
ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ನನ್ನ ಭಾಷಣ ಕಟ್-ಕಾಪಿ-ಪೇಸ್ಟ್ ಮಾಡಲಾಗಿದೆ: ಉದಯನಿಧಿ ಸ್ಟಾಲಿನ್ ಆಕ್ರೋಶ
ರಿಲೀಸ್ ಆದ ಬಳಿಕ ಪ್ರತಿಕ್ರಿಯಿಸಿದ ಉದಯನಿಧಿ ಸ್ಟಾಲಿನ್, ತಮ್ಮ ಭಾಷಣವನ್ನು ಕಟ್-ಕಾಪಿ-ಪೇಸ್ಟ್ ಮಾಡಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ, ರೈತರ ಪರ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ತಮಿಳುನಾಡಿನಲ್ಲಿ ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದಡಿ ಬಂಧನಕ್ಕೊಳಗಾದ ಡಿಎಂಕೆ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತಮ್ಮ ಭಾಷಣವನ್ನು "ಕಟ್, ಕಾಪಿ, ಪೇಸ್ಟ್" ಮಾಡಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತಿರುಚಿರಾಪಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉದಯನಿಧಿ, "ನಾನು ಒಂದೇ ಅರ್ಥದಲ್ಲಿ ಮಾತನಾಡಿದ್ದೆ. ರೈತರಿಗೆ ಕಾವೇರಿ ನೀರು ಸಿಗಬೇಕು ಎಂಬುದೇ ನನ್ನ ಉದ್ದೇಶವಾಗಿತ್ತು. ಮಹಿಳೆಯರನ್ನು ಅವಮಾನಿಸುವ ಯಾವುದೇ ಉದ್ದೇಶ ನನಗಿಲ್ಲ. ತಮಿಳುನಾಡಿನ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯನ್ನೂ ನನ್ನ ಕುಟುಂಬದವರಂತೆ ನೋಡುತ್ತೇನೆ" ಎಂದು ಸ್ಪಷ್ಟಪಡಿಸಿದರು.
ತಮ್ಮ ಬಂಧನವನ್ನು ಸರ್ಕಾರದ ರಾಜಕೀಯ ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಆರೋಪಿಸಿದ ಅವರು, ರೈತರ ಸಮಸ್ಯೆ, ಕಾವೇರಿ ನೀರಿನ ಹಂಚಿಕೆ ಹಾಗೂ ಮೆಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ್ದಕ್ಕೆ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಚೆನ್ನೈನಿಂದ ತಂಜಾವೂರಿಗೆ ಸುಮಾರು 400 ಕಿಲೋಮೀಟರ್ಗಳವರೆಗೆ 3,000ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ತಮ್ಮನ್ನು ಕರೆದೊಯ್ದ ರೀತಿಯನ್ನು ಟೀಕಿಸಿದ ಅವರು, "ಭಯೋತ್ಪಾದಕನಂತೆ ನನ್ನನ್ನು ನಡೆಸಿಕೊಂಡರು" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಎಂಕೆ ಕಾರ್ಯಕರ್ತನಾಗಿ ಹಾಗೂ ಕರುಣಾನಿಧಿ ಅವರ ಮೊಮ್ಮಗ ಮತ್ತು ಎಂ.ಕೆ. ಸ್ಟಾಲಿನ್ ಅವರ ಪುತ್ರನಾಗಿ ಇಂತಹ ಪ್ರಕರಣಗಳಿಗೆ ಹೆದರುವುದಿಲ್ಲ ಎಂದು ಹೇಳಿದ ಉದಯನಿಧಿ, ರೈತರ ಪರವಾಗಿ ಮುಂದೆಯೂ ನೂರಾರು ಬಾರಿ ಧ್ವನಿ ಎತ್ತುವುದಾಗಿ ಘೋಷಿಸಿದರು.

