ವಿವಾದ ಬಗೆಹರಿಯುವುದು ರಾಜಕಾರಣಿಗಳಿಗೆ ಬೇಕಾಗಿಲ್ಲ; ಪರಿಸರವಾದಿ ಆಕ್ರೋಶ
ಕಾವೇರಿ ನೀರಿನ ವಿವಾದ ರೈತರ ನಡುವಿನ ಸಂಘರ್ಷವಲ್ಲ, ರಾಜಕಾರಣಿಗಳ ನೀರಿನ ರಾಜಕೀಯ ಎಂದು ಪರಿಸರವಾದಿ ಚೌಡಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾವೇರಿ ನೀರಿನ ಸಮಸ್ಯೆಯ ದೊಡ್ಡ ರಾಜಕೀಯ ಚಳವಳಿಯೇ ನಡೆಯುತ್ತಿದೆ. ನೀರಿನ ಸಮಸ್ಯೆ ಹೊಸದಲ್ಲ. 100 ವರ್ಷಗಳಿಂದ ಇದೆ. ತಮಿಳುನಾಡು, ಕಾವೇರಿ ಮತ್ತು ಕೃಷ್ಣ ನದಿಗಳ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ .
ಆದರೆ, ಈ ನೀರಿನ ಸಮಸ್ಯೆ ರೈತರಲ್ಲಿಲ್ಲ. ಇದು ಕರ್ನಾಟಕ ಅಥವಾ ತಮಿಳುನಾಡಿನ ರೈತರ ನಡುವೆಯೂ ಅಲ್ಲ. ಜತೆಗೆ ಕರ್ನಾಟಕ, ಆಂಧ್ರಪ್ರದೇಶ ಅಥವಾ ತೆಲಂಗಾಣದ ರೈತರ ಮಧ್ಯೆಯೂ ಅಲ್ಲ. ಇದು ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿರುವ ನೀರಿನ ರಾಜಕೀಯ.
ಭಾರತವು 80 ವರ್ಷಗಳಿಂದ ಸ್ವತಂತ್ರವಾಗಿದೆ. ಇಲ್ಲಿಯವರೆಗೆ, ಯಾವುದೇ ರಾಜ್ಯ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಸಮಗ್ರವಾದ ಚರ್ಚೆ ನಡೆದಿಲ್ಲ. ಯತೇಚ್ಛ ನೀರು ಹೊಂದಿರುವ ದೇಶದಲ್ಲಿ ಸುಮಾರು 30ಕ್ಕೂ ಹೆಚ್ಚು ನೀರಿನ ವಿವಾದಗಳಿವೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನೀರಿನ ವಿವಾದಗಳಿವೆ. 80 ವರ್ಷಗಳ ನಂತರವೂ, ನ್ಯಾಯಮಂಡಳಿಗಳು ನಡೆಯುತ್ತಿವೆ. ನಾನು ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ರೈತರೊಂದಿಗೆ ವ್ಯವಹರಿಸಿದ್ದೇನೆ. ಭಾರತದ ರೈತರಿಗೆ ನೀರು ಕೊಡಬೇಡಿ ಎಂದು ಯಾವುದೇ ರೈತರು ಹೇಳಲ್ಲ. ರಾಜಕಾರಣಿಗಳು ಯುದ್ಧಗಳನ್ನು ಸೃಷ್ಟಿಸಲು ನೀರನ್ನು ಸಾಧನವಾಗಿ ಬಳಸುತ್ತಿದ್ದಾರೆ ಎಂದು ಪರಿಸರವಾದಿ ಚೌಡಪ್ಪ ಅಭಿಪ್ರಾಯಪಟ್ಟಿದ್ದಾರೆ.

