
ಬಿಯಾಂಡ್ ಬೆಂಗಳೂರು ನೀತಿಯಿಂದ ರಾಜ್ಯದ ಇತರೆ ನಗರಗಳಲ್ಲೂ ಐಟಿ ವಿಸ್ತರಣೆ
ಬೆಂಗಳೂರು ದೇಶದ ಪ್ರಮುಖ ಐಟಿ ಕೇಂದ್ರವಾಗಿ ಮುಂದುವರಿದಿದ್ದು, ಇಲ್ಲಿ ಲಭ್ಯವಿರುವ ಪ್ರತಿಭೆ, ತಾಂತ್ರಿಕ ಪರಿಸರ ವ್ಯವಸ್ಥೆ ಹಾಗೂ ಮಾನವ ಸಂಪನ್ಮೂಲವೇ ಜಾಗತಿಕ ಕಂಪನಿಗಳನ್ನು ಆಕರ್ಷಿಸುತ್ತಿವೆ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಬೆಳವಣಿಗೆಯನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಸೇರಿದಂತೆ ಇತರೆ ನಗರಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. "ಬಿಯಾಂಡ್ ಬೆಂಗಳೂರು" ನೀತಿಯ ಮೂಲಕ ಉದ್ಯಮಗಳಿಗೆ ಕಡಿಮೆ ವೆಚ್ಚದಲ್ಲಿ ಕಚೇರಿ ಜಾಗ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ರಾಜ್ಯದ ಇತರೆ ನಗರಗಳಲ್ಲಿ ಕೇವಲ ಅರ್ಧ ಡಾಲರ್ಗೆ ಕಚೇರಿ ಜಾಗ ದೊರೆಯುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಬೆಂಗಳೂರು ಟೆಕ್ ಸಮಿಟ್ ಎಐ ಮತ್ತು ಬಿಯಾಂಡ್ ಬೆಂಗಳೂರು ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಐಟಿ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ಸಮ್ಮುಖದಲ್ಲಿ ಅವರು ಮಾತನಾಡಿದರು.
ಬೆಂಗಳೂರು ದೇಶದ ಐಟಿ ರಾಜಧಾನಿಯಾಗಿ ಮುಂದುವರಿಕೆ
ಬೆಂಗಳೂರು ದೇಶದ ಪ್ರಮುಖ ಐಟಿ ಕೇಂದ್ರವಾಗಿ ಮುಂದುವರಿದಿದ್ದು, ಇಲ್ಲಿ ಲಭ್ಯವಿರುವ ಪ್ರತಿಭೆ, ತಾಂತ್ರಿಕ ಪರಿಸರ ವ್ಯವಸ್ಥೆ ಹಾಗೂ ಮಾನವ ಸಂಪನ್ಮೂಲವೇ ಜಾಗತಿಕ ಕಂಪನಿಗಳನ್ನು ಆಕರ್ಷಿಸುತ್ತಿವೆ ಎಂದು ಸಿಎಂ ಹೇಳಿದರು.
ಬೇರೆ ನಗರಗಳಲ್ಲಿ ಕಚೇರಿ ಸ್ಥಳದ ವೆಚ್ಚ 3.5 ಡಾಲರ್ವರೆಗೆ ಇದ್ದರೆ, ಬೆಂಗಳೂರಿನಲ್ಲಿ ಅದು ಸುಮಾರು 1 ಡಾಲರ್ನಷ್ಟಿದೆ. ಈಗ "ಬಿಯಾಂಡ್ ಬೆಂಗಳೂರು" ನೀತಿಯಡಿ ಉದ್ಯಮಗಳನ್ನು ಇತರೆ ನಗರಗಳಿಗೆ ವಿಸ್ತರಿಸುವ ಮೂಲಕ ಈ ವೆಚ್ಚವನ್ನು ಇನ್ನಷ್ಟು ಕಡಿಮೆ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದು ವಿವರಿಸಿದರು.
100 ದಿನಗಳಲ್ಲಿ ಹೊಸ ನೀತಿ
ಮುಂದಿನ 100 ದಿನಗಳಲ್ಲಿ ಬೆಂಗಳೂರಿನ ಹೊರಭಾಗದಲ್ಲಿ ವಿಶ್ವದರ್ಜೆಯ ಕಚೇರಿ ಮೂಲಸೌಕರ್ಯವನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವ ನೀತಿಯನ್ನು ಸರ್ಕಾರ ಘೋಷಿಸಲಿದೆ ಎಂದು ಶಿವಕುಮಾರ್ ತಿಳಿಸಿದರು.
