MEAs statement that passport is not a document of citizenship is ridiculous: Tharoor demands amendment to the law
x

ಕಾಂಗ್ರೆಸ್‌ ಸಂಸದ ಶಶಿ ತರೂರ್‌

‘ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ’ ಎಂಬ MEA ಹೇಳಿಕೆ ಹಾಸ್ಯಾಸ್ಪದ: ಕಾನೂನು ತಿದ್ದುಪಡಿಗೆ ತರೂರ್ ಆಗ್ರಹ

ಸರ್ಕಾರ ನೀಡಿದ ಅಧಿಕೃತ ಗುರುತಿನ ದಾಖಲೆಗಳನ್ನು ಹೊಂದಿದ್ದರೂ ಸಹ, ಲಕ್ಷಾಂತರ ಭಾರತೀಯರು ಈಗ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವ ಕಾನೂನುಬದ್ಧವಾಗಿ ನಿರ್ಣಾಯಕ ದಾಖಲೆಯಿಲ್ಲದೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.


Click the Play button to hear this message in audio format

ಪಾಸ್‌ಪೋರ್ಟ್‌ಗಳ ಕಾನೂನು ಸ್ಥಿತಿಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಇತ್ತೀಚೆಗೆ ನೀಡಿರುವ ಸ್ಪಷ್ಟೀಕರಣವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಟೀಕಿಸಿದ್ದಾರೆ. ಭಾರತೀಯ ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್‌ಗಳನ್ನು ಪೌರತ್ವದ ಮಾನ್ಯ ಪುರಾವೆಯಾಗಿ ಗುರುತಿಸಲು ಸರ್ಕಾರ ತಕ್ಷಣವೇ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್‌' ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, "ಪಾಸ್‌ಪೋರ್ಟ್ ದೇಶೀಯ ಪೌರತ್ವವನ್ನು ಸ್ಥಾಪಿಸದಿದ್ದರೆ, ಇನ್ನೇನು ಮಾಡುತ್ತದೆ? ಆಧಾರ್ ಕಾರ್ಡ್ ಕೇವಲ ಗುರುತು ಮತ್ತು ನಿವಾಸದ ಪುರಾವೆಯಾಗಿದೆಯೇ ಹೊರತು ಪೌರತ್ವದ ದಾಖಲೆಯಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ" ಎಂದು ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.


ವಿದೇಶಾಂಗ ಸಚಿವಾಲಯದ ಸ್ಪಷ್ಟನೆ ಏನು?

ಜೂ. 24 ರಂದು ನಡೆದ 'ಪಾಸ್‌ಪೋರ್ಟ್ ಸೇವಾ ದಿವಸ್' ಸಂದರ್ಭದಲ್ಲಿ ವಿದೇಶಾಂಗ ಸಚಿವಾಲಯವು ಮಹತ್ವದ ಸ್ಪಷ್ಟೀಕರಣ ನೀಡಿತ್ತು. "ಭಾರತೀಯ ಪಾಸ್‌ಪೋರ್ಟ್ ಪ್ರಾಥಮಿಕವಾಗಿ ಅಂತರರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸಲು ನೀಡಲಾಗುವ ಪ್ರಯಾಣ ದಾಖಲೆಯಾಗಿದೆ . ಅದು ಸ್ವತಃ ಪೌರತ್ವದ ನಿರ್ಣಾಯಕ ಪುರಾವೆಯಾಗಿ ಕಾರ್ಯನಿರ್ವಹಿಸುವುದಿಲ್ಲ. ಪೌರತ್ವವನ್ನು 1955 ರ ಪೌರತ್ವ ಕಾಯ್ದೆಯ ಅಡಿಯಲ್ಲಿ ಜನನ, ವಂಶಾವಳಿ, ನೋಂದಣಿ ಅಥವಾ ನೈಸರ್ಗಿಕೀಕರಣಕ್ಕೆ ಸಂಬಂಧಿಸಿದ ನಿಬಂಧನೆಗಳ ಮೂಲಕವೇ ನಿರ್ಧರಿಸಲಾಗುತ್ತದೆ" ಎಂದು ವಿದೇಶಾಂಗ ಇಲಾಖೆ ಹೇಳಿತ್ತು.

