ಕೆಸಿಇಟಿ ಫಲಿತಾಂಶ: ಇಂಜಿನಿಯರಿಂಗ್, ವೆಟರ್ನರಿ ವಿಭಾಗದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ
x

ಕೆಸಿಇಟಿ ಫಲಿತಾಂಶ: ಇಂಜಿನಿಯರಿಂಗ್, ವೆಟರ್ನರಿ ವಿಭಾಗದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ

ಪಶುವೈದ್ಯಕೀಯ ವಿಭಾಗದಲ್ಲಿ ನಯನಾ ಗೋಪಿ (ಬೇಸ್ ಪಿಯು ಕಾಲೇಜು, ಬೆಂಗಳೂರು) ಅಗ್ರಸ್ಥಾನದಲ್ಲಿದ್ದರೆ, ಅಮೂಲ್ಯ ಎಸ್. (ಸರ್ ಎಂ.ವಿ. ಕಾಲೇಜು, ದಾವಣಗೆರೆ) ನಂತರದ ರ‍್ಯಾಂಕ್ ಪಡೆದಿದ್ದಾರೆ.


Click the Play button to hear this message in audio format

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET-2026) ಫಲಿತಾಂಶಗಳು ಪ್ರಕಟಗೊಂಡಿದ್ದು, ಈ ಬಾರಿಯ ಫಲಿತಾಂಶದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಮತ್ತು ಪ್ರತಿಷ್ಠಿತ ಪಿಯು ಕಾಲೇಜುಗಳು ಗಮನಾರ್ಹ ಸಾಧನೆ ಮಾಡಿವೆ. ವಿಶೇಷವಾಗಿ ಹೆಣ್ಣುಮಕ್ಕಳು ಪ್ರಮುಖ ವಿಭಾಗಗಳಲ್ಲಿ ಅಗ್ರಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಏಪ್ರಿಲ್ 23 ಮತ್ತು 24 ರಂದು ರಾಜ್ಯಾದ್ಯಂತ ಒಟ್ಟು 745 ಪರೀಕ್ಷಾ ಕೇಂದ್ರಗಳಲ್ಲಿ ಈ ಮಹತ್ವದ ಪರೀಕ್ಷೆ ನಡೆದಿತ್ತು. ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಪಶುವೈದ್ಯಕೀಯ ಮತ್ತು ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ 3.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಲಿಂಕ್‌ಗಳಾದ `https://keaonline.karnataka.gov.in/ugcet_2026_results/` ಅಥವಾ `https://cetonline.karnataka.gov.in/kea/` ನಲ್ಲಿ ವೀಕ್ಷಿಸಬಹುದಾಗಿದೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಪ್ರತಿಷ್ಠಿತ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ತೀವ್ರ ಪೈಪೋಟಿಯ ನಡುವೆ ಇಡೀ ರಾಜ್ಯದ ಟಾಪರ್ ಆಗಿ ಹೊರಹೊಮ್ಮುವ ಮೂಲಕ ತಮ್ಮ ಕಾಲೇಜಿಗೆ ಮತ್ತು ಪಾಲಕರಿಗೆ ಕೀರ್ತಿ ತಂದಿದ್ದಾರೆ. ಇದೇ ವಿಭಾಗದಲ್ಲಿ ಸೃಜನ್ ಬಿ.ಎಸ್. ದ್ವಿತೀಯ ಸ್ಥಾನ ಪಡೆದರೆ, ನಿನಾದ್ ವಸಿಷ್ಠ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪಶುವೈದ್ಯಕೀಯ ವಿಭಾಗದಲ್ಲಿ ನಯನಾ ಗೋಪಿ (ಬೇಸ್ ಪಿಯು ಕಾಲೇಜು, ಬೆಂಗಳೂರು) ಅಗ್ರಸ್ಥಾನದಲ್ಲಿದ್ದರೆ, ಅಮೂಲ್ಯ ಎಸ್. (ಸರ್ ಎಂ.ವಿ. ಕಾಲೇಜು, ದಾವಣಗೆರೆ), ರಿತ್ವಿಕ್ ಕುಮಾರ್ (ಆರ್.ವಿ. ಕಾಲೇಜು), ಬಸವರಾಜ್ ಅವತಿ (ಸರ್ಕಾರಿ ಕಾಲೇಜು, ಬಿಜಾಪುರ) ಮತ್ತು ಸುಚಿತಾ ಎಂ. (ಶ್ರೀ ಚೈತನ್ಯ, ದಾವಣಗೆರೆ) ಉತ್ತಮ ರ‍್ಯಾಂಕ್ ಪಡೆದಿದ್ದಾರೆ. ಕೃಷಿ ಮತ್ತು ರೇಷ್ಮೆ ವಿಭಾಗದಲ್ಲಿ ನಿನಾದ್ ವಸಿಷ್ಠ ಅವರು ಇಲ್ಲಿಯೂ ತಮ್ಮ ಚಾಕಚಕ್ಯತೆ ಮೆರೆದು ಅಗ್ರಸ್ಥಾನ ಪಡೆದಿದ್ದಾರೆ. ಅನ್ಮೋಲ್ ಪ್ರಭು, ಸಮಯ್ ಎ.ಎಸ್, ರಿಷಿಕಾ ಕೆ.ಎಸ್ ಮತ್ತು ರಿತುಲ್ ಎಸ್. ರೆಡ್ಡಿ ಮೊದಲ ಐದು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ನರ್ಸಿಂಗ್ ವಿಭಾಗದಲ್ಲಿ ಪಶುವೈದ್ಯಕೀಯ ವಿಭಾಗದಲ್ಲಿ ಅಗ್ರಸ್ಥಾನ ಪಡೆದವರೇ ಈ ವಿಭಾಗದಲ್ಲೂ ಮೇಲುಗೈ ಸಾಧಿಸಿದ್ದಾರೆ. ನಯನಾ ಗೋಪಿ, ಅಮೂಲ್ಯ ಎಸ್., ರಿತ್ವಿಕ್ ಕುಮಾರ್, ಬಸವರಾಜ್ ಅವತಿ ಮತ್ತು ಸುಚಿತಾ ಎಂ. ಪ್ರಮುಖ ಐವರು ಟಾಪರ್ಸ್ ಆಗಿದ್ದಾರೆ.