ಇದಕ್ಕಾಗಿ ಇತರೆ ನಗರಗಳಲ್ಲಿ ಡಬಲ್ ಎಫ್ಎಆರ್ ಅವಕಾಶ ಕಲ್ಪಿಸುವ ಕುರಿತು ಸರ್ಕಾರ ಗಮನ ಹರಿಸಿದೆ. ಇದರಿಂದ ಕೈಗಾರಿಕೆಗಳು ಹಾಗೂ ಐಟಿ ಕಂಪನಿಗಳು ಬೆಂಗಳೂರಿನ ಹೊರಗೂ ಕಚೇರಿಗಳನ್ನು ಸ್ಥಾಪಿಸಲು ಉತ್ತೇಜನ ಸಿಗಲಿದೆ ಎಂದು ಹೇಳಿದರು.
ಐಟಿ ರಫ್ತು 5.50 ಲಕ್ಷ ಕೋಟಿ ರೂಪಾಯಿ ದಾಟುವ ನಿರೀಕ್ಷೆ
ಕರ್ನಾಟಕದ ಸಾಫ್ಟ್ವೇರ್ ರಫ್ತು ನಿರಂತರ ಏರಿಕೆಯಾಗುತ್ತಿದ್ದು, 2024-25ನೇ ಸಾಲಿನಲ್ಲಿ 4.36 ಲಕ್ಷ ಕೋಟಿ ರೂಪಾಯಿ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅದು 5.50 ಲಕ್ಷ ಕೋಟಿ ರೂಪಾಯಿ ದಾಟುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜಾಗತಿಕ ಸಾಮರ್ಥ್ಯ ಕೇಂದ್ರಗಳು ಈಗ ಕೇವಲ ಬ್ಯಾಕ್ಆಫೀಸ್ಗಳಾಗಿ ಉಳಿದಿಲ್ಲ. ಸಂಶೋಧನೆ, ಉತ್ಪನ್ನ ಅಭಿವೃದ್ಧಿ ಮತ್ತು ಮೌಲ್ಯಾಧಾರಿತ ತಂತ್ರಜ್ಞಾನ ಕಾರ್ಯಗಳ ಕೇಂದ್ರಗಳಾಗಿ ರೂಪುಗೊಂಡಿವೆ ಎಂದು ಹೇಳಿದರು.
ದಾವೋಸ್ನಲ್ಲಿ ಬೆಂಗಳೂರಿನ ಬಗ್ಗೆ ಚರ್ಚೆ
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಹಲವು ಜಾಗತಿಕ ನಾಯಕರು ಬೆಂಗಳೂರಿನ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು ಎಂದು ಶಿವಕುಮಾರ್ ತಿಳಿಸಿದರು.
ಇತರೆ ರಾಜ್ಯಗಳೊಂದಿಗೆ ಹೋಲಿಸಿದರೆ ಬೆಂಗಳೂರಿನ ಪ್ರತಿಭೆ, ಪರಿಸರ ವ್ಯವಸ್ಥೆ ಹಾಗೂ ಮಾನವ ಸಂಪನ್ಮೂಲವೇ ಕರ್ನಾಟಕದ ದೊಡ್ಡ ಶಕ್ತಿಯಾಗಿದೆ ಎಂದು ಹಲವು ಉದ್ಯಮ ಪ್ರತಿನಿಧಿಗಳು ಹೇಳಿರುವುದಾಗಿ ಅವರು ಉಲ್ಲೇಖಿಸಿದರು.
ಐಟಿ, ಸ್ಟಾರ್ಟ್ಅಪ್ ಮತ್ತು ಕ್ವಾಂಟಮ್ ನೀತಿಗೆ ಒತ್ತು
ರಾಜ್ಯದ ಐಟಿ ನೀತಿ ಡೀಪ್ಟೆಕ್, ಡಿಜಿಟಲ್ ಮೂಲಸೌಕರ್ಯ, ಸಂಶೋಧನೆ ಹಾಗೂ ಉದ್ಯಮ-ಶೈಕ್ಷಣಿಕ ಸಹಭಾಗಿತ್ವವನ್ನು ಬಲಪಡಿಸುವತ್ತ ಗಮನ ಹರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸ್ಟಾರ್ಟ್ಅಪ್ ನೀತಿ ಉದ್ಯಮಿಗಳಿಗೆ ಮೂಲಸೌಕರ್ಯ, ಮಾರ್ಗದರ್ಶನ ಹಾಗೂ ಸಂಪನ್ಮೂಲ ಒದಗಿಸುವತ್ತ ಕೇಂದ್ರೀಕೃತವಾಗಿದೆ. ಜತೆಗೆ ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಕರ್ನಾಟಕದ ಕ್ವಾಂಟಮ್ ರೋಡ್ಮ್ಯಾಪ್ ರೂಪಿಸಲಾಗಿದೆ ಎಂದು ತಿಳಿಸಿದರು.
ಎಐ ವಿಶ್ವವಿದ್ಯಾಲಯ ಸ್ಥಾಪನೆ
ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಯಲ್ಲಿ ಖಾಸಗಿ ಉದ್ಯಮಗಳ ಸಹಭಾಗಿತ್ವವನ್ನೂ ಸರ್ಕಾರ ಬಯಸುತ್ತಿದೆ ಎಂದು ಶಿವಕುಮಾರ್ ಹೇಳಿದರು.
