
ಬನ್ನೇರುಘಟ್ಟದ ನವಜಾತ ನೀರಾನೆ ಮರಿಗೆ ದಿವಂಗತ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ನೆನಪಿನಲ್ಲಿ 'ಸಮೀಕ್ಷಾ' ಎಂದು ನಾಮಕರಣ ಮಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ.
ಬನ್ನೇರುಘಟ್ಟದಲ್ಲಿ ಜನಿಸಿದ ನೀರಾನೆಗೆ ಸಮೀಕ್ಷಾರೆಡ್ಡಿ ಹೆಸರು ನಾಮಕರಣ
ಕಳೆದ ಬಾರಿ ನೀರಾನೆ ಜನ್ಮ ನೀಡಿದ್ದ ಮರಿಯೊಂದು ಸೋಂಕಿನಿಂದ ಮೃತಪಟ್ಟಿತ್ತು. ಈಗ ಬುಧವಾರ ರಾತ್ರಿ ಮತತೊಂದು ಮರಿಗೆ ಜನ್ಮ ನೀಡಿದೆ.
ಬನ್ನೇರುಘಟ್ಟ ಮೃಗಾಲಯದಲ್ಲಿ ನಿನ್ನೆ(ಬುಧವಾರ) ರಾತ್ರಿ ಜನಿಸಿದ ನೀರಾನೆ ಮರಿಗೆ ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಪಶುವೈದ್ಯೆಯಾಗಿದ್ದ ದಿವಂಗತ ಡಾ.ಸಮೀಕ್ಷಾ ರೆಡ್ಡಿ ಗೌರವಾರ್ಥ ‘ಸಮೀಕ್ಷಾ’ ಎಂಬ ಹೆಸರು ನಾಮಕರಣ ಮಾಡಲಾಗಿದೆ.
ಬನ್ನೇರುಘಟ್ಟದಲ್ಲಿ 17 ವರ್ಷದ ನೀರಾನೆಯು ಮರಿಗೆ ಜನ್ಮ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅರಣ್ಯ ಸಚಿವ ಬಿ. ಈಶ್ವರ್ ಖಂಡ್ರೆ ಅವರು, ಕಳೆದ ಬಾರಿ ನೀರಾನೆ ಜನ್ಮ ನೀಡಿದ್ದ ಮರಿಯೊಂದು ಸೋಂಕಿನಿಂದ ಮೃತಪಟ್ಟಿತ್ತು. ಈಗ ಬುಧವಾರ ರಾತ್ರಿ ಮತತೊಂದು ಮರಿಗೆ ಜನ್ಮ ನೀಡಿದೆ. ಮರಿಯ ಆರೋಗ್ಯದ ಮೇಲೆ ನಿಗಾ ಇಟ್ಟು, ಯಾವುದೇ ಸೋಂಕು ತಗುಲದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜೂನ್ 4ರಂದು ದಕ್ಷಿಣ ಆಫ್ರಿಕಾದಿಂದ ತಂದಿರುವ ಚೀತಾಗಳನ್ನು ಸಾರ್ವಜನಿಕ ವೀಕ್ಷಣಾ ಆವರಣಕ್ಕೆ ಬಿಡುವ ಸಂದರ್ಭದಲ್ಲಿ ನೀರಾನೆ ಮರಿಗೆ ಸಮೀಕ್ಷಾ ಎಂದು ನಾಮಕರಣ ಮಾಡಲಾಯಿತು.
ಶಿವಮೊಗ್ಗ ಬಳಿಯ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಇತ್ತೀಚೆಗೆ ಗರ್ಭಿಣಿಯಾಗಿದ್ದ ಹಂಸಿಣಿ ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ಯುವ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ಮಾಡಿತ್ತು. ಚಿಕಿತ್ಸೆ ಫಲಿಸದೇ ವೈದ್ಯೆ ಮೃತಪಟ್ಟಿದ್ದರು. ಆಗಲೇ ಮೃತ ವೈದ್ಯೆಯ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳಿದ್ದ ಈಶ್ವರ ಖಂಡ್ರೆ ಅವರು ಯಾವುದಾದರೂ ಒಂದು ನವಜಾತ ವನ್ಯಜೀವಿಗೆ ʼಸಮೀಕ್ಷಾʼ ಎಂದು ಹೆಸರಿಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದರಂತೆ ಇಂದು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಆದೇಶ ನೀಡಿದ್ದಾರೆ.