'ಇದು ಕಾನೂನು ವಿರೋಧಾಭಾಸ'

ವಿದೇಶಾಂಗ ಸಚಿವಾಲಯದ ಈ ಹೇಳಿಕೆಯು "ಕಾನೂನು ವಿರೋಧಾಭಾಸ" ಮತ್ತು ಅಸಂಬದ್ಧತೆಯಿಂದ ಕೂಡಿದೆ ಎಂದು ತರೂರ್ ಕರೆದಿದ್ದಾರೆ. "ದಶಕಗಳಿಂದಲೂ ಪಾಸ್‌ಪೋರ್ಟ್ ಅನ್ನು ಗುರುತಿನ ಮಾನದಂಡ ಎಂದು ಪರಿಗಣಿಸಲಾಗಿದೆ. ನಾಗರಿಕರು ಇದನ್ನು ಪಡೆಯಲು ಪೊಲೀಸ್ ತಪಾಸಣೆ ಮತ್ತು ಕಠಿಣ ಅಧಿಕಾರಶಾಹಿ ಪ್ರಕ್ರಿಯೆಗೆ ಒಳಗಾಗುತ್ತಾರೆ. ರಾಜ್ಯವು ಎಲ್ಲಾ ಪುರಾವೆಗಳನ್ನು ಪರಿಶೀಲಿಸಿದ ನಂತರವೇ ಈ ದಾಖಲೆಯನ್ನು ನೀಡುತ್ತದೆ. ಆದರೆ, ಈಗ ಅದೇ ದಾಖಲೆಯು ಪೌರತ್ವವನ್ನು ಸಾಬೀತುಪಡಿಸುವುದಿಲ್ಲ ಎಂದು ಹೇಳುವುದು ಹಾಸ್ಯಾಸ್ಪದ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೌರತ್ವ ಕಾಯ್ದೆ ತಿದ್ದುಪಡಿಗೆ ಕರೆ

ಸರ್ಕಾರ ನೀಡಿದ ಅಧಿಕೃತ ಗುರುತಿನ ದಾಖಲೆಗಳನ್ನು ಹೊಂದಿದ್ದರೂ ಸಹ, ಲಕ್ಷಾಂತರ ಭಾರತೀಯರು ಈಗ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವ ಕಾನೂನುಬದ್ಧವಾಗಿ ನಿರ್ಣಾಯಕ ದಾಖಲೆಯಿಲ್ಲದೆ ಆತಂಕಕ್ಕೆ ಒಳಗಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ ಕಾನೂನು ತಿದ್ದುಪಡಿ ಮಾಡಬೇಕು ಎಂದಿರುವ ಅವರು, ಸರ್ಕಾರವು ಅಧಿಕೃತವಾಗಿ ರದ್ದುಗೊಳಿಸದ ಅಥವಾ ಹಿಂಪಡೆಯದ ಹೊರತು, ಪಾಸ್‌ಪೋರ್ಟ್ ಅಥವಾ ನಾಗರಿಕ-ನಿರ್ದಿಷ್ಟ ಆಧಾರ್ ಕಾರ್ಡ್ ಅನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಸ್ವೀಕರಿಸುವಂತಾಗಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರತ್ಯೇಕ ಆಧಾರ್ ಕಾರ್ಡ್‌ಗೆ ಪ್ರಸ್ತಾಪ

ಪ್ರಸ್ತುತ ವಾಸಸ್ಥಳದ ಆಧಾರದ ಮೇಲೆ ನೀಡಲಾಗುವ ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಮಾತ್ರ ಸೀಮಿತವಾಗಿಲ್ಲ ಎಂಬ ಸವಾಲನ್ನು ತರೂರ್ ಒಪ್ಪಿಕೊಂಡಿದ್ದಾರೆ. ಇದಕ್ಕೆ ಪರಿಹಾರವಾಗಿ, ಭಾರತದಲ್ಲಿ ವಾಸಿಸುವ ನಾಗರಿಕರಲ್ಲದ ವಿದೇಶಿಯರಿಗೆ ಸ್ಪಷ್ಟವಾಗಿ ಗುರುತಿಸಬಹುದಾದ ಬೇರೆ ಬಣ್ಣ ಅಥವಾ ವಿನ್ಯಾಸದ ಪ್ರತ್ಯೇಕ ಆಧಾರ್ ಕಾರ್ಡ್ ನೀಡಬೇಕು ಎಂದು ಅವರು ಪ್ರಸ್ತಾಪಿಸಿದ್ದಾರೆ.

"ಈ ಎರಡು ವರ್ಗಗಳನ್ನು ಬೇರ್ಪಡಿಸುವ ಮೂಲಕ, ಭಾರತೀಯ ಪ್ರಜೆಗಳ ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅವರ ಪೌರತ್ವಕ್ಕೆ ಸಾಕು ಎಂಬ ನಿಯಮ ತರಬಹುದು. ಇದರಿಂದ ದೇಶೀಯ ಪರಿಶೀಲನಾ ಪ್ರಕ್ರಿಯೆಗಳು ಸರಳವಾಗುತ್ತವೆ, ಅಧಿಕಾರಶಾಹಿ ಅಡೆತಡೆಗಳು ಕಡಿಮೆಯಾಗುತ್ತವೆ ಮತ್ತು ನಾಗರಿಕರಿಗೆ ಕಾನೂನು ಸ್ಪಷ್ಟತೆ ಸಿಗುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Read More
Next Story