
ಅನ್ವೇಯ್ ದ್ರಾವಿಡ್ ಹಾಗೂ ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್
ಶ್ರೀಲಂಕಾ ವಿರುದ್ಧ ಭಾರತ U-19 ತಂಡಕ್ಕೆ ರಾಹುಲ್ ದ್ರಾವಿಡ್ ಕಿರಿಯ ಪುತ್ರ ಅನ್ವೇಯ್ ಆಯ್ಕೆ!
17 ವರ್ಷದ ಪ್ರತಿಭಾವಂತ ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಅನ್ವೇಯ್ ದ್ರಾವಿಡ್, ರಜತ್ ಬಾಘೇಲ್ ಜೊತೆಗೆ ಏಕದಿನ ಸರಣಿಯ ಇಬ್ಬರು ವಿಕೆಟ್ ಕೀಪರ್ಗಳಲ್ಲಿ ಒಬ್ಬರಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವೇಯ್ ದ್ರಾವಿಡ್ ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತದ ಅಂಡರ್-19 ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಜು. 4 ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸಕ್ಕಾಗಿ ಬಿಸಿಸಿಐನ ಜೂನಿಯರ್ ಕ್ರಿಕೆಟ್ ಸಮಿತಿಯು ಭಾರತ ಪುರುಷರ ಅಂಡರ್-19 ತಂಡಗಳನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ಯುವ ಭಾರತ ತಂಡವು 3 ಏಕದಿನ ಪಂದ್ಯಗಳು ಹಾಗೂ 2 ಬಹುದಿನಗಳ ಪಂದ್ಯಗಳನ್ನು ಆಡಲಿದೆ. ಯಶ್ವರ್ಧನ್ ಸಿಂಗ್ ಚೌಹಾಣ್ ಅವರು ಏಕದಿನ ಮತ್ತು ಬಹುದಿನಗಳ ಎರಡೂ ಸರಣಿಗಳಿಗೆ ನಾಯಕರಾಗಿ ಆಯ್ಕೆಯಾಗಿದ್ದರೆ, ಲಕ್ಷ್ಯ ರಾಯ್ಚಂದಾನಿ ಉಪನಾಯಕರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ವಿಕೆಟ್ ಕೀಪರ್ ಆಗಿ ಅನ್ವೇಯ್ ಆಯ್ಕೆ
17 ವರ್ಷದ ಪ್ರತಿಭಾವಂತ ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಅನ್ವೇಯ್ ದ್ರಾವಿಡ್, ರಜತ್ ಬಾಘೇಲ್ ಜೊತೆಗೆ ಏಕದಿನ ಸರಣಿಯ ಇಬ್ಬರು ವಿಕೆಟ್ ಕೀಪರ್ಗಳಲ್ಲಿ ಒಬ್ಬರಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಬಹುದಿನಗಳ ಪಂದ್ಯಗಳಿಗೆ ಮಾನವ್ ಕೃಷ್ಣ ಮತ್ತು ಆರ್ಯನ್ ಸಂದೇಶ್ ಸಕ್ಪಾಲ್ ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗಿದೆ. ಕಳೆದ 2024 ರಲ್ಲಿ ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ U-19 ತಂಡಕ್ಕೆ ಆಯ್ಕೆಯಾಗಿದ್ದರಾದರೂ, ಗಾಯದ ಸಮಸ್ಯೆಯಿಂದಾಗಿ ಆಡುವ ಅವಕಾಶ ಕಳೆದುಕೊಂಡಿದ್ದರು. ಇದೀಗ ಕಿರಿಯ ಪುತ್ರ ಅನ್ವೇಯ್ ನೀಲಿ ಜರ್ಸಿ ತೊಡಲು ಸಜ್ಜಾಗಿದ್ದಾರೆ.
ದೇಶಿ ಕ್ರಿಕೆಟ್ನಲ್ಲಿ ಅಬ್ಬರಿಸಿದ್ದ ಜೂನಿಯರ್ ದ್ರಾವಿಡ್
ಇತ್ತೀಚೆಗೆ ನಡೆದ ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ U-19 ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅನ್ವೇಯ್ ದ್ರಾವಿಡ್, ತಂಡವನ್ನು ಕ್ವಾರ್ಟರ್ ಫೈನಲ್ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಡಿದ 6 ಪಂದ್ಯಗಳಲ್ಲಿ ಅಜೇಯ 82 ರನ್ ಸೇರಿದಂತೆ ಒಟ್ಟು 220 ರನ್ ಗಳಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ ಬೆಂಗಳೂರಿನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭಾರತ U-19 'B' ತಂಡವನ್ನು ಪ್ರತಿನಿಧಿಸಿದ್ದ ಅವರು, ಅಂಡರ್-19 ಏಕದಿನ ಚಾಲೆಂಜರ್ ಟ್ರೋಫಿಯಲ್ಲೂ 'ಸಿ' ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಏಕದಿನ U-19 ತಂಡ
ಯಶವರ್ಧನ್ ಸಿಂಗ್ ಚೌಹಾಣ್ (ನಾಯಕ), ಲಕ್ಷ್ಯ ರಾಯ್ಚಂದಾನಿ (ಉಪನಾಯಕ), ಸಾಗರ್ ವಿರ್ಕ್, ವಿನೀತ್ ವಿಕೆ, ಅರ್ಜುನ್ ರಜಪೂತ್, ಕುಶಾಗ್ರ ಓಜಾ, ರಜತ್ ಬಘೇಲ್ (ವಿಕೆಟ್ ಕೀಪರ್), ಅನ್ವೇಯ್ ದ್ರಾವಿಡ್ (ವಿಕೆಟ್ ಕೀಪರ್), ಅನ್ಮೋಲ್ಜೀತ್ ಸಿಂಗ್, ವುಟ್ಕುರಿ ಯಶ್ವೀರ್ ಗೌಡ್, ರೋಹಿತ್ ಅನಿಲ್ ಯಾದವ್, ಶವಿನ್ ವಿ, ಕಾವ್ಯ ಪರೇಶ್ ಪಟೇಲ್, ಮೋಹಿತ್ ಉಲ್ವಾ, ಇಶಾನ್
ಅಂಡರ್-19 ಬಹುದಿನಗಳ ತಂಡ
ಯಶ್ವರ್ಧನ್ ಸಿಂಗ್ ಚೌಹಾಣ್ (ನಾಯಕ), ಲಕ್ಷ್ಯ ರಾಯಚಂದಾನಿ (ಉಪನಾಯಕ), ಸಾಗರ್ ವಿರ್ಕ್, ಪಟೇಲ್ ಕುಶ್, ಮನಲ್ ಚೌಹಾಣ್, ಕುಶಾಗ್ರಾ ಓಜಾ, ಮಾನವ್ ಕೃಷ್ಣ (ವಿಕೆಟ್ ಕೀಪರ್), ಆರ್ಯನ್ ಸಂದೇಶ್ ಸಕ್ಪಾಲ್ (ವಿಕೆಟ್ ಕೀಪರ್), ಹೇಮಚುದೇಶನ್ ಜೆ, ಬಿ ಕೆ ಅನಿಲೇಶ್, ಪರ್ವಾ ಕಿಶೋರ್, ಅನ್ಮೋಲ್ ಜೀತ್ ಸಿಂಗ್, ಪ್ರಣವ್ ರಾಘವೇಂದ್ರ, ಚಿಗುರುಪತಿ ವೆಂಕಟ.

