KS Dakshina Murthy

ಬಿಜೆಪಿಗೆ ಇನ್ನೂ ಕೈಗೆಟುಕದ ಕೇರಳ, ತಮಿಳುನಾಡು: ಈ ಹಾದಿ ಇನ್ನೆಷ್ಟು ದೂರ?


ಬಿಜೆಪಿಗೆ ಇನ್ನೂ ಕೈಗೆಟುಕದ ಕೇರಳ, ತಮಿಳುನಾಡು: ಈ ಹಾದಿ ಇನ್ನೆಷ್ಟು ದೂರ?
x
ಪಶ್ಚಿಮ ಬಂಗಾಲದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜೊತೆ ಪ್ರಧಾನಿ ನರೇಂದ್ರ ಮೋದಿ.
Click the Play button to hear this message in audio format

ದಕ್ಷಿಣದ ರಾಜ್ಯಗಳ ಪೈಕಿ, ಹಿಂದುತ್ವ ಪರ ಹಾಗೂ ಕೋಮು ಸೂಕ್ಷ್ಮ ವಿವಾದಗಳಿಂದ ಉಂಟಾದ ವಿಭಜನೆಗಳ ಮೇಲೆ ಸವಾರಿ ಮಾಡುವ ಮೂಲಕ ಕರ್ನಾಟಕವು ಬಿಜೆಪಿಯ ಏಳಿಗೆಯನ್ನು ಕಂಡ ಮೊದಲ ರಾಜ್ಯವಾಯಿತು.

ದಕ್ಷಿಣದ ರಾಜ್ಯಗಳ ಪೈಕಿ, ಕೋಮು ಸೂಕ್ಷ್ಮ ವಿವಾದಗಳಿಂದ ಉಂಟಾದ ವಿಭಜನೆಗಳ ಮೇಲೆ ಸವಾರಿ ಮಾಡುವ ಮೂಲಕ ಬಿಜೆಪಿಯ ಏಳಿಗೆಯನ್ನು ಕಂಡ ಮೊದಲ ರಾಜ್ಯ ಕರ್ನಾಟಕ.

1992ರ ಬಾಬರಿ ಮಸೀದಿ ಧ್ವಂಸದ ನಂತರದ ದಿನಗಳಲ್ಲಿ, ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗದೇ ಇರುವ ದೇಶದ ಕೆಲವೇ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದಾಗಿತ್ತು. ಅಂದು ಅಲ್ಲಿ ಅಧಿಕಾರದಲ್ಲಿ ಇದ್ದುದು ಎಡರಂಗದ ಸರ್ಕಾರ. ಆ ಕಾಲದಿಂದ ಆರಂಭಿಸಿ, ಧಾರ್ಮಿಕ ಆಧಾರದ ಮೇಲೆ ಧ್ರುವೀಕರಣ ಸಂಭವಿಸಿರುವ ಇಂದಿನ ಕಾಲದವರೆಗೆ, ರಾಜ್ಯದಲ್ಲಿ ರಾಜಕಾರಣವು ಸಂಪೂರ್ಣವಾಗಿ ಬಲಪಂಥದತ್ತ ಪಲ್ಟಿ ಹೊಡೆದಿದ್ದು, 'ಹಿಂದೂ-ಪ್ರಥಮ' ಎಂಬ ನೀತಿಯ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಅಚ್ಚರಿಯ ಸಂಗತಿ ಎಂದೇನೂ ಅನ್ನಿಸುವುದಿಲ್ಲ.

ಎಡರಂಗದ 34 ವರ್ಷಗಳ ಆಳ್ವಿಕೆಯಲ್ಲಿ ಸಂಪೂರ್ಣ ಹಿಡಿತದಲ್ಲಿದ್ದ ಕೋಮು ಗಲಭೆಗಳು, 2011ರಲ್ಲಿ ಆರಂಭವಾದ ತೃಣಮೂಲ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಮತ್ತೆ ತಲೆ ಎತ್ತಿದ್ದವು. ಹಿಂದೂ ಮತ್ತು ಪ್ರಮುಖವಾಗಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಗಳನ್ನು ಧ್ರುವೀಕರಿಸಲು ತನ್ನದೇ ಶೈಲಿಯ ರಾಜಕಾರಣವನ್ನು ಮುನ್ನೆಲೆಗೆ ತರಲು ಬಿಜೆಪಿಗೆ ಇಲ್ಲಿನ ನೆಲವು ಫಲವತ್ತಾಗಿ ಕಂಡುಬಂದಿತು.

ನೆರೆಯ ಬಾಂಗ್ಲಾದೇಶದಿಂದ ನುಸುಳುಕೋರರು ಮುನ್ನುಗ್ಗುತ್ತಿದ್ದಾರೆ ಎಂಬ ನಿರೂಪಣೆಯನ್ನು ಬಿಜೆಪಿ ಎಷ್ಟು ಯಶಸ್ವಿಯಾಗಿ ಜನರ ಮನಸ್ಸಿಗೆ ತುಂಬಿತೆಂದರೆ, ಬೆಂಗಾಲಿ ಮಾತನಾಡುವ ಯಾವುದೇ ಮುಸ್ಲಿಮರನ್ನು ಸಾಬೀತಾಗುವ ತನಕವೂ 'ಹೊರಗಿನವರು' ಎಂದೇ ನೋಡುವಂತಾಯಿತು. ಈ ರಾಜ್ಯದಲ್ಲಿ ಅಂದಾಜು 2.5 ಕೋಟಿ ಮುಸ್ಲಿಮರಿದ್ದಾರೆ, ಅಂದರೆ ಇದು ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 27ರಷ್ಟಿದೆ.

