
ದ್ರಾವಿಡ ರಾಜಕೀಯದ ಒಳಕೋಣೆಯಲ್ಲಿ ಜ್ಯೋತಿಷಿ: ರಾಧನ್ ಪಂಡಿತ್ ನೇಮಕ ಬಯಲು ಮಾಡಿದ ʼಗ್ರಹಗತಿʼ
ನೂತನ ಮುಖ್ಯಮಂತ್ರಿ ಒಬ್ಬ ಜ್ಯೋತಿಷಿಯನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ ಮಾಡಿಕೊಳ್ಳುವ ಮೂಲಕ ವೈಚಾರಿಕತೆಯ ಪೋಸು ಮತ್ತು ಮೂಢನಂಬಿಕೆಯ ʼಗುಮ್ಮನಗುಸುಕʼ ದ್ರಾವಿಡ ಪರದೆಯನ್ನು ಸರಿಸಿದಂತಾಗಿದೆ.
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ದಿನಗಳ ಬಳಿಕ 2026ರ ಮೇ 12ರಂದು ಸಚಿವಾಲಯದಿಂದ ಸರ್ಕಾರಿ ಆದೇಶವೊಂದು ಸದ್ದಿಲ್ಲದೆ ಹೊರಬಿತ್ತು. ಕಚೇರಿ ನಡಾವಳಿ 675ರ ಪ್ರಕಾರ ಹೊರಡಿಸಲಾದ ಈ ಆದೇಶಕ್ಕೆ ಪ್ರಧಾನ ಕಾರ್ಯದರ್ಶಿ ರೀಟಾ ಹರೀಶ್ ಟಕ್ಕರ್ ಅವರು ಸಹಿಹಾಕಿದ್ದರು. ಅದರ ಪ್ರಕಾರ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರ ʼವಿಶೇಷ ಕರ್ತವ್ಯಾಧಿಕಾರಿʼ (ರಾಜಕೀಯ)ಯಾಗಿ ತಿರು ರಿಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರನ್ನು ನೇಮಕ ಮಾಡಲಾಗಿದೆ. ಸರ್ಕಾರಿ ಹುದ್ದೆಯನ್ನು ಪಡೆದ ಈ ವ್ಯಕ್ತಿ ಯಾವುದೇ ಅಧಿಕಾರಿಯಾಗಲಿ ಅಥವಾ ನೀತಿ ನಿರೂಪಕನಾಗಲಿ ಅಲ್ಲ. ಬದಲಾಗಿ ಅವರೊಬ್ಬ ಜ್ಯೋತಿಷಿ.
ಹಾಗಾದರೆ ಯಾರು ಈ ರಿಕಿ ರಾಧನ್ ಪಂಡಿತ್ ವೆಟ್ರಿವೆಲ್? ವೇದ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಮತ್ತು ಧ್ಯಾನ ಆಧಾರಿತ ಮಾರ್ಗದರ್ಶನದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿರುವ ವೆಟ್ರಿವೆಲ್ ಭಾರತದ ಅತ್ಯಂತ ಬೇಡಿಕೆಯ ರಾಜಕೀಯ ಜ್ಯೋತಿಷಿಗಳಲ್ಲಿ ಒಬ್ಬರು. ಬಿಜೆಪಿ, ಕಾಂಗ್ರೆಸ್, ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಲ್ಲಿ ಅವರ ಗ್ರಾಹಕರು ವ್ಯಾಪಿಸಿಕೊಂಡಿದ್ದಾರೆ. ಮೊದಲಿಗೆಲ್ಲ ಪಂಡಿತ್ ವೆಟ್ರಿವೆಲ್ ಎಂದೇ ಕರೆಸಿಕೊಳ್ಳುತ್ತಿದ್ದ ಈತ 2008ರಲ್ಲಿ ದೆಹಲಿಗೆ ತೆರಳಿ ರಾಧನ್ ಪಂಡಿತ್ ಎಂದು ಮರುನಾಮಕರಣ ಮಾಡಿಕೊಂಡರು. ಜ್ಯೋತಿಷ್ಯವನ್ನು ಬಹಿರಂಗವಾಗಿ ಟೀಕಿಸುವ ರಾಜಕಾರಣಿಗಳಿಗೆ ತೆರೆಯ ಮರೆಯಲ್ಲಿ ಸಲಹೆ ನೀಡುವ ಮೂಲಕ ಇವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು.
