
ವಯನಾಡ್ನಲ್ಲಿ ಭೂಕುಸಿತ; ಎದೆ ಝಲ್ಲೆನಿಸುತ್ತೆ ವೈರಲಾಗ್ತಿರುವ ಈ ಭೀಕರ ದೃಶ್ಯ
ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರಿ ಮಳೆಗೆ ತತ್ತರಿಸಿದ ಜನಜೀವನ. ಸುರಂಗ ಮಾರ್ಗದ ಬಳಿ ಭೂಕುಸಿತಕ್ಕೆ ಐವರು ಬಲಿಯಾಗಿದ್ದಾರೆ. ವಯನಾಡ್ ಪದೇ ಪದೇ ಇಂತಹ ದುರಂತಕ್ಕೆ ತುತ್ತಾಗುತ್ತಿರುವುದು ಏಕೆ? ಪೂರ್ಣ ವರದಿ ಓದಿ.
ಕೇರಳದ ವಯನಾಡ್ ಜಿಲ್ಲೆಯ ಭೀಕರ ಭೂಕುಸಿತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ರಸ್ತೆಯ ಒಂದು ಭಾಗವೇ ಸಂಪೂರ್ಣವಾಗಿ ಕುಸಿದುಬಿದ್ದು, ಕ್ಷಣಾರ್ಧದಲ್ಲಿ ಟ್ಯಾಂಕರ್ ಮತ್ತು ಹಲವಾರು ವಾಹನಗಳು ಕೊಚ್ಚಿ ಹೋಗುತ್ತಿರುವ ಭಯಾನಕ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ. ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಛತ್ರಿ ಹಿಡಿದು ದೂರದಲ್ಲಿ ನಿಂತು ನೋಡುತ್ತಿದ್ದ ಜನರ ಕಣ್ಣೆದುರೇ ಹಠಾತ್ತನೆ ಭೂಮಿ ಕುಸಿದು ಬಿದ್ದಿವೆ. ಭೀಕರ ಭೂಕುಸಿತದ ರಭಸಕ್ಕೆ ಟ್ಯಾಂಕರ್ ಕೊಚ್ಚಿ ಬಂದಿದೆ.
ಅನಕ್ಕಂಫೊಯಿಲ್-ಕಲ್ಲಾಡಿ-ಮೇಪ್ಪಾಡಿ ಅವಳಿ ಸುರಂಗ ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಈ ದುರಂತ ನಡೆದಿದ್ದು, 3 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು ಏಳು ಮಂದಿ ಮಣ್ಣಿನಡಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ. ಭೂಕುಸಿತ ಸಂಭವಿಸಿದ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಒಂದೇ ಬಾರಿಗೆ ಗುಡ್ಡ ಕುಸಿದು, ನೀರಿನೊಂದಿಗೆ ವಾಹನಗಳನ್ನು ಎಳೆದುಕೊಂಡು ಬರುವ ದೃಶ್ಯಗಳು ಮೈ ಜುಮ್ ಎನಿಸುತ್ತಿವೆ. ಈ ಭೂಕುಸಿತದಲ್ಲಿ ಕನಿಷ್ಠ ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲವು ದಿನಗಳಿಂದ ವಯನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.
Absolutely terrifying CCTV visuals of Wayanad Landslide 😱
— Chennai Weatherman (@chennaisweather) July 7, 2026
Look at the big tanker truck getting thrown off and people standing near that narrowly escaping.#wayanad #landslide #exclusive pic.twitter.com/eGyeBAzS8y
ಮೀನಾಕ್ಷಿ ಸೇತುವೆಯ ಸಮೀಪ ಈ ಘಟನೆ ನಡೆದಿದ್ದು, ಈ ಮಣ್ಣಿನ ಕುಸಿತದಲ್ಲಿ ಹತ್ತಿರದ ಒಂದು ಚರ್ಚ್ ಮತ್ತು ಮನೆಯನ್ನು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್, ಈ ಎರಡೂ ಕಟ್ಟಡಗಳಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದವರು ಮೆಕ್ಕಾ ಯಾತ್ರೆಗೆ ತೆರಳಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು ಮತ್ತು ದುರಂತ ಸಂಭವಿಸಿದ ಸಮಯದಲ್ಲಿ ಚರ್ಚ್ನಲ್ಲಿ ಯಾರೂ ಇರಲಿಲ್ಲ.