ಗಡಿಯೊಳಗೆ ನುಸುಳುಕೋರರ ಹಾವಳಿ ಜಾಸ್ತಿಯಾಗಿದೆ ಎಂಬ ನಿರೂಪಣೆಯೇ ಮಾಧ್ಯಮಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ವರದಿಯಾಗುತ್ತ ಬಂದಿದೆ ಮತ್ತು ವರ್ಷಗಳು ಕಳೆದಂತೆ ಈ ತಂತ್ರವು ಕ್ಲಿಕ್ ಆದಂತೆ ಕಂಡುಬಂದಿದೆ. ಆದರೆ, ಇಂತಹ ಪ್ರತಿಪಾದನೆಗಳಿಗೆ ಯಾವುದೇ ರೀತಿಯ ಸ್ಪಷ್ಟ ಅಥವಾ ನಂಬಲರ್ಹವಾದ ದತ್ತಾಂಶಗಳ ಬೆಂಬಲವಿಲ್ಲ ಎಂಬುದು ಗಮನಾರ್ಹ. ಈ ವಾರದ ಆರಂಭದಲ್ಲಿ 'ದಿ ಫೆಡರಲ್' ವರದಿಯ ಪ್ರಕಾರ, ಹಿಂದುತ್ವ ಗುಂಪುಗಳು ಪ್ರತಿಪಾದಿಸುವ ಲಕ್ಷಾಂತರ ನುಸುಳುಕೋರರ ಸಂಖ್ಯೆಗೆ ವ್ಯತಿರಿಕ್ತವಾಗಿ, ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ತನಿಖೆ ಮತ್ತು ಗಡೀಪಾರು ಪ್ರಕ್ರಿಯೆ ಬಾಕಿ ಇರುವ ಶಂಕಿತ ಬಾಂಗ್ಲಾದೇಶಿಗಳ ಪ್ರಕರಣಗಳು 3,000 ಕ್ಕಿಂತಲೂ ಕಡಿಮೆ ಇವೆ.

ಅಲ್ಲದೆ, ಬಿಜೆಪಿ ಸುದೀರ್ಘ ಅಭಿಯಾನದ ಮೂಲಕ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಸ್ಲಿಂ ಸಮುದಾಯಕ್ಕೆ ಅನಗತ್ಯವಾಗಿ ಒಲವು ತೋರುತ್ತಿದ್ದಾರೆ ಎಂದು ಬಿಂಬಿಸಿ, ಅದನ್ನು "ಓಲೈಕೆ ರಾಜಕಾರಣ" ಎಂದು ಕರೆದಿದೆ. ಇಲ್ಲಿಯೂ ಸಹ, ಧ್ರುವೀಕರಣ ಮಾಡುವುದೇ ಅದರ ಉದ್ದೇಶವಾಗಿತ್ತು ಮತ್ತು ವರದಿಗಳ ಪ್ರಕಾರ ಅದು ಯಶಸ್ವಿಯಾಗಿದೆ.

ಓಲೈಕೆ ಮತ್ತು ದೃಷ್ಟಿಕೋನ

ಉದಾಹರಣೆಗೆ, ಹಿಂದಿನ ರಾಜ್ಯ ಸರ್ಕಾರವು ಮುಲ್ಲಾಗಳಿಗೆ ಮತ್ತು ಮ್ಯೂಜಿನ್ಗಳಿಗೆ ಮಾಸಿಕ ಸಂಭಾವನೆ ನೀಡುವ ನೀತಿಯನ್ನು 'ಓಲೈಕೆ' ಎಂದು ಆರೋಪಿಸಲಾಯಿತು, ಆದರೆ ಹಿಂದೂ ಅರ್ಚಕರಿಗೆ ನೀಡಲಾಗುತ್ತಿದ್ದ ಅಂತಹದೇ ಸಂಭಾವನೆಗಳನ್ನು ತಮಗೆ ಅನುಕೂಲಕರ ಎನ್ನುವಂತೆ ನಿರ್ಲಕ್ಷಿಸಲಾಯಿತು. ಅದೇ ರೀತಿ, 2023ರ ದುರ್ಗಾ ಪೂಜೆಗಾಗಿ ಟಿಎಂಸಿ ಸರ್ಕಾರವು ಪೆಂಡಾಲ್ಗಳನ್ನು ಹಾಕುವ ವಿವಿಧ ಕ್ಲಬ್ಗಳಿಗೆ 280 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಆದರೆ ಇದನ್ನು ಓಲೈಕೆ ಎಂದು ಕರೆಯಲಾಗಲಿಲ್ಲ.

ಇಷ್ಟು ಮಾತ್ರವಲ್ಲದೆ ಇತ್ತೀಚಿನ ವಿಧಾನಸಭಾ ಚುನಾವಣೆಯು ಆತುರದ ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯಿಂದಾಗಿ ಕಳಂಕಿತವಾಗಿತ್ತು. ಈ ವಿವಾದಾತ್ಮಕ ಪ್ರಕ್ರಿಯೆಯಲ್ಲಿ ಲಕ್ಷಾಂತರ ನೋಂದಾಯಿತ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.

