ಕರ್ನಾಟಕ ನೂತನ ಸಚಿವ ಸಂಪುಟ: ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಖಾತೆ ಹಂಚಿಕೆ, ಪ್ರಿಯಾಂಕ್ ಖರ್ಗೆಗೆ ಗೃಹ ಖಾತೆ
x

ಕರ್ನಾಟಕ ನೂತನ ಸಚಿವ ಸಂಪುಟ: ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಖಾತೆ ಹಂಚಿಕೆ, ಪ್ರಿಯಾಂಕ್ ಖರ್ಗೆಗೆ ಗೃಹ ಖಾತೆ

ಸಂಪುಟದ ಇತರ ಪ್ರಮುಖ ನಾಯಕರಾದ ಎಂ.ಬಿ. ಪಾಟೀಲ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಜವಾಬ್ದಾರಿ ನೀಡಲಾಗಿದ್ದರೆ, ಸತೀಶ್ ಜಾರಕಿಹೊಳಿ ಅವರು ಲೋಕೋಪಯೋಗಿ ಸಚಿವರಾಗಿ ನೇಮಕಗೊಂಡಿದ್ದಾರೆ.


Click the Play button to hear this message in audio format

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ನೂತನ ಸಚಿವರ ಖಾತೆ ಹಂಚಿಕೆಯ ಪಟ್ಟಿಯನ್ನು ಮುಖ್ಯಮಂತ್ರಿಗಳು ಅಳೆದೂ ತೂಗಿ ಸಿದ್ಧಪಡಿಸಿದ್ದು, ಸಂಪುಟದ ಹಿರಿಯ ಹಾಗೂ ಯುವ ನಾಯಕರಿಗೆ ಪ್ರಮುಖ ಜವಾಬ್ದಾರಿಗಳನ್ನು ಹಂಚಿಕೆ ಮಾಡುವ ಮೂಲಕ ಸರ್ಕಾರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಮಹತ್ವದ ಹಣಕಾಸು ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್) ಸೇರಿದಂತೆ ಯಾರಿಗೂ ಹಂಚಿಕೆಯಾಗದ ಇತರ ಎಲ್ಲ ಖಾತೆಗಳ ಜವಾಬ್ದಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಕಂದಾಯ ಇಲಾಖೆ ಹಾಗೂ ಯುವ ಸಬಲೀಕರಣ ಖಾತೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

ಗೃಹ ಖಾತೆ ಪ್ರಿಯಾಂಕ್ ಖರ್ಗೆ ಪಾಲು, ರಾಮಲಿಂಗಾ ರೆಡ್ಡಿಗೆ ನಿರಾಸೆ

ರಾಜ್ಯದ ಪ್ರತಿಷ್ಠಿತ ಗೃಹ ಖಾತೆಯು ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರ ಪಾಲಾಗಿದ್ದು, ಇದರೊಂದಿಗೆ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ (ಐಟಿ ಬಿಟಿ) ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ. ಆದರೆ, ಬೆಂಗಳೂರು ನಗರಾಭಿವೃದ್ಧಿ (ಜಿಬಿಎ) ಖಾತೆಗಾಗಿ ತೀವ್ರ ಪಟ್ಟು ಹಿಡಿದಿದ್ದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರಿಗೆ ನಿರಾಸೆಯಾಗಿದ್ದು, ಅವರಿಗೆ ಜಲ ಸಂಪನ್ಮೂಲ ಖಾತೆಯನ್ನು ನೀಡಲಾಗಿದೆ. ರಾಮಲಿಂಗಾ ರೆಡ್ಡಿ ಅವರು ಬಯಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯು ಕೃಷ್ಣ ಭೈರೇಗೌಡ ಅವರ ಪಾಲಾಗಿದೆ. ನಗರಾಭಿವೃದ್ಧಿ ಬಿಟ್ಟರೆ ಬೇರೆ ಯಾವ ಖಾತೆಯೂ ಬೇಡ ಎಂದಿದ್ದ ರಾಮಲಿಂಗಾ ರೆಡ್ಡಿ ಅವರ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ. ಇನ್ನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಇಲಾಖೆಯನ್ನು ನೀಡಲಾಗಿದೆ.

ಸಂಪುಟದ ಇತರೆ ಪ್ರಮುಖ ಸಚಿವರ ಖಾತೆಗಳ ವಿವರ

ಸಂಪುಟದ ಇತರ ಪ್ರಮುಖ ನಾಯಕರಾದ ಎಂ.ಬಿ. ಪಾಟೀಲ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಜವಾಬ್ದಾರಿ ನೀಡಲಾಗಿದ್ದರೆ, ಸತೀಶ್ ಜಾರಕಿಹೊಳಿ ಅವರು ಲೋಕೋಪಯೋಗಿ ಸಚಿವರಾಗಿ ನೇಮಕಗೊಂಡಿದ್ದಾರೆ. ಅದೇ ರೀತಿ, ಈಶ್ವರ್ ಖಂಡ್ರೆ ಅವರಿಗೆ ಗ್ರಾಮೀಣಾಭಿವೃದ್ಧಿ, ಕೆ.ಎಚ್. ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಕೆ.ಜೆ. ಜಾರ್ಜ್ ಅವರಿಗೆ ಇಂಧನ ಮತ್ತು ಪ್ರವಾಸೋದ್ಯಮ, ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಬೈರತಿ ಸುರೇಶ್ ಅವರಿಗೆ ಸಾರಿಗೆ ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ. ಈ ಹಿಂದೆ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಯು.ಟಿ. ಖಾದರ್ ಅವರನ್ನು ಆರೋಗ್ಯ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ.

ರಾಜ್ಯಪಾಲರ ಅಂಕಿತಕ್ಕೆ ರವಾನೆ ಮತ್ತು ಸ್ಪೀಕರ್ ಆಯ್ಕೆ ಕುತೂಹಲ

ಮುಖ್ಯಮಂತ್ರಿಗಳ ಕಚೇರಿಯಿಂದ ಈ ನೂತನ ಸಚಿವರ ಖಾತೆಗಳ ವಿವರಗಳನ್ನು ಅಧಿಕೃತ ಅಂಕಿತಕ್ಕಾಗಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಳುಹಿಸಿಕೊಡಲಾಗಿದೆ. ಹಂಚಿಕೆಯಾದ ಖಾತೆಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಯು.ಟಿ. ಖಾದರ್ ಅವರು ಸಚಿವರಾಗಿರುವುದರಿಂದ ತೆರವಾಗಿರುವ ಸ್ಪೀಕರ್ ಹುದ್ದೆ ಯಾರ ಪಾಲಾಗಲಿದೆ ಎಂಬ ಕುತೂಹಲ ಕೆರಳಿದೆ. ಮುಂದಿನ ಸಭಾಧ್ಯಕ್ಷರ ಆಯ್ಕೆಯವರೆಗೆ ರುದ್ರಪ್ಪ ಲಮಾಣಿ ಅವರು ಹಂಗಾಮಿ ವಿಧಾನಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮುಂದಿನ ಸ್ಪೀಕರ್ ಆಗಿ ಹಿರಿಯ ನಾಯಕರಾದ ದಿನೇಶ್ ಗುಂಡೂರಾವ್ ಅಥವಾ ಎಚ್.ಕೆ. ಪಾಟೀಲ್ ಅವರು ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

Read More
Next Story