ರಾಧನ್ ಪಂಡಿತ್ ಅವರ ಜೊತೆಗಿನ ವಿಜಯ್ ಅವರ ಸಂಬಂಧ 2026ರ ಚುನಾವಣೆಗಿಂತ ಮುಂಚಿನದು. 2024ರಲ್ಲಿ ಪೋಸ್ಟ್ ಆದ ವಿಡಿಯೋವೊಂದರಲ್ಲಿ ವಿಜಯ್ ಅವರ ಜಾತಕದಲ್ಲಿ ರಾಜಕೀಯ ಯಶಸ್ಸಿಗೆ ಬೇಕಾದ ʼಸುನಾಮಿʼಯಂತಹ ಅಸಾಧಾರಣ ಶಕ್ತಿ ಕಾಣುತ್ತಿದೆ ಎಂದು ಅವರು ಘೋಷಿಸಿದ್ದರು. ವಿಜಯ್ ಭರ್ಜರಿ ಯಶಸ್ಸನ್ನು ಕಾಣುತ್ತಾರೆ ಎಂದು ಭವಿಷ್ಯ ನುಡಿದಿದ್ದು ಮಾತ್ರವಲ್ಲದೆ ʼತಮಿಳಗ ವೆಟ್ರಿ ಕಳಗಂʼ (ಟಿವಿಕೆ) ಎಂಬ ಹೆಸರು ವಿಜಯ್ ಅವರ ಜನ್ಮ ವಿವರಗಳಿಗೆ ಸಂಖ್ಯಾಶಾಸ್ತ್ರದ ಹೊಂದಾಣಿಕೆಯಾಗುತ್ತದೆ ಎಂದೂ ಹೇಳಿದ್ದರು.
ಇವರ ಪ್ರಭಾವ ಎಷ್ಟರಮಟ್ಟಿಗೆ ಇತ್ತೆಂದರೆ ಅಧಿಕಾರ ಸ್ವೀಕಾರದ ಸಮಯವನ್ನೂ ಅವರು ಬದಲಿಸಿದ್ದರು. ಮೇ 10ರ ಮಧ್ಯಾಹ್ನ 3.45ಕ್ಕೆ ಪ್ರಮಾಣ ವಚನ ಸ್ವೀಕರಿಸುವುದೆಂದು ಮೊದಲು ವಿಜಯ್ ನಿರ್ಧಾರ ಮಾಡಿದ್ದರು. ಆದರೆ ರಾಧನ್ ಪಂಡಿತ್ ಅದನ್ನು ಬದಲಿಸುವಂತೆ ಸಲಹೆ ಮಾಡಿದ್ದರು. ಅದರ ಪ್ರಕಾರ ಅಂದು ಬೆಳಿಗ್ಗೆ 10ಕ್ಕೆ ಪ್ರಮಾಣ ವಚನಕ್ಕೆ ಶುಭ ಮುಹೂರ್ತವನ್ನು ನಿಗದಿ ಮಾಡಲಾಯಿತು ಎಂದು ವರದಿಗಳು ಹೇಳುತ್ತವೆ. ಹೀಗಿರುವಾಗ ರಾಧನ್ ಪಂಡಿತ್ ಅವರನ್ನು ಓಎಸ್ಡಿಯಾಗಿ ನೇಮಕ ಮಾಡಿರುವುದರ ಹಿಂದೆ ಕೇವಲ ಹಿತೈಷಿಯಲ್ಲ, ಅದಕ್ಕಿಂತ ಹೆಚ್ಚಿನ ಸಂಬಂಧವಿದೆ ಎಂಬುದು ಸಾಬೀತಾಗುತ್ತದೆ.
