LIVE Assembly Elections 2026: ಉಪಚುನಾವಣೆ: ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 52.24ರಷ್ಟು ಮತದಾನ
x
ಅಸ್ಸಾಂ, ಕೇರಳ ಪುದುಚೇರಿಯಲ್ಲಿ ಚುನಾವಣೆ

Assembly Elections 2026: ಉಪಚುನಾವಣೆ: ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 52.24ರಷ್ಟು ಮತದಾನ

ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9 ರಂದು ಮತದಾನ ನಡೆಯುತ್ತಿದೆ. ಕರ್ನಾಟಕದ ಉಪಚುನಾವಣೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.


ದೇಶದ ಗಮನ ಸೆಳೆದಿರುವ ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಇಂದು (ಏಪ್ರಿಲ್ 9) ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ಮೂರು ಪ್ರದೇಶಗಳ ಐದು ಕೋಟಿಗೂ ಹೆಚ್ಚು ಮತದಾರರು ಇಂದು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಮತದಾರರ ಅಂಕಿಅಂಶ:

ಭಾರತೀಯ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಕೇರಳದಲ್ಲಿ ಸುಮಾರು 3 ಕೋಟಿ, ಅಸ್ಸಾಂನಲ್ಲಿ 2 ಕೋಟಿಗೂ ಹೆಚ್ಚು ಮತ್ತು ಪುದುಚೇರಿಯಲ್ಲಿ 9 ಲಕ್ಷಕ್ಕೂ ಅಧಿಕ ಮತದಾರರು ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಅಧಿಕಾರದ ಅವಧಿ ಮತ್ತು ಕ್ಷೇತ್ರಗಳು:

ಪ್ರಸ್ತುತ ವಿಧಾನಸಭೆಗಳ ಅವಧಿ ಮುಕ್ತಾಯದ ಹಂತದಲ್ಲಿದೆ. ಅಸ್ಸಾಂನ 126 ಸದಸ್ಯ ಬಲದ ವಿಧಾನಸಭೆ ಮೇ 20ಕ್ಕೆ, ಕೇರಳದ 140 ಸದಸ್ಯರ ವಿಧಾನಸಭೆ ಮೇ 23ಕ್ಕೆ ಮತ್ತು ಪುದುಚೇರಿಯ 30 ಸದಸ್ಯರ ವಿಧಾನಸಭೆ ಜೂನ್ 15ಕ್ಕೆ ಕೊನೆಗೊಳ್ಳಲಿದೆ.

ಪ್ರಮುಖ ರಾಜಕೀಯ ಹಣಾಹಣಿ:

• ಅಸ್ಸಾಂ: ಇಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

• ಕೇರಳ: ಸಾಂಪ್ರದಾಯಿಕ ಎದುರಾಳಿಗಳಾದ ಎಲ್‌ಡಿಎಫ್ (LDF) ಮತ್ತು ಯುಡಿಎಫ್ (UDF) ನಡುವೆ ಪೈಪೋಟಿ ಇದ್ದರೂ, ಬಿಜೆಪಿ ನೇತೃತ್ವದ ಎನ್‌ಡಿಎ ಕೂಡ ಪ್ರಬಲ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ.

• ಪುದುಚೇರಿ: ಮುಖ್ಯಮಂತ್ರಿ ಎನ್. ರಂಗಸ್ವಾಮಿ ನೇತೃತ್ವದ ಮೈತ್ರಿಕೂಟ (NR ಕಾಂಗ್ರೆಸ್, ಬಿಜೆಪಿ, ಎಐಎಡಿಎಂಕೆ) ಮತ್ತು ಕಾಂಗ್ರೆಸ್-ಡಿಎಂಕೆ-ಸಿಪಿಐ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿ ನಡೆದಿದೆ.

ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಉಪಚುನಾವಣೆ:

ವಿಧಾನಸಭಾ ಚುನಾವಣೆಯ ಜೊತೆಗೆ ಆರು ರಾಜ್ಯಗಳ ಎಂಟು ಕ್ಷೇತ್ರಗಳಿಗೆ ಉಪಚುನಾವಣೆಯೂ ನಡೆಯುತ್ತಿದೆ. ಈ ಪೈಕಿ ಕರ್ನಾಟಕ, ಗೋವಾ, ನಾಗಾಲ್ಯಾಂಡ್ ಮತ್ತು ತ್ರಿಪುರಾದ ವಿವಿಧ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಮತದಾನ ನಡೆಯಲಿದೆ.

ಚುನಾವಣಾ ವೇಳಾಪಟ್ಟಿ:

ಚುನಾವಣಾ ವೇಳಾಪಟ್ಟಿಯ ಪ್ರಕಾರ, ನಾಮಪತ್ರ ಸಲ್ಲಿಕೆಗೆ ಮಾರ್ಚ್ 23 ಕೊನೆಯ ದಿನವಾಗಿದ್ದು, ಮಾರ್ಚ್ 26 ನಾಮಪತ್ರ ವಾಪಸ್ ಪಡೆಯಲು ಅಂತಿಮ ಗಡುವಾಗಿದೆ. ಮತ ಎಣಿಕೆಯು ಮೇ 4, 2026 ರಂದು ನಡೆಯಲಿದ್ದು, ಇಡೀ ಚುನಾವಣಾ ಪ್ರಕ್ರಿಯೆಯು ಮೇ 6 ರೊಳಗೆ ಪೂರ್ಣಗೊಳ್ಳಲಿದೆ.

