Lack of clarity on supported MLAs: Governor instructs Thalapathy Vijay to prove majority
x

ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ಗೆ ಮನವಿ ಸಲ್ಲಿಸಿದ ಟಿವಿಕೆ ಮುಖ್ಯಸ್ಥ ವಿಜಯ್‌

ಬೆಂಬಲಿತ ಶಾಸಕರ ಸ್ಪಷ್ಟತೆ ಇಲ್ಲ: ಬಹುಮತ ಸಾಬೀತುಪಡಿಸಲು ದಳಪತಿ ವಿಜಯ್‌ಗೆ ರಾಜ್ಯಪಾಲರ ಸೂಚನೆ

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 118 ಸ್ಥಾನಗಳು ಬೇಕು. ಪ್ರಸ್ತುತ ಟಿವಿಕೆ 108 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್‌ನ 5 ಶಾಸಕರು ಬೆಂಬಲ ಘೋಷಿಸಿದ್ದಾರೆ.


Click the Play button to hear this message in audio format

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ಅವರ 'ತಮಿಳ್​​ ವೆಟ್ರಿ ಕಳಗಂ' (ಟಿವಿಕೆ) ಪಕ್ಷಕ್ಕೆ ಸರ್ಕಾರ ರಚಿಸುವ ಹಾದಿ ಇನ್ನೂ ಸುಗಮವಾಗಿಲ್ಲ. ಬಹುಮತ ಸಾಬೀತುಪಡಿಸಲು 118 ಶಾಸಕರ ಬೆಂಬಲದ ಅಗತ್ಯವಿದ್ದು, ಇದೀಗ ಟಿವಿಕೆ ನಾಯಕರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಆದರೆ, ಟಿವಿಕೆ ಬಳಿ ಸ್ಪಷ್ಟ ಬಹುಮತ ಇದೆಯೇ ಎಂಬ ಬಗ್ಗೆ ರಾಜ್ಯಪಾಲರಿಗೆ ಇನ್ನೂ ವಿಶ್ವಾಸ ಮೂಡಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 118 ಸ್ಥಾನಗಳು ಬೇಕು. ಪ್ರಸ್ತುತ ಟಿವಿಕೆ 108 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್‌ನ 5 ಶಾಸಕರು ಬೆಂಬಲ ಘೋಷಿಸಿದ್ದಾರೆ. ಇದರಿಂದ ಟಿವಿಕೆ ಮೈತ್ರಿಕೂಟದ ಬಲ 113 ಕ್ಕೆ ಏರಿಕೆಯಾಗಿದೆ. ಆದರೆ, ಇನ್ನುಳಿದ 5 ಶಾಸಕರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಹೊರತುಪಡಿಸಿ, ಪಕ್ಷೇತರರು ಸೇರಿದಂತೆ ಬೇರೆ ಯಾವ ಪಕ್ಷಗಳು ವಿಜಯ್ ಪಾಳೆಯಕ್ಕೆ ಸೇರುತ್ತವೆ ಎಂಬುದರ ಬಗ್ಗೆ ಇನ್ನು ನಿಖರ ಮಾಹಿತಿ ಲಭ್ಯವಾಗಿಲ್ಲ. ಇದೇ ಕಾರಣಕ್ಕೆ ರಾಜ್ಯಪಾಲರು ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಟಿವಿಕೆ ಮುಖ್ಯಸ್ಥ ವಿಜಯ್‌ಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಸ್ಮರಣಿಕೆ ನೀಡಿ ಗೌರವಿಸಿದರು.

ಮೈತ್ರಿಗಾಗಿ ಕಸರತ್ತು

ಚುನಾವಣೆಯಲ್ಲಿ 2 ಸ್ಥಾನಗಳನ್ನು ಗೆದ್ದಿರುವ ವಿಸಿಕೆ (VCK) ಪಕ್ಷದ ನಾಯಕರು, ಟಿವಿಕೆಗೆ ಬೆಂಬಲ ನೀಡುವ ಕುರಿತು ಇನ್ನೂ ಆಂತರಿಕ ಚರ್ಚೆ ನಡೆಸುತ್ತಿದ್ದಾರೆ. ಇನ್ನು ಕಮ್ಯುನಿಸ್ಟ್ ಪಕ್ಷಗಳಾದ ಸಿಪಿಐ ಮತ್ತು ಸಿಪಿಎಂ ತಲಾ 2 ಸ್ಥಾನಗಳನ್ನು ಗೆದ್ದಿದ್ದು, ಅವರ ಬೆಂಬಲವೂ ಟಿವಿಕೆಗೆ ಅತ್ಯಗತ್ಯ.