ತಮಿಳು ನಾಡಿನ ರಾಜಕೀಯ ಸಂಘರ್ಷದಲ್ಲಿ ಇದು ಉಂಟುಮಾಡುವ ಅಸಮಾಧಾನವನ್ನು ಅರ್ಥಮಾಡಿಕೊಳ್ಳಲು ದ್ರಾವಿಡ ಚಳವಳಿಯ ಮೂಲ ಆಶಯಗಳು ಏನು ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ.
ಆಚರಣೆಗಿಂತ ತರ್ಕಕ್ಕೆ, ಶಾಸ್ತ್ರಕ್ಕಿಂತ ವಿಜ್ಞಾನಕ್ಕೆ ಆದ್ಯತೆ ನೀಡಬೇಕು ಎಂಬ ಅಚಲ ಅಡಿಪಾಯದ ಮೇಲೆ ಪೆರಿಯಾರ್ ಅವರು ʼಸ್ವಾಭಿಮಾನ ಚಳವಳಿʼಯನ್ನು ಕಟ್ಟಿದರು. ಜ್ಯೋತಿಷ್ಯ ಎಂಬುದು ಕೇವಲ ಸಾಂಸ್ಕೃತಿಕ ಹವ್ಯಾಸವಲ್ಲ, ಅದು ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಹೊಂದಿರುವ ಒಂದು ಸಾಧನ ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಮೂಢನಂಬಿಕೆಗಳನ್ನು ಖಂಡಿಸಿ ಅವರು ನಿರ್ಣಯಗಳನ್ನು ಅಂಗೀಕರಿಸಿದ್ದರು. ಈ ಸಿದ್ಧಾಂತವು ಸ್ಥಿರವಾಗಿ ಮತ್ತು ಹೆಮ್ಮೆಯಿಂದ ಮುಂದುವರಿದಿದ್ದರೂ ಇವೆಲ್ಲವೂ ಕೇವಲ ಸಾರ್ವಜನಿಕ ಪ್ರದರ್ಶನಕ್ಕಾಗಿ ಮಾತ್ರವೇ ಎಂಬುದು ದ್ರಾವಿಡ ಪಕ್ಷಗಳ ಹಲವು ನಡವಳಿಕೆಗಳು ಕಾಲಕಾಲಕ್ಕೆ ಸಾಬೀತಾಗುತ್ತ ಬಂದಿವೆ.
ಡಿಎಂಕೆ ಇತಿಹಾಸಕ್ಕೂ ಜ್ಯೋತಿಷ್ಯದ ನಂಟು!
ಡಿಎಂಕೆ ಇತಿಹಾಸವನ್ನು ಗಮನಿಸಿದರೆ, ಅವರು ಜ್ಯೋತಿಷ್ಯವನ್ನು ಕೈಬಿಟ್ಟ ಪಕ್ಷವಾಗಿ ಕಾಣಿಸುವುದಿಲ್ಲ, ಬದಲಾಗಿ ಅದನ್ನು ತೆರೆಯ ಮರೆಯಲ್ಲಿ ನಿರ್ವಹಿಸುವುದನ್ನು ಕಲಿತ ಪಕ್ಷವಾಗಿ ಕಾಣುತ್ತದೆ. ಅವರ ಸಮಾರಂಭಗಳು ಯಾವಾಗಲೂ ಸರಿಯಾದ ಸಮಯಕ್ಕೆ ನಡೆಯುತ್ತಿದ್ದವು—ಅಂದರೆ, ಅತ್ಯಂತ 'ಶುಭ ಮುಹೂರ್ತ'ಗಳಲ್ಲಿ ನಡೆಯುತ್ತಿದ್ದವು. ಭೂಮಿ ಪೂಜೆ ಇರಲಿ, ಪ್ರಚಾರದ ಆರಂಭವಿರಲಿ ಅಥವಾ ಕಚೇರಿ ಉದ್ಘಾಟನೆಯೇ ಇರಲಿ, ಯಾವೊಬ್ಬ ಸಾಧಾರಣ ಜ್ಯೋತಿಷಿಯೂ 'ಅಶುಭ' ಎಂದು ಹೇಳುವ ಸಮಯದಲ್ಲಿ ಅವು ನಡೆಯುತ್ತಿರಲಿಲ್ಲ. ದ್ರಾವಿಡ ನಾಯಕರಿಗೆ ಸಮಯ ಮತ್ತು ನಿರ್ಧಾರಗಳ ಬಗ್ಗೆ ಗುಪ್ತವಾಗಿ ಸಲಹೆ ನೀಡುವ ಜ್ಯೋತಿಷಿಗಳ ಒಂದು ಸಮಾಂತರ ತಂಡವೇ ಸಕ್ರಿಯವಾಗಿದೆ ಎಂಬುದು ರಾಜಕೀಯ ವಲಯದಲ್ಲಿ ವರ್ಷಗಳಿಂದ ಕೇಳಿಬರುತ್ತಿರುವ ಮಾತು. ಆದರೆ, ಅವರಿಗೆ ಎಂದೂ ಸರ್ಕಾರಿ ಹುದ್ದೆಗಳನ್ನು ನೀಡಿರಲಿಲ್ಲ ಎಂಬುದು ಬೇರೆ ಮಾತು.
ಕರುಣಾನಿಧಿಯವರ ಹಳದಿ 'ಮೇಲ್ತುಂಡು'
ಈ ಸಂಪ್ರದಾಯದ ಯಾವುದೇ ವಿಶ್ಲೇಷಣೆಯು ಕರುಣಾನಿಧಿಯವರ 'ಮೇಲ್ತುಂಡು' (ಹೆಗಲ ಮೇಲಿನ ಶಾಲು) ಪ್ರಸ್ತಾಪವಿಲ್ಲದೆ ಪೂರ್ಣವಾಗುವುದಿಲ್ಲ. ಆರು ದಶಕಗಳ ಸಾರ್ವಜನಿಕ ಜೀವನದಲ್ಲಿ, ಪೆರಿಯಾರ್ ಅವರ ವೈಚಾರಿಕತೆಯನ್ನು ಚುನಾವಣಾ ಜಯವಾಗಿ ಪರಿವರ್ತಿಸಿದ ಡಿಎಂಕೆ ಕುಲಪತಿಗಳು, ತಮ್ಮ ಹಳದಿ ಬಣ್ಣದ ಮೇಲ್ತುಂಡು ಇಲ್ಲದೆ ಎಂದೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅದು ಅವರ ಗುರುತಿನ ಸಂಕೇತವಾಗಿತ್ತು. ವ್ಯಂಗ್ಯಚಿತ್ರಕಾರರು ಕೇವಲ ಹಳದಿ ಶಾಲು ಮತ್ತು ಕಪ್ಪು ಕನ್ನಡಕವನ್ನು ಬಿಡಿಸಿದರೆ ಸಾಕಿತ್ತು, ಅದು ಕರುಣಾನಿಧಿ ಎಂದು ಜನರಿಗೆ ತಕ್ಷಣವೇ ತಿಳಿದುಬಿಡುತ್ತಿತ್ತು.
ʼಇದು ಸಾಂಸ್ಕೃತಿಕವಾದದ್ದು ಹಾಗೂ ಹಳದಿ ಬಣ್ಣವು ಜ್ಞಾನ ಮತ್ತು ಸಮೃದ್ಧಿಯ ಸಂಕೇತʼ ಎಂದು ಇದಕ್ಕೆ ಸಮರ್ಥನೆ ನೀಡಲಾಗುತ್ತಿತ್ತು. ಆದರೆ ತಮಿಳು ರಾಜಕೀಯ ವೀಕ್ಷಕರಲ್ಲಿ ಅಷ್ಟೇ ದೀರ್ಘಕಾಲದಿಂದ ಮತ್ತೊಂದು ವಿವರಣೆ ಚಾಲ್ತಿಯಲ್ಲಿದೆ: ಅದೇನೆಂದರೆ, ಹಳದಿ ಬಣ್ಣವು ಕರುಣಾನಿಧಿಯವರಿಗೆ ಸಂಖ್ಯಾಶಾಸ್ತ್ರದ ಪ್ರಕಾರ ಸೂಚಿಸಲ್ಪಟ್ಟ ಬಣ್ಣವಾಗಿತ್ತು.
