
‘ತಮಿಳ್ ತಾಯ್ ವಾಳ್ತು’ ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ತಮಿಳು ನಾಡಗೀತೆ ಕಡ್ಡಾಯ: ವಿಜಯ್
ತಮಿಳುನಾಡಿನ ಸರ್ಕಾರಿ, ಶೈಕ್ಷಣಿಕ ಮತ್ತು ಸಾರ್ವಜನಿಕ ವಲಯದ ಕಾರ್ಯಕ್ರಮಗಳ ಆರಂಭದಲ್ಲಿ ತಮಿಳ್ ತಾಯ್ ವಾಳ್ತು ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಸಿಎಂ ವಿಜಯ್ ಮಂಡಿಸಿದ್ದಾರೆ.
ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ನಾಡಗೀತೆಯಾದ ‘ತಮಿಳ್ ತಾಯ್ ವಾಳ್ತು’ ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ಈ ನಿಯಮ ಅನ್ವಯವಾಗಲಿದೆ.
ನಿರ್ಣಯವನ್ನು ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, ತಮಿಳುನಾಡಿನ ಭಾಷಾ ಮತ್ತು ಸಾಂಸ್ಕೃತಿಕ ಹಕ್ಕುಗಳ ವಿಚಾರದಲ್ಲಿ ತಮ್ಮ ತಮಿಳಗ ವೆಟ್ರಿ ಕಳಗಂ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ತಮಿಳು ಕೇವಲ ಒಂದು ಭಾಷೆಯಲ್ಲ, ಅದು ಜನರ ಜೀವನ ಮತ್ತು ಭಾವನೆಗಳೊಂದಿಗೆ ಬೆಸೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ತಾಯಿಭಾಷೆ ತಾಯಿಯಷ್ಟೇ ಪವಿತ್ರ ಎಂಬ ಭಾವನೆಯನ್ನು ಅವರು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಿ ಕಚೇರಿವರೆಗೆ ಅನ್ವಯ
ವಿಧಾನಸಭೆಯಲ್ಲಿ ಮಂಡಿಸಲಾದ ನಿರ್ಣಯದ ಪ್ರಕಾರ, ತಮಿಳುನಾಡಿನ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ನಡೆಯುವ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲೇ ‘ತಮಿಳ್ ತಾಯ್ ವಾಳ್ತು’ ಹಾಡಬೇಕು. ರಾಜ್ಯದ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡುಗಳ ಸರಣಿಯಲ್ಲಿ ‘ತಮಿಳ್ ತಾಯ್ ವಾಳ್ತು’ಗೆ ಮೊದಲ ಸ್ಥಾನ ನೀಡುವ ಉದ್ದೇಶವನ್ನು ನಿರ್ಣಯ ಹೊಂದಿದೆ.
ಕೇಂದ್ರದ ಸಲಹೆ ಬೆನ್ನಲ್ಲೇ ನಿರ್ಣಯ
ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಗೀತೆಯ ಮೊದಲು ‘ವಂದೇ ಮಾತರಂ’ ಹಾಡುವಂತೆ ಜನವರಿ 28ರಂದು ನೀಡಿದ್ದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿತ್ತು. ಈ ಬೆಳವಣಿಗೆಯ ನಡುವೆಯೇ ತಮಿಳುನಾಡು ಸರ್ಕಾರದ ಹೊಸ ನಿರ್ಣಯ ಮಹತ್ವ ಪಡೆದುಕೊಂಡಿದೆ.
1970ರಿಂದಲೇ ಅಧಿಕೃತ ಕಾರ್ಯಕ್ರಮಗಳಲ್ಲಿ ಜಾರಿ
ತಮಿಳುನಾಡು ಸರ್ಕಾರ 1970ರ ನವೆಂಬರ್ 23ರಂದು ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ‘ತಮಿಳ್ ತಾಯ್ ವಾಳ್ತು’ ಹಾಡುವಂತೆ ಆದೇಶಿಸಿತ್ತು. ಬಳಿಕ 2021ರ ಡಿಸೆಂಬರ್ 12ರಂದು ಇದನ್ನು ರಾಜ್ಯ ಗೀತೆಯಾಗಿ ಅಧಿಕೃತವಾಗಿ ಮಾನ್ಯತೆ ನೀಡಲಾಯಿತು.
ರಾಜ್ಯ ಗೀತೆಯಾಗಿ ಮಾನ್ಯತೆ ದೊರೆತ ಬಳಿಕ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡುಗಳ ಕ್ರಮದಲ್ಲಿ ‘ತಮಿಳ್ ತಾಯ್ ವಾಳ್ತು’ಯನ್ನು ಮೊದಲಿಗೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇದೀಗ ವಿಧಾನಸಭೆಯಲ್ಲಿ ಮಂಡಿಸಿರುವ ಹೊಸ ನಿರ್ಣಯದ ಮೂಲಕ ಇದರ ವ್ಯಾಪ್ತಿಯನ್ನು ಮತ್ತಷ್ಟು ಸ್ಪಷ್ಟಪಡಿಸಲು ಸರ್ಕಾರ ಮುಂದಾಗಿದೆ.