ವರದಿಗಳ ಪ್ರಕಾರ, ಟಿಎಂಸಿಯ ಮತ ಬ್ಯಾಂಕ್ನ ಆಧಾರ ಸ್ತಂಭವಾಗಿರುವ ಮುಸ್ಲಿಂ ಸಮುದಾಯವೇ ಇದರಿಂದ ಅತಿ ಹೆಚ್ಚು ತೊಂದರೆಗೆ ಒಳಗಾಯಿತು. ಕ್ಷೇತ್ರವಾರು ದತ್ತಾಂಶಗಳನ್ನು ಉಲ್ಲೇಖಿಸಿರುವ ವರದಿಗಳು, ಇದರಿಂದ ಸಂತ್ರಸ್ತರಾದ 27 ಲಕ್ಷ ಜನರಲ್ಲಿ ಸುಮಾರು ಶೇ 65 ರಷ್ಟು ಜನರು ಮುಸ್ಲಿಮರು ಎಂದು ತಿಳಿಸುತ್ತವೆ. ಮುಸ್ಲಿಂ ಪ್ರಾಬಲ್ಯವಿರುವ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಸುಮಾರು 5 ಲಕ್ಷ, ಉತ್ತರ 24 ಪರಗಣದಲ್ಲಿ 3 ಲಕ್ಷಕ್ಕೂ ಹೆಚ್ಚು ಮತ್ತು ಮಾಲ್ಡಾದಲ್ಲಿ ಸುಮಾರು 2.5 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಿತ್ತುಹಾಕಲಾಗಿತ್ತು.

ತಮಿಳುನಾಡು-ಕೇರಳದ ಚಿತ್ರಣ ಭಿನ್ನ

ಅಂತಿಮವಾಗಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ತಮಿಳುನಾಡಿನಲ್ಲಿ ಸ್ಪರ್ಧಿಸಿದ 27 ಸ್ಥಾನಗಳ ಪೈಕಿ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಮಾತ್ರ ಅದಕ್ಕೆ ಸಾಧ್ಯವಾಯಿತು ಮತ್ತು ಕೇರಳದಲ್ಲಿ ಸ್ಪರ್ಧಿಸಿದ 97 ಸ್ಥಾನಗಳಲ್ಲಿ ಕೇವಲ ಮೂರು ಸ್ಥಾನಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.

ದಕ್ಷಿಣದ ಈ ಎರಡು ರಾಜ್ಯಗಳ ಮತದಾರರ ಮನಗೆಲ್ಲಲು ಬಿಜೆಪಿಗೆ ಸಾಧ್ಯವಾಗದೇ ಇರುವುದಕ್ಕೆ ಹಲವು ಕಾರಣಗಳಿದ್ದರೂ, ಅಲ್ಲಿನ 'ಕೋಮು ಸೌಹಾರ್ದತೆಯ ಪರಂಪರೆ'ಯು ಸಂಘ ಪರಿವಾರದ ಚುನಾವಣಾ ರಾಜಕೀಯದ ಅಲ್ಪ ಉಪಸ್ಥಿತಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಮತ್ತು ಅದರ ಹಿಂದುತ್ವ ಸಂಘಟನೆಗಳು ಪ್ರಯತ್ನಿಸಲಿಲ್ಲ ಎಂದಲ್ಲ. ಇತ್ತೀಚಿನ ಚುನಾವಣೆಯ ಪೂರ್ವಸಿದ್ಧತೆಯ ಸಮಯದಲ್ಲಿ, ಮಧುರೈ ನಗರದ ಸಮೀಪವಿರುವ ಬೆಟ್ಟದ ಮೇಲಿನ ಹಿಂದೂ ದೇವಾಲಯದ ಹತ್ತಿರವಿರುವ ಮುಸ್ಲಿಂ ದರ್ಗಾದ ಕುರಿತು ಅವರು 'ತಿರುಪ್ಪರಕುಂದ್ರಂ' ವಿವಾದವನ್ನು ಕೆದಕಿದ್ದರು.

ಆದರೆ ಅದೊಂದು ಕೃತಕ ವಿವಾದ ಎಂಬುದು ಸಾಬೀತಾಯಿತು ಮತ್ತು ಅದು ಹೆಚ್ಚು ಕಾಲ ಉಳಿಯಲಿಲ್ಲ. ಉಭಯ ಸಮುದಾಯಗಳ ನಡುವೆ ಬಿರುಕು ಮೂಡಿಸಲು ಹಿಂದುತ್ವದ ಕಾರ್ಯಕರ್ತರಿಗೆ ಸಾಧ್ಯವಾಗದೇ ಹೋಯಿತು ಅಥವಾ ಚುನಾವಣೆಯ ಮೇಲೆ ಪ್ರಭಾವ ಬೀರುವ ತನಕ ಅದನ್ನು ಜೀವಂತವಾಗಿ ಇರಿಸಲು ಸಾಧ್ಯವಾಗಲಿಲ್ಲ. ಈ ರಾಜ್ಯದಲ್ಲಿ ದರ್ಗಾ ಮತ್ತು ದೇವಾಲಯವು ದಶಕಗಳಿಂದ ಯಾವುದೇ ಅಡೆತಡೆಯಿಲ್ಲದೆ ಸಹಬಾಳ್ವೆ ನಡೆಸುತ್ತಿವೆ. ಹೀಗಾಗಿ, ಈ ಯೋಜಿತ ವಿವಾದವು ಬಿಜೆಪಿಗೆ ಚುನಾವಣಾ ಲಾಭ ತಂದುಕೊಡುವಂತಹ ಪ್ರಬಲ ರಾಜಕೀಯ ವಿಷಯವಾಗಿ ಮಾರ್ಪಡಲು ವಿಫಲವಾಯಿತು.

