x

ಸಂಪುಟ ವಿಸ್ತರಣೆ ಬೆನ್ನಲ್ಲೇ ‘ಕೈ’ ಪಡೆಗೆ ರಾಜೀನಾಮೆ ಕಂಟಕ: ಅಸಮಾಧಾನಿತರಿಗೆ ಡಿ.ಕೆ. ಶಿವಕುಮಾರ್ ಎಚ್ಚರಿಕೆ

ಶಾಸಕರ ಬಂಡಾಯದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್, "ಯಾರಾದರೂ ರಾಜೀನಾಮೆ ಕೊಡಲು ಮುಂದಾದರೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಜೀನಾಮೆ ಕೊಟ್ಟರೆ ಒಂದೇ ನಿಮಿಷದಲ್ಲಿ ಅದನ್ನು ಅಂಗೀಕರಿಸುತ್ತೇನೆ" ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.


Click the Play button to hear this message in audio format

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 19 ನೂತನ ಸಚಿವರ ಸೇರ್ಪಡೆಯೊಂದಿಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಂಡಿದೆಯಾದರೂ, ಪಕ್ಷದೊಳಗಿನ ಬಂಡಾಯ ಮತ್ತು ಅಸಮಾಧಾನದ ಕಿಚ್ಚು ತಾರಕಕ್ಕೇರಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹಿರಿಯ ಶಾಸಕರು ಬಹಿರಂಗವಾಗಿಯೇ ರಾಜೀನಾಮೆ ಬೆದರಿಕೆ ಒಡ್ಡುತ್ತಿದ್ದು, ಹಲವೆಡೆ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಸಮಾಧಾನದ ಅಲೆ: ಹಿರಿಯ ನಾಯಕರು ಸೈಡ್‌ಲೈನ್

ದಿನೇಶ್ ಗುಂಡೂರಾವ್ (ಗಾಂಧಿನಗರ), ಟಿ.ಬಿ. ಜಯಚಂದ್ರ (ಶಿರಾ), ಅಪ್ಪಾಜಿ ನಾಡಗೌಡ (ಮುದ್ದೇಬಿಹಾಳ), ಎನ್.ವೈ. ಗೋಪಾಲಕೃಷ್ಣ (ಮೊಳಕಾಲ್ಮೂರು) ಮತ್ತು ಯಶವಂತರಾಯಗೌಡ ಪಾಟೀಲ್ (ಇಂಡಿ) ಅವರಂತಹ ಪ್ರಭಾವಿ ಹಾಗೂ ಹಿರಿಯ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

"ರಾಜೀನಾಮೆ ನೀಡಿದರೆ ಒಂದೇ ನಿಮಿಷದಲ್ಲಿ ಅಂಗೀಕಾರ"

ಶಾಸಕರ ಬಂಡಾಯದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್, "ಯಾರಾದರೂ ರಾಜೀನಾಮೆ ಕೊಡಲು ಮುಂದಾದರೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಜೀನಾಮೆ ಕೊಟ್ಟರೆ ಒಂದೇ ನಿಮಿಷದಲ್ಲಿ ಅದನ್ನು ಅಂಗೀಕರಿಸುತ್ತೇನೆ" ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗೆ ಕಡೆಗಣನೆ?

ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯೂ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಎಂಎಲ್‌ಸಿ ಉಮಾಶ್ರೀ ಸೇರಿದಂತೆ ಹಲವು ಮಹಿಳಾ ನಾಯಕಿಯರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ದೊಡ್ಡ ಮಟ್ಟದ ಮಹಿಳಾ ಮತದಾರರಿದ್ದರೂ ನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಪಕ್ಷದೊಳಗಿನಿಂದಲೇ ಕೇಳಿಬರುತ್ತಿದೆ.

ಬಸವರಾಜ ಹೊರಟ್ಟಿ ಸವಾಲು

ಇನ್ನೊಂದೆಡೆ, ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಅವರನ್ನು ನಿಯೋಜಿಸಲು ಕಾಂಗ್ರೆಸ್ ಮುಂದಾಗಿದೆ. ಆದರೆ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ, "ನಾನು ರಾಜೀನಾಮೆ ನೀಡುವುದಿಲ್ಲ. ಧೈರ್ಯವಿದ್ದರೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ತಂದು ತೆಗೆದುಹಾಕಲಿ" ಎಂದು ಸರ್ಕಾರಕ್ಕೆ ನೇರ ಸವಾಲು ಎಸೆದಿದ್ದಾರೆ.

Read More
Next Story