Mamata Banerjee will not give up in difficult times: MP Shatrughan Sinha
x

ಸಂಸದ ಶತ್ರುಘ್ನ ಸಿನ್ಹಾ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ

ಕಷ್ಟದ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರ ಕೈಬಿಡುವುದಿಲ್ಲ: ಸಂಸದ ಶತ್ರುಘ್ನ ಸಿನ್ಹಾ

ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲು ಅನುಭವಿಸಿದ ನಂತರ ಪಕ್ಷದೊಳಗೆ ತೀವ್ರ ಅಸಮಾಧಾನ ಭುಗಿಲೆದ್ದಿದೆ.


Click the Play button to hear this message in audio format

ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಬಂಡಾಯದ ಬಿರುಗಾಳಿ ಎದ್ದಿರುವ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದ ಟಿಎಂಸಿ ಸಂಸದ ಹಾಗೂ ಹಿರಿಯ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಕಷ್ಟದ ಸಮಯದಲ್ಲಿ ಯಾವುದೇ ಕಾರಣಕ್ಕೂ ತಾವು ಮಮತಾ ಬ್ಯಾನರ್ಜಿ ಅವರ ಕೈಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಿಟಿಐ (PTI) ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶತ್ರುಘ್ನ ಸಿನ್ಹಾ, "ನಾನು ಪಾಟ್ನಾ ಚುನಾವಣೆಯಲ್ಲಿ ಸೋತು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ ಮಮತಾ ಬ್ಯಾನರ್ಜಿ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು. ಸವಾಲಿನ ದಿನಗಳಲ್ಲಿ ನನಗೆ ಆಸರೆಯಾದವರನ್ನು ನಾನು ಎಂದಿಗೂ ಮರೆಯುವುದಿಲ್ಲ. ಹೀಗಾಗಿ ಈ ಕಷ್ಟದ ಸಮಯದಲ್ಲಿ ನಾನು ಅವರೊಂದಿಗೆ ಇರುತ್ತೇನೆ" ಎಂದು ಹೇಳಿದ್ದಾರೆ.

ಬಂಡಾಯಗಾರರಿಗೆ ಶತ್ರುಘ್ನ ಸಿನ್ಹಾ ತಿರುಗೇಟು

ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲು ಅನುಭವಿಸಿದ ನಂತರ ಪಕ್ಷದೊಳಗೆ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಮಮತಾ ಬ್ಯಾನರ್ಜಿ ಅವರ ಸೋದರಸಬಂಧಿ ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವದ ವಿರುದ್ಧ ಹಲವು ಶಾಸಕರು ಮತ್ತು ಸಂಸದರು ದೆಹಲಿ ಮಟ್ಟದಲ್ಲಿ ತಿರುಗಿಬಿದ್ದಿದ್ದಾರೆ. ಕೆಲವು ಬಂಡಾಯ ಶಾಸಕರು ವಿಧಾನಸಭೆಯಲ್ಲಿ ಪ್ರತ್ಯೇಕ ಬಣ ರಚಿಸಿಕೊಂಡು ವಿರೋಧ ಪಕ್ಷದ ಸ್ಥಾನಕ್ಕೆ ಏರಿದ್ದರೆ, ಇನ್ನು ಕೆಲವು ಸಂಸದರು ಎನ್‌ಡಿಎ (NDA) ಒಕ್ಕೂಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಈ ರಾಜಕೀಯ ತಲ್ಲಣಗಳ ಬಗ್ಗೆ ಪ್ರತಿಕ್ರಿಯಿಸಿದ ಸಿನ್ಹಾ, "ಕೆಲವರು ಬಲವಂತ, ಭಯ ಅಥವಾ ಆಮಿಷಗಳಿಗೆ ಒಳಗಾಗಿ ಮಮತಾ ಬ್ಯಾನರ್ಜಿ ಅವರನ್ನು ತೊರೆದಿರಬಹುದು. ಆದರೆ, ನಾನು ಮಾತ್ರ ಯಾವುದೇ ಕಾರಣಕ್ಕೂ ಪಕ್ಷವನ್ನಾಗಲಿ ಅಥವಾ ನನ್ನ ನಾಯಕಿಯನ್ನಾಗಲಿ ಬಿಟ್ಟು ಕೊಡುವುದಿಲ್ಲ. ಇದು ನನ್ನ ತಾತ್ವಿಕ ಮತ್ತು ತತ್ವಬದ್ಧ ನಿಲುವು" ಎಂದಿದ್ದಾರೆ.

ಮಮತಾ ಬ್ಯಾನರ್ಜಿ ಒಬ್ಬ ಹೋರಾಟಗಾರ್ತಿ

ಟಿಎಂಸಿ ಬಂಡಾಯ ಬಣಕ್ಕೆ ಸೇರುವಂತೆ ತಮಗೂ ಆಹ್ವಾನಗಳು ಬಂದಿದ್ದವು ಎಂಬುದನ್ನು ಒಪ್ಪಿಕೊಂಡ ಸಿನ್ಹಾ, ಆಹ್ವಾನ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. "ಮಮತಾ ಬ್ಯಾನರ್ಜಿ ಅವರು ಶೇ 41 ರಷ್ಟು ಮತಗಳನ್ನು ಪಡೆದಿರುವ ಧೀಮಂತ ಹೋರಾಟಗಾರ್ತಿ. ಇಂತಹ ಸಮಯದಲ್ಲಿ ಅವರ ಜೊತೆ ನಿಲ್ಲುವುದೇ ನನ್ನ ಮಾರ್ಗವಾಗಿದೆ. ನಾನು ಇದುವರೆಗೆ ನನ್ನ ರಾಜಕೀಯ ತತ್ವದ ಮಾರ್ಗವನ್ನು ಬದಲಿಸಿಲ್ಲ, ಮುಂದೆಯೂ ಬದಲಿಸುವುದಿಲ್ಲ" ಎಂದು ಬಂಡಾಯಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

Read More
Next Story