ಕನ್ಯಾಕುಮಾರಿ ಜಿಲ್ಲೆಯಲ್ಲಿ ಈ ಹಿಂದೆ ಹಿಂದೂ ಭಕ್ತರು ಮತ್ತು ಕ್ರೈಸ್ತ ಮೀನುಗಾರರ ನಡುವೆ ಸಂಘರ್ಷಗಳು ನಡೆದಿದ್ದವು, ಇದರ ಪರಿಣಾಮವಾಗಿ ಅಲ್ಲಿ ಬಿಜೆಪಿ ತಕ್ಕ ಮಟ್ಟಿನ ಬೆಂಬಲಿಗರನ್ನು ಹೊಂದಲು ಒಂದು ಕಾರಣವಾಯಿತು. 2021ರ ಚುನಾವಣೆಯಲ್ಲಿ, ರಾಜ್ಯದಲ್ಲಿ ಬಿಜೆಪಿ ಗೆದ್ದ ನಾಲ್ಕು ಸ್ಥಾನಗಳ ಪೈಕಿ ಈ ಜಿಲ್ಲೆಯ ನಾಗರ್ಕೋಯಿಲ್ ಕ್ಷೇತ್ರವೂ ಒಂದು. ಅದೇ ರೀತಿ ಕೊಯಮತ್ತೂರಿನಲ್ಲಿ, ಈ ಹಿಂದೆ ಇಸ್ಲಾಮಿಕ್ ಗುಂಪುಗಳಿಗೆ ಸಂಬಂಧಿಸಿದ ಬಾಂಬ್ ಸ್ಫೋಟಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಲ್ಲಿ ಯಾವತ್ತೂ ತನ್ನ ಗೆಲುವಿನ ಅವಕಾಶಗಳನ್ನು ನಿರೀಕ್ಷಿಸುತ್ತದೆ ಮತ್ತು ಹಿಂದಿನ ವಿಧಾನಸಭೆಯಲ್ಲಿ ಕೂಡ ಅಲ್ಲಿ ಒಂದು ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು.

ಕೇರಳದಲ್ಲಿ, ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯವು ಬಿಜೆಪಿಗೆ ರಾಜಕೀಯವಾಗಿ ಲಾಭದಾಯಕವಾಗಿತ್ತು. ಸ್ವಾಭಾವಿಕವಾಗಿ, ಸೆಪ್ಟೆಂಬರ್ 2018ರಲ್ಲಿ ಸುಪ್ರೀಂ ಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಬಹುದು ಎಂದು ತೀರ್ಪು ನೀಡಿದಾಗ, ಬಿಜೆಪಿ ಅದನ್ನು ವಿರೋಧಿಸಿತು ಮತ್ತು ರಾಜ್ಯದ ಒಂದು ವರ್ಗದ ಹಿಂದೂಗಳು ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಲು ಫಟಾಫಟ್ ಕಾರ್ಯಪ್ರವೃತ್ತವಾಯಿತು. ಆದಾಗ್ಯೂ, ಈ ವಿಷಯದ ಮತಗಳಿಸುವ ಸಾಮರ್ಥ್ಯವನ್ನು ಅರಿತ ಕಾಂಗ್ರೆಸ್, ತಾನೂ ಕೂಡ ತೀರ್ಪನ್ನು ವಿರೋಧಿಸುವ ಮೂಲಕ ಬಿಜೆಪಿಯ ತಂತ್ರವನ್ನು ವಿಫಲಗೊಳಿಸಿತು.

ಶಬರಿಮಲೆ ಮತ್ತು ಕಾರ್ಯತಂತ್ರ

ತೀರ್ಪಿನ ವಿರುದ್ಧದ ಚಳವಳಿಯು ಬೆಂಬಲವನ್ನು ಪಡೆಯಲು ಪ್ರಾರಂಭಿಸಿತು, ಇದು ಅಂದಿನ ಆಡಳಿತಾರೂಢ ಎಡರಂಗಕ್ಕೆ ಇಕ್ಕಟ್ಟು ತಂದೊಡ್ಡಿತು. ಎಡರಂಗವು ತಕ್ಷಣ ಬಹಿರಂಗ ಬೆಂಬಲದಿಂದ ಹಿಂದೆ ಸರಿದು ತಟಸ್ಥ ನಿಲುವನ್ನು ತಾಳಿತು. ಈಗ ಈ ತೀರ್ಪಿನ ಬಗ್ಗೆ ತಜ್ಞರು ಮತ್ತು ವಿದ್ವಾಂಸರ ಸಮಿತಿಯು ಅಧ್ಯಯನ ನಡೆಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಅದು ಹೊಂದಿದೆ. ಶಬರಿಮಲೆಯಿಂದ ಉಂಟಾಗಬಹುದಾದ ಧ್ರುವೀಕರಣದ ಪರಿಣಾಮಗಳಿಗೆ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ರಂಗಗಳು ಎಷ್ಟು ಭಯಭೀತರಾಗಿದ್ದವು ಎಂದರೆ, ಅವು ಈ ವಿಷಯದಲ್ಲಿ ಒಗ್ಗಟ್ಟಾಗಿ ನಿಂತವು ಮತ್ತು ಬಿಜೆಪಿ ಈ ತೀರ್ಪನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಅವಕಾಶ ನೀಡಲಿಲ್ಲ.

