ಕೇರಳ ಫಲಿತಾಂಶ: ಜಾತ್ಯತೀತ ಒಗ್ಗಟ್ಟಿನ ಮುಂದೆ ಪಲ್ಟಿ ಹೊಡೆದ ಪಿಣರಾಯಿ ಸಾಮಾಜಿಕ ತಂತ್ರಗಾರಿಕೆ
x
ಕೇರಳದಲ್ಲಿ ನಡೆದ ಚುನಾವಣೆಯಲ್ಲಿ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಕೋಳಿಕ್ಕೋಡ್ನಲ್ಲಿ ಪಕ್ಷದ ಬೆಂಬಲಿಗರ ಸಂಭ್ರಮಾಚರಣೆ.

ಕೇರಳ ಫಲಿತಾಂಶ: ಜಾತ್ಯತೀತ ಒಗ್ಗಟ್ಟಿನ ಮುಂದೆ ಪಲ್ಟಿ ಹೊಡೆದ ಪಿಣರಾಯಿ ಸಾಮಾಜಿಕ ತಂತ್ರಗಾರಿಕೆ

ಕೋಮು ವಿಭಜನೆಯನ್ನು ಬಳಸಲು ಪ್ರಯತ್ನಿಸುವ ಯಾವುದೇ ರಾಜಕೀಯ ಪಕ್ಷಕ್ಕೆ ಎಲ್ಡಿಎಫ್ ಹಿನ್ನೆಡೆಯು ಒಂದು ಎಚ್ಚರಿಕೆ. ಸಾಮಾಜಿಕ ತಂತ್ರಗಾರಿಕೆ ಸಾಮಾಜಿಕ ನಂಬಿಕೆಗೆ ಪರ್ಯಾಯವಾಗಲು ಸಾಧ್ಯವಿಲ್ಲ.


2026ರ ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ವಿಭಜಕ ʼಸಾಮಾಜಿಕ ತಂತ್ರಗಾರಿಕೆʼಯನ್ನು ತಿರಸ್ಕರಿಸಿದಷ್ಟೇ ಜ್ಯಾತ್ಯತೀತ ಬಲವರ್ಧನೆಯ ವಿಜಯೋತ್ಸವದ ಪುನರಾಗಮನವನ್ನೂ ತೋರಿಸಿದೆ. ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ದಾಖಲಿಸಿದ್ದರೂ ಅದರ ಒಳಗುಟ್ಟು ಅಡಗಿರುವುದು ಕೇರಳದ ಪ್ರಭಾವಿ ಅಲ್ಪಸಂಖ್ಯಾತ ಸಮುದಾಯಗಳು ನಡೆಸಿದ ಅತ್ಯಾಧುನಿಕ ರಾಜಕೀಯ ಮರುಹೊಂದಾಣಿಕೆಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಕೋಮು ಸೌಹಾರ್ದತೆಯ ವಿಚಾರದಲ್ಲಿ ಖ್ಯಾತಿಯನ್ನು ಪಡೆದಿರುವ ರಾಜ್ಯಕ್ಕೆ 2026ರ ಚುನಾವಣಾ ಫಲಿತಾಂಶಗಳು ಅತ್ಯಂತ ಗಹನವಾದ ಬದಲಾವಣೆಯನ್ನು ಸೂಚಿಸುತ್ತಿರುವುದು ಸ್ಪಷ್ಟ. ಆಯಕಟ್ಟಿನ ಮತದಾನವು ಆಡಳಿತಾತ್ಮಕ ನಂಬಿಕೆ ದ್ರೋಹದ ವಿರುದ್ಧ ಭದ್ರಕೋಟೆಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ ಎಂಬುದನ್ನು ಕೂಡ ಇದು ಸಾಬೀತುಪಡಿಸಿದೆ.

