3 ವರ್ಷಗಳಿಂದ ಹೊಸ ರೈಲ್ವೆ ಮಾರ್ಗಗಳಿಲ್ಲ, 1,130 ಹೆಕ್ಟೇರ್ ಭೂಮಿಗಾಗಿ ಕಸರತ್ತು..!
x

3 ವರ್ಷಗಳಿಂದ ಹೊಸ ರೈಲ್ವೆ ಮಾರ್ಗಗಳಿಲ್ಲ, 1,130 ಹೆಕ್ಟೇರ್ ಭೂಮಿಗಾಗಿ ಕಸರತ್ತು..!

ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ 6,844 ಹೆಕ್ಟೇರ್ ಭೂಮಿ ಅಗತ್ಯವಿದೆ. ಈಗಾಗಲೇ 5,714 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಂದರೆ ಶೇ. 83 ಭೂಸ್ವಾಧೀನ ಪೂರ್ಣಗೊಂಡಿದೆ.


Click the Play button to hear this message in audio format

ರೈಲ್ವೆ ವ್ಯವಸ್ಥೆಯು ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ರಾಜ್ಯಕ್ಕೆ ಕಳೆದ ಮೂರು ವರ್ಷಗಳಿಂದ ಯಾವುದೇ ಹೊಸ ರೈಲ್ವೆ ಯೋಜನೆಗಳು ಮಂಜೂರಾಗದಿರುವುದು ಆತಂಕಕಾರಿ ಸಂಗತಿಯಾಗಿದೆ. ಸದ್ಯ ಪ್ರಸ್ತುತ ಅನುಮೋದನೆಗೊಂಡ ಯೋಜನೆಗಳು ಸಹ ಭೂಸ್ವಾಧೀನದ ಪ್ರಕ್ರಿಯೆಯಲ್ಲಿ ಸಿಲುಕಿ ನರಳುತ್ತಿವೆ. ರಾಜ್ಯದ ಅಭಿವೃದ್ಧಿಯ ವೇಗಕ್ಕೆ ಪೂರಕವಾಗಬೇಕಿದ್ದ ರೈಲ್ವೆ ಮಾರ್ಗಗಳು ಕೇವಲ ಭೂಮಿಯ ಕೊರತೆಯಿಂದಾಗಿ ಕುಂಟುತ್ತಾ ಸಾಗುತ್ತಿವೆ.

ರಾಜ್ಯದಲ್ಲಿ ಒಂಭತ್ತು ಪ್ರಮುಖ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಇವುಗಳ ಅನುಷ್ಠಾನಕ್ಕೆ ಒಟ್ಟು 6,844 ಹೆಕ್ಟೇರ್ ಭೂಮಿಯ ಅಗತ್ಯವಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಈಗಾಗಲೇ 5,714 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಂದರೆ ಶೇ. 83ಕ್ಕೂ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಬಾಕಿ ಇರುವ 1,130 ಹೆಕ್ಟೇರ್ ಭೂಮಿಯು ಯೋಜನೆಗಳ ಪೂರ್ಣಗೊಳಿಸಲು ದೊಡ್ಡ ಅಡಚಣೆಯಾಗಿ ಪರಿಣಮಿಸಿದೆ. ಕಳೆದ ಮೂರು ವರ್ಷಗಳಿಂದ ಹೊಸ ಯೋಜನೆಗಳು ಮಂಜೂರಾಗದಿರುವುದು ಒಂದೆಡೆಯಾದರೆ, ಹಳೆಯ ಯೋಜನೆಗಳೇ ದಶಕಗಳಿಂದ ನೆನೆಗುದಿಗೆ ಬಿದ್ದಿರುವುದು ರಾಜ್ಯದ ಸಾರಿಗೆ ಮೂಲಸೌಕರ್ಯದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.