ಸದ್ಯಕ್ಕೆ ದಕ್ಷಿಣದ ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆ ಈಗ ಪಶ್ಚಿಮ ಬಂಗಾಳವು ಅಂತಿಮವಾಗಿ ಬಿಜೆಪಿಯ ಕೈವಶವಾಗಿರುವುದರಿಂದ, ಅದು ಎರಡು ಕೆಲಸಗಳನ್ನು ಮಾಡಲಿದೆ: ಒಂದು, ಕೋಮು ಧ್ರುವೀಕರಣದ ನಿರೂಪಣೆಯನ್ನು ವಿಸ್ತರಿಸುವ ಮೂಲಕ ರಾಜ್ಯದ ಮೇಲಿನ ತನ್ನ ಹಿಡಿತವನ್ನು ಬಲಪಡಿಸುವುದು; ಎರಡು, ತನ್ನ ಗಮನವನ್ನು ತಮಿಳುನಾಡು ಮತ್ತು ಕೇರಳದತ್ತ ಹರಿಸುವುದು.

ಹೆಬ್ಬಾಗಿಲಾದ ಕರ್ನಾಟಕ

ದಕ್ಷಿಣದ ರಾಜ್ಯಗಳ ಪೈಕಿ, ಹಿಂದುತ್ವ ಪರ ಸಂಘಟನೆಗಳು ಪ್ರಚೋದಿಸಿದ ಕೋಮು ಸೂಕ್ಷ್ಮ ವಿವಾದಗಳಿಂದ ಉಂಟಾದ ವಿಭಜನೆಗಳ ಮೇಲೆ ಸವಾರಿ ಮಾಡುವ ಮೂಲಕ ಕರ್ನಾಟಕವು ಬಿಜೆಪಿಯ ಏಳಿಗೆಯನ್ನು ಕಂಡ ಮೊದಲ ರಾಜ್ಯವಾಯಿತು.

1990ರ ದಶಕದ ಆರಂಭದಲ್ಲಿ, ಉತ್ತರ ಕರ್ನಾಟಕದ ಹುಬ್ಬಳ್ಳಿ ನಗರದ ಈದ್ಗಾ ಮೈದಾನದ ವಿವಾದವನ್ನು ಸ್ಥಳೀಯ ಸಂಘ ಪರಿವಾರದ ಗುಂಪುಗಳು ಹುಟ್ಟುಹಾಕಿದವು. ಬಾಬರಿ ಮಸೀದಿ ಧ್ವಂಸದ ಬೆನ್ನಲ್ಲೇ ನಡೆದ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದವನ್ನು 'ದಕ್ಷಿಣದ ಅಯೋಧ್ಯೆ' ಎಂದು ಕರೆಯಲಾಯಿತು. ನಗರದ ಮಧ್ಯಭಾಗದಲ್ಲಿರುವ ಮೈದಾನದ ಬಳಕೆಯ ಬಗ್ಗೆ ಈ ಹೋರಾಟ ನಡೆದಿತ್ತು. ಈ ಮೈದಾನವನ್ನು 1921ರಲ್ಲಿ ಹುಬ್ಬಳ್ಳಿ ಪುರಸಭೆಯು ಮುಸ್ಲಿಂ ಸಾಮಾಜಿಕ ಸೇವಾ ಸಂಸ್ಥೆಯಾದ ಅಂಜುಮನ್-ಎ-ಇಸ್ಲಾಂಗೆ ಗುತ್ತಿಗೆಗೆ ನೀಡಿತ್ತು.

ಕರ್ನಾಟಕದ ಮಾದರಿ

ಬಿಜೆಪಿ ಮತ್ತು ಸ್ಥಳೀಯ ಹಿಂದುತ್ವ ಸಂಘಟನೆಗಳು ರಾಷ್ಟ್ರೀಯ ದಿನಗಳಂದು ಧ್ವಜಾರೋಹಣ ಮಾಡಲು ಈ ಭೂಮಿಯನ್ನು ನೀಡಬೇಕೆಂದು ಒತ್ತಾಯಿಸಿದವು. ಆದರೆ ದೊಡ್ಡ ಗುಂಪು ಸೇರಿದರೆ ಅಯೋಧ್ಯೆಯಲ್ಲಿ ಸಂಭವಿಸಿದಂತೆ ಪ್ರಾರ್ಥನಾ ಸ್ಥಳಕ್ಕೆ ಹಾನಿಯಾಗಬಹುದು ಎಂದು ಅಂಜುಮನ್ ಸಂಸ್ಥೆಯು ಆತಂಕ ವ್ಯಕ್ತಪಡಿಸಿ ನಿರಾಕರಿಸಿತು. ಇದು ದೊಡ್ಡ ವಿವಾದವಾಗಿ ರೂಪಾಂತರಗೊಂಡು, ಬಿಜೆಪಿಗೆ ಲಾಭದಾಯಕವಾದ ಕೋಮು ಧ್ರುವೀಕರಣಕ್ಕೆ ದಾರಿ ಮಾಡಿಕೊಟ್ಟಿತು. ಈ ವಿವಾದಕ್ಕೂ ಮುನ್ನ ವಿಧಾನಸಭೆಯಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯ ಬಲವು 1994 ರ ಚುನಾವಣೆಯಲ್ಲಿ 40 ಕ್ಕೆ ಏರಿತು.

