
ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ
ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಸೂಚನೆ? CLP ಸಭೆಗೆ ಆರ್.ವಿ. ದೇಶಪಾಂಡೆ ಪಟ್ಟು!
"ನಾಯಕತ್ವ ಬದಲಾವಣೆ ಏನೇ ಇರಲಿ, ಮೊದಲು ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಅಲ್ಲಿ ನಾಯಕನ ಬಲಾಬಲ ನಿರ್ಧಾರವಾಗಬೇಕಿತ್ತೇ ಹೊರತು, ನೇರವಾಗಿ ರಾಜೀನಾಮೆಗೆ ಸೂಚಿಸಿರುವುದು ತಪ್ಪು" ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ದಿಢೀರ್ ರಾಜಕೀಯ ಬದಲಾವಣೆಗಳು ಸಂಭವಿಸುತ್ತಿದ್ದು, ಕೈ ಪಾಳಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಮುಂದಾಗಿರುವುದು ಸದ್ಯ ಅವರ ಆಪ್ತ ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ. ಯಾರನ್ನೇ ಸಿಎಂ ಮಾಡಲಿ, ಆದರೆ ಹೈಕಮಾಂಡ್ ಅನುಸರಿಸುತ್ತಿರುವ ಈ ಬದಲಾವಣೆಯ ಪ್ರಕ್ರಿಯೆ ಸರಿಯಲ್ಲ ಎಂದು ಹಿರಿಯ ಹಾಗೂ ಸಿಎಂ ಆಪ್ತ ಸಚಿವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಕಾವೇರಿ'ಗೆ ಭೇಟಿ ನೀಡಿದ್ದ ಹಿರಿಯ ಸಚಿವ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಆರ್.ವಿ. ದೇಶಪಾಂಡೆ ಪ್ರತಿಕ್ರಿಯಿಸಿದ್ದು, "ಗೌರವಯುತವಾಗಿ ನಾಯಕತ್ವ ಬದಲಾವಣೆ ಕಾರ್ಯ ನಡೆಯುತ್ತಿಲ್ಲ. ಏಕಾಏಕಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಲು ನಿರ್ಧಾರ ಮಾಡಿರುವುದು ಸರಿಯಲ್ಲ. ಈಗಿನ ಸನ್ನಿವೇಶದಲ್ಲಿ ಸಿದ್ದರಾಮಯ್ಯ ವಿಚಾರದಲ್ಲಿ ಹೈಕಮಾಂಡ್ ಈ ರೀತಿ ನಡೆದುಕೊಳ್ಳಬಾರದಿತ್ತು" ಎಂದು ಸಿಎಂ ಎದುರೇ ಅಸಮಾಧಾನದ ಸುರಿಮಳೆಗೈದಿದ್ದಾರೆ.
ಶಾಸಕಾಂಗ ಪಕ್ಷದ ಸಭೆ ಕರೆಯಲು ಪಟ್ಟು
ನಾಯಕತ್ವ ಬದಲಾವಣೆ ಏನೇ ಇರಲಿ, ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಕರೆಯಬೇಕು. ಅಲ್ಲಿ ನಾಯಕನ ಬಲಾಬಲ ನಿರ್ಧಾರವಾಗಬೇಕಿತ್ತೇ ಹೊರತು, ನೇರವಾಗಿ ರಾಜೀನಾಮೆಗೆ ಸೂಚಿಸಿರುವುದು ತಪ್ಪು. ಯಾವುದೇ ಪೂರ್ವತಯಾರಿ ಇಲ್ಲದೆ, ಶಾಸಕರ ಅಭಿಪ್ರಾಯ ಪಡೆಯದೆ ಏಕಾಏಕಿ ಈ ರೀತಿ ಬದಲಾವಣೆ ಮಾಡುವುದರಿಂದ ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಯಾವ ರೀತಿಯ ಸಂದೇಶ ಕೊಟ್ಟಂತಾಗುತ್ತದೆ" ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಮುಂದಿನ ನಡೆ ಕುತೂಹಲ!
ಹೈಕಮಾಂಡ್ನ ದಿಢೀರ್ ಹೇಳಿಕೆಯಿಂದಾಗಿ ಸಿದ್ದರಾಮಯ್ಯ ಆಪ್ತ ಬಳಗ ಬೇಸರಗೊಂಡಿದೆ. ಒಂದೆಡೆ ಹೈಕಮಾಂಡ್ ಸೂಚನೆಗೆ ಗೌರವ ಕೊಟ್ಟು ರಾಜೀನಾಮೆ ನೀಡಲು ಸಿಎಂ ಮುಂದಾಗಿದ್ದರೆ, ಮತ್ತೊಂದೆಡೆ ಆಪ್ತ ಸಚಿವರು ಮತ್ತು ಹಿರಿಯ ನಾಯಕರು ಶಾಸಕಾಂಗ ಪಕ್ಷದ ಸಭೆ ನಡೆಸಿಯೇ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ರಾಜಕೀಯ ಜಿದ್ದಾಜಿದ್ದಿ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಆಪ್ತರ ನಡುವಿನ ಶೀತಲ ಸಮರಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

