
Delimitation| ಸಂಸತ್ ಸ್ಥಾನಗಳಲ್ಲಿ ಏರಿಕೆ; ದಕ್ಷಿಣಕ್ಕೆ ಅನ್ಯಾಯವಾಗಲ್ಲ ಎಂದ ಅಮಿತ್ ಶಾ
ಕ್ಷೇತ್ರ ಪುನರ್ ವಿಂಗಡಣೆಯಿಂದ ಸೀಟುಗಳ ಹೆಚ್ಚಳವು ದಕ್ಷಿಣದ ರಾಜ್ಯಗಳಿಗೂ ಸಮಾನವಾಗಿ ಅನ್ವಯಿಸಲಿದೆ. ಹೀಗಾಗಿ ಸಂಸತ್ತಿನಲ್ಲಿ ಈ ರಾಜ್ಯಗಳ ಪ್ರಾತಿನಿಧ್ಯ ಮತ್ತಷ್ಟು ಗಟ್ಟಿಯಾಗಲಿದೆಯೇ ಹೊರತು ಕುಗ್ಗುವುದಿಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಮುಂಬರುವ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಂತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯು 28 ರಿಂದ 42ಕ್ಕೆ ಏರಿಕೆಯಾಗಲಿದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಭರವಸೆ ನೀಡಿದ್ದಾರೆ. ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಪ್ರಾಬಲ್ಯ ಕುಗ್ಗಲಿದೆ ಎಂಬ ಆತಂಕಗಳಿಗೆ ಆ ಮೂಲಕ ತೆರೆ ಎಳೆದಿದ್ದಾರೆ.
ದಕ್ಷಿಣ ರಾಜ್ಯಗಳ ಧ್ವನಿ ಮತ್ತಷ್ಟು ಗಟ್ಟಿ
ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ದಕ್ಷಿಣದ ರಾಜ್ಯಗಳಿಗೆ ಕ್ಷೇತ್ರ ಮರುವಿಂಗಡಣೆಯಿಂದ ನಷ್ಟವಾಗಲಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, "ಸೀಟುಗಳ ಹೆಚ್ಚಳವು ದಕ್ಷಿಣದ ರಾಜ್ಯಗಳಿಗೂ ಸಮಾನವಾಗಿ ಅನ್ವಯಿಸಲಿದೆ. ಹೀಗಾಗಿ ಸಂಸತ್ತಿನಲ್ಲಿ ಈ ರಾಜ್ಯಗಳ ಪ್ರಾತಿನಿಧ್ಯ ಮತ್ತಷ್ಟು ಗಟ್ಟಿಯಾಗಲಿದೆಯೇ ಹೊರತು ಕುಗ್ಗುವುದಿಲ್ಲ," ಎಂದು ಸ್ಪಷ್ಟಪಡಿಸಿದರು.
ರಾಜ್ಯವಾರು ಸೀಟುಗಳ ಅಂದಾಜು ಏರಿಕೆ
ಕರ್ನಾಟಕದಲ್ಲಿ 28 ರಿಂದ 42ಕ್ಕೆ ಏರಿಕೆಯಾಗಲಿದ್ದು, 14 ಸ್ಥಾನಗಳು ಹೆಚ್ಚಾಗಲಿವೆ. ತಮಿಳುನಾಡಿನಲ್ಲಿ 39 ರಿಂದ 59ಕ್ಕೆ ಏರಿಕೆಯಾಗಲಿವೆ. ಕೇರಳದಲ್ಲಿ 20 ರಿಂದ 30ಕ್ಕೆ ಹೆಚ್ಚಳವಾಗಲಿದೆ. ಆಂಧ್ರಪ್ರದೇಶದಲ್ಲಿ 25 ರಿಂದ 38ಕ್ಕೆ ಹಾಗೂ ತೆಲಂಗಾಣದಲ್ಲಿ 17 ರಿಂದ 26ಕ್ಕೆ ಸ್ಥಾನಗಳು ಹೆಚ್ಚಳವಾಗಲಿವೆ. ದಕ್ಷಿಣದ ಐದು ರಾಜ್ಯಗಳ ಒಟ್ಟು ಸಂಸದರ ಸಂಖ್ಯೆ ಈಗಿನ 129 ರಿಂದ 195ಕ್ಕೆ ಏರಿಕೆಯಾಗಲಿದೆ. ಇದರಿಂದ ಸದನದಲ್ಲಿ ದಕ್ಷಿಣದ ರಾಜ್ಯಗಳ ಒಟ್ಟು ಪಾಲು ಶೇ. 23.76 ರಿಂದ ಶೇ. 23.97ಕ್ಕೆ ಹೆಚ್ಚಳವಾಗಲಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ಕರ್ನಾಟಕದ ಪಾಲು ವೃದ್ಧಿ
ಸದ್ಯ ಲೋಕಸಭೆಯ 543 ಸ್ಥಾನಗಳಲ್ಲಿ ಕರ್ನಾಟಕದ ಪಾಲು ಶೇ. 5.15 ರಷ್ಟಿದೆ. ಹೊಸ ಮರುವಿಂಗಡಣೆಯ ನಂತರ 816 ಸದಸ್ಯರ ಸದನದಲ್ಲಿ ಕರ್ನಾಟಕದ ಪ್ರಾತಿನಿಧ್ಯ ಶೇ. 5.44ಕ್ಕೆ ಏರಿಕೆಯಾಗಲಿದೆ. "ಯಾವುದೇ ಲೆಕ್ಕಾಚಾರದಲ್ಲಿ ಕರ್ನಾಟಕಕ್ಕೆ ಅಥವಾ ದಕ್ಷಿಣದ ಇತರ ರಾಜ್ಯಗಳಿಗೆ ಅನ್ಯಾಯವಾಗಲು ಕೇಂದ್ರ ಸರ್ಕಾರ ಬಿಡುವುದಿಲ್ಲ," ಎಂದು ಅಮಿತ್ ಶಾ ಭರವಸೆ ನೀಡಿದರು.

