Tamil Nadu CM Vijay on the path of MGR, Jayalalithaa: Visit to Kollur on June 12
x

ಕೊಲ್ಲೂರು ಮೂಕಾಂಬಿಕ ದೇವಾಲಯ ಹಾಗೂ ತಮಿಳುನಾಡು ಸಿಎಂ ವಿಜಯ್‌

ಎಂಜಿಆರ್, ಜಯಲಲಿತಾ ಹಾದಿಯಲ್ಲಿ ತಮಿಳುನಾಡು ಸಿಎಂ ವಿಜಯ್: ಜೂ. 12ಕ್ಕೆ ಕೊಲ್ಲೂರಿಗೆ ಭೇಟಿ

ಮುಖ್ಯಮಂತ್ರಿಯಾಗುವ ಮೊದಲೂ ದೇವಾಲಯ ಹಾಗೂ ಚರ್ಚ್‌ಗಳಿಗೆ ಭೇಟಿ ನೀಡುತ್ತಿದ್ದ ವಿಜಯ್, ಸಿಎಂ ಆದ ಬಳಿಕ ಕೈಗೊಳ್ಳುತ್ತಿರುವ ಪ್ರಮುಖ ಧಾರ್ಮಿಕ ಯಾತ್ರೆ ಇದಾಗಿದೆ.


Click the Play button to hear this message in audio format

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿ. ಜೋಸೆಫ್ ವಿಜಯ್ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಕೇವಲ ವೈಯಕ್ತಿಕ ಭಕ್ತಿಯ ನಡೆ, ಸಾರ್ವಜನಿಕ ಪ್ರದರ್ಶನ ಎಂದೆನಿಸಿದರೂ, ರಾಜಕೀಯವನ್ನು ಹತ್ತಿರದಿಂದ ಗಮನಿಸುವವರಿಗೆ ಇದು ತಮಿಳುನಾಡು ರಾಜಕೀಯ ಪ್ರದರ್ಶನದಲ್ಲಿ ಎಚ್ಚರಿಕೆಯಿಂದ ಇರಿಸಲಾದ ಮತ್ತೊಂದು 'ದೊಡ್ಡ ಸಂಕೇತ'ವಾಗಿ ಕಾಣಿಸುತ್ತಿದೆ.

ಮುಖ್ಯಮಂತ್ರಿಯಾಗುವ ಮೊದಲೂ ದೇವಾಲಯ ಹಾಗೂ ಚರ್ಚ್‌ಗಳಿಗೆ ಭೇಟಿ ನೀಡುತ್ತಿದ್ದ ವಿಜಯ್, ಸಿಎಂ ಆದ ಬಳಿಕ ಕೈಗೊಳ್ಳುತ್ತಿರುವ ಪ್ರಮುಖ ಧಾರ್ಮಿಕ ಯಾತ್ರೆ ಇದಾಗಿದೆ. ಜೂ. 12 ರಂದು ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪ್ರಯಾಣಿಸಲಿದ್ದು, ಮಾರ್ಗದುದ್ದಕ್ಕೂ ಅವರ ಅಭಿಮಾನಿಗಳು ಮತ್ತು ಟಿವಿಕೆ (TVK) ಪಕ್ಷದ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಜಮಾಯಿಸುವ ನಿರೀಕ್ಷೆಯಿದೆ. ವಿಜಯ್ ಅವರಿಗೆ ಈಗಾಗಲೇ 'Z ಪ್ಲಸ್' ಭದ್ರತೆ ಇದ್ದು, ತಮಿಳುನಾಡು ಸಿಐಡಿ ಭದ್ರತಾ ವಿಭಾಗವು ಕರ್ನಾಟಕ ಪೊಲೀಸರಿಗೆ ಸೂಕ್ತ ಬಂದೋಬಸ್ತ್ ಒದಗಿಸುವಂತೆ ವಿಶೇಷ ವಿನಂತಿ ಮಾಡಿದೆ.

ಎಂಜಿಆರ್, ಜಯಲಲಿತಾ ಸಂಪ್ರದಾಯದ ಮರುಕಳಿಕೆ!

ವಿಜಯ್ ಅವರ ಈ ಕೊಲ್ಲೂರು ಭೇಟಿಯ ಹಿಂದೆ ಕೇವಲ ಧಾರ್ಮಿಕತೆಯಷ್ಟೇ ಇಲ್ಲ, ಬದಲಿಗೆ ತಮಿಳುನಾಡಿನ ದ್ರಾವಿಡ ರಾಜಕೀಯ ಇತಿಹಾಸದ ದೊಡ್ಡ ತೂಕವಿದೆ. ಈ ಹಿಂದೆ ತಮಿಳುನಾಡಿನ ಪ್ರಭಾವಿ ಮುಖ್ಯಮಂತ್ರಿಗಳಾಗಿದ್ದ ಎಂ. ಜಿ. ರಾಮಚಂದ್ರನ್ ತನ್ನ ಪತ್ನಿ ಜಾನಕಿ ರಾಮಚಂದ್ರನ್ ಹಾಗೂ ಜೆ. ಜಯಲಲಿತಾ ಅವರೊಂದಿಗೆ ಅಧಿಕಾರ ಹಿಡಿದ ತಕ್ಷಣವೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈಗ ಅದೇ ಹಾದಿಯನ್ನು ಆರಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ವಿಜಯ್ ತಮಿಳುನಾಡಿನ ಅತ್ಯಂತ ಪ್ರತಿಷ್ಠಿತ ಐಕಾನ್‌ಗಳ ಸಾಲಿಗೆ ತಾವೂ ಪ್ರಜ್ಞಾಪೂರ್ವಕವಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂಬ ಮುನ್ಸೂಚನೆ ನೀಡಿದ್ದಾರೆ.

