
ಹೋಂವರ್ಕ್ ಮಾಡಿಲ್ಲವೆಂದು ಕಪಾಳಕ್ಕೆ ಬಾರಿಸಿದ ಶಿಕ್ಷಕಿ; 6 ವರ್ಷದ ಬಾಲಕ ಸಾವು- ಪೋಷಕರ ಆಕ್ರೋಶ
ಶಿಕ್ಷಕಿ ಬಾಲಕ ತರಗತಿ ಕೊಠಡಿಯಲ್ಲೇ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಹೋಂವರ್ಕ್ ಮಾಡದಿದ್ದಕ್ಕಾಗಿ ಶಿಕ್ಷಕರು ಥಳಿಸಿದ ಪರಿಣಾಮ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂಬ ಆರೋಪ ವಿಶಾಖಪಟ್ಟಣದಲ್ಲಿ ಕೇಳಿಬಂದಿದೆ. ಮೃತ ಬಾಲಕನನ್ನು ಪ್ರಣಯ್ ತೇಜಾ ಎಂದು ಗುರುತಿಸಲಾಗಿದೆ. ವಿಶಾಖಪಟ್ಟಣದ ಒನ್ ಟೌನ್ ಪ್ರದೇಶದಲ್ಲಿರುವ ಲಿಟಲ್ ಗಾರ್ಡನ್ ಶಾಲೆಯಲ್ಲಿ ಗುರುವಾರ ಈ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಪ್ರಣಯ್ ತೇಜಾ ಗುರುವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ತೆರಳಿದ್ದ. ಹೋಂವರ್ಕ್ ಪೂರ್ಣಗೊಳಿಸದಿದ್ದಕ್ಕಾಗಿ ಶಿಕ್ಷಕರು ಬಾಲಕನನ್ನು ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ನಂತರ ಬಾಲಕ ತರಗತಿ ಕೊಠಡಿಯಲ್ಲೇ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಮೃತದೇಹವನ್ನು ಕಿಂಗ್ ಜಾರ್ಜ್ ಆಸ್ಪತ್ರೆ (KGH)ಗೆ ರವಾನಿಸಲಾಗಿದೆ.
ಬಾಲಕನ ಸಾವಿಗೆ ಶಿಕ್ಷಕರೇ ಕಾರಣ ಎಂದು ಪ್ರಣಯ್ ತೇಜಾ ಅವರ ಪೋಷಕರು ಮತ್ತು ಸಂಬಂಧಿಕರು ಆರೋಪಿಸಿದ್ದು, ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕ ಬಾಲಕನ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.
🚨3-member panel formed to probe the death of a minor student by heart attack in Visakhapatnam after he was slapped by a teacher at school pic.twitter.com/ktf7yS8YI8
— The Tatva (@thetatvaindia) August 21, 2026
ಬಾಲಕನ ಸಾವಿಗೆ ಆಂಧ್ರ ಶಿಕ್ಷಣ ಸಚಿವ ಕಂಬನಿ
ವಿಶಾಖಪಟ್ಟಣದಲ್ಲಿ ಹೋಂವರ್ಕ್ ಮಾಡದಿದ್ದಕ್ಕೆ ಶಿಕ್ಷಕ ಹೊಡೆದು 6 ವರ್ಷದ ಬಾಲಕ ಪ್ರಣಯ್ ತೇಜಾ ಮೃತಪಟ್ಟಿರುವ ಘಟನೆ ಅತ್ಯಂತ ಆಘಾತಕಾರಿ ಹಾಗೂ ಕಳವಳಕಾರಿ ಎಂದು ಆಂಧ್ರಪ್ರದೇಶದ ಶಿಕ್ಷಣ ಸಚಿವ ನಾರಾ ಲೋಕೇಶ್ ತೀವ್ರ ಕಂಬನಿ ಮಿಡಿದಿದ್ದಾರೆ.
• ಸಚಿವರ ಎಚ್ಚರಿಕೆ ಹಾಗೂ ಸಾಂತ್ವನ: ಘಟನೆಗೆ ಕಾರಣರಾದ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾರಾ ಲೋಕೇಶ್ ತಿಳಿಸಿದ್ದಾರೆ. ಮೃತ ಬಾಲಕನ ಪೋಷಕರಿಗೆ ತೀವ್ರ ಸಂತಾಪ ಸೂಚಿಸಿರುವ ಅವರು, ಸರ್ಕಾರ ನಿಮ್ಮ ಜೊತೆ ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಲ್ಲಲಿದೆ ಎಂದು 'X' (ಟ್ವಿಟರ್) ಮೂಲಕ ಭರವಸೆ ನೀಡಿದ್ದಾರೆ.
• ಮೂವರ ಸಮಿತಿ ರಚನೆ: ಶಿಕ್ಷಣ ಇಲಾಖೆಯು ಘಟನೆಯ ಕುರಿತು ಪ್ರಾಥಮಿಕ ವರದಿ ಪಡೆದಿದ್ದು, ಪ್ರಕರಣದ ಸಮಗ್ರ ತನಿಖೆಗೆ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ವಿಶಾಖಪಟ್ಟಣ ಆರ್ಜೆಡಿ, ಜಿಲ್ಲಾ ಶಿಕ್ಷಣಾಧಿಕಾರಿ (DEO) ಮತ್ತು ಕಂದಾಯ ವಿಭಾಗಾಧಿಕಾರಿ (RDO) ಒಳಗೊಂಡಿದ್ದಾರೆ.
• ಶಿಕ್ಷಕರಿಗೆ ಜಾಗೃತಿ ಕಾರ್ಯಕ್ರಮ: ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಾನವೀಯತೆಯಿಂದ, ಜವಾಬ್ದಾರಿಯುತವಾಗಿ ಮತ್ತು ಸಂವೇದನಾಶೀಲವಾಗಿ ನಡೆದುಕೊಳ್ಳುವಂತೆ ಶಿಕ್ಷಕರಿಗೆ ವಿಶೇಷ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು ಕಡ್ಡಾಯಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಸದ್ಯ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಬಾಲಕನ ಸಾವಿನ ನಿಖರ ವೈದ್ಯಕೀಯ ಕಾರಣ ತಿಳಿಯಲಿದ್ದು, ಪೊಲೀಸರ ತನಿಖೆ ಮುಂದುವರಿದಿದೆ.

