ಹಿಂದಿ ಪರೀಕ್ಷೆಗೆ ಅಂಕ; ಕೋರ್ಟ್​ ಆದೇಶ ಪಾಲನೆಗೆ ಅಧಿಕಾರಿಗಳಿಗೆ ಸೂಚಿಸುವೆ ಎಂದ ಸಿಎಂ
x
ಸಂಗ್ರಹ ಚಿತ್ರ.

ಹಿಂದಿ ಪರೀಕ್ಷೆಗೆ ಅಂಕ; ಕೋರ್ಟ್​ ಆದೇಶ ಪಾಲನೆಗೆ ಅಧಿಕಾರಿಗಳಿಗೆ ಸೂಚಿಸುವೆ ಎಂದ ಸಿಎಂ

ಹೈಕೋರ್ಟ್‌ನ ನಿರ್ಧಾರದಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿದ್ದ ಗೊಂದಲ ನಿವಾರಣೆಯಾಗಿದ್ದು, ಇದೀಗ ಸರ್ಕಾರದ ಈ ಸ್ಪಷ್ಟನೆಯಿಂದಾಗಿ ಮೌಲ್ಯಮಾಪನ ಪ್ರಕ್ರಿಯೆ ಸುಗಮವಾಗಿ ನಡೆಯುವ ನಿರೀಕ್ಷೆಯಿದೆ.


Click the Play button to hear this message in audio format

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗೆ ಗ್ರೇಡ್‌ಗಳ ಬದಲಾಗಿ ಅಂಕಗಳನ್ನೇ ನೀಡಬೇಕು ಎಂಬ ಹೈಕೋರ್ಟ್ ಆದೇಶದ ಬೆನ್ನಲ್ಲೇ, ರಾಜ್ಯ ಸರ್ಕಾರವು ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲು ಮುಂದಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.


ನ್ಯಾಯಾಲಯದ ಸೂಚನೆಯಂತೆ ಹಿಂದಿನ ವರ್ಷಗಳ ಮಾದರಿಯಲ್ಲೇ ತೃತೀಯ ಭಾಷೆಯ ಮೌಲ್ಯಮಾಪನ ನಡೆಸಿ ಅಂಕಗಳನ್ನು ನೀಡಬೇಕಿದೆ. ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದು, ಕೋರ್ಟ್ ಆದೇಶವನ್ನು ಚಾಚೂತಪ್ಪದೆ ಪಾಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಹೈಕೋರ್ಟ್‌ನ ನಿರ್ಧಾರದಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿದ್ದ ಗೊಂದಲ ನಿವಾರಣೆಯಾಗಿದ್ದು, ಇದೀಗ ಸರ್ಕಾರದ ಈ ಸ್ಪಷ್ಟನೆಯಿಂದಾಗಿ ಮೌಲ್ಯಮಾಪನ ಪ್ರಕ್ರಿಯೆ ಸುಗಮವಾಗಿ ನಡೆಯುವ ನಿರೀಕ್ಷೆಯಿದೆ.

ಮೂಢನಂಬಿಕೆಗಳಿಗೆ ನನ್ನ ಬೆಂಬಲವಿಲ್ಲ

ಇದೇ ವೇಳೆ ಚಾಮರಾಜನಗರ ಭೇಟಿಯ ಕುರಿತಾದ ಮೂಢನಂಬಿಕೆಗಳ ಬಗ್ಗೆಯೂ ಸಿಎಂ ಪ್ರತಿಕ್ರಿಯಿಸಿದರು. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಕೇವಲ ಮೂಢನಂಬಿಕೆ ಎಂದ ಅವರು, ತಮಗೆ ಅಂತಹ ಯಾವುದೇ ನಂಬಿಕೆಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ಕಾರಣಕ್ಕಾಗಿ ತಾವು ಈ ಹಿಂದೆಯೂ ಹಲವು ಬಾರಿ ಜಿಲ್ಲೆಗೆ ಭೇಟಿ ನೀಡಿರುವುದಾಗಿ ತಿಳಿಸಿದ ಅವರು, "ಇಲ್ಲಿಗೆ ಬಂದರೆ ಕುರ್ಚಿ ಮತ್ತಷ್ಟು ಭದ್ರವಾಗುತ್ತದೆ" ಎಂದು ಕೇವಲ ಸಹಜವಾಗಿ ಹೇಳಿದ್ದಾಗಿ ವಿವರಣೆ ನೀಡಿದರು.

ಪರಿಹಾರ ವಿತರಣೆ ಬಗ್ಗೆ ಸ್ಪಷ್ಟನೆ

ಅಸಹಜ ಸಾವುಗಳ ಪ್ರಕರಣದಲ್ಲಿ ಸರ್ಕಾರ ನೀಡುತ್ತಿರುವ ಪರಿಹಾರದ ಕುರಿತು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಬರೆದಿದ್ದ ಪತ್ರಕ್ಕೂ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕರು ತಪ್ಪು ತಿಳುವಳಿಕೆಯಿಂದ ಪತ್ರ ಬರೆದಿದ್ದಾರೆ ಎಂದು ಹೇಳಿದ ಸಿಎಂ, ಸರ್ಕಾರವು ಎಲ್ಲರಿಗೂ ಪರಿಹಾರ ಒದಗಿಸುತ್ತಿದೆ ಎಂದರು. ಇಂತಹ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದರೆ ಖಂಡಿತವಾಗಿಯೂ ಪರಿಹಾರ ನೀಡಲಾಗುವುದು, ಶಾಸಕರು ಕೇಳಿದರೂ ಅವರಿಗೆ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.

Read More
Next Story