ಕೇಂದ್ರ ರೈಲ್ವೆ ಇಲಾಖೆಯಿಂದ ಯಾವುದೇ ಹೊಸ ರೈಲು ಮಾರ್ಗಗಳು ಮಂಜೂರಾಗದೆ ಇರಲು ಕಾರಣವೆಂದರೆ ಜಾರಿಯಲ್ಲಿರುವ ಯೋಜನೆಗಳೇ ಪೂರ್ಣಗೊಳ್ಳದೆ ದಶಕಗಳನ್ನು ಕಳೆಯುತ್ತಿರುವುದು. ರೈಲ್ವೆ ಇಲಾಖೆಯ ನಿಯಮಗಳ ಪ್ರಕಾರ, ಹಳೆಯ ಯೋಜನೆಗಳು ಒಂದು ಹಂತಕ್ಕೆ ಬರುವವರೆಗೆ ಹೊಸ ಯೋಜನೆಗಳಿಗೆ ಅನುಮೋದನೆ ನೀಡುವುದು ಆರ್ಥಿಕವಾಗಿ ಹೊರೆಯಾಗುತ್ತದೆ. ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಯ ನಡುವಿನ 50:50 ಅನುಪಾತದ ವೆಚ್ಚ ಹಂಚಿಕೆ ಒಪ್ಪಂದಗಳು ಹಲವು ಬಾರಿ ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದ ವಿಳಂಬವಾಗುತ್ತಿವೆ. ಹೊಸ ಯೋಜನೆಗಳು ಬರದೇ ಇರುವುದು ರಾಜ್ಯದ ಸಾರಿಗೆ ಜಾಲದ ವಿಸ್ತರಣೆಗೆ ದೊಡ್ಡ ಹೊಡೆತ ನೀಡಿದೆ. ಮೇಲ್ನೋಟಕ್ಕೆ ಶೇ. 80ಕ್ಕಿಂತ ಹೆಚ್ಚು ಭೂಮಿ ಸ್ವಾಧೀನವಾಗಿದೆ ಎಂದು ಅನಿಸಿದರೂ, ಬಾಕಿ ಇರುವ 1,130 ಹೆಕ್ಟೇರ್ ಭೂಮಿಯು ಆಯಕಟ್ಟಿನ ಜಾಗಗಳಲ್ಲಿದೆ. ಈ ಭೂಮಿ ಸಿಗದೆ ಹಳಿಗಳನ್ನು ಜೋಡಿಸಲು ಸಾಧ್ಯವಿಲ್ಲದಂತಾಗಿದೆ.

ಪ್ರಮುಖ ರೈಲು ಮಾರ್ಗಗಳ ಪ್ರಾಮುಖ್ಯತೆ

ಗದಗ - ವಾಡಿ ಹೊಸ ಮಾರ್ಗವು ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ನಡುವಿನ ಪ್ರಮುಖ ಕೊಂಡಿಯಾಗಿದೆ. ಈ ಮಾರ್ಗವು ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಅತ್ಯಂತ ಅವಶ್ಯಕವಾಗಿದೆ. ಗಿಣಿಗೆರಾ - ರಾಯಚೂರು ಮಾರ್ಗವು ಭತ್ತದ ಕಣಜ ಎಂದು ಕರೆಯಲ್ಪಡುವ ಈ ಭಾಗದ ರೈತರಿಗೆ ತಮ್ಮ ಬೆಳೆಗಳನ್ನು ಹೊರರಾಜ್ಯಗಳಿಗೆ ಸಾಗಿಸಲು ಈ ಮಾರ್ಗ ವರದಾನವಾಗಲಿದೆ. ತುಮಕೂರು - ದಾವಣಗೆರೆ ಮಾರ್ಗವು ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಸಂಚರಿಸುವ ರೈಲುಗಳ ಸಮಯವನ್ನು ಸುಮಾರು 2-3 ಗಂಟೆಗಳ ಕಾಲ ಉಳಿಸುವ ನೇರ ಮಾರ್ಗ ಇದಾಗಿದೆ. ಪ್ರಸ್ತುತ ರೈಲುಗಳು ಅರಸೀಕೆರೆ ಮೂಲಕ ಸುತ್ತು ಬಳಸಿ ಹೋಗಬೇಕಿದೆ.

ಬೆಳಗಾವಿ - ಧಾರವಾಡ (ಕಿತ್ತೂರು ಮೂಲಕ) ಮಾರ್ಗ ಕಿತ್ತೂರು ಕರ್ನಾಟಕದ ಎರಡು ಪ್ರಮುಖ ವಾಣಿಜ್ಯ ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಶೈಕ್ಷಣಿಕ ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ಇದು ಅತ್ಯಂತ ಮಹತ್ವದ ಯೋಜನೆಯಾಗಿದೆ. ಬಾಗಲಕೋಟೆ - ಕುಡಚಿ ಮಾರ್ಗವು ಉತ್ತರ ಕರ್ನಾಟಕದ ಸಕ್ಕರೆ ಉದ್ಯಮಕ್ಕೆ ಮತ್ತು ಮಹಾರಾಷ್ಟ್ರದ ಸಂಪರ್ಕಕ್ಕೆ ಈ ಮಾರ್ಗ ಅತಿ ಮುಖ್ಯವಾಗಿದೆ. ಕಡೂರು - ಚಿಕ್ಕಮಗಳೂರು - ಸಕಲೇಶಪುರ ಮಾರ್ಗವು ಕಾಫಿ ನಾಡನ್ನು ಕರಾವಳಿ ಮತ್ತು ಬಯಲು ಸೀಮೆಗೆ ಸಂಪರ್ಕಿಸುತ್ತದೆ, ಇದರಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ಸಿಗಲಿದೆ.

