ಮೂರು ಯುವತಿಯರು, ಒಬ್ಬನೇ ವರ! ಉತ್ತರ ಪ್ರದೇಶದ ವೈರಲ್ ಮದುವೆ ವಿಡಿಯೊ ಸತ್ಯವೇನು?
x

ಮೂರು ಯುವತಿಯರು, ಒಬ್ಬನೇ ವರ! ಉತ್ತರ ಪ್ರದೇಶದ ವೈರಲ್ ಮದುವೆ ವಿಡಿಯೊ ಸತ್ಯವೇನು?

ಮಾಹಿತಿಯ ಪ್ರಕಾರ, ಮದುವೆಯಾದ ಯುವತಿಯರನ್ನು ಅಮ್ರೋಹಾದ ಧೋರಿಯಾ ಗ್ರಾಮದ ಸರೋಜಾ, ಸಾವಿತ್ರಿ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ.


Click the Play button to hear this message in audio format

ಒಂದೇ ಮಂಟಪದಲ್ಲಿ, ಒಬ್ಬನೇ ವರ ಮೂವರು ಯುವತಿಯರ ಕೊರಳಿಗೆ ತಾಳಿ ಕಟ್ಟಿ, ಸಿಂಧೂರವಿಟ್ಟು ಮದುವೆಯಾಗಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋಗಳು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ, ವರನು ಹೋಮಗುಂಡದ ಮುಂದೆ ಮೂವರು ವಧುಗಳೊಂದಿಗೆ ಏಳು ಸುತ್ತು (ಸಪ್ತಪದಿ) ತುಳಿದು, ನಂತರ ಒಬ್ಬೊಬ್ಬರಾಗಿಯೇ ಮೂವರಿಗೂ ಸಿಂಧೂರವಿಡುವುದನ್ನು ಕಾಣಬಹುದು.

ಯಾರು ಈ ವಧು-ವರರು?

ಮಾಹಿತಿಯ ಪ್ರಕಾರ, ಮದುವೆಯಾದ ಯುವತಿಯರನ್ನು ಅಮ್ರೋಹಾದ ಧೋರಿಯಾ ಗ್ರಾಮದ ಸರೋಜಾ, ಸಾವಿತ್ರಿ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಸ್ವಂತ ಅಕ್ಕ-ತಂಗಿಯರಾಗಿದ್ದು, ಮತ್ತೊಬ್ಬರು ಅವರ ಚಿಕ್ಕಮ್ಮ/ದೊಡ್ಡಮ್ಮನ ಮಗಳು (ಸೋದರಸಂಬಂಧಿ) ಎನ್ನಲಾಗಿದೆ.

ಇನ್ನು ವರನನ್ನು ವಿಕಾಸ್ (ಅಲಿಯಾಸ್ ವಿಕ್ಕು) ಎಂದು ಗುರುತಿಸಲಾಗಿದೆ. ಈತ ಈ ಯುವತಿಯರ ಸೋಶಿಯಲ್ ಮೀಡಿಯಾ ವೀಡಿಯೋಗಳಿಗೆ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಆರು ತಿಂಗಳುಗಳಿಂದ ಈ ಯುವತಿಯರ ವೀಡಿಯೋಗಳಲ್ಲಿ ಈತನೇ 'ಆನ್-ಸ್ಕ್ರೀನ್' ಗಂಡನಾಗಿ ಅಭಿನಯಿಸುತ್ತಿದ್ದ ಎನ್ನಲಾಗಿದೆ.

ಆರಂಭದಲ್ಲಿ, ನೆಟ್ಟಿಗರು ಇದು ಇನ್‌ಸ್ಟಾಗ್ರಾಮ್ 'ರೀಲ್ಸ್'ಗಾಗಿ (Reels) ಮಾಡಿದ ನಾಟಕ ಅಥವಾ ಕಂಟೆಂಟ್ ಇರಬಹುದು ಎಂದು ಭಾವಿಸಿದ್ದರು. ಆದರೆ, ನಂತರ ಈ ನಾಲ್ವರೂ ಕ್ಯಾಮೆರಾ ಮುಂದೆ ಬಂದು, "ನಾವು ಯಾವುದೇ ರೀಲ್ಸ್‌ಗಾಗಿ ಹೀಗೆ ಮಾಡಿಲ್ಲ, ನಿಜವಾಗಿಯೂ ಮದುವೆಯಾಗಿದ್ದೇವೆ" ಎಂದು ಸ್ಪಷ್ಟನೆ ನೀಡಿದ್ದಾರೆ.

ಒಬ್ಬನೇ ಯುವಕನನ್ನು ಮೂವರೂ ಮದುವೆಯಾಗಿದ್ದು ಏಕೆ?

