RSS is an underground organization... if not, why is it not registered?
x

ಹಿರಿಯ ವಕೀಲ ಬಾಲನ್‌

RSS ಭೂಗತ ಸಂಘಟನೆಯೇ...ಅಲ್ಲದಿದ್ದರೆ ನೋಂದಣಿ ಏಕಿಲ್ಲ? ವಕೀಲ ಬಾಲನ್‌ ಪ್ರಶ್ನೆ

ಕಾಂಗ್ರೆಸ್ ಆರ್‌ಎಸ್‌ಎಸ್‌ನ 'ಬಿ' ಟೀಂ ಆಗಿ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಅದರ 'ಎ' ಟೀಂ ಆಗಿದೆ. ಮಹಾತ್ಮಾ ಗಾಂಧೀಜಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಮೂರು ಬಾರಿ ನಿಷೇಧಕ್ಕೊಳಗಾಗಿತ್ತು ಎಂದು ಹಿರಿಯ ವಕೀಲ ಬಾಲನ್‌ ತಿಳಿಸಿದ್ದಾರೆ.


Click the Play button to hear this message in audio format

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ವಿಚಾರವಾಗಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರ ಇದೀಗ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಆರ್‌ಎಸ್‌ಎಸ್ ನೋಂದಣಿ ಅಗತ್ಯವಿಲ್ಲ ಎಂಬ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಖಂಡಿಸಿರುವ ಹಿರಿಯ ವಕೀಲ ಎಸ್. ಬಾಲನ್, ಈ ಕುರಿತು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಎಸ್. ಬಾಲನ್ ಅವರು, "ಬೆನ್ನುಮೂಳೆ ಇರುವ ಸಚಿವರಂತೆ ಕಾರ್ಯನಿರ್ವಹಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಹ್ಯಾಟ್ಸಾಪ್ ಹೇಳಲೇಬೇಕು. ಇದುವರೆಗೆ ಈ ದೇಶವನ್ನಾಳಿದ ಯಾವುದೇ ಗೃಹ ಸಚಿವರಿಗೂ ಆರ್‌ಎಸ್‌ಎಸ್ ಅನ್ನು ಪ್ರಶ್ನಿಸುವ ತಾಕತ್ತು ಇರಲಿಲ್ಲ," ಎಂದು ಶ್ಲಾಘಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ

ರಾಜಕೀಯ ಪಕ್ಷಗಳ ಮೃದು ಧೋರಣೆಯ ಬಗ್ಗೆ ಮಾತನಾಡಿದ ಬಾಲನ್, "ಕಾಂಗ್ರೆಸ್ ಆರ್‌ಎಸ್‌ಎಸ್‌ನ 'ಬಿ' ಟೀಂ ಆಗಿ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಅದರ 'ಎ' ಟೀಂ ಆಗಿದೆ. ಮಹಾತ್ಮಾ ಗಾಂಧೀಜಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಮೂರು ಬಾರಿ ನಿಷೇಧಕ್ಕೊಳಗಾಗಿತ್ತು. ಆದರೆ ಪ್ರತಿ ಬಾರಿಯೂ ಅಧಿಕಾರ ದುರುಪಯೋಗಪಡಿಸಿಕೊಂಡು ಸಂಘಟನೆ ಮತ್ತೆ ಎದ್ದು ಬಂದಿದೆ. ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಂದು ಸಂಸ್ಥೆಗೂ ಹೊಣೆಗಾರಿಕೆ ಇರಬೇಕು. ಆದರೆ ಆರ್‌ಎಸ್‌ಎಸ್ ಏಕಾಗಿ ಗುಪ್ತ ಸಂಘಟನೆಯಂತೆ ಕಾರ್ಯನಿರ್ವಹಿಸುತ್ತಿದೆ?" ಎಂದು ಪ್ರಶ್ನಿಸಿದರು.

ಕಾನೂನು ಏನು ಹೇಳುತ್ತದೆ?

