ಬಳ್ಳಾರಿ-ಗುಂತಕಲ್ ರೈಲು ಮಾರ್ಗಕ್ಕೆ 1,264 ಕೋಟಿ ಅನುದಾನ: ಕೇಂದ್ರ ಸಂಪುಟ ಸಭೆ ಒಪ್ಪಿಗೆ
x

ಬಳ್ಳಾರಿ-ಗುಂತಕಲ್ ರೈಲು ಮಾರ್ಗಕ್ಕೆ 1,264 ಕೋಟಿ ಅನುದಾನ: ಕೇಂದ್ರ ಸಂಪುಟ ಸಭೆ ಒಪ್ಪಿಗೆ

ಬಳ್ಳಾರಿ - ಗುಂತಕಲ್ ನಡುವೆ 46 ಕಿ.ಮೀ ಉದ್ದದ ಹೊಸ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಇದು ಪಿಎಂ ಗತಿ ಶಕ್ತಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಯಾಗಿದೆ.


Click the Play button to hear this message in audio format

ಇದೀಗ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವಿನ ಆರ್ಥಿಕ ಹಾಗೂ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಬಳ್ಳಾರಿ-ಗುಂತಕಲ್ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗ ನಿರ್ಮಾಣಕ್ಕೆ 1,264 ಕೋಟಿ ರೂಪಾಯಿಗಳ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾತನಾಡಿ, ಸಚಿವ ಸಂಪುಟದ ನಿರ್ಣಯಗಳ ಕುರಿತು ಮಾಹಿತಿ ನೀಡಿದರು. ಬಳ್ಳಾರಿ (ಕರ್ನಾಟಕ) ಮತ್ತು ಗುಂತಕಲ್ (ಆಂಧ್ರಪ್ರದೇಶ) ನಡುವೆ 46 ಕಿ.ಮೀ ಉದ್ದದ ಹೊಸ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಇದು ಪಿಎಂ ಗತಿ ಶಕ್ತಿ ರಾಷ್ಟ್ರೀಯ ಬೃಹತ್ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಪ್ರಮುಖ ಯೋಜನೆಯಾಗಿದೆ. ಈ ಮಾರ್ಗವು ಕರ್ನಾಟಕದ ಬಳ್ಳಾರಿ, ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್ ಎಂಬ ಮೂರು ಪ್ರಮುಖ ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಒಟ್ಟಾರೆ 99 ಗ್ರಾಮಗಳ ಸುಮಾರು 7 ಲಕ್ಷ ಜನರಿಗೆ ನೇರ ಪ್ರಯೋಜನ ದೊರಕಲಿದೆ.