ತನ್ನ ಅಧಿಕಾರದ ಒಂದು ದಶಕದ ಅವಧಿಯಲ್ಲಿ ಬಹುತೇಕ ಸಂದರ್ಭಗಳಲ್ಲಿ ಎಲ್ಡಿಎಫ್ ಸಾಮಾಜಿಕ ಎಂಜಿನಿಯರಿಂಗ್ ಎಂದು ಕರೆಯಲಾಗುವ ಅಪಾಯಕಾರಿ ರಾಜಕೀಯ ಪ್ರಯೋಗವನ್ನು ನಡೆಸಿತು. ಕ್ರಿಶ್ಚಿಯನ್ ಸಮುದಾಯದ ನಿರ್ದಿಷ್ಟ ವರ್ಗಗಳನ್ನು ಒಲಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ಅಲ್ಪಸಂಖ್ಯಾತ ವರ್ಗದ ಮತಬ್ಯಾಂಕ್ನ್ನು ವಿಭಜಿಸುವ ಕೆಲಸಕ್ಕೆ ಮುಂದಾಯಿತು ಮತ್ತು ಅದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ವಿರೋಧಿ ನಿರೂಪಣೆಗಳ ಬಗ್ಗೆ ಲೆಕ್ಕಾಚಾರದ ಮೌನ ವಹಿಸುವುದು ಈ ತಂತ್ರದ ಮುಖ್ಯ ಉದ್ದೇಶವಾಗಿತ್ತು. ಆದರೆ ಇಂತಹ ವಿಧಾನವನ್ನು ಅನುಸರಿಸಿದ್ದರಿಂದಲೇ ಅದು ಅಂತಿಮವಾಗಿ ಪತನಹೊಂದಲು ದಾರಿಯಾಯಿತು.

ಧ್ರುವೀಕರಣಕ್ಕೆ ಕಾರಣವಾಗುವ ವ್ಯಕ್ತಿಗಳನ್ನು—ಅದರಲ್ಲೂ ಮುಖ್ಯವಾಗಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗದ ವೆಳ್ಳಾಪಳ್ಳಿ ನಟೇಶನ್ ಅವರ ಪುನರಾವರ್ತಿತ ಕೋಮು ಭಾಷಣಗಳ ಹೊರತಾಗಿಯೂ—ಖಂಡಿಸಲು ನಾಯಕತ್ವವು ನಿರಾಕರಿಸಿದ್ದು, ಜಾತ್ಯತೀತ ಮತದಾರರ ದೊಡ್ಡ ವರ್ಗವನ್ನೇ ದೂರ ಮಾಡಲು ದಾರಿಯಾಯಿತು.

ಕೋಮು ಜ್ವಾಲೆಯನ್ನು ಹಚ್ಚುವವರ ಜೊತೆ ವ್ಯೂಹಾತ್ಮಕ ಸಾಮೀಪ್ಯವನ್ನು ಕಾಯ್ದುಕೊಳ್ಳುವ ಮೂಲಕ, ಎಲ್ಡಿಎಫ್ ಅಲ್ಪಾವಧಿಯ ಚುನಾವಣಾ ಲಾಭಕ್ಕಾಗಿ ತನ್ನ ಮೂಲಭೂತ ಜಾತ್ಯತೀತ ತತ್ವಗಳನ್ನು ಪಣಕ್ಕಿಡಲು ಸಿದ್ಧವಿದೆ ಎಂಬ ಸಂದೇಶವನ್ನು ಅರಿವಿಲ್ಲದೆಯೇ ರವಾನಿಸಿತು. ಅಲ್ಪಸಂಖ್ಯಾತ ಮತದಾರರಿಗೆ ಇದು ಕೇವಲ ರಾಜಕೀಯ ಬದಲಾವಣೆಯಾಗಿರಲಿಲ್ಲ, ಬದಲಿಗೆ ಇದು ನಂಬಿಕೆಗೆ ಎಸಗಿದ ದ್ರೋಹವಾಗಿತ್ತು.

ಪ್ರಚೋದನಾಕಾರಿ ಭಾಷಣ ಮತ್ತು ನಂಬಿಕೆಯ ಕೊರತೆ

ಹಿರಿಯ ಎಡಪಕ್ಷದ ನಾಯಕರಿಂದ ಬಂದ ಅಕಾಲಿಕ ಮತ್ತು ಅಸೂಕ್ಷ್ಮ ಹೇಳಿಕೆಗಳಿಂದ ಈ ಅಂತರವು ಮತ್ತಷ್ಟು ಹೆಚ್ಚುತ್ತ ಹೋಯಿತು. ಎ.ಕೆ. ಬಾಲನ್, ಸಾಜಿ ಚೆರಿಯನ್ ಮತ್ತು ವಿ.ಎನ್. ವಾಸವನ್ ಅವರಂತಹ ನಾಯಕರ ಹೇಳಿಕೆಗಳು ಮುಸ್ಲಿಂ ಸಮುದಾಯದ ವಿರುದ್ಧ ಪರೋಕ್ಷವಾಗಿ ಪ್ರಚೋದನೆ ನೀಡುವಂತಿವೆ ಎಂದು ಭಾವಿಸಲಾಯಿತು, ಇದು ಸಮುದಾಯದಲ್ಲಿ ಆತಂಕದ ಭಾವನೆಯನ್ನು ಸೃಷ್ಟಿಸಿತು. ಸರ್ಕಾರವು ಅಧಿಕೃತವಾಗಿ ತಾವು ಸಮುದಾಯದ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡರೂ, ವಾಸ್ತವದಲ್ಲಿ ತಳಮಟ್ಟದ ಪರಿಸ್ಥಿತಿಯು ತೀರಾ ಭಿನ್ನವಾಗಿತ್ತು. ಅದು ನಿರ್ಲಕ್ಷ್ಯದ ಭಾವನೆಯನ್ನು ಇನ್ನಷ್ಟು ಹೆಚ್ಚಿಸುತ್ತ ಹೋಯಿತು.

