ಸೇವೆ ಕಾಯಂಗೊಳಿಸುವ ಕನಸು ಭಗ್ನ; 360 ಮದರಸಾ ಸಿಬ್ಬಂದಿಗೆ ಸುಪ್ರೀಂ ಕೋರ್ಟ್ ಶಾಕ್
x

ಸೇವೆ ಕಾಯಂಗೊಳಿಸುವ ಕನಸು ಭಗ್ನ; 360 ಮದರಸಾ ಸಿಬ್ಬಂದಿಗೆ ಸುಪ್ರೀಂ ಕೋರ್ಟ್ ಶಾಕ್

ಪಶ್ಚಿಮ ಬಂಗಾಳದ ಸುಮಾರು 360 ಮದರಸಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸೇವೆ ಕಾಯಂಗೊಳಿಸುವ ಹಾಗೂ ಅನುದಾನ ನೀಡುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.


Click the Play button to hear this message in audio format

ಪಶ್ಚಿಮ ಬಂಗಾಳದ ವಿವಿಧ ಮದರಸಾಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 360 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 13) ದೊಡ್ಡ ಹಿನ್ನಡೆ ನೀಡಿದೆ. ರಾಜ್ಯ ಸರ್ಕಾರದ ಅನುದಾನ ಯೋಜನೆಯಡಿ ಸೇವೆಯನ್ನು ಕಾಯಂಗೊಳಿಸುವಂತೆ ಹಾಗೂ ವೇತನ ಸೌಲಭ್ಯ ನೀಡುವಂತೆ ಸಲ್ಲಿಸಲಾಗಿದ್ದ ಸುಮಾರು 48 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಎ.ಜಿ. ಮಸೀಹ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ.

13 ಅರ್ಜಿಗಳ ಪರಿಶೀಲನೆ ಬಳಿಕ ಅಂತಿಮ ತೀರ್ಪು

350ಕ್ಕೂ ಹೆಚ್ಚು ಅರ್ಜಿದಾರರ ಪ್ರಕರಣಗಳಲ್ಲಿ ಮೊದಲು 13 ಮಂದಿಯ ಅರ್ಜಿಗಳನ್ನು ಮಾದರಿಯಾಗಿ ಪರಿಶೀಲಿಸಿದ ನ್ಯಾಯಪೀಠ, ಅವುಗಳಲ್ಲಿ ಯಾವುದಾದರೂ ಅರ್ಜಿ ಸಮರ್ಥನೀಯವಾಗಿದ್ದರೆ ಉಳಿದ ಅರ್ಜಿಗಳನ್ನೂ ಪರಿಗಣಿಸಲಾಗುತ್ತಿತ್ತು ಎಂದು ತಿಳಿಸಿದೆ.

ತೀರ್ಪು ಪ್ರಕಟಿಸುವ ವೇಳೆ ನ್ಯಾಯಪೀಠ, "13 ಅರ್ಜಿದಾರರಲ್ಲಿ ಒಬ್ಬರಾದರೂ ತಮ್ಮ ಪರವಾಗಿ ನ್ಯಾಯಾಲಯವನ್ನು ಮನವೊಲಿಸಿದ್ದರೆ ಉಳಿದ ಪ್ರಕರಣಗಳನ್ನೂ ಪರಿಶೀಲಿಸುತ್ತಿದ್ದೆವು. ಆದರೆ ದುರದೃಷ್ಟವಶಾತ್, ಯಾರೊಬ್ಬರೂ ತಮ್ಮ ಬೇಡಿಕೆಯನ್ನು ಸಮರ್ಥಿಸಲು ವಿಫಲರಾದರು" ಎಂದು ಹೇಳಿದೆ.

ಎಲ್ಲ ಅರ್ಜಿಗಳೂ ವಜಾ

13 ಅರ್ಜಿಗಳ ಪರಿಶೀಲನೆಯ ಬಳಿಕ, ಉಳಿದ ಎಲ್ಲ ಅರ್ಜಿಗಳನ್ನೂ ತಿರಸ್ಕರಿಸಿರುವ ನ್ಯಾಯಪೀಠ, "ಈ ಎಲ್ಲ ಅರ್ಜಿಗಳಲ್ಲೂ ಯಾವುದೇ ಕಾನೂನುಬದ್ಧ ಅರ್ಹತೆ ಕಂಡುಬಂದಿಲ್ಲ. ಆದ್ದರಿಂದ ಎಲ್ಲಾ ರಿಟ್ ಅರ್ಜಿಗಳನ್ನು ವಜಾಗೊಳಿಸಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಈ ವಿವಾದವು ಪಶ್ಚಿಮ ಬಂಗಾಳ ಮದರಸಾ ಸೇವಾ ಆಯೋಗ ಕಾಯ್ದೆ-2008ಗೆ ಸಂಬಂಧಿಸಿದೆ. ಈ ಕಾಯ್ದೆಯಡಿ ಮಾನ್ಯತೆ ಪಡೆದ ಮದರಸಾಗಳಲ್ಲಿ ಶಿಕ್ಷಕರ ನೇಮಕಾತಿಗೆ ಶಿಫಾರಸು ಮಾಡುವ ಉದ್ದೇಶದಿಂದ ಕಾನೂನುಬದ್ಧ ಆಯೋಗವನ್ನು ರಚಿಸಲಾಗಿತ್ತು. ಆದರೆ 2014ರಲ್ಲಿ ಕಲ್ಕತ್ತಾ ಹೈಕೋರ್ಟ್ ಈ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಿತ್ತು. 2015ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವೂ ಅದನ್ನು ಎತ್ತಿಹಿಡಿದಿತ್ತು. ನಂತರ 2016ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆ ನೀಡಿತ್ತು.

ನೇಮಕಾತಿಗಳ ಸಿಂಧುತ್ವದ ಪರಿಶೀಲನೆ

2023ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ವಿಶೇಷ ಸಮಿತಿಯನ್ನು ರಚಿಸಿ, 2015ರ ಹೈಕೋರ್ಟ್ ತೀರ್ಪು ಮತ್ತು 2020ರಲ್ಲಿ ಸುಪ್ರೀಂ ಕೋರ್ಟ್ 2008ರ ಕಾಯ್ದೆಯನ್ನು ಮಾನ್ಯಗೊಳಿಸಿದ ನಡುವಿನ ಅವಧಿಯಲ್ಲಿ ನಡೆದ ನೇಮಕಾತಿಗಳ ಸಿಂಧುತ್ವ ಪರಿಶೀಲಿಸಲು ಸೂಚಿಸಿತ್ತು.

ಸಮಿತಿ ತನ್ನ ವರದಿಯಲ್ಲಿ ಆ ಅವಧಿಯಲ್ಲಿ ನಡೆದ ನೇಮಕಾತಿಗಳು ಅಮಾನ್ಯ ಎಂದು ಅಭಿಪ್ರಾಯಪಟ್ಟಿತ್ತು. ಈ ವರದಿಯನ್ನು ಪ್ರಶ್ನಿಸಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಇದೀಗ ಸುಪ್ರೀಂ ಕೋರ್ಟ್ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿರುವುದರಿಂದ, ರಾಜ್ಯ ಸರ್ಕಾರದ ಅನುದಾನ ಹಾಗೂ ಸೇವೆ ಕಾಯಂಗೊಳಿಸುವ ಬೇಡಿಕೆಗೆ ದೊಡ್ಡ ಹಿನ್ನಡೆಯಾಗಿದೆ.

Read More
Next Story