
ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಸಂಸದ ಪಿ.ಪಿ. ಚೌಧರಿಗೆ ಮನವಿ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್
‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಡಿಕೆಶಿ ವಿರೋಧ: ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಆಕ್ರೋಶ
ಇದು ಕೇವಲ ಅಧಿಕಾರ ಕೇಂದ್ರಿತ ಹಾಗೂ ರಾಜಕೀಯ ಪ್ರೇರಿತ ಯೋಜನೆಯಾಗಿದ್ದು, ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವವರ ಅನುಕೂಲಕ್ಕೆ ತಕ್ಕಂತೆ ಇದನ್ನು ಹೆಣೆಯಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ಧಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ (One Nation, One Election) ಪ್ರಸ್ತಾವನೆಗೆ ಕರ್ನಾಟಕದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಂಸದ ಪಿ.ಪಿ. ಚೌಧರಿ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಸಂಸದೀಯ ಸಮಿತಿ (JPC) ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಪ್ರಾದೇಶಿಕ ಅಸ್ಮಿತೆ ದುರ್ಬಲ
ಇದು ಕೇವಲ ಅಧಿಕಾರ ಕೇಂದ್ರಿತ ಹಾಗೂ ರಾಜಕೀಯ ಪ್ರೇರಿತ ಯೋಜನೆಯಾಗಿದ್ದು, ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವವರ ಅನುಕೂಲಕ್ಕೆ ತಕ್ಕಂತೆ ಇದನ್ನು ಹೆಣೆಯಲಾಗುತ್ತಿದೆ. ಈ ನಿಯಮ ಜಾರಿಗೆ ಬಂದರೆ ಪ್ರಾದೇಶಿಕ ಅಸ್ಮಿತೆ ಹಾಗೂ ರಾಜ್ಯಗಳು ದುರ್ಬಲಗೊಳ್ಳುತ್ತವೆ. ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ತೀವ್ರ ಧಕ್ಕೆ ತರಲಿದೆ. ‘ಒಂದು ದೇಶ, ಒಂದು ಚುನಾವಣೆ’ಯನ್ನು ವಿರೋಧಿಸಿ ಕರ್ನಾಟಕ ವಿಧಾನಸಭೆ ಈಗಾಗಲೇ ಅಧಿಕೃತ ನಿರ್ಣಯ ಅಂಗೀಕರಿಸಿದೆ. ಡಿಸಿಎಂ ಸಭೆಯಲ್ಲಿ ಆ ನಿರ್ಣಯವನ್ನು ಓದಿ ಹೇಳುವ ಮೂಲಕ, ಕರ್ನಾಟಕ ಸರ್ಕಾರದ ಅಸಮ್ಮತಿಯನ್ನು ಸ್ಪಷ್ಟವಾಗಿ ಪುನರುಚ್ಚರಿಸಿದರು.
ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು.
"ಇದು ಪ್ರಾಕ್ಟಿಕಲಿ ಇಂಪಾಸಿಬಲ್" ತಾಂತ್ರಿಕ ಪ್ರಶ್ನೆ ಎತ್ತಿದ ಡಿಸಿಎಂ
ಚುನಾವಣೆಗಳನ್ನು ದೇಶಾದ್ಯಂತ ಏಕಕಾಲಕ್ಕೆ ನಡೆಸುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ಪ್ರತಿಪಾದಿಸಿದ ಡಿ.ಕೆ. ಶಿವಕುಮಾರ್ ಹಲವು ತಾರ್ಕಿಕ ಪ್ರಶ್ನೆಗಳನ್ನು ಮುಂದಿಟ್ಟರು. "ಕರ್ನಾಟಕದಲ್ಲಿ ಮೂರು ವರ್ಷಗಳ ಹಿಂದೆ ಚುನಾವಣೆ ನಡೆದಿತ್ತು. ತಮಿಳುನಾಡು ಮತ್ತು ಕೇರಳದಲ್ಲಿ ಇತ್ತೀಚೆಗಷ್ಟೇ ಮುಗಿದಿದೆ. ಇತ್ತ ಪಂಜಾಬ್, ತೆಲಂಗಾಣಗಳಲ್ಲಿ ಬೇರೆ ಬೇರೆ ಕಾಲಾವಧಿಯಲ್ಲಿ ಚುನಾವಣೆಗಳಾಗಿವೆ. ಹೀಗಿರುವಾಗ ಎಲ್ಲಾ ರಾಜ್ಯಗಳ ಅವಧಿಯನ್ನು ಒಟ್ಟಿಗೆ ಸಮಯೀಕರಿಸುವುದು ಹೇಗೆ ಸಾಧ್ಯ?". "ಒಂದೊಮ್ಮೆ ಅವಿಶ್ವಾಸ ನಿರ್ಣಯ ಅಥವಾ ಬಹುಮತದ ಕೊರತೆಯಿಂದಾಗಿ ಯಾವುದಾದರೂ ಸರ್ಕಾರ ಅವಧಿಗೆ ಮುನ್ನವೇ ಉರುಳಿದರೆ, ಅದಕ್ಕೆ ಕೇಂದ್ರದ ಬಳಿ ಇರುವ ಪರ್ಯಾಯ ಪರಿಹಾರವಾದರೂ ಏನು?" ಎಂದು ಪ್ರಶ್ನಿಸಿದರು.
ವಿವಿಧ ರಾಜಕೀಯ ಪಕ್ಷಗಳ ನಿಲುವುಗಳು
ಈ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ರಾಜಕೀಯ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

