ಪ್ರವಾಸೋದ್ಯಮಕ್ಕೆ ಹೊಸ ಕಾಯಕಲ್ಪ: 78 ಹೊಸ ಹೋಟೆಲ್ ಯೋಜನೆಗಳಿಗೆ ಹಸಿರು ನಿಶಾನೆ
x

ಪ್ರವಾಸೋದ್ಯಮಕ್ಕೆ ಹೊಸ ಕಾಯಕಲ್ಪ: 78 ಹೊಸ ಹೋಟೆಲ್ ಯೋಜನೆಗಳಿಗೆ ಹಸಿರು ನಿಶಾನೆ

ಪ್ರವಾಸೋದ್ಯಮ ನೀತಿಯು ಖಾಸಗಿ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಒಟ್ಟು 18 ಪ್ರಮುಖ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 8 ಪ್ರೀಮಿಯಂ ಹೋಟೆಲ್‌ಗಳು, 10 ಬಜೆಟ್ ಹೋಟೆಲ್‌ಗಳು ಸೇರಿವೆ.


Click the Play button to hear this message in audio format

ರಾಜ್ಯದಲ್ಲಿ ಪ್ರವಾಸೋದ್ಯಮ ವಲಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ 'ಕರ್ನಾಟಕ ಪ್ರವಾಸೋದ್ಯಮ ನೀತಿಯ 6ನೇ ಅಧಿಕಾರಯುಕ್ತ ಸಮಿತಿ' ಸಭೆಯು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿದೆ. ಈ ಸಭೆಯಲ್ಲಿ ಒಟ್ಟು 78 ಹೊಸ ಹೋಟೆಲ್ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದ್ದು, ಇದರಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಆಧಾರಿತ ಮೂಲಸೌಕರ್ಯಗಳು ಮತ್ತಷ್ಟು ಬಲವರ್ಧನೆಯಾಗಲಿವೆ.

ಸರ್ಕಾರ ಜಾರಿಗೆ ತಂದಿರುವ ಪ್ರವಾಸೋದ್ಯಮ ನೀತಿಯು ಖಾಸಗಿ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. 6ನೇ ಅಧಿಕಾರಯುಕ್ತ ಸಮಿತಿ ಸಭೆಯ ಮುಖ್ಯಾಂಶಗಳನ್ನು ಗಮನಿಸುವುದಾದರೆ, ಸಭೆಯಲ್ಲಿ ಒಟ್ಟು 18 ಪ್ರಮುಖ ಯೋಜನೆಗಳಿಗೆ ಅಂತಿಮ ಅನುಮೋದನೆ ನೀಡಲಾಗಿದೆ. ಇದರಲ್ಲಿ 8 ಪ್ರೀಮಿಯಂ ಹೋಟೆಲ್‌ಗಳು ಮತ್ತು 10 ಬಜೆಟ್ ಹೋಟೆಲ್‌ಗಳು ಸೇರಿವೆ. ಈ ಯೋಜನೆಗಳಿಗಾಗಿ ಒಟ್ಟು 314.93 ಕೋಟಿ ರೂ. ಹೂಡಿಕೆಯಾಗಿದ್ದು, ರಾಜ್ಯದ ವಸತಿ ವಲಯಕ್ಕೆ 655 ಹೊಸ ಕೊಠಡಿಗಳು ಸೇರ್ಪಡೆಯಾಗಲಿವೆ. ಈ ಯೋಜನೆಗಳಿಗಾಗಿ ಸರ್ಕಾರವು ಅಂದಾಜು 47.23 ಕೋಟಿ ರೂ. ಸಹಾಯಧನವನ್ನೂ ಮಂಜೂರು ಮಾಡಿದೆ. ಈ ಕ್ರಮವು ಸುಮಾರು 1,542 ಮಂದಿಗೆ ನೇರ ಉದ್ಯೋಗವಕಾಶಗಳನ್ನು ಕಲ್ಪಿಸಲಿದೆ.

2024-29ರ ಹೊಸ ಪ್ರವಾಸೋದ್ಯಮ ನೀತಿಯ ಅಡಿಯಲ್ಲಿ 78 ಯೋಜನೆಗಳಿಗೆ ನೀಡಿರುವ ತಾತ್ವಿಕ ಅನುಮೋದನೆ. ಇದರಲ್ಲಿ 35 ಪ್ರೀಮಿಯಂ ಹಾಗೂ 43 ಬಜೆಟ್ ಹೋಟೆಲ್‌ಗಳು ಸೇರಿವೆ. ಈ ಬೃಹತ್ ಯೋಜನೆಗಳು ಸಾಕಾರಗೊಂಡರೆ, ರಾಜ್ಯಕ್ಕೆ ಸುಮಾರು ₹1,080.97 ಕೋಟಿ ಹೂಡಿಕೆ ಹರಿದುಬರಲಿದೆ. ಇದರಿಂದ 3,424 ಹೊಸ ಹೋಟೆಲ್ ಕೊಠಡಿಗಳು ಲಭ್ಯವಾಗಲಿದ್ದು, 3,707 ಮಂದಿಗೆ ಉದ್ಯೋಗ ಸಿಗಲಿದೆ.