ಮತ್ತೊಂದೆಡೆ, ತಮಿಳುನಾಡು ಕಾಂಗ್ರೆಸ್ ಘಟಕವು ಡಿಎಂಕೆ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಟಿವಿಕೆಗೆ ಬೆಂಬಲ ನೀಡಲು ಸ್ವತಂತ್ರ ನಿರ್ಧಾರ ತೆಗೆದುಕೊಂಡಿದೆ. "ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಅಧಿಕಾರದಿಂದ ದೂರವಿಡಲು ಜಾತ್ಯತೀತ ಸರ್ಕಾರವೊಂದಕ್ಕೆ ಬೆಂಬಲ ನೀಡುವುದು ನಮ್ಮ ಆದ್ಯತೆ" ಎಂದು ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಹೇಳಿದ್ದಾರೆ. ಕಾಂಗ್ರೆಸ್‌ನ ಈ ನಿರ್ಧಾರವನ್ನು ಪಕ್ಷದ ಕಾರ್ಯಕರ್ತರು ಚೆನ್ನೈನ ಕೇಂದ್ರ ಕಚೇರಿ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ, ಸಂವಿಧಾನವನ್ನು ಒಪ್ಪದ ಕೋಮುವಾದಿ ಶಕ್ತಿಗಳನ್ನು ಮೈತ್ರಿಯಿಂದ ದೂರವಿಡಬೇಕು ಎಂಬ ಷರತ್ತನ್ನೂ ಕಾಂಗ್ರೆಸ್ ವಿಧಿಸಿದೆ.

ಡಿಎಂಕೆ ಹಾಗೂ ಬಿಜೆಪಿ ಟೀಕೆ

ಕಾಂಗ್ರೆಸ್‌ನ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಡಿಎಂಕೆ, "ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಕೇವಲ ಎರಡು ಸಚಿವ ಸ್ಥಾನಗಳಿಗಾಗಿ ತಮಿಳುನಾಡು ಜನತೆಗೆ ಬೆನ್ನಿಗೆ ಚೂರಿ ಹಾಕಿದೆ" ಎಂದು ವಕ್ತಾರ ಸರವಣನ್ ಅಣ್ಣಾದೊರೈ ಕಿಡಿಕಾರಿದ್ದಾರೆ.

ಇತ್ತ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಪ್ರತಿಕ್ರಿಯಿಸಿ, "ಡಿಎಂಕೆಯಂತಹ ಹಳೆಯ ಮಿತ್ರಪಕ್ಷವನ್ನೇ ಕಾಂಗ್ರೆಸ್ ವಂಚಿಸಿದೆ ಎಂದರೆ, ಮುಂದೊಂದು ದಿನ ಸಮಾಜವಾದಿ ಪಕ್ಷಕ್ಕೂ ಇದೇ ಗತಿ ಬರಬಹುದು. ಇದು 'ಇಂಡಿಯಾ' (INDIA) ಮೈತ್ರಿಕೂಟದ ಅಂತ್ಯದ ಸಂಕೇತ" ಎಂದು ಟೀಕಿಸಿದ್ದಾರೆ.

ರಾಜಕೀಯ ತಲ್ಲಣ

ತಮಿಳುನಾಡಿನಲ್ಲಿ 62 ವರ್ಷಗಳ ಡಿಎಂಕೆ ಮತ್ತು ಎಐಎಡಿಎಂಕೆ ದ್ವಿಸ್ವಾಮ್ಯವನ್ನು ವಿಜಯ್ ಅವರ ಟಿವಿಕೆ ಸಂಪೂರ್ಣವಾಗಿ ಒಡೆದುಹಾಕಿದೆ. ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ ಸೋಲು ಕಂಡಿರುವ ನಿರ್ಗಮಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಎಲ್ಲರ ಕಣ್ಣು ರಾಜ್ಯಪಾಲರ ಮುಂದಿನ ನಡೆಯ ಮೇಲೆ ನೆಟ್ಟಿದೆ.

Read More
Next Story