
ಬನ್ನೇರುಘಟ್ಟದಲ್ಲಿ ವಿಶ್ವದರ್ಜೆಯ ಅಕ್ವೇರಿಯಂ ಸ್ಥಾಪನೆ; ಪ್ರವಾಸೋದ್ಯಮಕ್ಕೆ ಸರ್ಕಾರ ಒತ್ತು
ಮೈಸೂರು ಮತ್ತು ಬನ್ನೇರುಘಟ್ಟದ ಮೃಗಾಲಯಗಳನ್ನು ಆಧುನೀಕರಿಸಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಮೈಸೂರು ಮೃಗಾಲಯಕ್ಕೆ 44.62 ಕೋಟಿ ರೂ. ಅನುದಾನ ಹಾಗೂ ಬನ್ನೇರುಘಟ್ಟ ಉದ್ಯಾನಕ್ಕೆ 35.22 ಕೋಟಿ ರೂ. ಅನುದಾನ ನೀಡಲಾಗಿದೆ.
ಕರ್ನಾಟಕದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಭೂಪಟದಲ್ಲಿ ಮಿಂಚಿಸಲು ರಾಜ್ಯ ಸರ್ಕಾರವು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ವನ್ಯಜೀವಿ ಪ್ರೇಮಿಗಳು, ಪ್ರವಾಸಿಗರು ಮತ್ತು ಭಕ್ತಾದಿಗಳಿಗೆ ಸಿಹಿ ಸುದ್ದಿ ನೀಡಿರುವ ಸಚಿವ ಸಂಪುಟವು, ದಶಕದ ಅತಿದೊಡ್ಡ ಅಭಿವೃದ್ಧಿ ಯೋಜನೆಗಳಿಗೆ ಅಧಿಕೃತ ಮುದ್ರೆ ಒತ್ತಿದೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿ ತಲೆಎತ್ತಲಿರುವ ಏಷ್ಯಾದ ಅತ್ಯಾಧುನಿಕ ಮತ್ಸ್ಯಾಗಾರದಿಂದ ಹಿಡಿದು, ಕುಕ್ಕೆ ಸುಬ್ರಮಣ್ಯದಂತಹ ಪುಣ್ಯಕ್ಷೇತ್ರಗಳ ಕಾಯಕಲ್ಪದವರೆಗೆ ಕೋಟ್ಯಂತರ ರೂಪಾಯಿಗಳ ಅನುದಾನ ಹರಿದುಬರಲಿದೆ. ಈ ಯೋಜನೆಗಳು ಕೇವಲ ಪ್ರವಾಸಿ ತಾಣಗಳ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ರಾಜ್ಯದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿವೆ.
ಬನ್ನೇರುಘಟ್ಟದಲ್ಲಿ ಜಾಗತಿಕ ಮಟ್ಟದ ಮತ್ಸ್ಯಾಗಾರ
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 144.4 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸಾರ್ವಜನಿಕ ಅಕ್ವೇರಿಯಂ ನಿರ್ಮಾಣವಾಗಲಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾಗುತ್ತಿದ್ದು, ಇದು ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲಿದೆ. 7.5 ಎಕರೆ ವಿಸ್ತೀರ್ಣದಲ್ಲಿ ಏಷ್ಯನ್, ಅಮೆಜಾನ್, ಆಫ್ರಿಕಾ ಮತ್ತು ಹವಳದ ಹರಳುಗಳ ಜಲಚರಗಳ ಪ್ರದರ್ಶನ ಇರಲಿದೆ. ಪಾರದರ್ಶಕ ವಾಕ್-ಥ್ರೂ ಸುರಂಗಗಳು, ಗ್ಲಾಸ್ ಬಾಟಮ್ ಬೋಟ್ ರೈಡ್, ಸ್ಕ್ಯೂಬಾ ಡೈವಿಂಗ್ ಹಾಗೂ 3D, 4D, 5D ಇಮ್ಮರ್ಸಿವ್ ಥಿಯೇಟರ್ಗಳು ಪ್ರವಾಸಿಗರಿಗೆ ಜಲಪ್ರಪಂಚದ ನೈಜ ಅನುಭವ ನೀಡಲಿವೆ.
