ಕರ್ನಾಟಕದಲ್ಲಿ ಮಳೆ ಕಣ್ಣಾಮುಚ್ಚಾಲೆ: ರಾಜ್ಯದ 18 ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ
x

ಕರ್ನಾಟಕದಲ್ಲಿ ಮಳೆ ಕೊರತೆ

ಕರ್ನಾಟಕದಲ್ಲಿ ಮಳೆ ಕಣ್ಣಾಮುಚ್ಚಾಲೆ: ರಾಜ್ಯದ 18 ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ

ರಾಜ್ಯದಲ್ಲಿ ಭೀಕರ ಮಳೆ ಕೊರತೆ ಹಾಗೂ ಡಿಎಪಿ ರಸಗೊಬ್ಬರ ಅಭಾವದಿಂದ ಮುಂಗಾರು ಬಿತ್ತನೆ ಹಂಗಾಮು ತೀವ್ರ ಆತಂಕಕ್ಕೆ ಸಿಲುಕಿದ್ದು, ರೈತರು ಏಕಕಾಲಕ್ಕೆ ಎರಡು ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಈ ಬಾರಿಯ ಮುಂಗಾರು ಹಂಗಾಮು ಆರಂಭದಲ್ಲೇ ತೀವ್ರ ಆತಂಕ ಮೂಡಿಸಿದೆ. ಒಂದೆಡೆ ಸುಮಾರು 20 ಜಿಲ್ಲೆಗಳಲ್ಲಿ ಭೀಕರ ಮಳೆ ಕೊರತೆ ಎದುರಾಗಿದ್ದರೆ, ಮತ್ತೊಂದೆಡೆ ಬಿತ್ತನೆ ಚಟುವಟಿಕೆಗಳು ಚುರುಕುಕೊಳ್ಳುವ ಹೊತ್ತಿಗೆ ರಸಗೊಬ್ಬರ ಅಭಾವದ ಭೀತಿ ರೈತರನ್ನು ಕಾಡಲಾರಂಭಿಸಿದೆ. ಹೀಗೆ ಮುಂಗಾರು ಅವಧಿಯಲ್ಲಿ ಕರ್ನಾಟಕವು ಏಕಕಾಲಕ್ಕೆ 'ಬರ ಮತ್ತು ಗೊಬ್ಬರ'ದ ಅವಳಿ ಸವಾಲನ್ನು ಎದುರಿಸುತ್ತಿದೆ.

ರಾಜ್ಯಾದ್ಯಂತ ಶೇಕಡಾ 45 ರಷ್ಟು ಭಾರಿ ಮಳೆ ಕೊರತೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್ಎನ್‌ಡಿಎಂಸಿ) ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಈವರೆಗೆ ವಾಡಿಕೆಯ 191 ಮಿ.ಮೀ.ಗೆ ಪ್ರತಿಯಾಗಿ ಕೇವಲ 105 ಮಿ.ಮೀ. ಮಳೆಯಾಗಿದ್ದು, ಶೇಕಡಾ 45 ರಷ್ಟು ಭಾರಿ ಮಳೆ ಕೊರತೆಯಾಗಿದೆ. ಪ್ರಮುಖವಾಗಿ ಮಲೆನಾಡು ಭಾಗದಲ್ಲಿ ಶೇ. 62 ರಷ್ಟು ಅತಿ ಹೆಚ್ಚು ಮಳೆ ಕೊರತೆಯಾಗಿದ್ದರೆ, ಕರಾವಳಿ ಕರ್ನಾಟಕದಲ್ಲಿ ಶೇ. 54 ಮತ್ತು ಉತ್ತರ ಒಳನಾಡಿನಲ್ಲಿ ಶೇ. 30 ರಷ್ಟು ಕೊರತೆ ದಾಖಲಾಗಿದೆ. ಆದರೆ, ದಕ್ಷಿಣ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಶೇ. 6 ರಷ್ಟು ಕಡಿಮೆ ಮಳೆಯಾಗಿದೆ. ಸದ್ಯಕ್ಕೆ ರಾಜ್ಯದ 18 ಜಿಲ್ಲೆಗಳು ಮಳೆ ಕೊರತೆ ಮತ್ತು ತೀವ್ರ ಮಳೆ ಕೊರತೆಯ ವ್ಯಾಪ್ತಿಗೆ ಬಂದಿದ್ದು, 10 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. ಆದರೂ ಈ ಜಿಲ್ಲೆಗಳ ವ್ಯಾಪ್ತಿಯ ಹಲವು ತಾಲೂಕು ಮತ್ತು ಹೋಬಳಿಗಳಲ್ಲಿ ಮಳೆ ಕೊರತೆ ಎದ್ದುಕಾಣುತ್ತಿದೆ.

