ಬಿಡದಿ ಟೌನ್‌ಶಿಪ್ ‘ಸರಕಾರಿ ರಿಯಲ್ ಎಸ್ಟೇಟ್ ದಂಧೆ’: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ  ವಾಗ್ದಾಳಿ
x
ಎಚ್​​ ಡಿ ಕುಮಾರಸ್ವಾಮಿ ಬಿಡದಿ ಟೌನ್​ಶಿಪ್​ ಭೂಸ್ವಾಧೀನ ಕುರಿತು ಮಾತನಾಡಿದರು.

ಬಿಡದಿ ಟೌನ್‌ಶಿಪ್ ‘ಸರಕಾರಿ ರಿಯಲ್ ಎಸ್ಟೇಟ್ ದಂಧೆ’: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಈ ಯೋಜನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಿಂಬಿಸುವುದು ತಪ್ಪು ಎಂದು ಎಚ್​​ಡಿಕೆ ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾ ಹೇಳಿದ್ದಾರೆ.


Click the Play button to hear this message in audio format

ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆಯು ಸಂಪೂರ್ಣವಾಗಿ ರೈತರ ವಿರೋಧಿಯಾಗಿದ್ದು, ಇದೊಂದು 'ಸರಕಾರಿ ರಿಯಲ್ ಎಸ್ಟೇಟ್ ದಂಧೆ' ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆಯ ಹಿಂದೆ ನಾಡಿನ ಯಾವುದೇ ಹಿತಾಸಕ್ತಿ ಅಡಗಿಲ್ಲ. ಬದಲಾಗಿ ಭೂ ಮಾಫಿಯಾ ಹಾಗೂ ಲೂಟಿಕೋರರಿಗೆ ಲಾಭ ಮಾಡಿಕೊಡುವ ಹುನ್ನಾರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜಧಾನಿಯ ರಸ್ತೆಗಳಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದು ವಾಹನ ಸಂಚಾರವೇ ದುಸ್ತರವಾಗಿರುವಾಗ, ಬ್ರ್ಯಾಂಡ್ ಬೆಂಗಳೂರು ನಿರ್ಮಾಣದತ್ತ ಸರ್ಕಾರ ಗಮನಹರಿಸುತ್ತಿಲ್ಲ. ಅದರ ಬದಲಿಗೆ, ಬೆಂಗಳೂರಿನ ಅಭಿವೃದ್ಧಿಗೆ ಕಿಂಚಿತ್ತೂ ಉಪಯೋಗವಾಗದ ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಕೈಜೋಡಿಸಿ ರೈತರ ಬದುಕಿಗೆ ಬೆಂಕಿ ಹಾಕಲು ಹೊರಟಿದೆ ಎಂದು ಅವರು ಕಟುವಾಗಿ ಟೀಕಿಸಿದರು.

ಅಂದಿನ ಚಿಂತನೆಗೂ, ಇಂದಿನ ವಾಸ್ತವಕ್ಕೂ ಭಾರಿ ವ್ಯತ್ಯಾಸ

ಈ ಯೋಜನೆಯು ಕುಮಾರಸ್ವಾಮಿ ಅವರೇ 2006ರಲ್ಲಿ ಕಂಡಿದ್ದ ಕನಸು ಎಂದು ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳುತ್ತಿರುವ ಕುರಿತು ತಿರುಗೇಟು ನೀಡಿದ ಅವರು, ಇಪ್ಪತ್ತು ವರ್ಷಗಳ ಹಿಂದಿನ ಪರಿಸ್ಥಿತಿಗೂ ಇಂದಿನ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.

ಯಾವುದೇ ಬೃಹತ್ ಯೋಜನೆ ಕೈಗೊಳ್ಳುವ ಮುನ್ನ ಸ್ಥಳೀಯ ರೈತರ ಒಪ್ಪಿಗೆ ಪಡೆಯುವುದು ಕಡ್ಡಾಯ. ಆದರೆ, ಈ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸಿ ರೈತರ ಧ್ವನಿಯನ್ನು ಹತ್ತಿಕ್ಕುವ ಯತ್ನ ಮಾಡುತ್ತಿದೆ. ಹಿಂದೆ ಬೆಂಗಳೂರು ಸುತ್ತಮುತ್ತ ಅರ್ಕಾವತಿ ಬಡಾವಣೆಯ ನಿರ್ಮಾಣದ ವೇಳೆ ಮೂರು ಸಾವಿರ ಎಕರೆ ಭೂಮಿಯನ್ನು ನೋಟಿಫೈ ಮಾಡಿ, ಬಳಿಕ ಸಾವಿರ ಎಕರೆ ಕೈಬಿಟ್ಟ ರೀತಿಯಲ್ಲೇ ಇದೀಗ ಮತ್ತೊಂದು ಭೂ ಹಗರಣಕ್ಕೆ ಸರ್ಕಾರ ವೇದಿಕೆ ಸಿದ್ಧಪಡಿಸುತ್ತಿದೆ ಎಂದು ಅವರು ದೂರಿದರು. ಈ ಹಿಂದೆ ಅರ್ಕಾವತಿ ಡಿನೋಟಿಫಿಕೇಷನ್ ತನಿಖೆಗಾಗಿ ರಚನೆಯಾಗಿದ್ದ ಕೆಂಪಣ್ಣ ಆಯೋಗದ ವರದಿ ಇಂದಿಗೂ ಬೆಳಕು ಕಂಡಿಲ್ಲ ಎಂಬುದನ್ನು ಅವರು ಇದೇ ವೇಳೆ ನೆನಪಿಸಿದರು.

