Delay in Vijay becoming CM: TVK activist attempts suicide by setting himself on fire, admitted to hospital
x

ಟಿವಿಕೆ ಮುಖ್ಯಸ್ಥ ವಿಜಯ್‌ ಹಾಗೂ ಅವರ ಅಭಿಮಾನಿ

ವಿಜಯ್ ಸಿಎಂ ಆಗಲು ವಿಳಂಬ: ಬೆಂಕಿ ಹಚ್ಚಿಕೊಂಡು ಟಿ.ವಿ.ಕೆ ಕಾರ್ಯಕರ್ತನ ಆತ್ಮಹತ್ಯೆ ಯತ್ನ, ಆಸ್ಪತ್ರೆಗೆ ದಾಖಲು

ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಟಿ.ವಿ.ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು ಮತ್ತು ಇಂತಹ ವಿಪರೀತ ನಿರ್ಧಾರಗಳಿಗೆ ಮುಂದಾಗಬಾರದು ಎಂದು ಮನವಿ ಮಾಡಿದ್ದಾರೆ.


Click the Play button to hear this message in audio format

ತಮಿಳುನಾಡಿನಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿ ಹಲವು ದಿನ ಕಳೆದರೂ ಸರ್ಕಾರ ರಚನೆಯ ಕಗ್ಗಂಟು ಬಗೆಹರಿದಿಲ್ಲ. ತಮ್ಮ ನೆಚ್ಚಿನ ನಾಯಕ, ನಟ ವಿಜಯ್ ಅವರು ಮುಖ್ಯಮಂತ್ರಿಯಾಗುವುದು ವಿಳಂಬವಾಗುತ್ತಿರುವುದರಿಂದ ತೀವ್ರ ಮನನೊಂದ ತಮಿಳಗ ವೆಟ್ರಿ ಕಳಗಂ (ಟಿ.ವಿ.ಕೆ - TVK) ಪಕ್ಷದ ಕಾರ್ಯಕರ್ತನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಸುಟ್ಟಗಾಯಗಳಿಂದ ನರಳುತ್ತಿರುವ ಕಾರ್ಯಕರ್ತನನ್ನು ಸ್ಥಳೀಯರು ರಕ್ಷಿಸಿ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಹಿನ್ನೆಲೆಯೇನು?

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿ.ವಿ.ಕೆ ಪಕ್ಷವು ಗಮನಾರ್ಹ ಸಾಧನೆ ಮಾಡಿದ್ದರೂ, ಮ್ಯಾಜಿಕ್ ನಂಬರ್ (118) ತಲುಪಲು ಕಸರತ್ತು ನಡೆಸುತ್ತಿದೆ. ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡುವ ವಿಚಾರದಲ್ಲಿ ಉಂಟಾಗಿರುವ ವಿಳಂಬ ಹಾಗೂ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಗಳಿಂದಾಗಿ ವಿಜಯ್ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಆತಂಕ ಹಾಗೂ ಹತಾಶೆ ಮನೆಮಾಡಿದೆ.

ಇದೇ ಹತಾಶೆಯಲ್ಲಿ ಈ ಕಾರ್ಯಕರ್ತ, ವಿಜಯ್ ಅವರು ಶೀಘ್ರವೇ ಮುಖ್ಯಮಂತ್ರಿ ಗಾದಿಗೆ ಏರಬೇಕು ಹಾಗೂ ರಾಜ್ಯಪಾಲರು ಕೂಡಲೇ ಸರ್ಕಾರ ರಚನೆಗೆ ಆಹ್ವಾನ ನೀಡಬೇಕು ಎಂದು ಆಗ್ರಹಿಸಿ ಮೈಮೇಲೆ ಬೆಂಕಿ ಹಚ್ಚಿಕೊಂಡಿದ್ದಾನೆ. ಘಟನೆಯಿಂದಾಗಿ ಆತನ ದೇಹದ ಹಲವು ಭಾಗಗಳಿಗೆ ಸುಟ್ಟಗಾಯಗಳಾಗಿವೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಶಾಂತಿಗಾಗಿ ನಾಯಕರ ಮನವಿ

ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಟಿ.ವಿ.ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು ಮತ್ತು ಇಂತಹ ವಿಪರೀತ ನಿರ್ಧಾರಗಳಿಗೆ ಮುಂದಾಗಬಾರದು ಎಂದು ಮನವಿ ಮಾಡಿದ್ದಾರೆ. ಸರ್ಕಾರ ರಚನೆ ಪ್ರಕ್ರಿಯೆಗಳು ಸಾಂವಿಧಾನಿಕ ಚೌಕಟ್ಟಿನಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ವಿಶ್ವಾಸವಿದೆ ಎಂದು ನಾಯಕರು ಕಾರ್ಯಕರ್ತರಿಗೆ ಸಾಂತ್ವನ ಹೇಳಿದ್ದಾರೆ.

ಒಂದೆಡೆ ರಾಜಕೀಯ ಮೇಲಾಟ, ಶಾಸಕರ ಬೆಂಬಲ ಪತ್ರಗಳ ವಿವಾದ ತಾರಕಕ್ಕೇರಿದ್ದರೆ, ಮತ್ತೊಂದೆಡೆ ಕಾರ್ಯಕರ್ತರು ಇಂತಹ ಭಾವನಾತ್ಮಕ ಹೆಜ್ಜೆಗಳನ್ನಿಡುತ್ತಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Read More
Next Story