ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಕಮಾಂಡರ್ ಜಾಕಿರ್ ಗನಾಯಿ ಎನ್‌ಕೌಂಟರ್‌ನಲ್ಲಿ ಹತ್ಯೆ
x

ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಕಮಾಂಡರ್ ಜಾಕಿರ್ ಗನಾಯಿ ಎನ್‌ಕೌಂಟರ್‌ನಲ್ಲಿ ಹತ್ಯೆ

ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಲಷ್ಕರ್ ಕಮಾಂಡರ್ ಜಾಕಿರ್ ಗನಾಯಿ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ. ಮತ್ತೊಬ್ಬ ಉಗ್ರ ಲತೀಫ್‌ಗಾಗಿ ಸೇನೆ ಮತ್ತು ಭದ್ರತಾ ಪಡೆಗಳ ಭಾರಿ ಶೋಧ ಮುಂದುವರಿದಿದೆ.


Click the Play button to hear this message in audio format

ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಕಮಾಂಡರ್ ಜಾಕಿರ್ ಗನಾಯಿ ಹತ್ಯೆಯಾಗಿದ್ದಾನೆ. ನಾಲ್ಕು ದಿನಗಳಿಂದ ನಡೆಯುತ್ತಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇದು ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ಎಂದು ಪರಿಗಣಿಸಲಾಗಿದೆ.

ಜುಲೈ 3ರಂದು ಶೋಪಿಯಾನ್‌ನ ದಟ್ಟವಾದ ಸೇಬಿನ ತೋಟದಲ್ಲಿ ಅಳವಡಿಸಲಾಗಿದ್ದ ನಿಗಾ ಕ್ಯಾಮೆರಾಗಳಲ್ಲಿ ಇಬ್ಬರು ಉಗ್ರರು ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿತ್ತು.

ಜಮ್ಮು-ಕಾಶ್ಮೀರ ಪೊಲೀಸರು ಸಾಮಾಜಿಕ ಜಾಲತಾಣ Xನಲ್ಲಿ ಈ ಕುರಿತು ಮಾಹಿತಿ ನೀಡಿ, " ಶೋಪಿಯಾನ್‌ನಲ್ಲಿ ಎಸ್‌ಒಜಿ, ಸೇನೆ ಮತ್ತು ಸಿಆರ್‌ಪಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್ ಉಗ್ರನನ್ನು ಹೊಡೆದುರುಳಿಸಲಾಗಿದೆ" ಎಂದು ತಿಳಿಸಿದ್ದಾರೆ. ಎನ್‌ಕೌಂಟರ್ ಸ್ಥಳದಿಂದ ಜಾಕಿರ್ ಗನಾಯಿಯ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ಕಾರ್ಯಾಚರಣೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇದು ಭದ್ರತಾ ಪಡೆಗಳ ಪ್ರಮುಖ ಸಾಧನೆಯಾಗಿದೆ.

ಮತ್ತೊಬ್ಬ ಉಗ್ರನಿಗಾಗಿ ತೀವ್ರ ಶೋಧ

ಜಾಕಿರ್ ಗನಾಯಿ ಹತ್ಯೆಯಾದ ನಂತರ, ಮತ್ತೊಬ್ಬ ಲಷ್ಕರ್ ಉಗ್ರ ಲತೀಫ್‌ಗಾಗಿ ಭದ್ರತಾ ಪಡೆಗಳು ತೀವ್ರ ಶೋಧ ನಡೆಸುತ್ತಿವೆ. ಆತ ಇನ್ನೂ ಶೋಪಿಯಾನ್ ಪ್ರದೇಶದಲ್ಲೇ ಅಡಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಳು ಗ್ರಾಮಗಳನ್ನು ವ್ಯಾಪಿಸಿರುವ ಈ ಕಾರ್ಯಾಚರಣೆಯಲ್ಲಿ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್‌ನ ಹಲವು ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.

ಭಾರತೀಯ ಸೇನೆಯ ವಿಕ್ಟರ್ ಫೋರ್ಸ್ ಹೆಚ್ಚುವರಿ ಯೋಧರನ್ನು ನಿಯೋಜಿಸಿದ್ದು, ದಟ್ಟ ತೋಟಗಳ ಮೂಲಕ ಉಗ್ರರು ಪರಾರಿಯಾಗದಂತೆ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ರಾತ್ರಿ ವೇಳೆ ಶೋಧ ಸುಲಭವಾಗಲು ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ.

ಬೇಸಿಗೆ ಕಾಲದಲ್ಲಿ ದಟ್ಟವಾಗಿ ಬೆಳೆದಿರುವ ತೋಟಗಳ ಎಲೆಗಳು ಹಾಗೂ ಪೊದೆಗಳು ಉಗ್ರರಿಗೆ ಅಡಗಿಕೊಳ್ಳಲು ಅನುಕೂಲವಾಗಿದ್ದು, ಭದ್ರತಾ ಪಡೆಗಳ ನಿಗಾ ಮತ್ತು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರೂ ಕುಲ್ಗಾಂ ಮೂಲದವರು

ಭದ್ರತಾ ಸಂಸ್ಥೆಗಳ ಮಾಹಿತಿಯ ಪ್ರಕಾರ, ಜಾಕಿರ್ ಗನಾಯಿ ಹಾಗೂ ಲತೀಫ್ ಇಬ್ಬರೂ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಜಾಕಿರ್ ಗನಾಯಿ 2024ರಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರ್ಪಡೆಯಾಗಿದ್ದರೆ, ಲತೀಫ್ ಕಳೆದ ವರ್ಷ ಸಂಘಟನೆಯನ್ನು ಸಕ್ರಿಯನಾಗಿದ್ದ ಎಂದು ತಿಳಿದುಬಂದಿದೆ.

Read More
Next Story