
ಸಿಎಂ ಸಿದ್ದರಾಮಯ್ಯ ಹಾಗೂ ಆಪ್ತ ಸಚಿವರು ಭೋಜನ ಸವಿದರು.
ಹೈಕಮಾಂಡ್ ಸಭೆಗೂ ಮುನ್ನ ಸಿದ್ದರಾಮಯ್ಯ ‘ಬ್ರೇಕ್ಫಾಸ್ಟ್ ಪಾಲಿಟಿಕ್ಸ್’: ಆಪ್ತರೊಂದಿಗೆ ರಹಸ್ಯ ತಂತ್ರ!
ಹೈಕಮಾಂಡ್ ಸಭೆಯಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆಯಂತಹ ಗಂಭೀರ ವಿಷಯಗಳು ಚರ್ಚೆಗೆ ಬರಲಿರುವುದರಿಂದ, ತಮ್ಮ ಆಪ್ತ ವಲಯದ ಸಚಿವರಿಗೆ ಯಾವುದೇ ಧಕ್ಕೆ ಬಾರದಂತೆ ಈ ಸಭೆಯಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಆಯೋಜಿಸಿರುವ ಮಹತ್ವದ ಹೈವೋಲ್ಟೇಜ್ ಸಭೆಗೂ ಮುನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ತೀವ್ರ ರಾಜಕೀಯ ಕಸರತ್ತು ನಡೆಸಿದ್ದಾರೆ. ಸಭೆಗೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಆಪ್ತ ಸಚಿವರು ಮತ್ತು ನಾಯಕರೊಂದಿಗೆ ಸಿಎಂ ಮಹತ್ವದ ಉಪಹಾರ ಸಭೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಮಹತ್ವಪಡೆದುಕೊಂಡಿದೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ರಹಸ್ಯ ಸಭೆಯಲ್ಲಿ ಯಾವೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಬೇಕು ಮತ್ತು ಹೈಕಮಾಂಡ್ ಮುಂದೆ ಮಂಡಿಸಬೇಕಾದ ಪ್ರಮುಖ ಅಂಶಗಳ ಕುರಿತು ಈ ಸಭೆಯಲ್ಲಿ ತೀವ್ರ ಸಮಾಲೋಚನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಪಹಾರ ಸಭೆಯಲ್ಲಿ ಭಾಗಿಯಾದ ಪ್ರಮುಖರು
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬ್ರೇಕ್ಫಾಸ್ಟ್ ಸಭೆಯಲ್ಲಿ ಗೃಹಸಚಿವ ಡಾ. ಜಿ. ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಇಂಧನ ಸಚಿವ ಕೆ.ಜೆ. ಜಾರ್ಜ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಹಿರಿಯ ನಾಯಕರು ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಭಾಗವಹಿಸಿದ್ದರು.
ಒಗ್ಗಟ್ಟಿನ ಪ್ರದರ್ಶನ
ಹೈಕಮಾಂಡ್ ಸಭೆಯಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆಯಂತಹ ಗಂಭೀರ ವಿಷಯಗಳು ಚರ್ಚೆಗೆ ಬರಲಿರುವುದರಿಂದ, ತಮ್ಮ ಆಪ್ತ ವಲಯದ ಸಚಿವರಿಗೆ ಯಾವುದೇ ಧಕ್ಕೆ ಬಾರದಂತೆ ಸಿಎಂ ಸಿದ್ದರಾಮಯ್ಯ ಈ ಸಭೆಯಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ದೆಹಲಿ ರಾಜಕಾರಣದಿಂದ ದೂರ ಉಳಿಯುತ್ತಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಿಎಂ ಆಪ್ತರ ಸಭೆಯಲ್ಲಿ ಭಾಗಿಯಾಗಿರುವುದು, ರಾಜ್ಯ ರಾಜಕಾರಣದಲ್ಲಿ 'ದಲಿತ ಸಿಎಂ' ಅಥವಾ ಮುಂದಿನ ಪರ್ಯಾಯ ನಾಯಕತ್ವದ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ.

