ಮುಕ್ಕಾಲು ರಾಜ್ಯಕ್ಕೆ ಬರಗಾಲ: ಸಾಲ ಮನ್ನಾ ಮಾಡಲು ರೈತ ಮುಖಂಡರ ಮನವಿ
ಬರಪೀಡಿತ ತಾಲ್ಲೂಕು ಎಂದು ಮಾತಲ್ಲಷ್ಟೇ ಘೋಷಿಸಿದರೆ ಸಾಲದು. ರೈತರ ನೆರವಿಗೆ ಧಾವಿಸಬೇಕು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬರಗಾಲ ಹಿನ್ನೆಲೆಯಲ್ಲಿ ಸರ್ಕಾರ 101 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಬರಗಾಲ ಅಂತ ಘೋಷಣೆ ಮಾಡಿದರೆ ಸಾಕಾ, ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಅವರು ʼದ ಫೆಡರಲ್ ಕರ್ನಾಟಕʼದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸರ್ಕಾರ ಮೊದಲು ರೈತರ ಸಾಲಮನ್ನಾ ಮಾಡಬೇಕು ಬೆಳೆಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
101 ತಾಲ್ಲೂಕಿನ ಜತೆ ಇನ್ನೂ ಬರ ಪೀಡಿತ ತಾಲ್ಲೂಕುಗಳಿವೆ, ಅವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಳೆ ನಿಲ್ಲಿಸಲು ಉದ್ಯೋಗ ಸೃಷ್ಟಿಸಬೇಕು. ಬೆಳೆ ನಷ್ಟ ಪರಿಹಾರವನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಶಾಸಕರು, ಸಂಸದರು ತಮ್ಮ ಸಂಬಳ ಹೆಚ್ಚು ಮಾಡಿಕೊಳ್ಳುತ್ತಾರೆ, ಆದರೆ ರೈತರಿಗೆ ಬೆಳೆ ಪರಿಹಾರ ಮೊತ್ತ ಮಾತ್ರ ಎಕರೆಗೆ ಇಂತಿಷ್ಟೇ ಎಂದು ಹಲವು ವರ್ಷಗಳಿಂದ ನಿಗದಿ ಮಾಡಿದ್ದಾರೆ. ಈ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತರ ಸಾಲಮನ್ನಾ ಮಾಡಬೇಕು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು. ಬರ ಪೀಡಿತ ಅಂತಾ ಹಿಟಾಚಿ ತಂದು ಕೆಲಸ ಮಾಡಬಾರದು, ಕೃಷಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಹೇಳಿದ್ದಾರೆ. ರೈತರು ಎಲ್ಲರಿಗೂ ಅನ್ನ ನೀಡುತ್ತಾರೆ, ಇಂತಹ ರೈತರಿಗೆ ಸಂಕಷ್ಟ ಬಂದಿದೆ. ಈ ಬಗ್ಗೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣ ಬರಪರಿಹಾರ ಕಾಮಗಾರಿಗೆ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ನೆರವು ಘೋಷಿಸಬೇಕು. ಮೇವಿನ ಬ್ಯಾಂಕುಗಳಲ್ಲಿ ಮೇವಿಲ್ಲ, ದುಡ್ಡು ಕೊಟ್ಟರೂ ಮೇವು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ನಿಗಾವಹಿಸಿ ಮೇವು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳಬೇಕು, ಎಸಿ ರೂಂ ಬಿಟ್ಟು ಹೊರ ಬರಬೇಕು ಎಂದು ಮನವಿ ಮಾಡಿದ್ದಾರೆ.