ಕ್ರೈಸ್ತರು ಮತ್ತು ಮುಸ್ಲಿಮ್ ಸಮುದಾಯದ ನಡುವೆ ಬಿರುಕು ಮೂಡಿಸಲು ಸೃಷ್ಟಿಸಲಾದ "ನಾರ್ಕೋಟಿಕ್ ಜಿಹಾದ್" ವಿವಾದದ ಸಂದರ್ಭದಲ್ಲಿ ಎಲ್ಡಿಎಫ್ ವಹಿಸಿದ ಸಹಾನುಭೂತಿಯ ಮೌನವು ಬಹುಶಃ ಅತ್ಯಂತ ನಿರ್ಣಾಯಕ ತಿರುವು. ಇದು ಕೆಲವು ಕ್ರೈಸ್ತ ಪಂಗಡಗಳ ವಿಚಾರದಲ್ಲಿ ತನ್ನನ್ನು ತಾನು "ರಕ್ಷಕ" ಎಂದು ಬಿಂಬಿಸಿಕೊಳ್ಳಲು ಬಿಜೆಪಿಗೆ ಅವಕಾಶ ಮಾಡಿಕೊಟ್ಟಿತು; ಎಡಪಕ್ಷಗಳು ಯಾವುದೇ ಸೈದ್ಧಾಂತಿಕ ದೃಢತೆಯೊಂದಿಗೆ ಇದನ್ನು ಎದುರಿಸುವಲ್ಲಿ ವಿಫಲವಾದವು.

ಪಾಣಕ್ಕಾಡ್ ರಾಜತಾಂತ್ರಿಕತೆ

ಯುಡಿಎಫ್ನ ಪುನರುತ್ಥಾನವು ಕೇವಲ ಆಡಳಿತ ವಿರೋಧಿ ಅಲೆಯಿಂದಾದ ಫಲಿತಾಂಶವಲ್ಲ, ಬದಲಿಗೆ ಇದು ತಳಮಟ್ಟದಲ್ಲಿ ನಡೆಸಿದ ನಿಖರ ರಾಜತಾಂತ್ರಿಕತೆಯ ಫಲವಾಗಿದೆ. ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬೆಳೆಯುತ್ತಿರುವ ಬಿರುಕನ್ನು ಗುರುತಿಸಿದ ಪಾಣಕ್ಕಾಡ್ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಙಳ್ ಮತ್ತು ಪಿ.ಕೆ. ಕುನ್ಹಾಲಿ ಕುಟ್ಟಿ ನೇತೃತ್ವದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕತ್ವವು ಬೃಹತ್ ಜನಸಂಪರ್ಕ ಅಭಿಯಾನವನ್ನು ಪ್ರಾರಂಭಿಸಿತು.

ಚರ್ಚ್ ಮುಖ್ಯಸ್ಥರೊಂದಿಗೆ ನೇರವಾಗಿ ಮಾತುಕತೆ ನಡೆಸುವ ಮೂಲಕ ಮತ್ತು ಸಾಮರಸ್ಯ ಕೂಟಗಳನ್ನು ಆಯೋಜಿಸುವ ಮೂಲಕ, ಅವರು ಬಿಜೆಪಿಯ ಬೆಳೆಯುತ್ತಿರುವ ನಿರೂಪಣೆಯನ್ನು ವಿಫಲಗೊಳಿಸಿದರು.