ಸಂಖ್ಯಾಶಾಸ್ತ್ರದ ಪ್ರಕಾರ ಅವರ ಹೆಸರು ಮತ್ತು ಜನ್ಮ ದಿನಾಂಕವು ಬುಧ ಗ್ರಹಕ್ಕೆ ಸಂಬಂಧಿಸಿದ ಸಂಖ್ಯೆಗಳನ್ನು ಪ್ರತಿನಿಧಿಸುತ್ತಿತ್ತು, ಆ ಮೂಲಕ ಅದು ಹಳದಿ ಬಣ್ಣಕ್ಕೆ ನಂಟನ್ನು ಹೊಂದಿತ್ತು. ಅಂದರೆ, ಆ ಮೇಲ್ತುಂಡು ಕೇವಲ ಒಂದು ಶೈಲಿಯ ಸಂಕೇತವಾಗಿರಲಿಲ್ಲ; ಬದಲಾಗಿ ಯಾವ ಶಾಸ್ತ್ರವನ್ನು ಅವರು ಸಾರ್ವಜನಿಕವಾಗಿ ತಿರಸ್ಕರಿಸಿದ್ದರೋ, ಅದೇ ಶಾಸ್ತ್ರವನ್ನು ಜೀವನಪರ್ಯಂತ ಪ್ರತಿದಿನ ಪಾಲಿಸುತ್ತಿದ್ದ ಅನುಸರಣೆಯಾಗಿತ್ತು. ಆದರೆ ಕರುಣಾನಿಧಿಯವರು ಇದನ್ನು ಎಂದಿಗೂ ಖಚಿತಪಡಿಸಿರಲಿಲ್ಲ.
ದೇಗುಲ ಪ್ರವೇಶದ ಕಥೆ
ಇದಕ್ಕೆ ಪೂರಕವಾಗಿ, ಕರುಣಾನಿಧಿಯವರು ತಂಜಾವೂರಿನ ಬೃಹದೀಶ್ವರ ದೇವಾಲಯಕ್ಕೆ ಮುಖ್ಯ ದ್ವಾರದ ಬದಲು ಪಾರ್ಶ್ವದ ದ್ವಾರದಿಂದ ಪ್ರವೇಶಿಸಿದ ಕಥೆಯೂ ಇದೆ. ಮುಖ್ಯ ದ್ವಾರದ ಮೂಲಕ ಪ್ರವೇಶಿಸುವುದು ಆಡಳಿತಗಾರರಿಗೆ ದುರಾದೃಷ್ಟ ತರುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣವಾಗಿತ್ತು. ಈ ಮೂಢನಂಬಿಕೆಯ ಹಿಂದೆ 1984ರ ಒಂದು ಘಟನೆ ತಳಕುಹಾಕಿಕೊಂಡಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಈ ದೇವಾಲಯಕ್ಕೆ ಭೇಟಿ ನೀಡಿದ್ದರು ಮತ್ತು ಭೇಟಿ ನೀಡಿದ ಕೆಲವೇ ವಾರಗಳಲ್ಲಿ ಅವರು ತಮ್ಮದೇ ಅಂಗರಕ್ಷಕರಿಂದ ಹತ್ಯೆಗೆ ಒಳಗಾಗಿದ್ದರು.
ಎಂಜಿಅರ್ ʼಜ್ಯೋತಿಷ್ಯದ ಹಾದಿʼ ಹೇಗಿದೆ?
