
ನಮ್ಮ ಮೆಟ್ರೋ ನೇರಳೆ ಮಾರ್ಗ
ಮುಂದಿನ ವರ್ಷವೇ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ; 2 ವರ್ಷದಲ್ಲಿ 500 ಕಿ.ಮೀ ಮೆಟ್ರೋ ಜಾಲ ವಿಸ್ತರಣೆ
ಹಳದಿ, ಹಸಿರು ಮಾರ್ಗ ಹಾಗೂ ಗುಲಾಬಿ ಮೆಟ್ರೋ ಮಾರ್ಗದ ರೈಲುಗಳು ಒಟ್ಟು 96.1 ಕಿ.ಮೀ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ನೀಲಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಇತಿಶ್ರೀ ಹಾಡಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರಿನ ಮೆಟ್ರೋ ಜಾಲವನ್ನು ಬರೋಬ್ಬರಿ 500 ಕಿ.ಮೀ.ಗೆ ವಿಸ್ತರಿಸಲು ಯೋಜನೆ ರೂಪಿಸಿದೆ.
ಪ್ರಸ್ತುತ, ಹಳದಿ, ಹಸಿರು ಮಾರ್ಗ ಹಾಗೂ ಗುಲಾಬಿ ಮೆಟ್ರೋ ಮಾರ್ಗದ ರೈಲುಗಳು ಒಟ್ಟು 96.1 ಕಿ.ಮೀ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ನೀಲಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 500 ಕಿ.ಮೀ. ಮೆಟ್ರೋ ಜಾಲ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮುಂದಿನ ವರ್ಷದಲ್ಲಿ ಏರ್ಪೋರ್ಟ್ ಮೆಟ್ರೋ
ಬೆಂಗಳೂರು ಜನರ ಬಹುದಿನಗಳ ಕನಸಾದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷದೊಳಗೆ ವಿಮಾನ ನಿಲ್ದಾಣಕ್ಕೆ ʼನಮ್ಮ ಮೆಟ್ರೋʼ ಸಂಚಾರ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದರಿಂದಾಗಿ ಐಟಿ ಮಂದಿ ಹಾಗೂ ನಿತ್ಯ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ನಿಗದಿತ ಸಮಯಕ್ಕೆ ಏರ್ಪೋರ್ಟ್ ತಲುಪಲು ಸಾಧ್ಯವಾಗಲಿದೆ.
ಬೆಂಗಳೂರು ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಸರ್ಕಾರ ದೂರದೃಷ್ಟಿಯ ಯೋಜನೆ ರೂಪಿಸಿದೆ. ಸದ್ಯ ಇರುವ ಮಾರ್ಗಗಳ ಜೊತೆಗೆ ನಮ್ಮ ಮೆಟ್ರೋ ಹಂತ-3 ಮತ್ತು ಮುಂದಿನ ವಿಸ್ತರಿತ ಮಾರ್ಗಗಳನ್ನು ಸೇರಿಸಿ ಇಡೀ ಬೆಂಗಳೂರನ್ನು ಮೆಟ್ರೋ ಕನೆಕ್ಟಿವಿಟಿ ಮೂಲಕ ಜೋಡಿಸುವ ಗುರಿ ಹೊಂದಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ 1.25 ಲಕ್ಷ ಕೋಟಿ ಯೋಜನೆ
ಬೆಂಗಳೂರಿನ ಜನಸಂಖ್ಯೆ ಈಗಾಗಲೇ 1.40 ಕೋಟಿ ದಾಟಿದ್ದು, ಸುಮಾರು 1.30 ಕೋಟಿ ವಾಹನಗಳು ರಸ್ತೆಯಲ್ಲಿವೆ. ನಗರದ ಈ ಬೆಳವಣಿಗೆ ನಿಭಾಯಿಸಲು ಕೇವಲ ಸಮತಲ ಬೆಳವಣಿಗೆಯಷ್ಟೇ ಸಾಲದು, ಬದಲಿಗೆ ನೇರವಾಗಿ ಬೆಳೆಯಲು ಉತ್ತೇಜನ ನೀಡಬೇಕಿದೆ. ಇದಕ್ಕಾಗಿ ನಗರದ ಮೂಲಸೌಕರ್ಯ, ರಸ್ತೆಗಳು ಮತ್ತು ಸಾರ್ವಜನಿಕ ಸಾರಿಗೆ ಸುಧಾರಿಸಲು ಒಟ್ಟು 1.25 ಲಕ್ಷ ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ನೀಲನಕ್ಷೆಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
"ಬೆಂಗಳೂರಿನ ಅಭಿವೃದ್ಧಿ ಎಂದರೆ ಅದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಅಭಿವೃದ್ಧಿ. ನಾವು ಎಷ್ಟೇ ಸಾರ್ವಜನಿಕ ಸಾರಿಗೆ ತಂದರೂ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ನಮ್ಮ ಮೆಟ್ರೋ ವ್ಯಾಪ್ತಿಯನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸುವುದು ಅನಿವಾರ್ಯ. ಕೆಂಪೇಗೌಡರ ದೂರದೃಷ್ಟಿಯ ತತ್ವಗಳ ಆಧಾರದ ಮೇಲೆ ಈ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಇದು ಯಾವುದೇ ಒಂದು ಜಾತಿಗೆ ಸೀಮಿತವಾಗಿರದೆ ಇಡೀ ಸಮಾಜದ ಹಿತ ರಕ್ಷಿಸಲಿದೆ." ಎಂದು ಹೇಳಿದ್ದಾರೆ.

