A coastal talent who joined the Navy because he didn
x

ಸಬ್ ಲೆಫ್ಟಿನೆಂಟ್ ನಿಶೆಲ್ ಫ್ಲೋರಾ!

ಐಟಿ ಕೆಲಸ ಬಿಟ್ಟು ನೌಕಾಪಡೆ ಸೇರಿದ ಕರಾವಳಿ ಪ್ರತಿಭೆ: ಸಬ್ ಲೆಫ್ಟಿನೆಂಟ್ ಆಗಿ ಇತಿಹಾಸ ಬರೆದ ನಿಶೆಲ್ ಫ್ಲೋರಾ!

ಶಾಲಾ ದಿನಗಳಿಂದಲೇ ಅತ್ಯಂತ ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ಹೆಸರಾಗಿದ್ದ ನಿಶೆಲ್, ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.


Click the Play button to hear this message in audio format

ಕರಾವಳಿಯ ಪ್ರತಿಭೆಗಳು ಕೇವಲ ಕಾರ್ಪೊರೇಟ್ ವಲಯಕ್ಕಷ್ಟೇ ಸೀಮಿತವಲ್ಲ, ದೇಶ ಕಾಯುವ ಸಶಸ್ತ್ರ ಪಡೆಗಳಲ್ಲೂ ತಮ್ಮ ಛಾಪು ಮೂಡಿಸಬಲ್ಲರು ಎಂಬುದನ್ನು ಮಂಗಳೂರಿನ ನಿಶೆಲ್ ಫ್ಲೋರಾ ಡಿ'ಅಲ್ಮೇಡಾ ಸಾಬೀತುಪಡಿಸಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿನಿಯಾಗಿರುವ ನಿಶೆಲ್, ಕಠಿಣವಾದ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (SSB) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ಇದೀಗ ಭಾರತೀಯ ನೌಕಾಪಡೆಯ 'ಸಬ್ ಲೆಫ್ಟಿನೆಂಟ್' ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಶಾಲಾ ದಿನಗಳಿಂದಲೇ ಅತ್ಯಂತ ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ಹೆಸರಾಗಿದ್ದ ನಿಶೆಲ್, ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು. ವಿದ್ಯಾಭ್ಯಾಸದ ಜೊತೆಗೆ ಕಲೆ, ಕ್ರೀಡೆ, ನೃತ್ಯ, ಸಂಗೀತ, ಚಿತ್ರಕಲೆ, ಕಾರ್ಯಕ್ರಮ ನಿರೂಪಣೆ ಹಾಗೂ ಕರಾಟೆಯಲ್ಲೂ ತರಬೇತಿ ಪಡೆದಿದ್ದರು. ಅವರಲ್ಲಿದ್ದ ಈ ಅದಮ್ಯ ನಾಯಕತ್ವ ಗುಣ ಹಾಗೂ ಕಠಿಣ ಸವಾಲುಗಳನ್ನು ಎದುರಿಸುವ ಧೈರ್ಯವೇ ಅವರನ್ನು ಇಂದು ದೇಶದ ರಕ್ಷಣಾ ಪಡೆಯ ಉನ್ನತ ಹುದ್ದೆಯಲ್ಲಿ ತಂದು ನಿಲ್ಲಿಸಿದೆ.

ದೇಶಸೇವೆಯ ಕನಸಿಗೆ ಮುನ್ನುಡಿ ಬರೆದ ಎನ್‌ಸಿಸಿ!

ನಿಶೆಲ್ ಅವರ ದೇಶಸೇವೆಯ ಕನಸು ಚಿಗುರೊಡೆದಿದ್ದೇ ಅವರ ಕಾಲೇಜು ದಿನಗಳ ಎನ್‌ಸಿಸಿ ತರಬೇತಿಯಲ್ಲಿ. ತಮ್ಮ ಶಿಕ್ಷಣ ಸಂಸ್ಥೆಯ ಇತಿಹಾಸದಲ್ಲೇ ನವದೆಹಲಿಯ ಗಣರಾಜ್ಯೋತ್ಸವ ಪಥಸಂಚಲನ ಶಿಬಿರಕ್ಕೆ ಆಯ್ಕೆಯಾದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಕರ್ತವ್ಯಪಥ್‌ನಲ್ಲಿ ಹೆಜ್ಜೆ ಹಾಕಿದ ಆ ಅನುಭವವೇ ಸಶಸ್ತ್ರ ಪಡೆಗೆ ಸೇರಲು ಅವರಿಗೆ ದಿಕ್ಸೂಚಿಯಾಯಿತು.

ಎಂಜಿನಿಯರಿಂಗ್‌ನಿಂದ ನೌಕಾಪಡೆಯವರೆಗೆ

ಪಿಯುಸಿ ಬಳಿಕ ಉನ್ನತ ಶಿಕ್ಷಣಕ್ಕಾಗಿ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ ನಿಶೆಲ್, ಕೈತುಂಬಾ ಸಂಬಳ ಬರುವ ಐಟಿ ಉದ್ಯೋಗಗಳ ಕಡೆಗೆ ಮುಖ ಮಾಡದೆ ಭಾರತೀಯ ಸಶಸ್ತ್ರ ಪಡೆ ಸೇರುವ ಅಚಲ ನಿರ್ಧಾರ ಮಾಡಿದರು. ದೇಶದ ಅತ್ಯಂತ ಕಠಿಣ ಆಯ್ಕೆ ಪ್ರಕ್ರಿಯೆಗಳಲ್ಲಿ ಒಂದಾದ ಎಸ್‌ಎಸ್‌ಬಿ (SSB) ಪ್ರವೇಶ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ದಾಟಿದ ಅವರು, ಕಠಿಣ ಸೇನಾ ಜಂಟಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಬ್ ಲೆಫ್ಟಿನೆಂಟ್ ಆಗಿ ದೇಶಸೇವೆಗೆ ಸಜ್ಜಾಗಿದ್ದಾರೆ.

ಯುವ ಪೀಳಿಗೆಗೆ ರೋಲ್ ಮಾಡೆಲ್

"ಸೇಂಟ್ ಅಲೋಶಿಯಸ್ ತರಗತಿಯ ಕೊಠಡಿಯಿಂದ ಭಾರತೀಯ ನೌಕಾಪಡೆಯ ಯುದ್ಧನೌಕೆಯವರೆಗೆ ನಿಶೆಲ್ ಮಾಡಿರುವ ಈ ಪಯಣ ಕರಾವಳಿಯ ಯುವತಿಯರಿಗೆ ದೊಡ್ಡ ಪ್ರೇರಣೆ. ಕಠಿಣ ಪರಿಶ್ರಮ, ಧೈರ್ಯ ಮತ್ತು ದೇಶದ ಮೇಲಿನ ಭಕ್ತಿ ಇದ್ದರೆ ಹೆಣ್ಣುಮಕ್ಕಳು ಯಾವುದೇ ಉನ್ನತ ಶಿಖರವನ್ನು ಏರಬಹುದು ಎಂಬುದಕ್ಕೆ ನಿಶೆಲ್ ಬದುಕೇ ಸಾಕ್ಷಿ" ಎಂದು ಅವರ ಶಿಕ್ಷಕರು ಹಾಗೂ ಹಿತೈಷಿಗಳು ಹೆಮ್ಮೆಯಿಂದ ಕೊಂಡಾಡಿದ್ದಾರೆ.

Read More
Next Story