ದೇಶದಲ್ಲಿ ಪ್ರತಿಯೊಂದು ಸಂಘಟನೆ, ರಾಜಕೀಯ ಪಕ್ಷ ಅಥವಾ ಟ್ರೇಡ್ ಯೂನಿಯನ್‌ಗಳು ಕಾನೂನುಬದ್ಧವಾಗಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. "ಸಮಾಜದಲ್ಲಿ ಪಾರದರ್ಶಕತೆ ಇರಬೇಕು. ಒಂದು ಸಣ್ಣ ಚಿಟ್ ಫಂಡ್ ನಡೆಸಬೇಕಾದರೂ ನೋಂದಣಿ ಬೇಕು ಎಂದಿರುವಾಗ, ಕೋಟ್ಯಂತರ ರೂಪಾಯಿ ನಿಧಿ ಮತ್ತು ಸಾವಿರಾರು ಶಾಖೆಗಳನ್ನು ಹೊಂದಿರುವ ಆರ್‌ಎಸ್‌ಎಸ್ ನೋಂದಣಿ ಮಾಡಿಸಿಕೊಳ್ಳದಿರುವುದು ಕಾನೂನುಬಾಹಿರ. ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ ಆರ್ಥಿಕ ವಹಿವಾಟಿನ ಲೆಕ್ಕ ಕೊಡಲೇಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ," ಎಂದು ಅವರು ಪ್ರತಿಪಾದಿಸಿದರು.

ಆರ್‌ಎಸ್‌ಎಸ್ ಇತಿಹಾಸದ ಬಗ್ಗೆ ಕಿಡಿ

ಸಂಘಟನೆಯ ಸಿದ್ಧಾಂತದ ಬಗ್ಗೆ ಮಾತನಾಡಿದ ಅವರು, "ಆರ್‌ಎಸ್‌ಎಸ್ ನಾಯಕರು ಹಿಟ್ಲರ್ ಮತ್ತು ಮುಸೋಲಿನಿಯಂತಹ ಸರ್ವಾಧಿಕಾರಿಗಳ ಸಿದ್ಧಾಂತದಿಂದ ಪ್ರೇರಿತರಾದವರು. ಇಟಲಿಯ ಮಿಲಿಟರಿ ಶಾಲೆಗಳಿಗೆ ಭೇಟಿ ನೀಡಿ ಇಲ್ಲಿ 'ಹಿಂದೂಗಳ ಸೈನಿಕೀಕರಣ'ದ ಬಗ್ಗೆ ಮಾತನಾಡಿದ್ದರು. ಇವರ ಉದ್ದೇಶ ಕೇವಲ ಸವರ್ಣೀಯರ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ನ ಯಾವುದೇ ಪಾತ್ರವಿಲ್ಲ," ಎಂದು ಗಂಭೀರ ಆರೋಪ ಮಾಡಿದರು.

ಸರ್ಕಾರಕ್ಕೆ ಇರುವ ಆಯ್ಕೆಗಳೇನು?

ಸರ್ಕಾರ ಮನಸ್ಸು ಮಾಡಿದರೆ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ತನಿಖೆ ನಡೆಸಬಹುದು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮೂಲಕ ಸಂಘಟನೆಯ ಹಣಕಾಸಿನ ಮೂಲಗಳನ್ನು ಪರಿಶೀಲಿಸಬಹುದು. ಸರ್ಕಾರಕ್ಕೆ ತಾಕತ್ತಿದ್ದರೆ ಸಂಘಟನೆಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಿ ಅಥವಾ ನ್ಯಾಯಾಲಯದ ಮೊರೆ ಹೋಗಲಿ ಎಂದು ಬಾಲನ್ ಅವರು ಸಲಹೆ ನೀಡಿದರು.

ಒಟ್ಟಾರೆಯಾಗಿ, ಪ್ರಿಯಾಂಕ್ ಖರ್ಗೆ ಅವರ ಪತ್ರವು ಸಂಘಟನೆಯ ಕಾನೂನುಬದ್ಧ ಅಸ್ತಿತ್ವದ ಬಗ್ಗೆ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Read More
Next Story