ಮುಂದಿನ ಹಾದಿ: ಕೌನ್ಸೆಲಿಂಗ್ ಪ್ರಕ್ರಿಯೆ

ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸದ್ಯದಲ್ಲೇ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ತಮ್ಮ ರ್‍ಯಾಂಕ್ ಅಂಕಗಳ ಆಧಾರದ ಮೇಲೆ ಆಪ್ಷನ್ ಎಂಟ್ರಿ ಪ್ರಕ್ರಿಯೆಗೆ ಸಿದ್ಧರಾಗಬೇಕಿದೆ. ರಾಜ್ಯದಾದ್ಯಂತ ಇರುವ ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಮತ್ತು ಇತರೆ ವೃತ್ತಿಪರ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಈ ರ‍್ಯಾಂಕ್‌ಗಳು ನಿರ್ಣಾಯಕವಾಗಲಿವೆ.

ಪರೀಕ್ಷೆಯ ಅಂಕಿ-ಅಂಶಗಳು

ಈ ಸಾಲಿನ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 3,30,646 ಇದ್ದು, ಇದರಲ್ಲಿ 3,09,014 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಭೌತಶಾಸ್ತ್ರ ವಿಭಾಗದಲ್ಲಿ 3,09,014, ರಸಾಯನಶಾಸ್ತ್ರ ವಿಭಾಗದಲ್ಲಿ 3,08,946, ಗಣಿತ ವಿಷಯದಲ್ಲಿ 3,02,384 ಮತ್ತು ಜೀವಶಾಸ್ತ್ರ ವಿಷಯದಲ್ಲಿ 2,31,023 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಬಾರಿಯ ಪರೀಕ್ಷೆಯ ಪ್ರಮುಖ ಆಕರ್ಷಣೆಯೆಂದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ವ್ಯಾಪಕ ಬಳಕೆ. ಮುಖ ಪರಿಚಯ ಮತ್ತು ವೆಬ್‌ಕಾಸ್ಟಿಂಗ್‌ನಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಎಚ್ಚರವಹಿಸಲಾಗಿದೆ. ಒಟ್ಟು 11,51,367 ಓಎಂಆರ್ ಉತ್ತರ ಪತ್ರಿಕೆಗಳನ್ನು ಕೇವಲ ಐದು ದಿನಗಳ ದಾಖಲೆಯ ಅವಧಿಯಲ್ಲಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಮೂಲಕ ಕೆಇಎ ತನ್ನ ಪಾರದರ್ಶಕತೆಯನ್ನು ಸಾಬೀತುಪಡಿಸಿದೆ. ಈ ಉತ್ತರ ಪತ್ರಿಕೆಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಿರುವುದು, ಪರೀಕ್ಷಾ ಪ್ರಕ್ರಿಯೆಯಲ್ಲಿನ ನಂಬಿಕೆಯನ್ನು ಹೆಚ್ಚಿಸಿದೆ.

