
ಮಾಜಿ ಸಿಎಂ ಸಿದ್ದರಾಮಯ್ಯ
ಕುರುಬ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಿ, ಬೇರೆ ಜಾತಿಗೆ ತಾರತಮ್ಯ ಮಾಡಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರವರ್ಗ-1 ಮತ್ತು ಪ್ರವರ್ಗ-2ಎ ನಲ್ಲಿ ಬರುವ ಜಾತಿಗಳಿಗೆ ಶೇ. 70 ರಷ್ಟು ಹಾಗೂ ಪ್ರವರ್ಗ-3ಎ ಮತ್ತು 3ಬಿ ನಲ್ಲಿ ಬರುವ ಜಾತಿಗಳಿಗೆ ಶೇ. 30 ರಷ್ಟು ಅನುದಾನ ಮೀಸಲಿಡಲಾಗುತ್ತದೆ.
ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ 71.85 ಕೋಟಿ ರೂ. ಪೂರ್ವಭಾವಿ ಮಂಜೂರಾತಿ ನೀಡಿರುವ ಪ್ರಕ್ರಿಯೆಯಲ್ಲಿ ಯಾವುದೇ ಬಗೆಯ ತಾರತಮ್ಯ ಮಾಡಲಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕುರುಬ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂಬ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿರುವ ಅವರು, "ಇಲಾಖೆಗೆ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಕುರುಬ ಸಮುದಾಯದ ಮನವಿಗಳೇ ಹೆಚ್ಚಾಗಿದ್ದವು. ಅರ್ಜಿಗಳ ಸಂಖ್ಯೆಯ ಆಧಾರದ ಮೇಲೆ ಅನುದಾನ ಮಂಜೂರಾಗಿದೆಯೇ ಹೊರತು, ಇಲ್ಲಿ ಯಾವುದೇ ಉದ್ದೇಶಪೂರ್ವಕ ತಾರತಮ್ಯ ನಡೆದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪ್ರತಿಕ್ರಿಯಿಸಿರುವ ಅವರು, "ಈಗ ಬಿಡುಗಡೆಯಾಗಿರುವುದು ಫಲಾನುಭವಿಗಳ ಅಂತಿಮ ಪಟ್ಟಿಯಲ್ಲ. ಬೇರೆ ಬೇರೆ ಹಿಂದುಳಿದ ಜಾತಿಗಳು ಮತ್ತು ಸಂಘ-ಸಂಸ್ಥೆಗಳು ನೀಡಿರುವ ಮನವಿಗಳ ಪರಿಶೀಲನೆ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೂ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಇದೊಂದು ನಿರಂತರವಾಗಿ ನಡೆಯುವ ಪ್ರಕ್ರಿಯೆ" ಎಂದಿದ್ದಾರೆ.
ನಿಯಮಾವಳಿಯಂತೆ ಹಂಚಿಕೆ
ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರವರ್ಗ-1 ಮತ್ತು ಪ್ರವರ್ಗ-2ಎ ನಲ್ಲಿ ಬರುವ ಜಾತಿಗಳಿಗೆ ಶೇ. 70 ರಷ್ಟು ಹಾಗೂ ಪ್ರವರ್ಗ-3ಎ ಮತ್ತು 3ಬಿ ನಲ್ಲಿ ಬರುವ ಜಾತಿಗಳಿಗೆ ಶೇ. 30 ರಷ್ಟು ಅನುದಾನ ಮೀಸಲಿಡಲಾಗುತ್ತದೆ. ಪ್ರವರ್ಗ 1 ಮತ್ತು 2ಎ ನಲ್ಲಿ ಅತಿ ಹೆಚ್ಚು ಜಾತಿಗಳು ಇರುವುದರಿಂದ ಸಹಜವಾಗಿಯೇ ಕೆಲವು ಸಮುದಾಯಗಳಿಗೆ ಹೆಚ್ಚಿನ ಅನುದಾನ ಸಂದಾಯವಾಗಿದೆ ಎಂದು ಅವರು ಅಂಕಿ-ಅಂಶಗಳ ಸಮೇತ ವಿವರಣೆ ನೀಡಿದ್ದಾರೆ.