ಅಂದಿನ ದೇವೆಗೌಡರ ಸರ್ಕಾರವು ಈ ವಿವಾದದ ತೀವ್ರತೆಯನ್ನು ಅರಿತು ಅದನ್ನು ಬಗೆಹರಿಸಲು ಮುಂದಾಯಿತು. ಆದರೆ ಅಷ್ಟರಲ್ಲಾಗಲೇ, 1989ರ ವಿಧಾನಸಭೆಯಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಹೊಂದಿದ್ದ ಬಿಜೆಪಿ, 1994ರ ಚುನಾವಣೆಯಲ್ಲಿ 40 ಸ್ಥಾನಗಳಿಗೆ ಜಿಗಿದಿತ್ತು.

ಈ ಚುನಾವಣಾ ಲಾಭದಿಂದ ಉತ್ಸಾಹಿತರಾದ ಬಿಜೆಪಿಯ ತಂತ್ರಜ್ಞರು, ಮತ್ತೊಂದು ಕೋಮು ಆಧಾರಿತ ವಿವಾದವನ್ನು ಹುಡುಕಿದರು—ಅದೇ ಬಾಬಾ ಬುಡನ್ಗಿರಿ ವಿವಾದ. ಕರ್ನಾಟಕದ ಕಾಫಿ ಬೆಳೆಯುವ ಪ್ರದೇಶ ಹಾಗೂ ಪ್ರಸಿದ್ಧ ಪ್ರವಾಸಿ ತಾಣವಾದ ಚಿಕ್ಕಮಗಳೂರಿನ ಸಮೀಪವಿರುವ ಹಸಿರು ಬೆಟ್ಟದ ಸಾಲಿನಲ್ಲಿರುವ ಪುರಾತನ ದರ್ಗಾ/ದೇವಸ್ಥಾನಕ್ಕೆ ಸಂಬಂಧಿಸಿದ ವಿವಾದವಿದು. ಈ ಕ್ಷೇತ್ರವು ರಾಜ್ಯದ ಸಾಮರಸ್ಯದ ಸಂಸ್ಕೃತಿಗೆ ಒಂದು ಅತ್ಯುತ್ತಮ ಉದಾಹರಣೆಯಾಗಿತ್ತು ಮತ್ತು ಮುಸ್ಲಿಂ ಹಾಗೂ ಹಿಂದೂ ಎರಡೂ ಸಮುದಾಯಗಳು ಇದನ್ನು ಹಂಚಿಕೊಂಡಿದ್ದವು. ಇದರ ಅಧಿಕೃತ ಹೆಸರಾದ "ಶ್ರೀ ಗುರು ದತ್ತಾತ್ರೇಯ ಸ್ವಾಮಿ ಬಾಬಾ ಬುಡನ್ ಪೀಠ" ಎಂಬುದು ಈ ಜಂಟಿ ಬಳಕೆಯನ್ನೇ ಪ್ರತಿಫಲಿಸುತ್ತದೆ.

ಬಿಜೆಪಿ ಮತ್ತು ಅದರ ಸಂಯೋಜಿತ ಸಂಘಟನೆಗಳು ಈ ಕ್ಷೇತ್ರವನ್ನು ಸಂಪೂರ್ಣವಾಗಿ ಹಿಂದೂ ಸಮುದಾಯಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿದವು. ಈ ವಿವಾದವು ಇಂದಿಗೂ ಜೀವಂತವಾಗಿಯೇ ಇದೆ. ಇತ್ತೀಚೆಗೆ ಮಾರ್ಚ್ ತಿಂಗಳಿನಲ್ಲೂ ಸಹ, ಸಂಘಟನಾ ಗುಂಪುಗಳು ಸಿದ್ದರಾಮಯ್ಯ ಸರ್ಕಾರವು ಈ ವಿಷಯದಲ್ಲಿ ಮೃದು ಧೋರಣೆ ತಳೆಯುತ್ತಿದೆ ಎಂದು ಆರೋಪಿಸಿದ್ದವು.

ಆಶ್ಚರ್ಯಕರ ಸಂಗತಿಯೆಂದರೆ, ಕರ್ನಾಟಕದಲ್ಲಿ ಬಿಜೆಪಿ 2008-13 ಮತ್ತು ನಂತರ 2019-23ರವರೆಗೆ ಎರಡು ಅವಧಿಗೆ ಅಧಿಕಾರದಲ್ಲಿದ್ದರೂ, ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಸರಳ ಬಹುಮತದ ಗಡಿಯನ್ನು ದಾಟಲು ಅದಕ್ಕೆ ಎಂದಿಗೂ ಸಾಧ್ಯವಾಗಿಲ್ಲ. ವಿರೋಧ ಪಕ್ಷಗಳನ್ನು ಒಡೆಯುವ ಮೂಲಕ ಅಥವಾ ಪಕ್ಷೇತರರನ್ನು ಸೆಳೆಯುವ ಮೂಲಕವಷ್ಟೇ ಅದು ಸರ್ಕಾರ ರಚಿಸಲು ಯಶಸ್ವಿಯಾಗಿದೆ ಎಂಬುದನ್ನು ಗಮನಿಸಬೇಕು.