ರಕ್ಷಣಾ ಕಾರ್ಯಾಚರಣೆಗೆ ಮೂಲಸೌಕರ್ಯ ಕೊರತೆಯ ಅಡ್ಡಿ
ಸಂತ್ರಸ್ತ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಸೇತುವೆಯೊಂದು ಅವಶೇಷಗಳ ಅಡಿಯಲ್ಲಿ ಹೂತುಹೋಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತೀವ್ರ ಸವಾಲಾಗಿ ಪರಿಣಮಿಸಿದೆ. ಇದು ತುರ್ತು ರಕ್ಷಣಾ ತಂಡಗಳು ಮತ್ತು ಭಾರೀ ಯಂತ್ರೋಪಕರಣಗಳು ದುರಂತದ ಸ್ಥಳಕ್ಕೆ ತಲುಪುವುದನ್ನು ಕಷ್ಟಕರವಾಗಿಸಿದೆ.
ಅದೇ ಸಮಯದಲ್ಲಿ, ವಿಕೋಪ ಪೀಡಿತ ಪ್ರದೇಶದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಬೃಹತ್ ಮಣ್ಣಿನ ದಿಬ್ಬಗಳು, ಹಾನಿಗೊಳಗಾದ ಕಟ್ಟಡಗಳು ಮತ್ತು ಕಠಿಣ ಪರಿಸ್ಥಿತಿಯ ನಡುವೆಯೂ ರಕ್ಷಣಾ ಸಿಬ್ಬಂದಿ ಕೆಲಸ ಮಾಡುತ್ತಿರುವುದು ಜನರ ಗಮನ ಸೆಳೆದಿದೆ.
ದಶಕಗಳಿಂದಲೂ ಪದೇ ಪದೆ ದುರಂತ
ವಯನಾಡ್ ಜಿಲ್ಲೆಯು ದಶಕಗಳಿಂದಲೂ ಇಂತಹ ಹತ್ತಾರು ಭೀಕರ ಭೂಕುಸಿತಗಳಿಗೆ ಸಾಕ್ಷಿಯಾಗಿದೆ. ಇದು ಕೇರಳದ ಅತ್ಯಂತ ಸೂಕ್ಷ್ಮ ಮತ್ತು ಅಪಾಯಕಾರಿ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ.
• ಜುಲೈ 30, 2024 ರಂದು ಸಂಭವಿಸಿದ ಭೀಕರ ದುರಂತದಲ್ಲಿ ಸುಮಾರು 298 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 86,000 ಚದರ ಮೀಟರ್ ಪ್ರದೇಶ ತೀವ್ರವಾಗಿ ಬಾಧಿತವಾಗಿತ್ತು.
• 1984 ರ ಮುಂಡಕೈ ಮಣ್ಣಿನ ಕುಸಿತದಲ್ಲಿ 14 ಮಂದಿ, 1992 ರ ಕಪ್ಪಿಕ್ಕಲಂ ಭೂಕುಸಿತದಲ್ಲಿ 11 ಮಂದಿ ಮತ್ತು 2007 ರ ವಲಂತೋಡ್ ಭೂಕುಸಿತದಲ್ಲಿ ನಾಲ್ವರು ಮೃತಪಟ್ಟಿದ್ದರು
ಭೌಗೋಳಿಕ ಪರಿಸ್ಥಿತಿ: ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ವಯನಾಡ್ ಜಿಲ್ಲೆಯು ಅತ್ಯಂತ ಸೂಕ್ಷ್ಮ ವಲಯದಲ್ಲಿದೆ. ವಿಶೇಷವಾಗಿ ವಯನಾಡ್-ಮಲಪ್ಪುರಂ-ಕೋಝಿಕೋಡ್ ಗಡಿಭಾಗದ ಬೆಟ್ಟ ಸಾಲುಗಳು ಹೆಚ್ಚು ಅಪಾಯ ಎದುರಿಸುತ್ತಿವೆ.
ಕೇರಳದ ಸುಮಾರು 17,000 ಚದರ ಕಿಲೋಮೀಟರ್ ಪ್ರದೇಶವನ್ನು (ಮುಖ್ಯವಾಗಿ ಪಶ್ಚಿಮ ಘಟ್ಟಗಳ ಉದ್ದಕ್ಕೂ) ಭೂಕುಸಿತ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದೆ. ಇದರೊಂದಿಗೆ ವಯನಾಡ್ ಮಧ್ಯಮ ಪ್ರಮಾಣದ ಭೂಕಂಪದ ಅಪಾಯದ ವಲಯದಲ್ಲೂ ಬರುತ್ತದೆ.