ಸಿನಿಮಾ ದಿನಗಳಲ್ಲೇ ಮೂಡಿತ್ತು ಹೋಲಿಕೆ!

ಎಂಜಿಆರ್ ಅವರೊಂದಿಗೆ ವಿಜಯ್ ಅವರನ್ನು ಹೋಲಿಸುವ ಪ್ರಕ್ರಿಯೆ ರಾಜಕೀಯಕ್ಕೆ ಬಂದ ಮೇಲೆ ಶುರುವಾಗಿದ್ದಲ್ಲ. 2003 ರಲ್ಲೇ ತೆರೆಕಂಡ ಅವರ 'ವಸೀಗರ' ಚಿತ್ರದ ಹಾಡೊಂದರಲ್ಲಿ ವಿಜಯ್ ಮತ್ತು ಸ್ನೇಹಾ ಅವರು ಎಂಜಿಆರ್ ಮತ್ತು ಬಿ. ಸರೋಜಾದೇವಿ ಅವರ ನೃತ್ಯ ಹಾಗೂ ದೇಹಭಾಷೆಯನ್ನು ಅನುಕರಿಸಿದ್ದರು. ಆ ಮೂಲಕವೇ ತಾವು ಎಂಜಿಆರ್ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಎಂಬ ಸಣ್ಣ ಸುಳಿವನ್ನು ಅಭಿಮಾನಿಗಳಿಗೆ ಅಂದೇ ನೀಡಿದ್ದರು.

ಶೈಲಿ, ಸಂಕೇತ ಮತ್ತು ಪರಿಚಿತ ಚಿತ್ರಕಥೆ

ಕಾಲ ಕಳೆದಂತೆ ವಿಜಯ್ ಅವರ ರಾಜಕೀಯ ಸಂಕೇತಗಳು ಮತ್ತಷ್ಟು ಸ್ಪಷ್ಟವಾಗುತ್ತಾ ಬಂದಿವೆ. ಎಂಜಿಆರ್ ಅವರಂತೆಯೇ ವಿಜಯ್ ಕೂಡ ವಿಶಿಷ್ಟ ವೈಯಕ್ತಿಕ ಶೈಲಿ, ಸಾರ್ವಜನಿಕ ವಾರ್ಡ್‌ಡ್ರೋಬ್ ಅಳವಡಿಸಿಕೊಂಡಿದ್ದಾರೆ. ವಿಶೇಷವಾಗಿ ತಮ್ಮ ನಂಬಿಕಸ್ಥ ಅಂಗರಕ್ಷಕ ನಯೀಮ್ ಮೂಸಾ ಅವರನ್ನು ಸಾರ್ವಜನಿಕವಾಗಿ ಹತ್ತಿರದಲ್ಲೇ ಇರಿಸಿಕೊಳ್ಳುವ ಮೂಲಕ, ಎಂಜಿಆರ್ ತಮ್ಮ ರಕ್ಷಕರನ್ನು ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದ ಪ್ರಸಿದ್ಧ ಶೈಲಿಯನ್ನು ನೆನಪಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಡಿಎಂಕೆ ಪಕ್ಷವನ್ನು "ದುಷ್ಟ ಶಕ್ತಿ" ಎಂದು ಕರೆಯುವ ಮೂಲಕ ಎಂಜಿಆರ್ ಅವರ ಹಳೆಯ ವಾಕ್ಯವನ್ನೇ ವಿಜಯ್ ಬಳಸಿದ್ದರು. ಇದು ನಾಯಕನಿಲ್ಲದೆ ತತ್ತರಿಸಿದ್ದ ಎಐಎಡಿಎಂಕೆ ಮತದಾರರನ್ನು ಮತ್ತು ಡಿಎಂಕೆ ವಿರೋಧಿ ಅಲೆ ಭೇಟಿಯಾಡಲು ರೂಪಿಸಿದ ನಿಖರ ರಾಜಕೀಯ ತಂತ್ರವಾಗಿತ್ತು.

ಕೊಲ್ಲೂರು ಕ್ಷೇತ್ರದ ಮಹತ್ವ

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪರಮ ಪವಿತ್ರ ಕ್ಷೇತ್ರಗಳಲ್ಲೊಂದು. ಸುಮಾರು 1,200 ವರ್ಷಗಳ ಇತಿಹಾಸವಿರುವ, ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಈ ಕ್ಷೇತ್ರವು ಜ್ಞಾನ, ವಾಕ್ ಮತ್ತು ಕಲೆಯ ದೇವತೆಗೆ ಸಮರ್ಪಿತವಾಗಿದೆ. ಪರಶುರಾಮ ಸೃಷ್ಟಿಯ ಏಳು ಮುಕ್ತಿಸ್ಥಳಗಳಲ್ಲಿ ಒಂದಾದ ಈ ದೇವಸ್ಥಾನಕ್ಕೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವಿಜಯ್ ಅವರ ಭೇಟಿಯ ಹಿನ್ನೆಲೆಯಲ್ಲಿ ಜೂ. 12 ರ ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ ಸಾರ್ವಜನಿಕರಿಗೆ ದರ್ಶನವನ್ನು ನಿಷೇಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

Read More
Next Story