ಈ ವಿಶ್ವವಿದ್ಯಾಲಯ ಸಂಶೋಧನೆ, ಕಲಿಕೆ, ಆವಿಷ್ಕಾರ ಹಾಗೂ ಸಾರ್ವಜನಿಕ ಡಿಜಿಟಲ್ ಪ್ರವೇಶದ ಕೇಂದ್ರವಾಗಲಿದೆ. ಗ್ರಾಮೀಣ ವಿದ್ಯಾರ್ಥಿಗಳು 6ನೇ ತರಗತಿಯಿಂದಲೇ ಎಐ ಶಿಕ್ಷಣ ಪಡೆಯುವ ವ್ಯವಸ್ಥೆ ರೂಪಿಸುವ ಉದ್ದೇಶವಿದೆ ಎಂದು ತಿಳಿಸಿದರು.
ರೋಬೋಟಿಕ್ಸ್ ಹಾಗೂ ಡೇಟಾ ಸೆಂಟರ್ ನೀತಿ
ಬೆಂಗಳೂರು ರೋಬೋಟಿಕ್ಸ್ ಮತ್ತು ಇನ್ನೋವೇಶನ್ ಝೋನ್ ಆರಂಭಿಸಲಾಗುತ್ತಿದ್ದು, ಸುಧಾರಿತ ಸಂಶೋಧನೆ ಹಾಗೂ ಉತ್ಪನ್ನ ಅಭಿವೃದ್ಧಿಗೆ ಇದು ವೇದಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇದರೊಂದಿಗೆ 2026-31ರ ಅವಧಿಗೆ ಸುಸ್ಥಿರ ಡೇಟಾ ಸೆಂಟರ್ ನೀತಿಯನ್ನು ಸರ್ಕಾರ ಜಾರಿಗೆ ತರಲಿದೆ. ಭೂಮಿ, ವಿದ್ಯುತ್, ನೀರು, ಸಂಪರ್ಕ ವ್ಯವಸ್ಥೆ ಹಾಗೂ ನವೀಕರಿಸಬಹುದಾದ ಇಂಧನಕ್ಕೆ ಈ ನೀತಿಯಲ್ಲಿ ಆದ್ಯತೆ ನೀಡಲಾಗುವುದು ಎಂದರು.
ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಶಿಕ್ಷಣ
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಉತ್ತಮ ಶಿಕ್ಷಣ ಸಿಗುವಂತೆ ಸಿಎಸ್ಆರ್ ನಿಧಿಯ ಮೂಲಕ ಎರಡು ಅಥವಾ ಮೂರು ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಖಾಸಗಿ ಸಂಸ್ಥೆಗಳು ತಮ್ಮ ಸಿಎಸ್ಆರ್ ನಿಧಿಯನ್ನು ಶಾಲೆಗಳ ನಿರ್ಮಾಣ, ತರಗತಿ ಕೊಠಡಿಗಳು, ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಕರ ತರಬೇತಿ ಹಾಗೂ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಬಳಸುವಂತೆ ಅವರು ಮನವಿ ಮಾಡಿದರು.
ಅಂತಾರಾಷ್ಟ್ರೀಯ ಹಾಗೂ ಖಾಸಗಿ ಶಾಲೆಗಳು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಿಕ್ಷಕರನ್ನು ನಿಯೋಜಿಸುವ ಮಾದರಿಯನ್ನೂ ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.
ವಲಸೆ ತಡೆಯುವ ಉದ್ದೇಶ
ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ನಡೆಯುತ್ತಿರುವ ವಲಸೆಯನ್ನು ತಗ್ಗಿಸಲು ಗ್ರಾಮೀಣ ಭಾಗದಲ್ಲೇ ಉತ್ತಮ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಹೇಳಿದರು.
ಈ ವರ್ಷದ ಬೆಂಗಳೂರು ಟೆಕ್ ಸಮಿಟ್ ನವೆಂಬರ್ 17ರಿಂದ 19ರವರೆಗೆ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು. ಈ ಸಮಾವೇಶದಲ್ಲಿ ಜಾಗತಿಕ ಮಟ್ಟದ ಪ್ರತಿನಿಧಿಗಳು, ಹೂಡಿಕೆದಾರರು ಹಾಗೂ ನೂರಾರು ಪ್ರದರ್ಶಕರು ಭಾಗವಹಿಸಲಿದ್ದು, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಬಾಹ್ಯಾಕಾಶ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.
ಬೆಂಗಳೂರು ಎದುರಿಸುತ್ತಿರುವ ಸಂಚಾರ ಸೇರಿದಂತೆ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುತ್ತಿದೆ ಎಂದೂ ಮುಖ್ಯಮಂತ್ರಿ ಹೇಳಿದರು.

