
ಕೇರಳದ ವಿಝಿಂಜಂ ಬಂದರು
ವಿಳಿಂಜಂ ಬಂದರು ಪಾಲು ವರ್ಗಾವಣೆ ಪ್ರಸ್ತಾವನೆ: ಸರ್ಕಾರದ ಒಪ್ಪಿಗೆ ಕಡ್ಡಾಯ : ಸಿಎಂ ಸತೀಶನ್
ರಿಯಾಯಿತಿ ಒಪ್ಪಂದದ ಷರತ್ತು 5.3 ಅನ್ನು ಉಲ್ಲೇಖಿಸಿದ ಮುಖ್ಯಮಂತ್ರಿ ವಿ.ಡಿ. ಸತೀಶನ್, "ಸಂಬಂಧಪಟ್ಟ ಪ್ರಾಧಿಕಾರದ ಪೂರ್ವಾನುಮೋದನೆ ಇಲ್ಲದೆ ರಿಯಾಯಿತಿದಾರರು ಮಾಲೀಕತ್ವದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ" ಎಂದು ತಿಳಿಸಿದ್ದಾರೆ.
ವಿಳಿಂಜಂ ಅಂತರರಾಷ್ಟ್ರೀಯ ಬಂದರಿನ ರಿಯಾಯಿತಿದಾರ ಸಂಸ್ಥೆಯಾದ 'ಅದಾನಿ ವಿಳಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್' ನಲ್ಲಿ ಶೇ. 49 ರಷ್ಟು ಪಾಲನ್ನು ಸ್ವಿಟ್ಜರ್ಲೆಂಡ್ ಮೂಲದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ (ಎಂಎಸ್ಸಿ) ಗೆ ವರ್ಗಾಯಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ತೀವ್ರವಾಗಿ ಪರಿಶೀಲಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ರೀತಿಯ ಮಾಲೀಕತ್ವ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರ ವಿಶೇಷ ಸಲ್ಲಿಕೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಪ್ರಸ್ತಾವಿತ ವಹಿವಾಟಿನ ಬಗ್ಗೆ ಸರ್ಕಾರಕ್ಕೆ ಮಾಧ್ಯಮ ವರದಿಗಳ ಮೂಲಕವಷ್ಟೇ ಮಾಹಿತಿ ಲಭ್ಯವಾಗಿದೆ. ಈವರೆಗೆ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಜೋನ್ (ಎಪಿಎಸ್ಇಝಡ್) ನಿಂದ ಯಾವುದೇ ಅಧಿಕೃತ ಪತ್ರ ಅಥವಾ ಪ್ರಸ್ತಾವನೆ ಸರ್ಕಾರಕ್ಕೆ ಬಂದಿಲ್ಲ ಎಂದರು.
ಮಂಗಳವಾರವಷ್ಟೇ (ಜೂ.30) ವಿಶ್ವದ ಅತಿದೊಡ್ಡ ಸಾಗಣೆ ಮತ್ತು ಲಾಜಿಸ್ಟಿಕ್ಸ್ ಗುಂಪಾದ ಎಂಎಸ್ಸಿ (ಎಂಎಸ್ಸಿ) ಕಂಪನಿಯು ಎವಿಪಿಪಿಎಲ್ನಲ್ಲಿ ಸುಮಾರು 1.4 ಬಿಲಿಯನ್ ಯುಎಸ್ಡಿ (ಸುಮಾರು 13,220 ಕೋಟಿ) ಹೂಡಿಕೆ ಮಾಡುವ ಮೂಲಕ ಶೇ. 49 ರಷ್ಟು ಪಾಲನ್ನು ಖರೀದಿಸಲಿದೆ ಎಂದು ಘೋಷಿಸಿತ್ತು.
ಒಪ್ಪಂದದ ಷರತ್ತು ಉಲ್ಲೇಖಿಸಿದ ಸಿಎಂ
ರಿಯಾಯಿತಿ ಒಪ್ಪಂದದ ಷರತ್ತು 5.3 ಅನ್ನು ಉಲ್ಲೇಖಿಸಿದ ಮುಖ್ಯಮಂತ್ರಿ ಸತೀಶನ್, "ಸಂಬಂಧಪಟ್ಟ ಪ್ರಾಧಿಕಾರದ ಪೂರ್ವಾನುಮೋದನೆ ಇಲ್ಲದೆ ರಿಯಾಯಿತಿದಾರರು ಮಾಲೀಕತ್ವದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಇಲ್ಲಿ ಪ್ರಾಧಿಕಾರ ಎಂದರೆ ಅದು ಕೇರಳ ಸರ್ಕಾರ" ಎಂದು ನೆನಪಿಸಿದರು. ಕಂಪನಿಗಳ ಕಾಯ್ದೆಯ ಪ್ರಕಾರ ಶೇ.25 ಕ್ಕಿಂತ ಹೆಚ್ಚಿನ ಷೇರುಗಳ ವರ್ಗಾವಣೆಯನ್ನು ಮಾಲೀಕತ್ವದ ಬದಲಾವಣೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸರ್ಕಾರದ ಒಪ್ಪಿಗೆಯಿಲ್ಲದೆ ಈ ಪ್ರಕ್ರಿಯೆ ನಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮುಂದೆ ಈ ಪ್ರಸ್ತಾವನೆ ಸರ್ಕಾರದ ಮುಂದೆ ಬಂದಾಗ, ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಹಿತಾಸಕ್ತಿ, ನ್ಯಾಯಯುತ ಸ್ಪರ್ಧೆ, ಹೂಡಿಕೆ ಮತ್ತು ಬಂದರಿನ ದೀರ್ಘಕಾಲೀನ ಅಭಿವೃದ್ಧಿ ಪ್ರಮುಖ ಐದು ಅಂಶಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ವಿವರಿಸಿದರು. ವಿಳಿಂಜಂ ಬಂದರು ದೇಶದ ಆಯಕಟ್ಟಿನ ಮತ್ತು ಕಾರ್ಯತಂತ್ರದ ಪ್ರಮುಖ ಆಸ್ತಿಯಾಗಿರುವುದರಿಂದ, ಈ ಒಪ್ಪಂದಕ್ಕೆ ಕೇಂದ್ರ ಹಡಗು ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವಾಲಯಗಳ ಅನುಮತಿಯೂ ಅತ್ಯಗತ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.
