ಮೇಕೆದಾಟು ಕೇವಲ ಕುಡಿಯುವ ನೀರಿನ ಯೋಜನೆ, ನೀರಾವರಿಗೆ ಬಳಕೆ ಇಲ್ಲ - ಸಿಎಂ ಸ್ಪಷ್ಟನೆ
x

ಮೇಕೆದಾಟು ಕೇವಲ ಕುಡಿಯುವ ನೀರಿನ ಯೋಜನೆ, ನೀರಾವರಿಗೆ ಬಳಕೆ ಇಲ್ಲ - ಸಿಎಂ ಸ್ಪಷ್ಟನೆ

ಮೇಕೆದಾಟು ಯೋಜನೆ ಕೇವಲ ಕರ್ನಾಟಕದ ಹಿತಾಸಕ್ತಿಯಲ್ಲ, ಅದು ದಕ್ಷಿಣ ಭಾರತದ ಹೃದಯದಂತಹ ಯೋಜನೆಯಾಗಿದೆ. ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಅನುಕೂಲವಾಗಲಿದೆ ಎಂದು ಸಿಎಂ ಹೇಳಿದರು.


Click the Play button to hear this message in audio format

ದಕ್ಷಿಣ ಭಾರತದ ಜಲ ನಿರ್ವಹಣೆಯಲ್ಲಿ ಅತ್ಯಂತ ನಿರ್ಣಾಯಕ ಎನಿಸಿರುವ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆಯು ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ಮೇಕೆದಾಟು ಯೋಜನೆಯ ಅನಿವಾರ್ಯತೆ, ತಮಿಳುನಾಡಿನ ವಿರೋಧ ಮತ್ತು ರಾಜ್ಯ ರಾಜಕೀಯದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಮೇಕೆದಾಟು ಯೋಜನೆ ಕೇವಲ ಕರ್ನಾಟಕದ ಹಿತಾಸಕ್ತಿಯಲ್ಲ, ಅದು ಇಡೀ ದಕ್ಷಿಣ ಭಾರತದ ಹೃದಯದಂತಹ ಯೋಜನೆಯಾಗಿದೆ. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು. ನಾವು ತಮಿಳುನಾಡಿನ ರೈತರ ಹಿತವನ್ನೂ ಕಾಪಾಡಬೇಕಿದೆ. ಮೇಕೆದಾಟು ಒಂದು ಸಮತೋಲಿತ ಜಲಾನಯನವಾಗಿದ್ದು, ಬರಗಾಲದಂತಹ ಕಷ್ಟದ ಕಾಲದಲ್ಲಿ ತಮಿಳುನಾಡಿನ ಪಾಲಿನ ನೀರನ್ನು ಸಮರ್ಪಕವಾಗಿ ಹರಿಸಲು ಇದು ನೆರವಾಗಲಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನಾವು ತಮಿಳುನಾಡಿಗೆ ಬಿಡಬೇಕಾದ 177 ಟಿಎಂಸಿ ನೀರನ್ನು ಬಿಡಲು ಸಿದ್ಧರಿದ್ದೇವೆ. ಯೋಜನೆಯ ತೀರ್ಮಾನವನ್ನು ಕೇಂದ್ರ ಜಲ ಆಯೋಗ ತೆಗೆದುಕೊಳ್ಳಬೇಕೆಂದು ನ್ಯಾಯಾಲಯ ಹೇಳಿದೆ ಎಂದರು.

ನೀರಾವರಿಗೆ ಒಂದು ಬಕೆಟ್ ನೀರೂ ಇಲ್ಲ..!

ಯೋಜನೆಯ ಕುರಿತಾದ ತಪ್ಪು ಕಲ್ಪನೆಗಳಿವೆ. ಈ ಯೋಜನೆಯಲ್ಲಿ ಸಂಗ್ರಹವಾಗುವ ನೀರನ್ನು ಒಂದೇ ಒಂದು ಬಕೆಟ್‌ನಷ್ಟು ಕೂಡ ನೀರಾವರಿಗೆ ಬಳಸುವುದಿಲ್ಲ. ಇದು ಕೇವಲ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮಾತ್ರ ಮೀಸಲು. ಬೆಂಗಳೂರಿನ ಜನಸಂಖ್ಯೆ ಸ್ಫೋಟಕವಾಗಿ ಹೆಚ್ಚುತ್ತಿದ್ದು, ಕೃಷ್ಣಾ ನದಿಯಿಂದ ನೀರು ತರುವುದು ಅಸಾಧ್ಯ. ಹೀಗಾಗಿ ಕಾವೇರಿಯೇ ನಮಗೆ ಇರುವ ಏಕೈಕ ಆಯ್ಕೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ, ಈ ಯೋಜನೆಯಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಿದ್ದು, ರಾಜ್ಯದ ಇಂಧನ ಕ್ಷೇತ್ರಕ್ಕೆ ಬೃಹತ್ ಕೊಡುಗೆಯಾಗಲಿದೆ ಎಂದರು.