ಡಿಜಿಟಲ್ ಮೃಗಾಲಯ: ವನ್ಯಜೀವಿ ವೀಕ್ಷಣೆಯಲ್ಲಿ ಹೊಸ ಕ್ರಾಂತಿ
ಮೈಸೂರು ಮತ್ತು ಬನ್ನೇರುಘಟ್ಟದ ಮೃಗಾಲಯಗಳನ್ನು ಆಧುನೀಕರಿಸಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಮೈಸೂರು ಮೃಗಾಲಯಕ್ಕೆ 44.62 ಕೋಟಿ ರೂ. ಅನುದಾನ ಹಾಗೂ ಬನ್ನೇರುಘಟ್ಟ ಉದ್ಯಾನಕ್ಕೆ 35.22 ಕೋಟಿ ರೂ. ಅನುದಾನ ನೀಡಲಾಗಿದೆ. ಇಲ್ಲಿ ಸ್ಥಾಪನೆಯಾಗಲಿರುವ 'ಇಮ್ಮರ್ಸಿವ್ ವನ್ಯಜೀವಿ ಕೊಠಡಿ' ಮತ್ತು ಡಿಜಿಟಲ್ ಮಾರ್ಗದರ್ಶಿಗಳು ಪ್ರಾಣಿಗಳ ನೈಸರ್ಗಿಕ ಜೀವನಕ್ರಮವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪ್ರವಾಸಿಗರಿಗೆ ತಲುಪಿಸಲಿವೆ.
ಧಾರ್ಮಿಕ ಪ್ರವಾಸೋದ್ಯಮಕ್ಕೆ ಭರ್ಜರಿ ಕೊಡುಗೆ
ರಾಜ್ಯದ ಶ್ರದ್ಧಾ ಕೇಂದ್ರಗಳ ಮೂಲಸೌಕರ್ಯ ಸುಧಾರಣೆಗೆ ಸರ್ಕಾರ ಆದ್ಯತೆ ನೀಡಿದೆ. ರಾಜ್ಯದ ಪ್ರಮುಖ ನಾಗಾರಧನೆ ಕೇಂದ್ರಗಳಾದ ಕುಕ್ಕೆ ಸುಬ್ರಮಣ್ಯಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 600 ಕೋಟಿ ರೂ. ವೆಚ್ಚದ ಮೂರನೇ ಹಂತದ ಸಮಗ್ರ ಅಭಿವೃದ್ಧಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ವಸತಿ, ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕಕ್ಕೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 23.76 ಕೋಟಿ ರೂ. ಘೋಷಿಸಲಾಗಿದ್ದು, ಸಮಗ್ರ ಅಭಿವೃದ್ಧಿ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
ಆರ್ಥಿಕ ಲಾಭಗಳೇನು?
ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗಳಿಂದ ರಾಜ್ಯಕ್ಕೆ ಹಲವು ಲಾಭಗಳು ದೊರೆಯಲಿವೆ. ಸಾವಿರಾರು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ ದೊರೆಯಲಿದ್ದು ಹೋಟೆಲ್, ಸಾರಿಗೆ ಮತ್ತು ಟೂರ್ ಗೈಡ್ಗಳ ಆದಾಯ ಹೆಚ್ಚಳವಾಗಲಿದೆ. ಬನ್ನೇರುಘಟ್ಟದ ಜೈವಿಕ ಉದ್ಯಾನಕ್ಕೆ ಒದಗಿಸಲಾಗುವ ವಿಶ್ವದರ್ಜೆಯ ಸೌಲಭ್ಯಗಳಿಂದಾಗಿ ವಿದೇಶಿ ಪ್ರವಾಸಿಗರ ಆಗಮನ ಹೆಚ್ಚಿ, ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ವಿದೇಶಿ ವಿನಿಮಯ ಹರಿದುಬರಲಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ಜಲಚರಗಳ ಬಗ್ಗೆ ಅರಿವು ಮೂಡಿಸಲು ಈ ತಾಣಗಳು ನೆರವಾಗಲಿವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

