ಅನರ್ಹರ ಪತ್ತೆಗೆ ಎಸ್ಕಾಂ ಕಾರ್ಯಾಚರಣೆ: ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆಗೆ ಭೇಟಿ
x

ಅನರ್ಹರ ಪತ್ತೆಗೆ ಎಸ್ಕಾಂ ಕಾರ್ಯಾಚರಣೆ: ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆಗೆ ಭೇಟಿ

ಗೃಹ ಜ್ಯೋತಿ ಯೋಜನೆಗೆ ಅರ್ಹರಲ್ಲದವರು ಕೂಡ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಮತ್ತು ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಪುನರ್ ಪರಿಶೀಲನೆ ನಡೆಸಲು ತೀರ್ಮಾನಿಸಿದೆ.


Click the Play button to hear this message in audio format

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮತ್ತು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಬೆಳಕಾಗಿರುವ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ನೈಜತೆಯನ್ನು ಪರಿಶೀಲಿಸಲು ಇಂಧನ ಇಲಾಖೆಯು ಸಜ್ಜಾಗಿದೆ. ಬುಧವಾರದಿಂದ ರಾಜ್ಯಾದ್ಯಂತ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯ ಆರಂಭಿಸಿದೆ.

2023ರ ಜುಲೈನಲ್ಲಿ ರಾಜ್ಯ ಸರ್ಕಾರವು ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ಸರ್ಕಾರ ಈಡೇರಿಸುತ್ತಾ ಬಂದಿದೆ. ಆದರೆ, ಯೋಜನೆಗೆ ಅರ್ಹರಲ್ಲದವರು ಕೂಡ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಮತ್ತು ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಪುನರ್ ಪರಿಶೀಲನೆ ನಡೆಸಲು ತೀರ್ಮಾನಿಸಿದೆ. ಯೋಜನೆಯ ಲಾಭವು ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ಸಿಗಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ಪರಿಶೀಲನಾ ಪ್ರಕ್ರಿಯೆ ಹೇಗೆ ನಡೆಯಲಿದೆ?

ರಾಜ್ಯದ ಐದು ಎಸ್ಕಾಂಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಸೆಸ್ಕ್ ವ್ಯಾಪ್ತಿಯಲ್ಲಿ ಈ ಕಾರ್ಯ ನಡೆಯಲಿದೆ. ಎಸ್ಕಾಂಗಳ ಮೀಟರ್ ರೀಡರ್‌ಗಳು ಮತ್ತು ಸಂಬಂಧಪಟ್ಟ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ನೇರವಾಗಿ ಭೇಟಿ ನೀಡಲಿದ್ದಾರೆ. ಸಿಬ್ಬಂದಿಗಳು ಗ್ರಾಹಕರ ವಿದ್ಯುತ್ ಮೀಟರ್ ಸಂಖ್ಯೆ, ಖಾತೆ ವಿವರಗಳನ್ನು ಪರಿಶೀಲಿಸುತ್ತಾರೆ. ಮೀಟರ್ ರೀಡರ್‌ಗಳು ತಮ್ಮ ಬಳಿ ಇರುವ ವಿಶೇಷ ಮೊಬೈಲ್ ಆಪ್ ಮೂಲಕ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಾರೆ. ಭೇಟಿ ನೀಡಿದ ಸಂದರ್ಭದಲ್ಲಿ ಫಲಾನುಭವಿಗಳಿಂದ ಘೋಷಣಾ ಪತ್ರವನ್ನು ಭರ್ತಿ ಮಾಡಿಸಿಕೊಳ್ಳಲಾಗುತ್ತದೆ.

