
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ
ಬೆಂಗಳೂರು ಭಾಷಣದ ಬಗ್ಗೆ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ ತಮ್ಮ ಪೋಸ್ಟ್ನಲ್ಲಿ, ಜವಾಹರಲಾಲ್ ನೆಹರು ಅವರಿಂದ ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿವರೆಗೆ ಯಾವ ಪ್ರಧಾನಿಯೂ ವಿರೋಧ ಪಕ್ಷಗಳನ್ನು ಹೀಯಾಳಿಸುವ ಬೀದಿ ಮಟ್ಟದ ಭಾಷಣ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ದೇಶದ ಪ್ರಧಾನಿಯಾಗಿ ಮಾತನಾಡಿದರೋ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಾತನಾಡಿದರೋ, ಅಥವಾ ರಾಜ್ಯದ ವಿರೋಧ ಪಕ್ಷದ ನಾಯಕರಾಗಿ ಮಾತನಾಡಿದರೋ ಎಂಬ ಗೊಂದಲ ಸಾರ್ವಜನಿಕರಲ್ಲಿ ಉಂಟಾಗಿದೆ; ಅದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪ್ರಧಾನಿ ತಮ್ಮ ಭಾಷಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿದರೂ, ಕೇಂದ್ರ ಸರ್ಕಾರದ ವೈಫಲ್ಯಗಳು ಮತ್ತು ರಾಜ್ಯ ಬಿಜೆಪಿ ಪಕ್ಷದ ಸಂಕಷ್ಟವನ್ನು ಮರೆಮಾಚಲು ಸಾಧ್ಯವಾಗಲಿಲ್ಲ ಎಂದು ಸಿಎಂ ಟೀಕಿಸಿದ್ದಾರೆ. ಪ್ರತಿಪಕ್ಷದ ಮೇಲೆ ಸಣ್ಣ ಆರೋಪ ಹುಡುಕುವ ಮುನ್ನ, ತಮ್ಮದೇ ಶಿಬಿರದಲ್ಲಿರುವ ದೊಡ್ಡ ಸಮಸ್ಯೆಗಳನ್ನು ನೋಡಿಕೊಳ್ಳಬೇಕಿತ್ತು ಎನ್ನುವ ಅರ್ಥದಲ್ಲಿ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ತಮ್ಮ ಪೋಸ್ಟ್ನಲ್ಲಿ, ಜವಾಹರಲಾಲ್ ನೆಹರು ಅವರಿಂದ ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿವರೆಗೆ ಯಾವ ಪ್ರಧಾನಿಯೂ ವಿರೋಧ ಪಕ್ಷಗಳನ್ನು ಹೀಯಾಳಿಸುವ ಬೀದಿ ಮಟ್ಟದ ಭಾಷಣ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ನರೇಂದ್ರ ಮೋದಿ ಅವರ ಭಾಷಣಗಳು ಪ್ರಧಾನಿಯ ಹುದ್ದೆಯ ಘನತೆಗೆ ಧಕ್ಕೆಯುಂಟುಮಾಡುವಂತಿವೆ ಎಂಬ ಆರೋಪವನ್ನೂ ಮಾಡಿದ್ದಾರೆ. ಚುನಾವಣಾ ಪ್ರಚಾರದ ಉತ್ಸಾಹದಲ್ಲೇ ಬೆಂಗಳೂರಿಗೆ ಬಂದಂತಿತ್ತು ಎಂದು ಕೂಡ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಚಿನ್ನಕೊಳ್ಳಬೇಡಿ ಎಂದಿದ್ದೇನೆ?