ಈ ನಡುವೆ ಮಣಿಪುರದಲ್ಲಿ ನಡೆದ ದುರಂತ ಜನಾಂಗೀಯ ಹಿಂಸಾಚಾರವು, ಎನ್ಡಿಎಯ ವ್ಯವಹಾರಿಕ ಭರವಸೆಗಳಿಗಿಂತ ಯುಡಿಎಫ್ನ ಜಾತ್ಯತೀತ ಚೌಕಟ್ಟು ಹೆಚ್ಚು ಸುರಕ್ಷಿತ ಎಂಬ ಅಂಶವನ್ನು ಕೇರಳದ ಚರ್ಚ್ಗಳಿಗೆ ಮನವರಿಕೆ ಮಾಡಿಕೊಟ್ಟಿತು. ಈ ರಾಜತಾಂತ್ರಿಕ ಸಂಧಾನದಿಂದಾಗಿ, 2021ರಲ್ಲಿ ಎಡ ಮತ್ತು ಬಲಪಂಥೀಯರತ್ತ ಒಲವು ತೋರಿಸುತ್ತಿದ್ದ ಕ್ರೈಸ್ತ ಮತಗಳು, ಈ ಬಾರಿ ದೃಢವಾಗಿ ಯುಡಿಎಫ್ ತೆಕ್ಕೆಗೆ ಮರಳಿದವು.

ಜಾತ್ಯತೀತ ಪರಿಪಕ್ವತೆಗೆ ಆದ್ಯತೆ

ಎಲ್ಲಕ್ಕಿಂತ ಮುಖ್ಯವಾಗಿ, 2026ರ ಜನಾದೇಶವು ಕೋಮುವಾದದ ಪ್ರದರ್ಶನವಾಗಿರಲಿಲ್ಲ, ಬದಲಿಗೆ ಅದು ರಾಜಕೀಯ ಪರಿಪಕ್ವತೆಯ ಸಂಕೇತವಾಗಿತ್ತು. ತವನೂರು ಮತ್ತು ತಿರುವಂಬಾಡಿ ಎಂಬ ಎರಡು ಪ್ರಮುಖ ಕ್ಷೇತ್ರಗಳ ಫಲಿತಾಂಶಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿ ನೀಡಬಹುದು. ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ತವನೂರಿನಲ್ಲಿ, ಮತದಾರರು ಪ್ರಭಾವಿ ಅಭ್ಯರ್ಥಿ ಕೆ.ಟಿ. ಜಲೀಲ್ ಬದಲಿಗೆ ಕಾಂಗ್ರೆಸ್ನ ಯುವ ಕ್ರೈಸ್ತ ನಾಯಕ ವಿ.ಎಸ್. ಜಾಯ್ ಅವರನ್ನು ಆಯ್ಕೆ ಮಾಡಿದರು. ಅದೇ ರೀತಿ, ಕ್ರೈಸ್ತರು ಹೆಚ್ಚಾಗಿರುವ ತಿರುವಂಬಾಡಿ ಗುಡ್ಡಗಾಡು ಪ್ರದೇಶದಲ್ಲಿ, ಯುಡಿಎಫ್ನ ಮುಸ್ಲಿಂ ಅಭ್ಯರ್ಥಿ ಸಿ.ಕೆ. ಕಾಸಿಂ ಭರ್ಜರಿ ಬಹುಮತದಿಂದ ಜಯಗಳಿಸಿದರು.

ಈ ಎರಡು ಫಲಿತಾಂಶಗಳು ಅಲ್ಪಸಂಖ್ಯಾತರ ಧ್ರುವೀಕರಣವನ್ನು "ಕೋಮುವಾದ" ಎಂದು ಬಣ್ಣಿಸುವವರಿಗೆ ಪ್ರಬಲವಾದ ಪ್ರತ್ಯುತ್ತರ ನೀಡುತ್ತವೆ. ಬದಲಿಗೆ, ಇದು ಅಭ್ಯರ್ಥಿಯ ಧರ್ಮಕ್ಕಿಂತ ಜಾತ್ಯತೀತ ಅರ್ಹತೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಆದ್ಯತೆ ನೀಡುವ ಮತದಾರರ ಪ್ರಜ್ಞೆಯನ್ನು ಪ್ರದರ್ಶಿಸುತ್ತದೆ.

ಆಡಳಿತ, ಕುಂದುಕೊರತೆಗಳು

ಈ ರಾಜಕೀಯ ಬದಲಾವಣೆಯು ಆಡಳಿತದ ಬಗ್ಗೆ ಇದ್ದ ತೀವ್ರವಾದ ಅಸಮಾಧಾನದಿಂದಲೂ ಪ್ರೇರಿತವಾಗಿತ್ತು. ಸರ್ಕಾರಿ ಉದ್ಯೋಗಗಳಲ್ಲಿ "ಹಿಂಬಾಗಿಲ ನೇಮಕಾತಿ" ಆರೋಪಗಳು ಮತ್ತು ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಪಾರದರ್ಶಕತೆಯ ಕೊರತೆಯು ಯುವಜನರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಬೆಲೆ ಏರಿಕೆಯ ಆರ್ಥಿಕ ಹೊರೆ ಮತ್ತು ಆಳವಾಗುತ್ತಿರುವ ಹಣಕಾಸಿನ ಬಿಕ್ಕಟ್ಟು ಎಲ್ಡಿಎಫ್ನ "ಜನಪರ" ಇಮೇಜ್ ಅನ್ನು ಮೂರಾಬಟ್ಟೆ ಮಾಡಿತು.