ಏಕಸ್ವಾಮ್ಯಕ್ಕೆ ಅವಕಾಶವಿಲ್ಲ
ಬಂದರಿನಲ್ಲಿ ಕೇವಲ ಒಂದು ಕಂಪನಿಯ ವಿಶೇಷ ಪ್ರವೇಶಕ್ಕೆ ಅಥವಾ ಏಕಸ್ವಾಮ್ಯ ಸ್ಥಾಪನೆಗೆ ಸರ್ಕಾರ ಅವಕಾಶ ನೀಡುವುದಿಲ್ಲ. ಇದು ಎಲ್ಲರಿಗೂ ಮುಕ್ತವಾಗಿರುವ 'ಸಾಮಾನ್ಯ ಬಳಕೆದಾರ ಸೌಲಭ್ಯ'ವಾಗಿ ಉಳಿಯಬೇಕು. ಎಲ್ಲಾ ಹಡಗು ಮಾರ್ಗಗಳು, ಆಮದು-ರಫ್ತುದಾರರು ಮತ್ತು ಲಾಜಿಸ್ಟಿಕ್ಸ್ ಪಾಲುದಾರರಿಗೆ ಯಾವುದೇ ತಾರತಮ್ಯವಿಲ್ಲದೆ ಈ ಬಂದರು ಲಭ್ಯವಾಗುವಂತೆ ನೋಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸತೀಶನ್ ಹೇಳಿದರು. ಎಂಎಸ್ಸಿ ಕೇವಲ ಹಣಕಾಸು ಹೂಡಿಕೆದಾರನಲ್ಲದೆ, ಜಾಗತಿಕ ಹಡಗು ದೈತ್ಯನಾಗಿರುವುದರಿಂದ ಅದರ ಹಿತಾಸಕ್ತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ ಎಂದರು.
ವಿರೋಧ ಪಕ್ಷದ ನಾಯಕರ ಕಳವಳ
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್, ಸರ್ಕಾರದ ಸ್ಪಷ್ಟೀಕರಣವನ್ನು ಸ್ವಾಗತಿಸುತ್ತಲೇ, ಈ ಒಪ್ಪಂದದ ವಾಣಿಜ್ಯ ಮತ್ತು ಭದ್ರತಾ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಎಂಎಸ್ಸಿ ಸಂಸ್ಥೆಯು ಬಂದರು ನಿರ್ವಾಹಕರೊಂದಿಗೆ ಜಂಟಿ ಮಾಲೀಕತ್ವ ಹೊಂದಿದರೆ ಹೊಸ ಮಾದರಿಯ ಏಕಸ್ವಾಮ್ಯ ಸೃಷ್ಟಿಯಾಗಬಹುದು. ಇದರಿಂದ ಕೇರಳದ ರಫ್ತುದಾರರು ಸರಕು ಸಾಗಣೆ ದರಗಳಿಗಾಗಿ ಒಂದೇ ಕಂಪನಿಯನ್ನು ಅವಲಂಬಿಸಬೇಕಾಗಬಹುದು. ಇದು ಮುಕ್ತ ಸ್ಪರ್ಧೆಯನ್ನು ದಮನಿಸಿ, ರಾಜ್ಯದ ದೀರ್ಘಕಾಲೀನ ಆದಾಯದ ಮೇಲೂ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದರು.
ಪ್ರಸ್ತುತ ಈ ಯೋಜನೆಯ ಒಟ್ಟು ಮೌಲ್ಯವನ್ನು 2.85 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದ್ದು, ಇದು ಭಾರತೀಯ ಬಂದರು ವಲಯದಲ್ಲೇ ಅತಿ ದೊಡ್ಡ ವಿದೇಶಿ ಖಾಸಗಿ ಹೂಡಿಕೆಯಾಗಿದೆ ಎಂದು ಅದಾನಿ ಪೋರ್ಟ್ಸ್ ಹೇಳಿಕೊಂಡಿದೆ.

