
ಸಿಎಂ ಆಪ್ತರ ಉಪಹಾರ ಕೂಟ : ರಾಜಕೀಯ ಸಂದೇಶ ರವಾನಿಸುವ ತಂತ್ರಗಾರಿಕೆ?
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಮಾಲೋಚನೆಯು ಕೇವಲ ಔಪಚಾರಿಕ ಭೋಜನದ ಸಭೆಯಾಗಿರಲಿಲ್ಲ. ಬದಲಿಗೆ ಮುಖ್ಯಮಂತ್ರಿಯವರ ಆಪ್ತ ವಲಯದ ಮಹತ್ವದ ಚರ್ಚೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದ ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್ ಮತ್ತು ಕೆ. ವೆಂಕಟೇಶ್ ಅವರು ತುಮಕೂರಿನ ಸಾಧನಾ ಸಮಾವೇಶಕ್ಕೆ ತೆರಳುವ ಮುನ್ನ ನಡೆಸಿದ ಸಭೆಯು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಉಪಹಾರದ ಸಭೆಯು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಸಭೆಯಲ್ಲಿ ಬ್ಯಾಟಿಂಗ್ ಮಾಡುವ ಕುರಿತು ಸಮಾಲೋಚನೆ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಮಾಲೋಚನೆಯು ಕೇವಲ ಔಪಚಾರಿಕ ಭೋಜನದ ಸಭೆಯಾಗಿರಲಿಲ್ಲ. ಬದಲಿಗೆ ಮುಖ್ಯಮಂತ್ರಿಯವರ ಆಪ್ತ ವಲಯದ ಪ್ರಮುಖ ಮುಖಂಡರು ಒಂದೆಡೆ ಸೇರಿದ್ದು, ರಾಜ್ಯದ ಪ್ರಸ್ತುತ ರಾಜಕೀಯ ಸನ್ನಿವೇಶ, ಸರ್ಕಾರದ ಕಾರ್ಯವೈಖರಿ ಮತ್ತು ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಚರ್ಚೆಯ ಪ್ರಮುಖ ವಿಷಯಗಳು
ರಾಜ್ಯ ರಾಜಕಾರಣದಲ್ಲಿನ ಬದಲಾವಣೆಗಳು ಮತ್ತು ಹೈಕಮಾಂಡ್ನ ನಿಲುವಿನ ಕುರಿತು ಸಚಿವರು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಸಂಪುಟದಲ್ಲಿ ಬದಲಾವಣೆ ಅಥವಾ ವಿಸ್ತರಣೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಈ ನಾಲ್ವರು ಪ್ರಭಾವಿ ಸಚಿವರು ಭೇಟಿಯಾಗಿರುವುದು, ಸಂಪುಟದ ಮುಂದಿನ ರೂಪರೇಷೆಗಳ ಬಗ್ಗೆ ಆಪ್ತ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಎನ್ನಲಾಗಿದೆ. ಸರ್ಕಾರದ ನಿರ್ಧಾರಗಳು ಮತ್ತು ಪಕ್ಷದ ಆಂತರಿಕ ಹೊಂದಾಣಿಕೆಯ ವಿಷಯದಲ್ಲಿ ಇವರು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ತುಮಕೂರಿನಲ್ಲಿ ನಡೆಯುತ್ತಿರುವ ಸರ್ಕಾರದ ಮೂರನೇ ವರ್ಷದ ‘ಸಾಧನಾ ಸಮಾವೇಶ’ಕ್ಕೆ ತೆರಳುವ ಮುನ್ನವೇ ಈ ಸಭೆ ನಡೆದಿರುವುದು ಆಕಸ್ಮಿಕವಲ್ಲ. ಸಮಾವೇಶದಲ್ಲಿ ಸಿದ್ದರಾಮಯ್ಯನವರ ವರ್ಚಸ್ಸನ್ನು ಹೆಚ್ಚಿಸುವ ವಿಚಾರದಿಂದ ಹಿಡಿದು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ರಾಜಕೀಯ ತೀರ್ಮಾನಗಳವರೆಗೆ ಎಲ್ಲವನ್ನೂ ಮುಂಚಿತವಾಗಿಯೇ ಚರ್ಚಿಸಿ, ಒಂದು ಸ್ಪಷ್ಟ ಸಂದೇಶವನ್ನು ರವಾನಿಸುವ ಪ್ರಯತ್ನ ಇದರಲ್ಲಿ ಕಾಣುತ್ತಿದೆ.
ಸಭೆಯಲ್ಲಿ ಪಾಲ್ಗೊಂಡಿರುವ ನಾಲ್ವರು ಸಚಿವರು ಬೇರೆ ಬೇರೆ ಪ್ರಾದೇಶಿಕ ಮತ್ತು ಸಮುದಾಯಗಳ ಹಿನ್ನೆಲೆಯನ್ನು ಹೊಂದಿರುವವರಾಗಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಉತ್ತರ ಕರ್ನಾಟಕದಲ್ಲಿ ಹಿಡಿತ ಹೊಂದಿರುವ ಪ್ರಬಲ ನಾಯಕರಾಗಿದ್ದಾರೆ. ಹೆಚ್.ಸಿ. ಮಹದೇವಪ್ಪ ಅವರು ಸಿದ್ದರಾಮಯ್ಯನವರ ಅತ್ಯಂತ ನಂಬಿಕಸ್ಥ ವ್ಯಕ್ತಿಯಾಗಿದ್ದಾರೆ. ಜಮೀರ್ ಅಹ್ಮದ್ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖಂಡರಾದರೆ, ಕೆ. ವೆಂಕಟೇಶ್ ಅವರು ಹಿರಿಯ ನಾಯಕ ಮತ್ತು ಆಪ್ತ ವಲಯದ ಕೊಂಡಿ ಎಂದು ಹೇಳಲಾಗಿದೆ. ಈ ನಾಯಕರ ಸಮಾವೇಶವು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ಯಾವುದೇ ಅಡಚಣೆ ಬಾರದಂತೆ ನೋಡಿಕೊಳ್ಳುವ ಮತ್ತು ಸರ್ಕಾರವನ್ನು ದೃಢವಾಗಿ ಮುನ್ನಡೆಸುವ ವಿಶ್ವಾಸಾರ್ಹ ಪಡೆಯನ್ನು ಸಜ್ಜುಗೊಳಿಸುವಂತಿದೆ. ಈ ಸಚಿವರು ಜಂಟಿಯಾಗಿ ಸಮಾವೇಶಕ್ಕೆ ಪ್ರಯಾಣ ಬೆಳೆಸಿರುವುದು, ಪಕ್ಷದಲ್ಲಿನ ಸಿದ್ದರಾಮಯ್ಯ ಬಣವು ಒಗ್ಗಟ್ಟಾಗಿದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂಬ ಸಂದೇಶ ರವಾನೆ ಮಾಡಿದಂತಾಗುತ್ತದೆ.