ಭೂಸ್ವಾಧೀನದ ವಿಳಂಬಕ್ಕೆ ಕಾರಣಗಳೇನು?

ಭೂಸ್ವಾಧೀನ ಪ್ರಕ್ರಿಯೆಯು ಕೇವಲ ಕಾನೂನು ಪ್ರಕ್ರಿಯೆಯಲ್ಲ, ಇದು ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳನ್ನು ಹೊಂದಿದೆ. 1,130 ಹೆಕ್ಟೇರ್ ಭೂಮಿ ಸ್ವಾಧೀನವಾಗದಿರಲು ಹಲವಾರು ಕಾರಣಗಳಿವೆ. 2013ರ ಭೂಸ್ವಾಧೀನ ಕಾಯ್ದೆಯಡಿ ರೈತರು ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಸರ್ಕಾರದ ನಿಗದಿಪಡಿಸಿದ ದರ ಮತ್ತು ಮಾರುಕಟ್ಟೆ ದರದ ನಡುವಿನ ವ್ಯತ್ಯಾಸವು ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಗುತ್ತಿದೆ. ಸರ್ಕಾರ ನೀಡುವ ಪರಿಹಾರದ ದರವು ರೈತರ ನಿರೀಕ್ಷೆಗೆ ತಲುಪದಿದ್ದಾಗ ಕಾನೂನು ಹೋರಾಟಗಳು ಆರಂಭವಾಗಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ. ಭೂಮಿ ಕಳೆದುಕೊಳ್ಳುವ ಸಣ್ಣ ಹಿಡುವಳಿದಾರರು ಜೀವನೋಪಾಯಕ್ಕಾಗಿ ಭೂಮಿಯನ್ನೇ ಅವಲಂಬಿಸಿರುವುದರಿಂದ, ಅವರು ಸುಲಭವಾಗಿ ಬಿಟ್ಟುಕೊಡಲು ತಯಾರಿಲ್ಲ. ಹಲವು ಪ್ರಕರಣಗಳು ದಶಕಗಳಿಂದ ನ್ಯಾಯಾಲಯದಲ್ಲಿವೆ. ಕಡೂರು-ಸಕಲೇಶಪುರ ಅಂತಹ ಯೋಜನೆಗಳಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ದೊಡ್ಡ ಸವಾಲಾಗಿದೆ. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವಿನ ಸಂಘರ್ಷ ಎದ್ದುಕಾಣುತ್ತದೆ. ಭೂಮಿಯ ಸರ್ವೇ ಕಾರ್ಯ, ಆರ್‌ಟಿಸಿ ಬದಲಾವಣೆ ಮತ್ತು ವಂಶವೃಕ್ಷದ ವಿವಾದಗಳಿಂದಾಗಿ ಜಿಲ್ಲಾಡಳಿತಕ್ಕೆ ಭೂಮಿಯನ್ನು ಹಸ್ತಾಂತರಿಸುವುದು ವಿಳಂಬವಾಗುತ್ತಿದೆ. ಕಂದಾಯ ಇಲಾಖೆ ಮತ್ತು ರೈಲ್ವೆ ಇಲಾಖೆಯ ನಡುವಿನ ಸಮನ್ವಯದ ಕೊರತೆ. ಭೂಮಿಯ ಸರ್ವೇ ಕಾರ್ಯ ಮತ್ತು ದಾಖಲೆಗಳ ಪರಿಶೀಲನೆಯಲ್ಲಿ ವಿಳಂಬವಾಗುತ್ತಿದೆ. ಹಲವು ಕಡೆಗಳಲ್ಲಿ ಭೂಮಿಯ ಹಕ್ಕು ಯಾರ ಹೆಸರಿನಲ್ಲಿದೆ ಎಂಬ ಸ್ಪಷ್ಟತೆ ಇಲ್ಲದಿರುವುದು ಅಥವಾ ವಂಶಪಾರಂಪರ್ಯವಾಗಿ ಹರಿದು ಬಂದ ಆಸ್ತಿಯ ವಿವಾದಗಳು ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿವೆ.