ಎಂ. ಜಿ. ರಾಮಚಂದ್ರನ್ ಅವರಿಗೆ ಸಂಬಂಧಿಸಿದ ಇನ್ನೊಂದು ಕಥೆಯನ್ನೂ ಇಲ್ಲಿ ಸ್ಮರಿಸಬೇಕು. ವಿಜಯ್ ಅವರು ಎಂಜಿಆರ್ ಅವರ ಹಾದಿಯನ್ನೇ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತದೆ. ಇಂದಿರಾ ಗಾಂಧಿಯವರು ಹತ್ಯೆಯಾದ ಅದೇ ವರ್ಷ ಎಂಜಿಆರ್ ಅವರು ದೇವಾಲಯಕ್ಕೆ ಭೇಟಿ ನೀಡಿದ ನಂತರ ಗಂಭೀರ ಮೂತ್ರಪಿಂಡದ ಕಾಯಿಲೆಗೆ ತುತ್ತಾದರು. ಮುಂದೆ ಅವರು ಅನಾರೋಗ್ಯದಿಂದ ಚೇತರಿಸಿಕೊಂಡರಾದರೂ, ಮುಖ್ಯಮಂತ್ರಿಯಾಗಿದ್ದಾಗಲೇ ಭೇಟಿ ನೀಡಿದ ಕೇವಲ ಮೂರು ವರ್ಷಗಳ ನಂತರ ಅಂದರೆ 1987ರಲ್ಲಿ ನಿಧನರಾದರು.
ಸೆಪ್ಟೆಂಬರ್ 28, 2010ರಂದು 'ಹಿಂದೂಸ್ತಾನ್ ಟೈಮ್ಸ್'ನಲ್ಲಿ ಪ್ರಕಟವಾದ ವರದಿಯೊಂದು, ಕರುಣಾನಿಧಿಯವರು ಮುಖ್ಯ ದ್ವಾರವನ್ನು ತಪ್ಪಿಸಿದ ಬಗ್ಗೆ ರಾಜಕೀಯ ವಿಶ್ಲೇಷಕ ಚೋ ರಾಮಸ್ವಾಮಿ ಅವರ ಅಭಿಪ್ರಾಯವನ್ನು ಉಲ್ಲೇಖಿಸಿದೆ. ಈ ನಡೆಯ ಬಗ್ಗೆ ಅಚ್ಚರಿಯನ್ನೇನು ವ್ಯಕ್ತಪಡಿಸದ ಚೋ ಅವರು ಹೀಗೆ ಹೇಳಿದ್ದರು:
"ಅವರು (ಕರುಣಾನಿಧಿ) ನಾಸ್ತಿಕರಂತೆ ನಟಿಸುತ್ತಿದ್ದಾರೆ ಅಷ್ಟೇ, ಆದರೆ ಅವರು ಶುಭ ಮುಹೂರ್ತಗಳ ಬಗ್ಗೆ ಜ್ಯೋತಿಷಿಗಳ ಸಲಹೆಯನ್ನು ಪಾಲಿಸುತ್ತಾರೆ. ಒಂದು ವೇಳೆ ಅವರು ಎಂದಿನ ಹಳದಿ ಬಣ್ಣದ ಬದಲು ಬಿಳಿ ಬಣ್ಣದ ಅಂಗವಸ್ತ್ರವನ್ನು ಧರಿಸಿದ್ದರೆ, ಅದು ಕೂಡ ಕೆಟ್ಟ ದೃಷ್ಟಿಯನ್ನು ತಡೆಯಲು ಯಾರೋ ನೀಡಿದ ಸಲಹೆಯ ಮೇರೆಗೆ ಇರುತ್ತದೆ."