ಡಿಎಪಿ ಗೊಬ್ಬರಕ್ಕೆ ತೀವ್ರ ಅಭಾವದ ಭೀತಿ

ಇದೇ ವೇಳೆ, ಜೂನ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 11.53 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದ್ದು, ಪ್ರಸ್ತುತ 10.93 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ಆದರೆ, ರೈತರಿಗೆ ಅತ್ಯಂತ ಅಗತ್ಯವಿರುವ ಡಿಎಪಿ (ಡೈಅಮೋನಿಯಂ ಫಾಸ್ಫೇಟ್) ಗೊಬ್ಬರಕ್ಕೆ ತೀವ್ರ ಮುಖಾಮುಖಿಯಾಗಬೇಕಾಗಬಹುದು. ಏಕೆಂದರೆ ಸದ್ಯ ಕೇವಲ 84,000 ಮೆಟ್ರಿಕ್ ಟನ್ ಡಿಎಪಿ ಮಾತ್ರ ಲಭ್ಯವಿದ್ದು, 4 ಲಕ್ಷ ಮೆಟ್ರಿಕ್ ಟನ್ ಬೇಡಿಕೆಯನ್ನು ಪೂರೈಸಲು ಇದು ತೀರಾ ಅಲ್ಪವಾಗಿದೆ.

ಮತ್ತೊಂದೆಡೆ, ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ಕೆಲವು ಭಾಗಗಳಿಗೆ ಯೆಲ್ಲೋ ಮತ್ತು ಆರೆಂಜ್ ಮುನ್ನೆಚ್ಚರಿಕೆಯನ್ನು ನೀಡಿದ್ದು, ಮುಂದಿನ ಒಂದು ವಾರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಮಳೆಯು ಒಣಗುತ್ತಿರುವ ಭೂಮಿಗೆ ಜೀವ ತುಂಬಲಿದೆಯಾದರೂ, ಮತ್ತೊಂದು ಅಪಾಯವನ್ನು ತಂದೊಡ್ಡುವ ಆತಂಕವಿದೆ. ಬಿತ್ತನೆ ಮಾಡಿದ ತಕ್ಷಣವೇ ಸುರಿಯುವ ಭಾರಿ ಮಳೆಯು ಬಿತ್ತಿದ ಬೀಜಗಳು ಮತ್ತು ಹಾಕಿದ ರಸಗೊಬ್ಬರವನ್ನು ತೊಳೆದುಕೊಂಡು ಹೋಗುವ ಸಾಧ್ಯತೆಯಿರುತ್ತದೆ. ಇದರಿಂದಾಗಿ ರೈತರು ಅನಿವಾರ್ಯವಾಗಿ ಮತ್ತೊಮ್ಮೆ ಬಿತ್ತನೆ ಮತ್ತು ಗೊಬ್ಬರ ಹಾಕುವ ದುಬಾರಿ ಪ್ರಕ್ರಿಯೆಗೆ ಒಳಗಾಗಬೇಕಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

Read More
Next Story