ಯೋಜನಾ ವೆಚ್ಚದ ಹೆಚ್ಚಳ

ಯೋಜನೆಗಳ ವಿಳಂಬದಿಂದಾಗಿ ಯೋಜನಾ ವೆಚ್ಚ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. 10 ವರ್ಷಗಳ ಹಿಂದೆ 500 ಕೋಟಿ ರೂ.ಗಳಲ್ಲಿ ಮುಗಿಯಬೇಕಿದ್ದ ಯೋಜನೆ ಇಂದು 2 ಸಾವಿರ ಕೋಟಿ ರೂ.ಗಳಿಗೆ ತಲುಪಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವುದಲ್ಲದೆ, ಅಭಿವೃದ್ಧಿಯ ಲಾಭವನ್ನು ಸಾರ್ವಜನಿಕರಿಂದ ದೂರವಿಡುತ್ತದೆ. ರೈಲ್ವೆ ಸಂಪರ್ಕವಿಲ್ಲದ ಕಾರಣ ಕೈಗಾರಿಕೆಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ, ಇದು ಪರೋಕ್ಷವಾಗಿ ನಿರುದ್ಯೋಗಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು, ಬಾಕಿ ಇರುವ 1,130 ಹೆಕ್ಟೇರ್ ಭೂಮಿಯನ್ನು ಶೀಘ್ರವಾಗಿ ಸ್ವಾಧೀನಪಡಿಸಿಕೊಳ್ಳಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನೇರವಾಗಿ ರೈತರೊಂದಿಗೆ ಮಾತುಕತೆ ನಡೆಸಿ, ನ್ಯಾಯಯುತ ಪರಿಹಾರ ವಿತರಿಸಿ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕೆಂದು ತಾಕೀತು ಮಾಡಲಾಗಿದೆ. ರೈಲ್ವೆ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಲು ವಿಶೇಷ ಕೋಶಗಳನ್ನು ರಚಿಸಲಾಗಿದೆ.

ರೈಲ್ವೆ ಕ್ರಾಂತಿಯ ನಿರೀಕ್ಷೆ

ರೈಲ್ವೆ ಯೋಜನೆಗಳು ಪೂರ್ಣಗೊಂಡರೆ ರಾಜ್ಯದ ಕರ್ನಾಟಕದ ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳಾಗಲಿವೆ. ರೈಲ್ವೆ ಸಂಪರ್ಕ ಸುಧಾರಿಸಿದರೆ ಉತ್ತರ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಉದ್ಯೋಗ ಸೃಷ್ಟಿಯಾಗಿ, ಜನರು ಬೆಂಗಳೂರಿಗೆ ವಲಸೆ ಬರುವುದು ಕಡಿಮೆಯಾಗುತ್ತದೆ. ನೇರ ಮಾರ್ಗಗಳ ನಿರ್ಮಾಣದಿಂದ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗುತ್ತದೆ. ರೈಲ್ವೆ ಸಂಪರ್ಕವಿರುವ ಕಡೆಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ದೂರದ ಮಾರುಕಟ್ಟೆಗಳಿಗೆ ತಲುಪಿಸಲು ಸಾಧ್ಯವಾಗುತ್ತದೆ. ರೈತರು ತಮ್ಮ ಬೆಳೆಗಳನ್ನು ನೆರೆರಾಜ್ಯಗಳ ದೊಡ್ಡ ಮಾರುಕಟ್ಟೆಗಳಿಗೆ ಕೆಲವೇ ಗಂಟೆಗಳಲ್ಲಿ ತಲುಪಿಸಬಹುದು. ತುಮಕೂರು, ದಾವಣಗೆರೆ, ಧಾರವಾಡದಂತಹ ನಗರಗಳು ರೈಲ್ವೆ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದಾಗ, ಜನರು ಉದ್ಯೋಗಕ್ಕಾಗಿ ಕೇವಲ ಬೆಂಗಳೂರನ್ನು ಅವಲಂಬಿಸುವುದು ಕಡಿಮೆಯಾಗುತ್ತದೆ. ವಾಡಿ, ಬೆಳಗಾವಿ, ಧಾರವಾಡ ಜಿಲ್ಲೆಗಳು ಕೈಗಾರಿಕಾ ಹಬ್‌ಗಳಾಗಿ ಬದಲಾಗಲಿವೆ. ಹಂಪಿ, ಬಾದಾಮಿ, ಕಿತ್ತೂರು ಮತ್ತು ಚಿಕ್ಕಮಗಳೂರಿನ ಪ್ರವಾಸೋದ್ಯಮಕ್ಕೆ ಜಾಗತಿಕ ಮಟ್ಟದ ವೇಗ ಸಿಗಲಿದೆ.


Read More
Next Story