ಈ ಇಡೀ ಘಟನಾವಳಿಗಳು ತಮಿಳುನಾಡಿನ ರಾಜಕೀಯದಲ್ಲಿ ವೈಚಾರಿಕತೆ ಮತ್ತು ವೈಯಕ್ತಿಕ ನಂಬಿಕೆಗಳ ನಡುವಿನ ಸಂಘರ್ಷವನ್ನು ಎತ್ತಿ ತೋರಿಸುತ್ತವೆ. ಸಿ. ಜೆ. ವಿಜಯ್ ಅವರು ಒಬ್ಬ ಜ್ಯೋತಿಷಿಯನ್ನು ಅಧಿಕೃತವಾಗಿ ಸರ್ಕಾರಿ ಹುದ್ದೆಗೆ ನೇಮಿಸಿರುವುದು ಈ "ಮೌನ ಸಂಪ್ರದಾಯ"ವನ್ನು ಈಗ ಬಹಿರಂಗ ವೇದಿಕೆಗೆ ತಂದಂತಾಗಿದೆ.
ಜಯಲಲಿತಾ ಮತ್ತು ಅವರ ಹೆಸರಿನ ಕೊನೆಯ 'a'
ಜಯಲಲಿತಾ ಅವರಿಗೆ ಗೂಢಶಾಸ್ತ್ರದ ಮೇಲಿದ್ದ ನಂಬಿಕೆ ಎಲ್ಲರಿಗಿಂತಲೂ ವಿಸ್ತಾರವಾಗಿತ್ತು ಮತ್ತು ಇದರ ನಂಟು ನೇರವಾಗಿ ರಾಧನ್ ಪಂಡಿತ್ ಅವರಿಗೇ ಹೋಗಿ ಮುಟ್ಟುತ್ತದೆ. ಅವರು 1989-1990ರ ಸುಮಾರಿಗೆ ಜಯಲಲಿತಾ ಅವರ ಸಲಹೆಗಾರರಾಗಿದ್ದರು ಮತ್ತು 1991ರ ಚುನಾವಣಾ ಯಶಸ್ಸನ್ನು ನಿಖರವಾಗಿ ನುಡಿದಿದ್ದರು ಎಂದು ಹೇಳಲಾಗುತ್ತದೆ. 1996ರ ಚುನಾವಣೆಗಳ ಬಗ್ಗೆ ಎಚ್ಚರಿಕೆ ನೀಡುವುದು, ನ್ಯಾಯಾಲಯದ ಪ್ರಕರಣಗಳು ಮತ್ತು ಪಕ್ಷದ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವಾರು ಸವಾಲಿನ ಸಂದರ್ಭಗಳಲ್ಲಿ ಅವರು ಜಯಲಲಿತಾ ಅವರಿಗೆ ಮಾರ್ಗದರ್ಶನ ನೀಡಿದ್ದರು ಎನ್ನಲಾಗಿದೆ.
ಅವರ ಪ್ರಭಾವವು ಮುಂದೆ ಬ್ರ್ಯಾಂಡಿಂಗ್ವರೆಗೂ ವಿಸ್ತರಿಸಿತ್ತು: 'ಜಯಾ ಟಿವಿ' ಹೆಸರಿಡುವಂತಹ ವ್ಯವಹಾರಿಕ ನಿರ್ಧಾರಗಳಲ್ಲಿ ಅವರು ಸಲಹೆ ನೀಡಿದ್ದರು ಮತ್ತು ಜಯಲಲಿತಾ ಅವರ ಹೆಸರಿನ ಕೊನೆಯಲ್ಲಿ ಮತ್ತೊಂದು 'a' ಅಕ್ಷರವನ್ನು ಸೇರಿಸುವಂತೆ ಸಂಖ್ಯಾಶಾಸ್ತ್ರದ ತಿದ್ದುಪಡಿಯನ್ನು ಶಿಫಾರಸು ಮಾಡಿದ್ದರು. ಇಡೀ ತಮಿಳುನಾಡಿಗೆ ಪರಿಚಿತವಿದ್ದ ಹೆಸರಿಗೆ ಆ ಒಂದು ಸದ್ದಿಲ್ಲದ, ಅದೃಶ್ಯ 'a' ಅಕ್ಷರವನ್ನು ಸೇರಿಸಿದ್ದು ಬಹುಶಃ ಎಲ್ಲಕ್ಕಿಂತ ದೊಡ್ಡ ಕುತೂಹಲಕಾರಿ ವಿಷಯ. ಭಾರತದ ಅತ್ಯಂತ ಶಕ್ತಿಶಾಲಿ ಮತ್ತು ಗಂಭೀರ ಸ್ವಭಾವದ ರಾಜಕಾರಣಿಯೊಬ್ಬರು ಜ್ಯೋತಿಷಿಯ ಸೂಚನೆಯ ಮೇರೆಗೆ ತಮ್ಮ ಹೆಸರಿನ ಗುರುತಿಗೆ ಒಂದು ಅಕ್ಷರವನ್ನು ಸೇರಿಸಿಕೊಂಡಿದ್ದರು.