ಆರ್ಥಿಕತೆ ವಿಚಾರದಲ್ಲಿಯೂ ಸಿಎಂ ಪ್ರಶ್ನೆ ಎತ್ತಿದ್ದಾರೆ. ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವುದಾಗಿ ಹೇಳಿಕೊಂಡಿದ್ದ ಪ್ರಧಾನಿ, ಈಗ ಜನರಿಗೆ ಚಿನ್ನ ಕೊಳ್ಳಬೇಡಿ, ಪೆಟ್ರೋಲ್ ಮತ್ತು ಅಡುಗೆ ಎಣ್ಣೆ ಕಡಿಮೆ ಬಳಸಿ, ವಿದೇಶ ಪ್ರಯಾಣ ತಪ್ಪಿಸಿ, ರಸಗೊಬ್ಬರ ಬಳಕೆ ಕಡಿಮೆ ಮಾಡಿ ಎಂದು ಹೇಳುತ್ತಿರುವುದು ಯಾವ ರೀತಿಯ ಅಭಿವೃದ್ಧಿಯ ಲಕ್ಷಣ ಎಂದು ಅವರು ಪ್ರಶ್ನಿಸಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಆಹಾರ ಎಣ್ಣೆಗಳ ಬೆಲೆ ಏರಿಕೆಗೆ ಕೇಂದ್ರದ ವಿದೇಶಾಂಗ ನೀತಿ ವೈಫಲ್ಯವೇ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕರ್ನಾಟಕದ ಆರ್ಥಿಕ ಸ್ಥಿತಿ ಕಾಂಗ್ರೆಸ್ ಆಡಳಿತದಲ್ಲಿ ಸುರಕ್ಷಿತವಾಗಿದೆ ಎಂದು ವಾದಿಸಿದ ಸಿದ್ದರಾಮಯ್ಯ, ರಾಷ್ಟ್ರೀಯ ತಲಾ ಆದಾಯ ರೂ. 2.11 ಲಕ್ಷವಿದ್ದರೆ ಕರ್ನಾಟಕದದು ರೂ. 4.33 ಲಕ್ಷ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರೀಯ ಜಿಡಿಪಿ ಬೆಳವಣಿಗೆ ದರ 7.4 ಪ್ರತಿಶತವಿದ್ದರೆ ಕರ್ನಾಟಕದದು 8.1 ಪ್ರತಿಶತವಾಗಿದೆ ಎಂದೂ, ದೇಶದ ಜಿಡಿಪಿಯಲ್ಲಿ ರಾಜ್ಯದ ಪಾಲು 9.19 ಪ್ರತಿಶತವಿದೆ ಎಂದೂ ಅವರು ಹೇಳಿದ್ದಾರೆ. ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕವೇ ಅತಿ ಹೆಚ್ಚು ಪಾಲು ಹೊಂದಿದೆ ಎಂದು ಹೇಳಿ, ಸರ್ಕಾರದ ವಿರುದ್ಧ ಆರೋಪ ಮಾಡುವ ಮುನ್ನ ಪ್ರಧಾನಿ ಪೂರ್ವಭಾವಿ ಅಧ್ಯಯನ ಮಾಡಿ ಬರಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಬಿಜೆಪಿಯ ಮೈತ್ರಿ ರಾಜಕಾರಣದ ಬಗ್ಗೆ ಟೀಕೆ
ಪಕ್ಷಾಂತರ ರಾಜಕೀಯದ ವಿಷಯದಲ್ಲಿಯೂ ಸಿಎಂ ಪ್ರಧಾನಿ ಮೋದಿ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಮೇಲೆ ಪಕ್ಷಾಂತರದ ಆರೋಪ ಮಾಡುವ ಮೊದಲು ಬಿಜೆಪಿ ಹಾಗೂ ಅದರ ಮೈತ್ರಿ ರಾಜಕಾರಣದ ಇತಿಹಾಸವನ್ನು ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ವಿವಿಧ ಪ್ರಾದೇಶಿಕ ಪಕ್ಷಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಬಿಜೆಪಿ ತನ್ನತ್ತ ಸೆಳೆದಿರುವ ರಾಜಕೀಯವನ್ನು ಉಲ್ಲೇಖಿಸಿ, ಇಂತಹ ನಾಯಕರು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಜನರಿಗೆ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.
ರಾಜ್ಯ ಬಿಜೆಪಿಯ ಆಂತರಿಕ ಸ್ಥಿತಿಗತಿಗಳ ಮೇಲೂ ಸಿದ್ದರಾಮಯ್ಯ ಪ್ರಹಾರ ನಡೆಸಿದ್ದಾರೆ. ಕರ್ನಾಟಕ ಬಿಜೆಪಿ ಹರಿದುಕಟ್ಟಿ ಹಾಕಿದ ಹಗ್ಗದಂತಾಗಿದೆ; ಪಕ್ಷದೊಳಗೆ ಪರಸ್ಪರ ಕಾಲೆಳೆಯುವ ರಾಜಕಾರಣ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧವೇ ಪಕ್ಷದೊಳಗೆ ಅನೇಕ ಬಣಗಳು ಆರೋಪ ಮಾಡುತ್ತಿವೆ. ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಕೇಂದ್ರ ನಾಯಕರಿಗೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಪಕ್ಷವೇ ಅಮಾನತುಗೊಳಿಸಿದ್ದ ನಾಯಕರನ್ನು ಮರಳಿ ಕರೆದುಕೊಂಡು ಬಂದು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುವ ಮಟ್ಟಿಗೆ ರಾಜ್ಯ ಬಿಜೆಪಿ ದುರ್ಬಲವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಇಂತಹ ಸ್ಥಿತಿಯಲ್ಲಿರುವವರು ಕಾಂಗ್ರೆಸ್ಗೆ ಪಾಠ ಹೇಳಲು ಹೊರಟಿದ್ದಾರೆ ಎಂದು ಹೇಳಿರುವ ಅವರು, “ಪ್ರಧಾನಿಗಳೇ, ಮೊದಲು ಕುಸಿದು ಬೀಳುತ್ತಿರುವ ನಿಮ್ಮ ಮನೆಯನ್ನು ಭದ್ರಪಡಿಸಿಕೊಳ್ಳಿ. ಆಮೇಲೆ ನಮ್ಮ ಬಗ್ಗೆ ಮಾತನಾಡಿ” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