ಪಾರದರ್ಶಕತೆಗಾಗಿ ಹೊಸ ಕ್ರಮಗಳು:

ಮತದಾನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ:

• ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1,200 ಮತದಾರರಿಗೆ ಮಾತ್ರ ಅವಕಾಶ.

• ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಸೌಲಭ್ಯಗಳ ಖಾತರಿ.

• ನೂರಕ್ಕೆ ನೂರರಷ್ಟು ವೆಬ್‌ಕಾಸ್ಟಿಂಗ್ (Webcasting) ಮೂಲಕ ನಿರಂತರ ನಿಗಾ.

ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದು, ಭದ್ರತೆಗಾಗಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ.

Live Updates

  • 9 April 2026 3:58 PM IST

    ಉಪಚುನಾವಣೆ: ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 52.24ರಷ್ಟು ಮತದಾನ

    ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಾಗಲಕೋಟೆ ಹಾಗೂ ದಾವಣಗೆರೆ (ದಕ್ಷಿಣ) ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕ ಮತ್ತಷ್ಟು ಚುರುಕುಗೊಂಡಿದೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಎರಡೂ ಕ್ಷೇತ್ರಗಳಲ್ಲಿ ಒಟ್ಟಾರೆ ಸರಾಸರಿ ಶೇ. 52.24ರಷ್ಟು ಮತದಾನವಾಗಿರುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮಧ್ಯಾಹ್ನ 3.00 ಗಂಟೆಯವರೆಗಿನ ಬಾಗಲಕೋಟೆಯಲ್ಲಿ ಶೇ. 54.82% ಮತದಾನವಾಗಿದ್ದರೆ, ದಾವಣಗೆರೆ (ದಕ್ಷಿಣ)ಯಲ್ಲಿ ಶೇ. 49.66%ರಷ್ಟು ಮತದಾನವಾಗಿದೆ.

  • 9 April 2026 2:07 PM IST

    ಮಧ್ಯಾಹ್ನ 1 ಗಂಟೆಯ ಅಂದಾಜು ಮತದಾನದ ವಿವರ

  • 9 April 2026 12:13 PM IST

    ಉಪ ಚುನಾವಣೆ ನಡೆಯುತ್ತಿರುವ ಕರ್ನಾಟಕದಲ್ಲಿ ಮತದಾನದ ಪ್ರಮಾಣ

  • 9 April 2026 12:09 PM IST

    ಬೆಳಗ್ಗೆ 11 ಗಂಟೆಯವರೆಗಿನ ಮತದಾನದ ಪ್ರಮಾಣ

    2026 ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಬೆಳಿಗ್ಗೆ 11 ಗಂಟೆಯವರೆಗಿನ ಅಂದಾಜು ಮತದಾನದ ಪ್ರಮಾಣ (Voter Turnout) ಈ ಕೆಳಗಿನಂತಿದೆ:

  • 9 April 2026 11:08 AM IST

    ಪುದುಚೇರಿ ಚುನಾವಣೆ: ಮತಗಟ್ಟೆಗಳಲ್ಲಿ ಮೊಬೈಲ್ ಡೆಪಾಸಿಟ್ ಸೌಲಭ್ಯ

    ಪುದುಚೇರಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಪ್ರಕ್ರಿಯೆಯನ್ನು ಸುಗಮಗೊಳಿಸಲು ಚುನಾವಣಾ ಆಯೋಗವು ಒಂದು ಮಹತ್ವದ ಕ್ರಮ ಕೈಗೊಂಡಿದೆ. ಪುದುಚೇರಿಯಾದ್ಯಂತ ಇರುವ ಎಲ್ಲಾ ಮತಗಟ್ಟೆಗಳಲ್ಲಿ ಮೊಬೈಲ್ ಡೆಪಾಸಿಟ್ (ಫೋನ್ ಸಂಗ್ರಹಣಾ) ಸೌಲಭ್ಯವನ್ನು ಪರಿಚಯಿಸಲಾಗಿದೆ. ಮತಗಟ್ಟೆಯ ಒಳಗೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯಲು ನಿಷೇಧವಿರುವುದರಿಂದ, ಮತದಾರರು ತಮ್ಮ ಫೋನ್‌ಗಳನ್ನು ಸುರಕ್ಷಿತವಾಗಿ ಇರಿಸಲು ಈ ವ್ಯವಸ್ಥೆ ಮಾಡಲಾಗಿದೆ.