ವಿಜಯ್ ಮಾಡಿದ್ದೇನು?
ವಿಜಯ್ ಅವರು ರಾಧನ್ ಪಂಡಿತ್ ಅವರನ್ನು ನೇಮಕ ಮಾಡಿರುವುದು ದ್ರಾವಿಡ ರಾಜಕೀಯ ಸಂಸ್ಕೃತಿಯಿಂದ ಸಂಪೂರ್ಣವಾಗಿ ಹೊರತಾದದ್ದೇನಲ್ಲ. ಹಿಂದಿನ ನಾಯಕರು ಈ ವಿಷಯದಲ್ಲಿ 'ಗೌಪ್ಯತೆ' ಕಾಪಾಡಿಕೊಳ್ಳುತ್ತಿದ್ದರು. ಆದರೆ ವಿಜಯ್ ಆ ಗೌಪ್ಯತೆಯ ಪರದೆಯನ್ನು ಸರಿಸಿದ್ದಾರೆ ಅಷ್ಟೇ.
ಟಿವಿಕೆ ಪಕ್ಷವು ಡಿಎಂಕೆ ಹೊರಹೊಮ್ಮಿದಂತೆ ಪೆರಿಯಾರ್ ಸಂಪ್ರದಾಯದಿಂದ ಹುಟ್ಟಿಕೊಂಡಿದ್ದಲ್ಲ. ವಿಜಯ್ ಅವರು ಸಿನಿಮಾ ತಾರೆಯಾಗಿ ಆ ವರ್ಚಸ್ಸಿನಿಂದ ರಾಜಕಾರಣಿಯಾದವರು. ಅವರು ತಮ್ಮ ಪೂರ್ವಾಧಿಕಾರಿಗಳಂತೆ ಸಿದ್ಧಾಂತಗಳ ಹೊರೆ ಹೊತ್ತವರಲ್ಲ, ಹೀಗಾಗಿ ಅವರು ಕನಿಷ್ಠಪಕ್ಷ ನಟಿಸುವ ಅಗತ್ಯವೂ ಇಲ್ಲ. ಆ ಅರ್ಥದಲ್ಲಿ, ಇದು ಕಪಟತನವಲ್ಲ; ಇದು ಕೇವಲ ಮುಚ್ಚುಮರೆಯಿಲ್ಲದ ನಡೆ.
ಕೆಲವು ಹಿಂದಿನ ಉದಾಹರಣೆಗಳನ್ನು ಗಮನಿಸಿದರೆ ಒಂದು ವಿಷಯವಂತೂ ಸ್ಪಷ್ಟ: ತಮಿಳುನಾಡು ರಾಜಕೀಯದಲ್ಲಿ ಜ್ಯೋತಿಷಿಯು ಯಾವಾಗಲೂ ಒಳಗಿನ ಕೋಣೆಯಲ್ಲಿ ಇರುತ್ತಿದ್ದರು. ಆದರೆ ಅವರಿಗೆ ಎಂದೂ ಬಾಗಿಲಿನ ಮೇಲೆ ಹೆಸರಿನ ಫಲಕ ಇರಲಿಲ್ಲ. ಈಗ, ಆ ಹೆಸರಿನ ಫಲಕವೂ ಸಿಕ್ಕಿದೆ.