ಪ್ರಧಾನಿಗಳ ಹೆಸರ ಬಳಕೆ ಬೇಡ

ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಈ ಯೋಜನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಪ್ರಧಾನಿಗಳು ಭೂಕಂಪದಿಂದ ಸಂಪೂರ್ಣವಾಗಿ ನಾಶವಾಗಿದ್ದ ಬರಡು ಭೂಮಿಯಲ್ಲಿ ಟೌನ್‌ಶಿಪ್‌ಗಳು ಹಾಗೂ ಕೈಗಾರಿಕೆಗಳನ್ನು ನಿರ್ಮಿಸಿದರೇ ಹೊರತು, ಬಿಡದಿಯಂತಹ ಫಲವತ್ತಾದ ಕೃಷಿ ಹಾಗೂ ಹೈನುಗಾರಿಕೆ ಭೂಮಿಯಲ್ಲಲ್ಲ ಎಂಬ ಸತ್ಯವನ್ನು ಮುಖ್ಯಮಂತ್ರಿಗಳು ಪ್ರಧಾನಿಗಳಿಗೆ ತಿಳಿಸಿದ್ದಾರೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ನಡುವಿನ ಖಾಸಗಿ ಮಾತುಕತೆಯ ವಿವರ ಯಾರಿಗೂ ತಿಳಿದಿಲ್ಲ. ಹೀಗಿರುವಾಗ, ತಮ್ಮ ಉದ್ಧಟತನದ ನಿರ್ಧಾರಗಳನ್ನು ಜಾರಿಗೊಳಿಸಲು ಹಾಗೂ ರಾಜ್ಯದ ರೈತರ ಹಿತವನ್ನು ಬಲಿಕೊಡಲು ಪ್ರಧಾನಿಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.

ಕಾನೂನು ಹೋರಾಟದ ಎಚ್ಚರಿಕೆ ಹಾಗೂ ಸತ್ಯಶೋಧನಾ ವರದಿಗೆ ಆಗ್ರಹ

ಟೌನ್‌ಶಿಪ್ ವಿಚಾರದಲ್ಲಿ ತಾವು ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಕೇಂದ್ರ ಸಚಿವರು, ರೈತರ ಪರವಾಗಿ ನಿಲ್ಲುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಹೀಗಾಗಿ ತಮ್ಮ ಪಕ್ಷ ರೈತರೊಂದಿಗೆ ನಿಂತು ಸರ್ಕಾರದ ಈ ದಂಧೆಯ ವಿರುದ್ಧ ನಿರಂತರ ಕಾನೂನು ಹೋರಾಟ ನಡೆಸಲಿದೆ ಎಂದು ಘೋಷಿಸಿದರು. ಯಾವುದೇ ಕಾರಣಕ್ಕೂ ಕೃಷಿಕರ ಜಮೀನನ್ನು ಲೂಟಿ ಹೊಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಅಲ್ಲದೆ, 2006ರಲ್ಲಿ ತಾವು ಐದು ಟೌನ್‌ಶಿಪ್‌ಗಳನ್ನು ನಿರ್ಮಿಸಲು ಹೊರಟಾಗ, ಇತ್ತೀಚಿನವರೆಗೂ ಕಾನೂನು ಸಚಿವರಾಗಿದ್ದ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ರಚಿಸಿದ್ದ ಸತ್ಯಶೋಧನಾ ಸಮಿತಿಯ ವರದಿ ಏನಾಯಿತು? ಅಂದು ಕಾಂಗ್ರೆಸ್ ನಾಯಕರು ಯಾವ ಉದ್ದೇಶಕ್ಕಾಗಿ ಯೋಜನೆಯನ್ನು ವಿರೋಧಿಸಿದ್ದರು ಎಂಬುದನ್ನು ಈಗಲಾದರೂ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

Read More
Next Story