ಧ್ರುವೀಕರಣದ ಮಿತಿಗಳು

ಬಿಜೆಪಿ ನಾಯಕತ್ವವು ಹಲವು ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಇರಾದೆಯನ್ನು ವ್ಯಕ್ತಪಡಿಸಿದೆ. ಈ ಗುರಿಯತ್ತ, 2019-23ರ ತನ್ನ ಇತ್ತೀಚಿನ ಆಡಳಿತದ ಅವಧಿಯಲ್ಲಿ ಅಲ್ಪಸಂಖ್ಯಾತರನ್ನು "ಪರಕೀಯಗೊಳಿಸುವ" ಉದ್ದೇಶವಿರುವ ಕಾನೂನುಗಳನ್ನು ಜಾರಿಗೆ ತರಲು ಪ್ರಯತ್ನಿಸಿತು.

ಸರ್ಕಾರಿ ಶಾಲೆಗಳಲ್ಲಿ ಇಸ್ಲಾಮಿಕ್ ಶಿರವಸ್ತ್ರ ಧರಿಸುವುದನ್ನು ನಿಷೇಧಿಸುವ ಬಿಜೆಪಿಯ ನಡೆಯಿಂದ ಉಂಟಾದ ಹಿಜಾಬ್ ವಿವಾದವು ನೇರವಾಗಿ ಮುಸ್ಲಿಂ ಸಮುದಾಯದ ಮೇಲೆ ಪರಿಣಾಮ ಬೀರಿತು. ಸರ್ಕಾರದ ಪರೋಕ್ಷ ಬೆಂಬಲದೊಂದಿಗೆ, ಸ್ವಯಂ ಘೋಷಿತ ಹಿಂದುತ್ವ ಸಂಘಟನೆಗಳು ಹಿಂದೂಗಳ ನೇತೃತ್ವದ ಜಾತ್ರೆ ಮತ್ತು ಸಂತೆಗಳಿಂದ ಮುಸ್ಲಿಂ ವ್ಯಾಪಾರಿಗಳನ್ನು ಹೊರಹಾಕಿದವು. ಈ ಕೋಮು ಆಧಾರಿತ ಆಡಳಿತ ಮಾದರಿಯಿಂದಾಗಿ, ಈ ಹಿಂದೆ ಅಪರೂಪಕ್ಕೆ ಗಲಭೆಗಳನ್ನು ಕಂಡಿದ್ದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಲವು ಭಾಗಗಳು ಕೋಮು ಉದ್ವಿಗ್ನ ಪರಿಸ್ಥಿತಿಗೆ ಸಾಕ್ಷಿಯಾದವು.

ಆದರೆ ಬಿಜೆಪಿಯ ಈ ತಂತ್ರವು 2023ರ ಚುನಾವಣೆಯಲ್ಲಿ ತಿರುಗುಬಾಣವಾಯಿತು. ಕಾಂಗ್ರೆಸ್ 224 ಸ್ಥಾನಗಳ ಪೈಕಿ 135 ಸ್ಥಾನಗಳ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದರೆ, ಬಿಜೆಪಿ ಸುಮಾರು 66 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನಕ್ಕೆ ಕುಸಿಯಿತು. ಮುಸ್ಲಿಮರು ಕಾಂಗ್ರೆಸ್ಗೆ ಸಾಮೂಹಿಕವಾಗಿ ಮತ ಚಲಾಯಿಸಿದ್ದು ಅದರ ವಿಜಯಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಪಶ್ಚಿಮ ಬಂಗಾಳದ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು, ಈಗ ಕರ್ನಾಟಕದಲ್ಲಿಯೂ ಎಸ್ಐಆರ್ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಸ್ವತಂತ್ರ ಗುಂಪುಗಳು ಇದರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ರಾಜ್ಯದ ಅಲ್ಪಸಂಖ್ಯಾತ ಮತದಾರರ ಮೇಲೆ ಇದು ಬೀರುವ ಪ್ರಭಾವವು ಮುಂದಿನ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಬಹುದು, ಇದೇ ಈಗಿನ ಆತಂಕಕ್ಕೆ ಕಾರಣವಾಗಿದೆ.

ದಕ್ಷಿಣದ ಮೇಲೆ ಕಣ್ಣು

ಬಿಜೆಪಿಯು ಕೇರಳ ಮತ್ತು ತಮಿಳುನಾಡಿನಲ್ಲಿ ಹಿನ್ನಡೆ ಅನುಭವಿಸಿರಬಹುದು, ಆದರೆ ಅದರ ಇತಿಹಾಸವನ್ನು ಗಮನಿಸಿದರೆ, ಈ ಎರಡು ರಾಜ್ಯಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವವರೆಗೂ ಪಕ್ಷವು ವಿಶ್ರಮಿಸುವುದಿಲ್ಲ. ಆರ್ಎಸ್ಎಸ್ ನೇತೃತ್ವದ ಸಂಘ ಪರಿವಾರದ ಗುಂಪುಗಳು ತಮ್ಮ ಅಸ್ತಿತ್ವವನ್ನು ವಿಸ್ತರಿಸಲು ಸಕ್ರಿಯವಾಗಿ ದಾರಿಗಳನ್ನು ಹುಡುಕುತ್ತಿರುವುದರಿಂದ ಭವಿಷ್ಯವು ಭಯಾನಕವಾಗಿ ಕಾಣುತ್ತಿದೆ. ಇದಕ್ಕೆ ಅವುಗಳ ಮುಂದಿರುವ ಸುಲಭ ಆಯ್ಕೆಯೆಂದರೆ ಕೋಮು ಧ್ರುವೀಕರಣ.