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ಸರ್ವವ್ಯಾಪಿ ಪ್ರಾಬಲ್ಯದ ಹಿನ್ನೆಲೆಯಲ್ಲಿ, ಮತಗಳು ವಿಭಜನೆಯಾದರೆ ತಾವು ವಿರೋಧಿಸುವ ಶಕ್ತಿಗಳೇ ಬಲಗೊಳ್ಳುತ್ತವೆ ಎಂಬ ಸತ್ಯವನ್ನು ಕೇರಳದ ಅಲ್ಪಸಂಖ್ಯಾತರು ಅರಿತುಕೊಂಡರು. ಕೇರಳ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಎನ್ಡಿಎನ ಮೂವರು ಶಾಸಕರು ಉಪಸ್ಥಿತರಿರುವುದು ಈ ಜಾಗರೂಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ರಾಷ್ಟ್ರ ರಾಜಕಾರಣಕ್ಕೊಂದು ಪಾಠ

ಚುನಾವಣಾ ಲಾಭಕ್ಕಾಗಿ ಕೋಮು ವಿಭಜನೆಯನ್ನು ಬಳಸಲು ಪ್ರಯತ್ನಿಸುವ ಯಾವುದೇ ರಾಜಕೀಯ ಶಕ್ತಿಗೆ ಎಲ್ಡಿಎಫ್ನ ಈ ಹಿನ್ನಡೆಯು ಒಂದು ಎಚ್ಚರಿಕೆಯ ಪಾಠವಾಗಿದೆ. 'ಸಾಮಾಜಿಕ ಇಂಜಿನಿಯರಿಂಗ್' ಅಥವಾ ಸಾಮಾಜಿಕ ತಂತ್ರಗಾರಿಕೆ ಎಂದಿಗೂ ಸಾಮಾಜಿಕ ನಂಬಿಕೆಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂಬುದನ್ನು ಇದು ನಿರೂಪಿಸಿದೆ. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತ ಜಾತ್ಯತೀತ ಶಕ್ತಿಗಳ ಒಗ್ಗಟ್ಟಿನಿಂದ ಬಲಗೊಂಡ ಯುಡಿಎಫ್ನ ವಿಜಯವು, ಧ್ರುವೀಕರಣದ ಈ ಯುಗದಲ್ಲಿ ಪ್ರತಿರೋಧವನ್ನು ಹೇಗೆ ತೋರಬೇಕು ಎಂಬುದಕ್ಕೆ ಒಂದು ಮಾದರಿಯನ್ನು ಒದಗಿಸಿದೆ.

ಉಳಿದ ಭಾರತಕ್ಕೆ, 2026ರ ಕೇರಳದ ಜನಾದೇಶವು ಒಂದು ನೆನಪೋಲೆ: ಜಾತ್ಯತೀತ ಶಕ್ತಿಗಳು ಸ್ಪಷ್ಟ ಸೈದ್ಧಾಂತಿಕ ಉದ್ದೇಶದೊಂದಿಗೆ ಒಂದಾದಾಗ, ಅವು ಬಹುಸಂಖ್ಯಾತವಾದದ ಅಲೆಯನ್ನು ತಡೆಯಬಲ್ಲವು. ವೈವಿಧ್ಯತೆಯಿಂದ ಕೂಡಿದ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಪ್ರಬಲವಾದ ರಾಜಕೀಯ ಅಸ್ತ್ರ ವಿಭಜನೆಯಲ್ಲ, ಬದಲಿಗೆ ಪ್ರಜ್ಞಾವಂತ ಮತದಾರರ ಶಾಂತಿಯುತ ಹಾಗೂ ಆಯಕಟ್ಟಿನ ಒಗ್ಗಟ್ಟು ಎಂಬುದನ್ನು ಕೇರಳ ಮತ್ತೊಮ್ಮೆ ಸಾಬೀತುಪಡಿಸಿದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Read More
Next Story