ಗ್ರಾಹಕರು ಇಟ್ಟುಕೊಳ್ಳಬೇಕಾದ ದಾಖಲೆಗಳು

ಪರಿಶೀಲನೆಗೆ ಬರುವ ಸಿಬ್ಬಂದಿಗೆ ಸಹಕಾರ ನೀಡಲು ಮತ್ತು ಪ್ರಕ್ರಿಯೆ ಸುಗಮವಾಗಿ ನಡೆಯಲು ಗ್ರಾಹಕರು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಇಂಧನ ಇಲಾಖೆ ಕೋರಿದೆ. ಗುರುತಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್, ಫಲಾನುಭವಿಯ ಪಾಸ್‌ಪೋರ್ಟ್ ಅಳತೆಯ ಫೋಟೋ, ವಿಳಾಸ ಮತ್ತು ಗುರುತಿನ ದೃಢೀಕರಣಕ್ಕಾಗಿ ಮತದಾರರ ಗುರುತಿನ ಚೀಟಿ, ಆರ್ಥಿಕ ಮಾಹಿತಿ ದೃಢೀಕರಣಕ್ಕಾಗಿ. ಪ್ಯಾನ್ ಕಾರ್ಡ್, ಬಾಡಿಗೆ ಮನೆಯಲ್ಲಿ ವಾಸವಿದ್ದಲ್ಲಿ ಬಾಡಿಗೆದಾರರು ದಾಖಲೆಯನ್ನು ತೋರಿಸುವುದು ಕಡ್ಡಾಯ. ರೇಷನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸಹ ಪರಿಶೀಲನೆಗಾಗಿ ಕೇಳಲಾಗುವುದು. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ. ಗ್ರಾಹಕರು ಮೀಟರ್ ರೀಡರ್‌ಗಳು ಅಥವಾ ಸಿಬ್ಬಂದಿ ಬಾಗಿಲಿಗೆ ಬಂದಾಗ ಅವರ ಅಧಿಕೃತ ಗುರುತಿನ ಚೀಟಿ ಪರಿಶೀಲಿಸಿ, ಅವರಿಗೆ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಸಂಪೂರ್ಣ ಸಹಕಾರ ನೀಡಬೇಕು. ಇದು ಯೋಜನೆಯ ಸುಗಮ ನಿರ್ವಹಣೆಗೆ ಮತ್ತು ಅನರ್ಹರು ಲಾಭ ಪಡೆಯುವುದನ್ನು ತಡೆಯಲು ಅತ್ಯಗತ್ಯವಾಗಿದೆ ಎಂದು ಹೇಳಿದೆ.

ಯೋಜನೆಯ ಮುಂದುವರಿಕೆಗೆ ಇದು ಅಗ್ನಿಪರೀಕ್ಷೆ

ಈ ಪುನರ್ ಪರಿಶೀಲನೆಯ ನಂತರ, ಯಾರು ಯೋಜನೆಗೆ ಅರ್ಹರು ಮತ್ತು ಯಾರು ಅನರ್ಹರು ಎಂಬುದು ಸ್ಪಷ್ಟವಾಗಲಿದೆ. ಯೋಜನೆಯ ನಿಯಮಗಳನ್ನು ಉಲ್ಲಂಘಿಸಿರುವ ಅಥವಾ ಸುಳ್ಳು ಮಾಹಿತಿ ನೀಡಿರುವವರನ್ನು ಗುರುತಿಸಿ, ಅವರ ಮೇಲೆ ಕ್ರಮ ಕೈಗೊಳ್ಳುವ ಅಥವಾ ಯೋಜನೆಯಿಂದ ಕೈಬಿಡುವ ಸಾಧ್ಯತೆಗಳೂ ಇವೆ. ಈ ಮೂಲಕ ಸರ್ಕಾರವು ಯೋಜನೆಯ ಹಣದ ಸೋರಿಕೆಯನ್ನು ತಡೆಗಟ್ಟಲು ಮತ್ತು ಸರ್ಕಾರದ ಬೊಕ್ಕಸದ ಮೇಲಿನ ಹೊರೆ ಕಡಿಮೆ ಮಾಡಲು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಪರಿಶೀಲನೆಯ ಹೆಸರಿನಲ್ಲಿ ವಂಚನೆ ನಡೆಯುವ ಸಾಧ್ಯತೆಗಳೂ ಇರುವುದರಿಂದ, ಗ್ರಾಹಕರು ಎಸ್ಕಾಂಗಳ ಅಧಿಕೃತ ಸಿಬ್ಬಂದಿಯನ್ನು ಮಾತ್ರ ನಂಬಬೇಕು. ಎಸ್ಕಾಂನಿಂದ ಅಧಿಕೃತ ಗುರುತಿನ ಚೀಟಿ ಹೊಂದಿಲ್ಲದ ವ್ಯಕ್ತಿಗಳಿಗೆ ಯಾವುದೇ ದಾಖಲೆಗಳನ್ನು ನೀಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಯಾವುದೇ ಗೊಂದಲಗಳಿದ್ದಲ್ಲಿ ಗ್ರಾಹಕರು ತಮ್ಮ ಹತ್ತಿರದ ಎಸ್ಕಾಂ ಕಚೇರಿ ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು.

Read More
Next Story