ಯುವತಿಯರು ನೀಡಿರುವ ಸ್ಪಷ್ಟನೆ ಪ್ರಕಾರ, ಅವರೆಲ್ಲರೂ ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಬೆಳೆದಿದ್ದು, ಮದುವೆಯ ನಂತರ ಪರಸ್ಪರ ಬೇರೆಯಾಗಲು ಇಷ್ಟವಿರಲಿಲ್ಲ. ಅವರ ಪೋಷಕರು ಬೇರೆ ಬೇರೆ ಯುವಕರೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದಾಗ ತೀವ್ರ ಬೇಸರಗೊಂಡಿದ್ದರು. ಹೀಗಾಗಿ, ಜೀವನಪರ್ಯಂತ ಒಟ್ಟಿಗೇ ಇರಲು ವಿಕಾಸ್‌ನನ್ನು ಮದುವೆಯಾಗಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

"ನಾವು ಬಾಲ್ಯದಿಂದಲೂ ಒಟ್ಟಿಗೇ ಬೆಳೆದಿದ್ದೇವೆ. ಒಬ್ಬರನ್ನು ಬಿಟ್ಟು ಒಬ್ಬರು ಬದುಕುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಮದುವೆಯಾಗಿ ಬೇರೆಯಾಗಬೇಕಾಗುತ್ತದೆ ಎಂದು ತಿಳಿದಾಗ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯೂ ಬಂದಿತ್ತು. ನಂತರ ಸಾಯುವ ಬದಲು, ಒಬ್ಬನೇ ವ್ಯಕ್ತಿಯನ್ನು ಮದುವೆಯಾಗಿ ಒಟ್ಟಿಗೇ ಇರಲು ನಿರ್ಧರಿಸಿದೆವು. ನಾವೆಲ್ಲರೂ ಪ್ರಾಪ್ತವಯಸ್ಕರು, ನಮ್ಮ ಸ್ವಂತ ಇಷ್ಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ದಯವಿಟ್ಟು ಸೋಶಿಯಲ್ ಮೀಡಿಯಾದಲ್ಲಿ ನಮ್ಮನ್ನು ಟ್ರೋಲ್ ಮಾಡಬೇಡಿ" ಎಂದು ಯುವತಿಯರು ಮನವಿ ಮಾಡಿದ್ದಾರೆ.

ಪ್ರಸ್ತುತ ಸರೋಜಾ ಬಿ.ಟೆಕ್ (B.Tech) ವ್ಯಾಸಂಗ ಮಾಡುತ್ತಿದ್ದರೆ, ಸಾವಿತ್ರಿ ಮತ್ತು ಸಂತೋಷ್ 12ನೇ ತರಗತಿ ಮುಗಿಸಿದ್ದಾರೆ. ಯುವತಿಯರ ನಡುವಿನ ಪ್ರೀತಿ ಮತ್ತು ಬಾಂಧವ್ಯವನ್ನು ಕಂಡು, ಅವರ ಇಷ್ಟದಂತೆ ಮದುವೆಯಾಗಲು ಒಪ್ಪಿಕೊಂಡೆ ಎಂದು ವರ ವಿಕಾಸ್ ಹೇಳಿದ್ದಾನೆ.

ದೇವಸ್ಥಾನದ ಮಂಡಳಿ ಹೇಳಿದ್ದೇನು?

ಈ ಮದುವೆಯು ಹಾಸನ್‌ಪುರದ ಪ್ರಸಿದ್ಧ ಮಾ ಚಾಮುಂಡಿ ದೇವಸ್ಥಾನದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಇದನ್ನು ಸಂಪೂರ್ಣವಾಗಿ ನಿರಾಕರಿಸಿದೆ.

ದೇವಸ್ಥಾನದಲ್ಲಿ ಜೀರ್ಣೋದ್ಧಾರ ಮತ್ತು ಸೌಂದರ್ಯೀಕರಣ ಕೆಲಸಗಳು ನಡೆಯುತ್ತಿದ್ದಾಗ ಈ ವೀಡಿಯೋ ಶೂಟ್ ಮಾಡಿರಬಹುದು, ಆ ಸಮಯದಲ್ಲಿ ಅರ್ಚಕರಾಗಲಿ ಅಥವಾ ದೇವಸ್ಥಾನದ ಸಿಬ್ಬಂದಿಯಾಗಲಿ ಅಲ್ಲಿರಲಿಲ್ಲ. ಇಂತಹ ಯಾವುದೇ ಮದುವೆ ನಡೆದ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ದೇವಸ್ಥಾನದ ಮಂಡಳಿ ಸ್ಪಷ್ಟಪಡಿಸಿದೆ.

Read More
Next Story