ಸಚಿವ ಕೆ.ಜೆ. ಜಾರ್ಜ್ ಅವರ ದೂರದೃಷ್ಟಿ

ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, "ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿವೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಉತ್ತಮ ಗುಣಮಟ್ಟದ ವಸತಿ ಮತ್ತು ಆತಿಥ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಕೇವಲ ಪ್ರವಾಸಿಗರನ್ನು ಆಕರ್ಷಿಸುವುದಷ್ಟೇ ಅಲ್ಲ, ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಆಯಾ ಭಾಗದ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಉದ್ಯೋಗ ಸೃಷ್ಟಿಸುವುದು ನಮ್ಮ ಸರ್ಕಾರದ ಉದ್ದೇಶ" ಎಂದು ತಿಳಿಸಿದರು.

ಅಧಿಕಾರಿಗಳ ಸ್ಪಷ್ಟನೆ - ಯೋಜನೆಯ ಜಾರಿ

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಯೋಜನೆಗಳ ಅನುಷ್ಠಾನ ಕುರಿತು ಮಾತನಾಡಿ, ಕೇವಲ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿಲ್ಲ, ಬದಲಾಗಿ ಪ್ರವಾಸಿಗರಿಗೆ ಅವರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ಶ್ರೇಣಿಯ ವಸತಿ ಆಯ್ಕೆಗಳನ್ನು ಒದಗಿಸಲು ಬದ್ಧರಾಗಿದ್ದೇವೆ. ಬಜೆಟ್ ಹೋಟೆಲ್‌ಗಳಿಂದ ಹಿಡಿದು ಪ್ರೀಮಿಯಂ ರೆಸಾರ್ಟ್‌ಗಳವರೆಗೆ ಎಲ್ಲಾ ವರ್ಗದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಇಲಾಖೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಿದೆ ಎಂದು ಭರವಸೆ ನೀಡಿದರು.

ಪ್ರವಾಸೋದ್ಯಮ ವಲಯದ ಮೇಲೆ ಪ್ರಭಾವ

ಈ ಯೋಜನೆಗಳು ಅನುಷ್ಠಾನಗೊಂಡರೆ ರಾಜ್ಯದ ಆರ್ಥಿಕತೆಗೆ ಆಗುವ ಪ್ರಯೋಜನಗಳು ಬಹುಮುಖಿಯಾಗಿವೆ. ಪ್ರವಾಸೋದ್ಯಮಕ್ಕೆ ಪೂರಕವಾದ ವಸತಿ ಸೌಕರ್ಯಗಳು ಬೆಳೆದರೆ, ಹಂಪಿ, ಮೈಸೂರು, ಚಿಕ್ಕಮಗಳೂರು ಮತ್ತು ಕರಾವಳಿಯಂತಹ ಪ್ರಮುಖ ತಾಣಗಳಷ್ಟೇ ಅಲ್ಲದೆ, ರಾಜ್ಯದ ಮರೆಗೆ ಸರಿದಿರುವ ಇತರ ಸುಂದರ ತಾಣಗಳಿಗೂ ಪ್ರವಾಸಿಗರ ಭೇಟಿ ಹೆಚ್ಚಾಗಲಿದೆ. ಹೋಟೆಲ್ ವಲಯದಲ್ಲಿ ಹೂಡಿಕೆ ಹೆಚ್ಚಾದಂತೆ, ಅಲ್ಲಿನ ಸ್ಥಳೀಯ ವ್ಯಾಪಾರಗಳು, ಸಾರಿಗೆ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. 3,700ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿರುವುದು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ಯುವಜನತೆಗೆ ದೊಡ್ಡ ಅವಕಾಶವಾಗಿದೆ. ಆತಿಥ್ಯ ಉದ್ಯಮದಲ್ಲಿ ಕೌಶಲ್ಯಯುತ ಮತ್ತು ಅರೆ-ಕೌಶಲ್ಯಯುತ ಉದ್ಯೋಗಿಗಳಿಗೆ ಇದು ಉತ್ತಮ ವೇದಿಕೆಯಾಗಲಿದೆ.

ಕರ್ನಾಟಕವು ಈಗಾಗಲೇ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಸ್ಮಾರಕಗಳು ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಶ್ರೀಮಂತವಾಗಿದೆ. ಈ ಶ್ರೀಮಂತಿಕೆಯನ್ನು ಪ್ರವಾಸಿಗರಿಗೆ ಅನುಭವಿಸಲು ಬೇಕಾದ ಪೂರಕ ಮೂಲಸೌಕರ್ಯ ಅತಿ ಮುಖ್ಯ. ಈಗಿನ ಸರ್ಕಾರವು 1,000 ಕೋಟಿ ರೂ.ಗಿಂತ ಅಧಿಕ ಹೂಡಿಕೆಗೆ ಹಸಿರು ನಿಶಾನೆ ತೋರಿರುವುದು, ಕರ್ನಾಟಕವನ್ನು ದೇಶದ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

Read More
Next Story