ತಮಿಳುನಾಡು ಸರ್ಕಾರವು ಕಳೆದ 40 ವರ್ಷಗಳಿಂದ ಈ ಯೋಜನೆಯನ್ನು ರಾಜಕೀಯ ಅಜೆಂಡಾಗಾಗಿ ವಿರೋಧಿಸುತ್ತಾ ಬಂದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಕದ ರಾಜ್ಯದ ರಾಜಕೀಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಕಳೆದ ವರ್ಷವೇ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಹರಿದು ಹೋಗಿದೆ. ತಮಿಳುನಾಡು ತನ್ನ ನೆಲದಲ್ಲಿ ಅನೇಕ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ, ನಾವು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಹಾಗೆಯೇ ಮೇಕೆದಾಟುವಿಗೂ ಅವರು ಆಕ್ಷೇಪಿಸುವುದು ಸರಿಯಲ್ಲ ಎಂದು ಕಿಡಿಕಾರಿದರು. ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಲು ನಾವು ಯಾವಾಗಲೂ ಸಿದ್ಧ, ಏಕೆಂದರೆ ಉಭಯ ರಾಜ್ಯಗಳ ಜನರು ಭಾರತೀಯರು ಎಂಬ ಭಾವನೆ ಅವರದಾಗಿದೆ ಎಂದು ಹೇಳಿದರು.

ಪರಿಷತ್ ಚುನಾವಣೆ: ಅಡ್ಡಮತದಾನದ ಆರೋಪಕ್ಕೆ ತಿರುಗೇಟು

ವಿಧಾನ ಪರಿಷತ್ ಚುನಾವಣೆಯಲ್ಲಿನ ಅಡ್ಡಮತದಾನ ಮತ್ತು ತಂತ್ರಗಾರಿಕೆಗಳ ಸಂಬಂಧ ಉತ್ತರಿಸಿದ ಡಿ.ಕೆ. ಶಿವಕುಮಾರ್, ನಾವು ಯಾವುದೇ ತಂತ್ರಗಾರಿಕೆ ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ. ಇದು ಗೌಪ್ಯ ಮತದಾನವಾಗಿದ್ದು, ಫಲಿತಾಂಶ ಬರುವವರೆಗೆ ಕಾಯೋಣ. ನಮ್ಮ ಶಾಸಕರಿಗೆ ಹೇಗೆ ಮತ ಚಲಾಯಿಸಬೇಕು ಎಂಬ ತರಬೇತಿ ನೀಡಿದ್ದೇವೆ ಅಷ್ಟೇ. 60-70 ಶಾಸಕರು ಹೊಸಬರಾಗಿರುವುದರಿಂದ ಆದ್ಯತಾ ಮತಗಳ ಬಗ್ಗೆ ಗೊಂದಲ ಉಂಟಾಗಬಹುದು, ಅದನ್ನು ನಿವಾರಿಸಲು ಮಾರ್ಗದರ್ಶನ ನೀಡಿದ್ದೇವೆ ಎಂದು ತಿಳಿಸಿದರು.

ಕುಮಾರಸ್ವಾಮಿ ವಿರುದ್ಧ ಕಿಡಿ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಶಿವಕುಮಾರ್, ಅಸಂಬದ್ಧ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಹಿರಿಯ ನಾಯಕರಾಗಿ ಅವರು ಇಂತಹ ಹೇಳಿಕೆಗಳನ್ನು ನೀಡುವುದು ಅವರ ಘನತೆಗೆ ತಕ್ಕುದಲ್ಲ. ಅಸೂಯೆಗೆ ಮದ್ದಿಲ್ಲ, ಅವರು ತಮ್ಮ ಘನತೆ ಕಾಪಾಡಿಕೊಂಡು ಹೋದರೆ ಒಳ್ಳೆಯದು ಎಂದು ತಿರುಗೇಟು ನೀಡಿದರು. ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲ ಸಂಸದರು ಒಗ್ಗಟ್ಟಾಗಿ ಹೋರಾಡುತ್ತಾರೆ ಎಂಬ ನಂಬಿಕೆ ನಮಗಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಒಗ್ಗೂಡಬೇಕಾದ ಅಗತ್ಯ ಇದೆ ಎಂದು ನುಡಿದರು.

Read More
Next Story