
ಋಷಿಕೇಶದ ರೈಲ್ವೆ ಯಾರ್ಡ್ನಲ್ಲಿ ಶಂಟಿಂಗ್ ವೇಳೆ ಉಜ್ಜಯಿನಿ ಎಕ್ಸ್ಪ್ರೆಸ್ನ 3 ಬೋಗಿಗಳು ಹಳಿ ತಪ್ಪಿವೆ.
ಋಷಿಕೇಶ ಹಳಿ ತಪ್ಪಿದ ರೈಲು: ತನಿಖೆಗೆ ಆದೇಶ
ಋಷಿಕೇಶದ ರೈಲ್ವೆ ಯಾರ್ಡ್ನಲ್ಲಿ ಶಂಟಿಂಗ್ ವೇಳೆ ಉಜ್ಜಯಿನಿ ಎಕ್ಸ್ಪ್ರೆಸ್ನ 3 ಬೋಗಿಗಳು ಹಳಿ ತಪ್ಪಿವೆ. ಖಾಲಿ ರೈಲಾಗಿದ್ದರಿಂದ ಭಾರಿ ಅನಾಹುತ ತಪ್ಪಿದ್ದು, ತನಿಖೆ ಆರಂಭವಾಗಿದೆ.
ಉತ್ತರಾಖಂಡದ ಋಷಿಕೇಶದ ಖಂಡ್ ಗಾಂವ್ ಬಳಿಯ ರೈಲ್ವೆ ಯಾರ್ಡ್ನಲ್ಲಿ ಸೋಮವಾರ ರಾತ್ರಿ ಭೀಕರ ರೈಲು ಅಪಘಾತವೊಂದು ಸಂಭವಿಸಿದೆ. ಶಂಟಿಂಗ್ ಪ್ರಕ್ರಿಯೆಯಲ್ಲಿದ್ದ ಖಾಲಿ ಉಜ್ಜಯಿನಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 14317) ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಆದರೆ, ಘಟನೆಯ ಸಮಯದಲ್ಲಿ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಭಾರಿ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ಯೋಗ ನಗರಿ ರೈಲು ನಿಲ್ದಾಣದ ಬಳಿ ಸೋಮವಾರ ರಾತ್ರಿ ಸುಮಾರು 9.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ನಿಯಮಿತ ನಿರ್ವಹಣೆಯ ಸಮಯದಲ್ಲಿ ರೈಲಿನ ಬ್ರೇಕ್ ವೈಫಲ್ಯಗೊಂಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆಯ ಬೆನ್ನಲ್ಲೇ ಹಳಿಗಳ ಬಳಿ ಭಾರೀ ಜನಸ್ತೋಮ ಜಮಾಯಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಆಡಳಿತ ಮಂಡಳಿಯು ತಕ್ಷಣವೇ ರಕ್ಷಣಾ ಮತ್ತು ಪುನಃಸ್ಥಾಪನೆ ಕಾರ್ಯಾಚರಣೆಯನ್ನು ಆರಂಭಿಸಿದೆ. ಹಳಿ ತಪ್ಪಿದ ಮೂರು ಬೋಗಿಗಳನ್ನು ತೆರವುಗೊಳಿಸಲು ಬೃಹತ್ ಕ್ರೇನ್ಗಳು ಮತ್ತು ಯಂತ್ರೋಪಕರಣಗಳನ್ನು ಬಳಸಲಾಗಿದ್ದು, ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿದಿದೆ. ಹಾನಿಗೊಳಗಾದ ಹಳಿಗಳನ್ನು ದುರಸ್ತಿಗೊಳಿಸಿ, ರೈಲು ಸಂಚಾರವನ್ನು ಯಥಾಸ್ಥಿತಿಗೆ ತರಲು ಮೊರಾದಾಬಾದ್ ವಿಭಾಗದ ಉತ್ತರ ರೈಲ್ವೆ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸದ್ಯ ಘಟನೆಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ರೈಲ್ವೆ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