    ಈ ಸೌಲಭ್ಯದ ಮೂಲಕ ಮತದಾರರು ತಮ್ಮ ಮೊಬೈಲ್‌ಗಳನ್ನು ನಿಗದಿತ ಕೌಂಟರ್‌ನಲ್ಲಿ ಜಮಾ ಮಾಡಿ, ನಿಶ್ಚಿಂತೆಯಿಂದ ಮತ ಚಲಾಯಿಸಬಹುದು. ದೂರದ ಪ್ರದೇಶಗಳಿಂದ ಬರುವ ಮತದಾರರಿಗೆ ಫೋನ್ ಇರಿಸಲು ಜಾಗವಿಲ್ಲದೆ ಉಂಟಾಗುತ್ತಿದ್ದ ತೊಂದರೆಯನ್ನು ನಿವಾರಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನ ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

  • 9 April 2026 9:59 AM IST

    ದಾವಣಗೆರೆಯಲ್ಲಿ ಕೈ ಕೊಟ್ಟ ಇವಿಎಂ; ಮತದಾನ ತಾತ್ಕಾಲಿಕ ಸ್ಥಗಿತ

    ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ತಾಂತ್ರಿಕ ಅಡಚಣೆ ಉಂಟಾಗಿದೆ. ನಗರದ ಹಳೆಪೇಟೆಯಲ್ಲಿರುವ ಮತಗಟ್ಟೆ ಸಂಖ್ಯೆ 66ರಲ್ಲಿ ಇವಿಎಂ  ಯಂತ್ರವು ತಾಂತ್ರಿಕ ದೋಷದಿಂದಾಗಿ ಕೈ ಕೊಟ್ಟಿದ್ದು, ಮತದಾರರಲ್ಲಿ ಗೊಂದಲ ಮೂಡಿಸಿದೆ. ಕೂಡಲೇ ಎಚ್ಚೆತ್ತುಕೊಂಡ ಚುನಾವಣಾ ಸಿಬ್ಬಂದಿ ಇವಿಎಂ ಬದಲಾಯಿಸಲು ಕ್ರಮ ಕೈಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಮತಗಟ್ಟೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

    ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ. ಮೇಟಿ ಅವರ ನಿಧನದಿಂದ ಈ ಕ್ಷೇತ್ರಗಳು ತೆರವಾಗಿದ್ದವು.

    ಇಂದು ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಮತಗಟ್ಟೆಗಳ ಮುಂದೆ ಮತದಾರರ ಉದ್ದನೆಯ ಸಾಲುಗಳು ಕಂಡುಬರುತ್ತಿವೆ. ದಾವಣಗೆರೆಯಲ್ಲಿ ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ್ ಅವರು ಮತಗಟ್ಟೆಯ ಪ್ರವೇಶ ದ್ವಾರಕ್ಕೆ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು. ಈ "ಮಿನಿ ಸಮರ"ದಲ್ಲಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಶಾಂತಿಯುತ ಮತದಾನ ನಡೆಯುತ್ತಿದೆ.

  • 9 April 2026 8:29 AM IST

    ವಿಧಾನಸಭಾ ಚುನಾವಣೆ 2026: ಮತದಾರರಿಗೆ ಪ್ರಧಾನಿ ಮೋದಿ ಕರೆ

    ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಹೈ-ವೋಲ್ಟೇಜ್ ವಿಧಾನಸಭಾ ಚುನಾವಣೆಗಳು ಆರಂಭವಾಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಮತದಾರರಿಗೆ ಪ್ರಮುಖ ಸಂದೇಶಗಳನ್ನು ರವಾನಿಸಿದ್ದು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮತ್ತು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

  • 9 April 2026 8:27 AM IST

    ಚಿಂತನಶೀಲರಾಗಿ ಮತ ಚಲಾಯಿಸಿ: ಕೇಂದ್ರ ಸಚಿವ ಸುರೇಶ್ ಗೋಪಿ

    ತಮ್ಮ ಮತ ಚಲಾಯಿಸಿದ ನಂತರ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಗೋಪಿ ಅವರು, ಜನರು ರಾಜಕೀಯಕ್ಕಿಂತ ಹೆಚ್ಚಾಗಿ ತಮ್ಮ ಮೂಲ ಮತ್ತು ಕುಟುಂಬಕ್ಕೆ ಆದ್ಯತೆ ನೀಡಿ ಚಿಂತನಶೀಲವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು. ನಾಯಕರ ಹಕ್ಕುಗಳು ಮತ್ತು ಭರವಸೆಗಳನ್ನು ಬದಿಗಿಟ್ಟು, ನಿಮ್ಮ ಆಕಾಂಕ್ಷೆಗಳಿಗೆ ಹತ್ತಿರವಿರುವ ಮತ್ತು ನಿಮ್ಮ ಕನಸುಗಳನ್ನು ಪರಿಣಾಮಕಾರಿಯಾಗಿ ನನಸಾಗಿಸಬಲ್ಲ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಅವರು ಮತದಾರರಿಗೆ ಕರೆ ನೀಡಿದರು.

Read More
Next Story