ತಾಂತ್ರಿಕ ದೋಷಗಳ ಸರಿಪಡುವಿಕೆ

ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ಓಎಂಆರ್ ಶೀಟ್‌ನಲ್ಲಿ ನೋಂದಣಿ ಸಂಖ್ಯೆ, ಆವೃತ್ತಿ ಕೋಡ್ ಅಥವಾ ಬುಕ್ಲೆಟ್ ಸಂಖ್ಯೆಯನ್ನು ನಮೂದಿಸುವಾಗ ಸಣ್ಣಪುಟ್ಟ ತಪ್ಪುಗಳನ್ನು ಮಾಡಿದ್ದರು. ಕೆಲವರು ಸಹಿ ಮಾಡಿರಲಿಲ್ಲ, ಇನ್ನು ಕೆಲವರು ಹೆಸರು ಬರೆದಿರಲಿಲ್ಲ. ಇಂತಹ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಆ ತಪ್ಪುಗಳನ್ನು ಸರಿಪಡಿಸಿ, ಅವರ ಪೂರಕ ದಾಖಲೆಗಳೊಂದಿಗೆ ಪರಿಶೀಲಿಸಿ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ಕೋರ್ಸ್‌ಗಳಿಗೆ ಪ್ರವೇಶವು ಯುಜಿನೀಟ್‌ -2026ರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಡೆಯಲಿದೆ. ನೀಟ್ ಫಲಿತಾಂಶ ಬಂದ ನಂತರ, ಎಂಸಿಸಿ ಕೌನ್ಸೆಲಿಂಗ್ ವೇಳಾಪಟ್ಟಿಯಂತೆ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಯಲಿದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳ ಕೌನ್ಸೆಲಿಂಗ್ ಪ್ರತ್ಯೇಕವಾಗಿದ್ದರೂ ಸಹ, ವೈದ್ಯಕೀಯ ಸೀಟುಗಳ ಹಂಚಿಕೆಯ ನಂತರ ಇಂಜಿನಿಯರಿಂಗ್‌ನಲ್ಲಿ ಖಾಲಿ ಉಳಿಯುವ ಸೀಟುಗಳನ್ನು ಮುಂದಿನ ಸುತ್ತುಗಳಲ್ಲಿ ಭರ್ತಿ ಮಾಡಲಾಗುತ್ತದೆ. ವೈದ್ಯಕೀಯ ಸೀಟುಗಳಿಗೆ ಸಂಬಂಧಿಸಿದಂತೆ, ಅಖಿಲ ಭಾರತ ಮತ್ತು ರಾಜ್ಯ ಕೋಟಾ ಎರಡರಲ್ಲೂ ಸೀಟು ಪಡೆದ ಅಭ್ಯರ್ಥಿಗಳು, ಅಖಿಲ ಭಾರತ ಕೋಟಾದಲ್ಲಿ ಸೀಟು ಪಡೆದರೆ ರಾಜ್ಯ ಕೋಟಾದ ಸೀಟನ್ನು ಬಿಟ್ಟುಕೊಡಲು ಯಾವುದೇ ದಂಡ ಪಾವತಿಸಬೇಕಿಲ್ಲ ಎಂಬ ವಿನಾಯಿತಿಯನ್ನು ನೀಡಲಾಗಿದೆ.

Read More
Next Story