ಹಿರಿಯ ಪತ್ರಕರ್ತ ಆರ್. ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ಗ್ರೀನ್ ಸಿಗ್ನಲ್
x

ಹಿರಿಯ ಪತ್ರಕರ್ತ ಆರ್. ರಾಜಗೋಪಾಲ್ 

ಹಿರಿಯ ಪತ್ರಕರ್ತ ಆರ್. ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ಗ್ರೀನ್ ಸಿಗ್ನಲ್

ಪತ್ರದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಕೋಲ್ಕತ್ತಾ ಪೊಲೀಸರ ವಿಶೇಷ ಶಾಖೆಯು ಮಂಗಳವಾರ (ಜೂ. 30) ಹಿರಿಯ ಪತ್ರಕರ್ತರನ್ನು ಸಂಪರ್ಕಿಸಿ ವಿವರಗಳನ್ನು ಪಡೆದುಕೊಂಡಿತ್ತು.


Click the Play button to hear this message in audio format

ಹಿರಿಯ ಪತ್ರಕರ್ತ ಹಾಗೂ ‘ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ಆರ್. ರಾಜಗೋಪಾಲ್ ಅವರ ಪಾಸ್‌ಪೋರ್ಟ್ ನವೀಕರಣ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಅವರ ಪಾಸ್‌ಪೋರ್ಟ್ ನವೀಕರಣ ಪ್ರಕ್ರಿಯೆ ಆರಂಭವಾಗಿದ್ದು, ಪ್ರಸ್ತುತ ದಾಖಲೆಯನ್ನು ಮುದ್ರಣಕ್ಕೆ ಕಳುಹಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪಾಸ್‌ಪೋರ್ಟ್ ನವೀಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಹೊಸ ಪರಿಶೀಲನಾ ವರದಿಯನ್ನು ಸಲ್ಲಿಸಿದ ಬೆನ್ನಲ್ಲೇ ಈ ಸಕಾರಾತ್ಮಕ ಬೆಳವಣಿಗೆ ನಡೆದಿದೆ ಎಂದು ‘ಮಲಯಾಳ ಮನೋರಮಾ’ ವರದಿ ಮಾಡಿದೆ.

ಕೇರಳ ಸಿಎಂ ಮಧ್ಯಪ್ರವೇಶ

ಪಶ್ಚಿಮ ಬಂಗಾಳದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಗೋಪಾಲ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿತ್ತು. ಈ ಕಾರಣ ನೀಡಿ ಪೊಲೀಸರು ನೆಗೆಟಿವ್ ವರದಿ ನೀಡಿದ್ದರಿಂದ ಅವರ ಪಾಸ್‌ಪೋರ್ಟ್ ನವೀಕರಣ ಅರ್ಜಿಯು ತಡೆಹಿಡಿಯಲ್ಪಟ್ಟಿತ್ತು.

ವಿಷಯ ತಿಳಿಯುತ್ತಿದ್ದಂತೆ ಮಧ್ಯಪ್ರವೇಶಿಸಿದ ಕೇರಳ ಸಿಎಂ ವಿ.ಡಿ. ಸತೀಶನ್ , ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ ಅವರಿಗೆ ತುರ್ತು ಪತ್ರ ಬರೆದಿದ್ದರು. "ಚುನಾವಣಾ ಪಟ್ಟಿಯ ಸಮಸ್ಯೆಯನ್ನು ಕಾನೂನುಬದ್ಧವಾಗಿ ಬಗೆಹರಿಸಲಾಗುತ್ತಿದೆ. ಆದರೆ, ಇದನ್ನೇ ನೆಪವಾಗಿಸಿ ಪೊಲೀಸ್ ವರದಿಯ ಆಧಾರದ ಮೇಲೆ ಪಾಸ್‌ಪೋರ್ಟ್ ತಡೆಹಿಡಿಯುವುದು ಸರಿಯಲ್ಲ. ಈ ವಿಷಯದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು" ಎಂದು ಸತೀಶನ್ ವಿನಂತಿಸಿದ್ದರು.

ಪೊಲೀಸ್ ಇಲಾಖೆ ಸ್ಪಷ್ಟನೆ

ಪತ್ರದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಕೋಲ್ಕತ್ತಾ ಪೊಲೀಸರ ವಿಶೇಷ ಶಾಖೆಯು ಮಂಗಳವಾರ (ಜೂ. 30) ಹಿರಿಯ ಪತ್ರಕರ್ತರನ್ನು ಸಂಪರ್ಕಿಸಿ ವಿವರಗಳನ್ನು ಪಡೆದುಕೊಂಡಿತ್ತು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ವಿಶೇಷ ಶಾಖೆ) ಧ್ರುಬಜ್ಯೋತಿ ದೇ, "ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಆದರೆ ಪಾಸ್‌ಪೋರ್ಟ್‌ಗಳ ಸ್ಥಳೀಯ ವಿಚಾರಣೆಗೆ ಮತದಾರರ ಗುರುತಿನ ಚೀಟಿ ಕಡ್ಡಾಯ ಅಥವಾ ನಿರ್ಣಾಯಕ ದಾಖಲೆಯಲ್ಲ. ಹಾಗಾಗಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ (RPO) ಹೊಸ ವರದಿ ಕಳುಹಿಸಲಾಗಿದೆ" ಎಂದು ತಿಳಿಸಿದ್ದಾರೆ.

ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ವಿವಾದ

ಮಾ. 19 ರಂದೇ ಬಯೋಮೆಟ್ರಿಕ್ ಪ್ರಕ್ರಿಯೆ ಮುಗಿದಿದ್ದರೂ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಪಾಸ್‌ಪೋರ್ಟ್ ತಡೆಹಿಡಿದಿರುವುದನ್ನು ರಾಜಗೋಪಾಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. "ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಮುಂಚೂಣಿಯಲ್ಲಿದ್ದ ನನಗೇ ಇಂತಹ ಪರಿಸ್ಥಿತಿ ಬಂದರೆ, ಇನ್ನು ಸಾಮಾನ್ಯ ಜನರ ಕಥೆ ಏನು?" ಎಂದು ಅವರು ಪ್ರಶ್ನಿಸಿದ್ದರು. ಈ ವಿಚಾರ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಪಶ್ಚಿಮ ಬಂಗಾಳದ ವಿರೋಧ ಪಕ್ಷಗಳಾದ ಟಿಎಂಸಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಾಯಕರು ಸಹ ಇದು ನಾಗರಿಕರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ ಅಧಿಕಾರಿಗಳ ಸಕಾಲಿಕ ಕ್ರಮದಿಂದಾಗಿ ಪತ್ರಕರ್ತರ ಪಾಸ್‌ಪೋರ್ಟ್ ಕೈಸೇರಲು ಸಜ್ಜಾಗಿದೆ.

Read More
Next Story