಿ ಉತ್ಪಾದಕ ರಾಜ್ಯವಾಗಿರುವುದರಿಂದ, ಇಲ್ಲಿನ ಬರ ಪರಿಸ್ಥಿತಿಯು ರಾಷ್ಟ್ರಮಟ್ಟದಲ್ಲಿ ಬೇಳೆಕಾಳುಗಳ ಬೆಲೆ ಏರಿಕೆಗೂ ಕಾರಣವಾಗುವ ಸಾಧ್ಯತೆಯನ್ನು ಪತ್ರದಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ

ಕೇವಲ ಕೃಷಿಯಷ್ಟೇ ಅಲ್ಲ, ಜಲವಿಜ್ಞಾನದ ದೃಷ್ಟಿಯಿಂದಲೂ ಪರಿಸ್ಥಿತಿ ಭೀಕರವಾಗಿದೆ. ಜುಲೈ 10ರ ಮಾಹಿತಿಯಂತೆ, ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಕೇವಲ 303 ಟಿ.ಎಂ.ಸಿ ನೀರು ಮಾತ್ರ ಸಂಗ್ರಹವಾಗಿದೆ. ಇದು ಒಟ್ಟು ಸಾಮರ್ಥ್ಯದ ಕೇವಲ 34 ಪ್ರತಿಶತ ಮಾತ್ರ. ಜಲಾಶಯಗಳಲ್ಲಿನ ನೀರಿನ ಮಟ್ಟ ಕುಸಿಯುತ್ತಿರುವುದು ಮುಂಬರುವ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವಲ್ಲಿ ದೊಡ್ಡ ಸವಾಲನ್ನು ಒಡ್ಡಲಿದೆ. ಈ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡೇ, ಲಭ್ಯವಿರುವ ನೀರನ್ನು ಕೇವಲ ಕುಡಿಯುವ ನೀರಿಗೆ ಮಾತ್ರ ಮೀಸಲಿಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.

ರಾಜ್ಯ ಸರ್ಕಾರದ ಮುಂಜಾಗ್ರತಾ ಕ್ರಮಗಳು

ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಈಗಾಗಲೇ ಸಕ್ರಿಯವಾಗಿದೆ. ಕೃಷಿ ತಜ್ಞರ ಸಲಹೆಯ ಮೇರೆಗೆ ಜಿಲ್ಲಾವಾರು ತುರ್ತು ಪರಿಸ್ಥಿತಿ ನಿರ್ವಹಣಾ ಯೋಜನೆಗಳನ್ನು ರೂಪಿಸಲಾಗಿದೆ. ಇಲಾಖೆಗಳಿಗೆ ಬರ ಪರಿಹಾರ ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ರಾಜ್ಯದಲ್ಲಿ ಉದ್ಭವಿಸಿರುವ ನೈಜ ಬರ ಪರಿಸ್ಥಿತಿಯನ್ನು ಅರಿಯಲು ಕೇಂದ್ರದ ತಜ್ಞರ ತಂಡವನ್ನು ಕಳುಹಿಸಬೇಕು. ಕೇಂದ್ರ ತಂಡದ ಭೇಟಿಯು ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರ ತಮ್ಮೊಂದಿಗೆ ಇದೆ ಎಂಬ ನೈತಿಕ ಬೆಂಬಲವನ್ನು ನೀಡುತ್ತದೆ. ಪರಿಸ್ಥಿತಿಯ ಮೌಲ್ಯಮಾಪನ ನಡೆದರೆ, ಕೇಂದ್ರದಿಂದ ಸಿಗುವ ಸಕಾಲಿಕ ಬೆಂಬಲವು ರಾಜ್ಯದ ಸಂಕಷ್ಟಗಳನ್ನು ತಗ್ಗಿಸಲು ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.

Read More
Next Story