ಸರ್ವ ಜನಾಂಗಕ್ಕೂ ಆದೇಶ
ಕೇವಲ ಒಂದು ಸಮುದಾಯಕ್ಕೆ ಮಾತ್ರ ಮಂಜೂರಾತಿ ಸಿಕ್ಕಿಲ್ಲ ಎಂದು ನೆನಪಿಸಿರುವ ಅವರು, ಕುರುಬ ಜನಾಂಗದ ಜೊತೆಗೆ ಮಡಿವಾಳ, ಲಿಂಗಾಯಿತ, ಒಕ್ಕಲಿಗ, ಬೆಸ್ತ, ಬಲಿಜ, ಗೊಲ್ಲ, ಜೆಟ್ಟಿ, ಕುಂಬಾರ, ಅರಸು, ಹೆಳವ, ಸವಿತಾ ಸಮಾಜ, ಉಪ್ಪಾರ, ಗಾಣಿಗ, ಕುರುಹಿನ ಶೆಟ್ಟಿ, ಹಾಲಕ್ಕಿ ಹಾಗೂ ರೆಡ್ಡಿ ಸೇರಿದಂತೆ ವಿವಿಧ ಹಿಂದುಳಿದ ಜನಾಂಗಗಳ ಸಮುದಾಯ ಭವನ ಮತ್ತು ಹಾಸ್ಟೆಲ್ ಕಟ್ಟಡಗಳ ನಿರ್ಮಾಣಕ್ಕೂ ಪೂರ್ವಭಾವಿ ಆದೇಶ ಹೊರಡಿಸಲಾಗಿದೆ ಎಂದು ಪಟ್ಟಿ ಬಿಡುಗಡೆ ಮಾಡಿದ್ದಾರೆ.
ನಿಯಮ ಪಾಲನೆ ಕಡ್ಡಾಯ
"ಈಗ ಹೊರಬಿದ್ದಿರುವುದು ಕೇವಲ ಪೂರ್ವಭಾವಿ ಆದೇಶ ಮಾತ್ರ, ಇದು ನೇರ ಹಣ ಬಿಡುಗಡೆಯ ಆದೇಶ ಅಲ್ಲ." ಅನುದಾನ ಪಡೆಯಲು ಸಂಘ-ಸಂಸ್ಥೆಗಳು ಕಠಿಣ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಹಣ ಬಿಡುಗಡೆಯಾಗಬೇಕಾದರೆ ಸಂಸ್ಥೆಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರವೇ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ನಿವೇಶನ ಅಥವಾ ಜಮೀನು ಸಂಬಂಧಪಟ್ಟ ಸಂಘದ ಹೆಸರಿನಲ್ಲೇ ಇರಬೇಕು. ಸ್ಥಳೀಯ ಪುರಸಭೆ ಅಥವಾ ಪಂಚಾಯತಿಯಿಂದ ಕಡ್ಡಾಯವಾಗಿ ಕಟ್ಟಡ ಲೈಸೆನ್ಸ್ ಪಡೆದಿರಬೇಕು.
ಮುಂದುವರಿದು, ಸಂಸ್ಥೆಯ ಕಳೆದ 3 ವರ್ಷಗಳ ಅಧಿಕೃತ ಆಡಿಟ್ ವರದಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ಸರ್ಕಾರದ ನಿಯಮಗಳ ಪ್ರಕಾರ, ಕಾಮಗಾರಿಯ ಪ್ರಗತಿಯನ್ನು ಒಟ್ಟು 3 ಹಂತಗಳಲ್ಲಿ ಕಟ್ಟುನಿಟ್ಟಾಗಿ ಪರಿಶೀಲಿಸಿದ ಬಳಿಕವಷ್ಟೇ ಪ್ರತಿ ವರ್ಷ ಹಂತಹಂತವಾಗಿ ಹಣ ಬಿಡುಗಡೆಯಾಗಲಿದೆ. ಹೀಗಾಗಿ ನಿಯಮಬಾಹಿರವಾಗಿ ಯಾರಿಗೂ ಹಣ ತಲುಪಲು ಸಾಧ್ಯವಿಲ್ಲ ಎಂದು ವಿರೋಧಿಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.