ಈಗಾಗಲೇ ಸಾಮಾಜಿಕ ಜಾಲತಾಣಗಳ ಸಂದೇಶಗಳನ್ನು ಗಮನಿಸಿದರೆ, ಮುನ್ಸೂಚನೆಗಳು ಶುಭದಾಯಕವಾಗಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಸೋಲನ್ನು ಆರಂಭದಲ್ಲಿ ಸಂಭ್ರಮಿಸಿದ ಬಿಜೆಪಿಗೆ, ಹೊಸ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ತಮ್ಮನ್ನು ತಿರಸ್ಕರಿಸಿದ್ದಾರೆ ಎಂಬುದು ಈಗ ಅರಿವಾಗಿದೆ. ನಟನಿಂದ ರಾಜಕಾರಣಿಯಾಗಿ ಬದಲಾಗಿರುವ ಅವರು ಎನ್ಡಿಎಯನ್ನು ದೂರವಿಟ್ಟು, ಕಾಂಗ್ರೆಸ್ ಮತ್ತು ಇತರ ಜಾತ್ಯತೀತ ಪಕ್ಷಗಳಿಗೆ ಆದ್ಯತೆ ನೀಡಿದ್ದಾರೆ.

ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯವೂ ಇದರಿಂದ ಹೊರತಾಗಿಲ್ಲ. 2021ರಲ್ಲಿ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಕರ್ನಾಟಕದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ನಡೆದ ಕನಿಷ್ಠ 39 ಹಿಂಸಾತ್ಮಕ ಘಟನೆಗಳನ್ನು ದಾಖಲಿಸಿದೆ.

ವಿಜಯ್ ಅವರ ಧಾರ್ಮಿಕ ನಂಬಿಕೆ ಮತ್ತು ಅವರ ಕುಟುಂಬದ ಕ್ರೈಸ್ತ ಧರ್ಮದ ಕಡೆಗಿನ ಒಲವು ಎಂದು ಹೇಳಲಾಗುವ ವಿಷಯಗಳ ಬಗ್ಗೆ ಆಧಾರರಹಿತ ಮತ್ತು ಅತಿಶಯೋಕ್ತಿಯಿಂದ ಕೂಡಿದ ಪೋಸ್ಟ್ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯ್ ಅವರ ಟಿ.ವಿ.ಕೆ ಸರ್ಕಾರವನ್ನು ದುರ್ಬಲಗೊಳಿಸಲು ಹಿಂದುತ್ವ ಗುಂಪುಗಳು ಕೋಮು ಆಧಾರಿತ ಪ್ರಚಾರಕ್ಕೆ ಅಡಿಪಾಯ ಹಾಕುತ್ತಿರಬಹುದು ಎಂಬಂತೆ ಇದು ಭಾಸವಾಗುತ್ತಿದೆ. ಕೆಲವು ಪೋಸ್ಟ್ಗಳು ಭವಿಷ್ಯದಲ್ಲಿ ಸಂಭವಿಸಬಹುದಾದ ರಾಜಕೀಯ ತಿರುವುಗಳ ಬಗ್ಗೆ ಸುಳಿವು ನೀಡುತ್ತಿದ್ದು, ಅದು ಬಿಜೆಪಿಗೆ ಲಾಭವಾಗಲಿದೆ ಎಂದು ಬಿಂಬಿಸುತ್ತಿವೆ.

ಇದು ಕೇವಲ ಆಧಾರರಹಿತ ಹೇಳಿಕೆಯಾಗಿರಬಹುದು ಅಥವಾ ಮುಂದಿನ ಕೆಲವು ತಿಂಗಳುಗಳಲ್ಲಿ ಸಂಭವಿಸಬಹುದಾದ ಯಾವುದೋ ಅಹಿತಕರ ಘಟನೆಯ ಎಚ್ಚರಿಕೆಯೂ ಆಗಿರಬಹುದು. ಬಿಜೆಪಿ ನಾಯಕತ್ವವು ಪದೇ ಪದೇ ಹೇಳುವಂತೆ, ಎರಡು ಚುನಾವಣೆಗಳ ಹಿಂದಿನವರೆಗೂ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಅದು ಕೇವಲ ಒಂದು ಸ್ಥಾನವನ್ನು ಹೊಂದಿತ್ತು. ಕಳೆದ ಚುನಾವಣೆಯಲ್ಲಿ ಆ ಸಂಖ್ಯೆ 77ಕ್ಕೆ ಏರಿತು ಮತ್ತು ಈಗ 206ಕ್ಕೆ ತಲುಪಿದೆ. ಈ ಯಶಸ್ಸಿನ ಹಾದಿಯು ಪ್ರಶ್ನಾರ್ಹವಾಗಿದ್ದರೂ, ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ, ಮೋದಿ-ಶಾ ಜೋಡಿಯ ನೇತೃತ್ವದ ಬಿಜೆಪಿ, ಪಶ್ಚಿಮ ಬಂಗಾಳದ ಮಾದರಿಯನ್ನು ತಮಿಳುನಾಡು ಮತ್ತು ಕೇರಳದಲ್ಲಿ ಮರುಸೃಷ್ಟಿಸಲು ಹಿಂಜರಿಯುವುದಿಲ್ಲ ಎಂಬುದು ನಿಚ್ಚಳ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story