ಯೋಜನೆಯ ಮಹತ್ವ ಮತ್ತು ಉದ್ದೇಶ

ಈ ಯೋಜನೆಯು ಕೇವಲ ರೈಲ್ವೆ ಹಳಿಗಳ ನಿರ್ಮಾಣವಲ್ಲ, ಬದಲಾಗಿ ದೇಶದ ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸುವ ತಾಂತ್ರಿಕ ಉತ್ತೇಜನವಾಗಿದೆ. ಪ್ರಸ್ತುತ ಇರುವ ಮಾರ್ಗಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು 3ನೇ ಮತ್ತು 4ನೇ ಮಾರ್ಗಗಳು ಅತ್ಯಗತ್ಯವಾಗಿವೆ. ಇದರಿಂದ ಪ್ರಯಾಣಿಕರ ರೈಲುಗಳ ಸಂಚಾರ ಸುಗಮವಾಗಲಿದೆ. ಬಳ್ಳಾರಿ ಭಾಗವು ಖನಿಜ ಸಂಪನ್ಮೂಲಗಳಿಗೆ ಹೆಸರುವಾಸಿ. ಈ ರೈಲು ಮಾರ್ಗವು ಅದಿರು ಮತ್ತು ಇತರೆ ಸರಕುಗಳ ಸಾಗಣೆಯನ್ನು ವೇಗಗೊಳಿಸಲಿದೆ. ಪಿಎಂ ಗತಿ ಶಕ್ತಿಯ ಗುರಿಯಂತೆ, ವಿವಿಧ ಸಾರಿಗೆ ಮಾಧ್ಯಮಗಳನ್ನು ಪರಸ್ಪರ ಬೆಸೆಯಲು ಈ ಯೋಜನೆ ನೆರವಾಗಲಿದೆ. ಬಳ್ಳಾರಿ ಮತ್ತು ಗುಂತಕಲ್ ನಡುವಿನ ರೈಲು ಮಾರ್ಗವು ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಹೊಸಪೇಟೆಯಿಂದ ಹುಬ್ಬಳ್ಳಿಯವರೆಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿರುವ ಬೆನ್ನಲ್ಲೇ, ಈ ಯೋಜನೆಗೆ ಅನುಮೋದನೆ ಸಿಕ್ಕಿರುವುದು ಕೈಗಾರಿಕಾ ವಲಯದಲ್ಲಿ ಉತ್ಸಾಹ ಮೂಡಿಸಿದೆ. ಕೃಷಿ, ಕೈಗಾರಿಕೆ ಮತ್ತು ಖನಿಜಾಧಾರಿತ ಉತ್ಪನ್ನಗಳನ್ನು ರಾಜ್ಯದಿಂದ ಹೊರ ರಾಜ್ಯಗಳಿಗೆ ಸಾಗಿಸಲು ಈ ಮಾರ್ಗ ಅತಿ ವೇಗದ ಸಂಪರ್ಕವನ್ನು ಒದಗಿಸಲಿದೆ ಎಂದು ಹೇಳಿದರು.

2028-29ರ ಗುರಿ - ಅನುಷ್ಠಾನ

ಕೇಂದ್ರ ಸರ್ಕಾರವು ಈ ಯೋಜನೆಯನ್ನು ಅತಿ ವೇಗವಾಗಿ ಪೂರ್ಣಗೊಳಿಸಲು ಸಂಕಲ್ಪ ತೊಟ್ಟಿದೆ. ಮುಂದಿನ 3 ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ, 2028-29ರ ಹೊತ್ತಿಗೆ ರೈಲು ಸಂಚಾರಕ್ಕೆ ಮುಕ್ತಗೊಳಿಸುವ ನಿರೀಕ್ಷೆಯಿದೆ. ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಇದು ಕೇವಲ ರೈಲು ಮಾರ್ಗವಲ್ಲ, ಇದು ಎರಡು ರಾಜ್ಯಗಳ ನಡುವಿನ ಆರ್ಥಿಕತೆಯ ಸೇತುವೆಯಾಗಿದೆ. ರೈಲ್ವೆ ಯೋಜನೆಯ ಜೊತೆಗೆ ಕೇಂದ್ರ ಸಂಪುಟವು ರಾಸಾಯನಿಕ ವಲಯದ ಅಭಿವೃದ್ಧಿಗೂ ಹೊಸ ಯೋಜನೆಗೆ ಅನುಮೋದನೆ ನೀಡಿದೆ. ದೇಶದ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ರಾಸಾಯನಿಕ ವಲಯವನ್ನು ನವೀನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಮೂಲಕ, ಆತ್ಮನಿರ್ಭರ ಭಾರತದ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕರ್ನಾಟಕದ ಬಳ್ಳಾರಿ ಭಾಗವು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದೆ. ಈ ರೈಲು ಮಾರ್ಗದಿಂದಾಗಿ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ, ಸಾರಿಗೆ ಸಂಪರ್ಕ ಸುಧಾರಿಸುವುದರಿಂದ ವ್ಯಾಪಾರ-ವಹಿವಾಟುಗಳಿಗೆ ಆನೆಬಲ ಬಂದಂತಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಿಗೂ ಇದು ಅಂತರ-ರಾಜ್ಯ ವ್ಯಾಪಾರಕ್ಕೆ ಹೊಸ ದಾರಿ ತೆರೆದಿದೆ.

Read More
Next Story