ದಾವಣಗೆರೆ ಉಪ ಚುನಾವಣೆ| ಕಾಂಗ್ರೆಸ್‌ ವಿರುದ್ಧ ಮತ ಹಾಕಿ - ಜಮೀರ್ ಧ್ವನಿ ಎನ್ನಲಾದ ಆಡಿಯೋ ವೈರಲ್!
x

ಮುಸ್ಲಿಂ ನಾಯಕ ಮೊಹಮ್ಮದ್ ಸಿರಾಜ್ ಹಾಗೂ ಮಾಜಿ ಸಚಿವ ಜಮೀರ್‌ ಅಹಮದ್‌ 

ದಾವಣಗೆರೆ ಉಪ ಚುನಾವಣೆ| "ಕಾಂಗ್ರೆಸ್‌ ವಿರುದ್ಧ ಮತ ಹಾಕಿ" - ಜಮೀರ್ ಧ್ವನಿ ಎನ್ನಲಾದ ಆಡಿಯೋ ವೈರಲ್!

ಉಪಚುನಾವಣೆಯ ಮತದಾನದ ದಿನವಾದ ಏ.9ರಂದು ಇಬ್ಬರ ನಡುವೆ ನಡೆದ ಮಾತುಕತೆಯ ಅಡಿಯೊವನ್ನು 'ಕನ್ನಡ ಕಾಕ್ರೋಚ್' ಎಂಬ 'ಎಕ್ಸ್' ಖಾತೆಯಲ್ಲಿ ಸೋಮವಾರ ನಸುಕಿನ 3ಕ್ಕೆ ಹಂಚಿಕೊಳ್ಳಲಾಗಿದೆ.


Click the Play button to hear this message in audio format

ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಚಿವರಾಗಿದ್ದ ಜಮೀರ್ ಅಹ್ಮದ್ ಖಾನ್ ಮತ್ತು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಚ್ಚಾಟಿತ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಉಪಚುನಾವಣೆಯ ಮತದಾನದ ದಿನವಾದ ಏ.9ರಂದು ಇಬ್ಬರ ನಡುವೆ ನಡೆದ ಮಾತುಕತೆಯ ಅಡಿಯೊವನ್ನು 'ಕನ್ನಡ ಕಾಕ್ರೋಚ್' ಎಂಬ 'ಎಕ್ಸ್' ಖಾತೆಯಲ್ಲಿ ಸೋಮವಾರ ನಸುಕಿನ 3ಕ್ಕೆ ಹಂಚಿಕೊಳ್ಳಲಾಗಿದೆ. ಉರ್ದು ಮತ್ತು ಕನ್ನಡದಲ್ಲಿ ನಡೆದ ಈ ಸಂಭಾಷಣೆಯ ಪೂರ್ಣ ಪಠ್ಯ ಕೂಡ ಇದರಲ್ಲಿದೆ.

'ಮತದಾನ ಹೇಗೆ ನಡೆಯುತ್ತಿದೆ..' ಎಂಬುದರಿಂದ ಆರಂಭಗೊಳ್ಳುವ ಈ ಅಡಿಯೊದಲ್ಲಿ ಇಬ್ಬರ ನಡುವೆ 3 ನಿಮಿಷ 50 ಸೆಕೆಂಡ್ ಮಾತುಕತೆ ನಡೆದಿದೆ. ನೂತನ ಸರ್ಕಾರ ರಚನೆಯ ಸಂದರ್ಭದಲ್ಲಿ ಈ ಆಡಿಯೊ ಹೊರಬಂದಿರುವುದರ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಸಾದಿಕ್ ಸಹೋದರನಿಗೆ 1.5 ಲಕ್ಷ ರೂ. ಹಣ

"ಹಲವು ಬೂತ್‌ಗಳಿಗೆ ಭೇಟಿ ನೀಡಿದ್ದೆ. ಎಲ್ಲೆಡೆ ಕುಕ್ಕರ್ (ಎಸ್‌ಡಿಪಿಐ ಗುರುತು) ಚಾಲ್ತಿಯಲ್ಲಿದೆ, ಡೈಮಂಡ್ (ಪಕ್ಷೇತರ ಅಭ್ಯರ್ಥಿಯ ಚಿಹ್ನೆ) ಕಡಿಮೆ ಇದೆ. ಕಾಂಗ್ರೆಸ್‌ನ ಕೆಲವರು ಹಣ ಹಂಚುತ್ತಿದ್ದಾರೆ. ಜನರು ಹಣವನ್ನು ತಿರಸ್ಕರಿಸಿ ಮತ ಹಾಕುವುದು ಗೊತ್ತಿದೆ ಎಂದು ಹೇಳುತ್ತಿದ್ದಾರೆ. ಸಾದಿಕ್ ಸಹೋದರನಿಗೆ 1.5 ಲಕ್ಷ ರೂ. ಹಣ ಕೊಟ್ಟಿದ್ದೇನೆ. ಎಸ್‌ಡಿಪಿಐಗೆ ಮತಗಳು ಬರುವಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ" ಎಂಬುದಾಗಿ ಸಿರಾಜ್ ಮಾತನಾಡಿರುವುದು ಅಡಿಯೊದಲ್ಲಿದೆ.

ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಸೂಚನೆ

"ಮತದಾನಕ್ಕೆ ಯಾರನ್ನೂ ಒತ್ತಾಯ ಪೂರ್ವಕವಾಗಿ ಮನೆಯಿಂದ ಕರೆತರಬೇಡ. ನಮ್ಮವರಿಗೆ ಯಾವಾಗಲೂ ಕಾಂಗ್ರೆಸ್‌ಗೆ ಮತಹಾಕಿ ರೂಢಿಯಾಗಿದೆ. ಒಂದು ವೇಳೆ ಜನರು ಮನೆಯಿಂದ ಹೊರಬರಲು ಆರಂಭಿಸಿದರೆ ನಮಗೆ ಪ್ರಯೋಜನವಾಗದು. ಮನೆಯಿಂದ ಹೊರಬರುವವರು ಕೂಡ ಎಸ್‌ಡಿಪಿಐ ಅಥವಾ ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಹೇಳು" ಎಂಬುದಾಗಿ ಜಮೀರ್ ಅಹ್ಮದ್ ಅವರು ಸಿರಾಜ್ ಅವರಿಗೆ ಸೂಚಿಸಿದ್ದು ಅಡಿಯೊದಲ್ಲಿದೆ.

"ಸಾದಿಕ್ ಪೈಲ್ವಾನ್ ದೊಡ್ಡ ನಾಯಕ ಎಂದು ಭಾವಿಸಿದಂತೆ ಕಾಣುತ್ತಿದೆ. ಅವರ ವಾರ್ಡ್‌ನಲ್ಲಿ ಕಾಂಗ್ರೆಸ್ ವೋಟುಗಳು ಕೈತಪ್ಪಬೇಕು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರೊಂದಿಗೆ ಮಾತನಾಡಿದ್ದೇನೆ. ಕಣದಲ್ಲಿದ್ದು ಕೆಲಸ ಮಾಡುವಂತೆ ಸೂಚಿಸಿದ್ದೇನೆ" ಎಂದು ಜಮೀರ್ ಹೇಳಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಜಮೀರ್ ವಿರುದ್ಧ ಷಡ್ಯಂತ್ರ: ಸಿರಾಜ್

ನನ್ನೊಂದಿಗೆ ಜಮೀರ್ ಅಹಮ್ಮದ್ ಅವರು ಪಕ್ಷ ವಿರೋಧಿಯಾಗಿ ಮಾತನಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಇದೊಂದು ತಿರುಚಿದ ಆಡಿಯೊ. ಇದು ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಉಚ್ಚಾಟಿತ ಮುಖಂಡ ಮೊಹಮ್ಮದ್ ಸಿರಾಜ್ ತಿಳಿಸಿದರು.

ಉದ್ದೇಶಪೂರ್ವಕವಾಗಿ ಆಡಿಯೋ ವೈರಲ್‌

"ಉಪಚುನಾವಣೆಯ ಸಂದರ್ಭದಲ್ಲಿ ನಮ್ಮ ವಿರುದ್ಧವೂ ಷಡ್ಯಂತ್ರ ನಡೆದಿದೆ. ಮುಸ್ಲಿಂ ನಾಯಕರಿಗೆ ಗೂಬೆ ಕೂರಿಸುವ ಪ್ರಯತ್ನ ನಡೆಯಿತು. ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕವೂ ಇದು ಮುಂದುವರಿದಿದೆ. ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಜಮೀರ್ ಅಹಮ್ಮದ್ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಈ ಆಡಿಯೊ ಬಿಡುಗಡೆ ಮಾಡಲಾಗಿದೆ" ಎಂದು ಸೋಮವಾರ ಆರೋಪಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀನಿವಾಸ ದಾಸಕರಿಯಪ್ಪ ಪರಿಚಿತರು. ಆದರೂ, ಉಪಚುನಾವಣೆಯ ಅಭ್ಯರ್ಥಿಯಾದ ಬಳಿಕ ಅವರೊಂದಿಗೆ ಮಾತನಾಡಿಲ್ಲ. ಮತದಾನದ ದಿನ ಮತಚಲಾವಣೆ ಮಾಡಿದ ಬಳಿಕ ಮನೆಗೆ ಬಂದು ಮಲಗಿದ್ದೆ. ಯಾರೊಂದಿಗೂ ಮಾತನಾಡಿಲ್ಲ. ಆಡಿಯೊ ಎಲ್ಲಿಂದ ಬಂದಿತು ಎಂಬುದು ಗೊತ್ತಾಗಬೇಕು. ಕಾನೂನು ಸಲಹೆ ಪಡೆದು ಮುಂದುವರಿಯಲಿದ್ದೇನೆ ಎಂದು ತಿಳಿಸಿದರು.

Read More
Next Story